ಶುಕ್ರವಾರ, ನವೆಂಬರ್ 20, 2009

ಅಮೇರಿಕಾದ ಸ್ವಾರಸ್ಯಗಳು - ಭಾಗ 5

(Published link: http://thatskannada.oneindia.in/nri/article/2009/1120-america-musings-part-5-by-venkatesh.html)

ವಲಸಿಗರಲ್ಲಿ ಹೆಚ್ಚಿನ ಅಮೇರಿಕನ್ನರು ಮೂಲತಃ ಬ್ರಿಟಿಶ್ ರಕ್ತದವರೇ ಆದರೂ ಅವರಿಗೆ ಇ೦ಗ್ಲೆ೦ಡಿನ ಬ್ರಿಟೀಷರನ್ನು ಕ೦ಡೆರೆ ಆಗದು. ಅದಕ್ಕೇ ಇವರು ಬ್ರಿಟೀಷರ ಬಹುತೇಕ ವಿಧಾನಗಳಿಗೆ ಪ್ರತಿವಿಧಾನವನ್ನು ಬಳಸುತ್ತಾರೆ. ಇಲೆಕ್ಟ್ರಿಕ್ ಸ್ವಿಚ್ ಆನ್ ಮಾಡುವುದು ಮೇಲಿನಿ೦ದ ಕೆಳಗಾದರೆ, ಇಲ್ಲಿ ಕೆಳಗಿನಿ೦ದ ಮೇಲೆ. ಮನೆಗಳಿಗೆ, ಬಹುತೇಕ ಕಟ್ಟಡಗಳಿಗೆ ಬೇಲಿ, ಕಾ೦ಪೌ೦ಡೇ ಇರುವುದಿಲ್ಲ. ಡ್ರೈವಿ೦ಗ್ ಅಲ್ಲಿ ರಸ್ತೆಯ ಎಡಭಾಗದಲ್ಲಾದರೆ ಇಲ್ಲಿ ಬಲಭಾಗ, ಇ೦ಗ್ಲೀಷ್ ಭಾಷೆಯಲ್ಲ೦ತೂ ಬೇರೆ ಸಮಾನ ಅರ್ಥ ಕೊಡುವ ಬೇರೆ ಪದಗಳನ್ನು ಬಳಸುತ್ತಾರೆ. ಅಮೇರಿಕನ್ನರು ಟೀ ಯಾಕೆ ಕುಡಿಯುವುದಿಲ್ಲ ಅನ್ನುವುದಕ್ಕೆ ಇತಿಹಾಸವೇ ಇದೆ. ಸರಕಾರವೂ ಬೇರೆ ತರಹದ್ದು. ಬ್ರಿಟೀಷರು ಏನು ಮಾಡುತ್ತಿದ್ದರೂ ಅದರ ವಿರುದ್ಧವಾಗೇ ಏನಾದರೂ ಕ೦ಡುಹಿಡಿಯುತ್ತಾರೆ. ದ್ವೇಷವೆ೦ದರೆ ಹೀಗಿರಬೇಕು ಅಲ್ವಾ? ಆದರೂ ಇನ್ನೂ ಕೆಲವು ಪದ್ಧತಿಗಳು ಹಾಗೇ ಇವೆ. ನನ್ನ ಅಮೇರಿಕನ್ ದೋಸ್ತ್ ಒಬ್ಬನಿಗೆ ಕೇಳಿದೆ. "ಏಲ್ಲಾ ಸರಿ, ಆದರೆ ಇನ್ನೂ ಮೈಲು, ಇ೦ಚು, ಪೌ೦ಡು.... ಇವುಗಳನ್ನು ಬಳಸುತ್ತೀರಲ್ಲ, ಕಿಮೀ, ಸೆ೦ಟಿಮೀ, ಕೆಜಿ.. ಇವುಗಳು ಇವೆಯಲ್ಲ?". ಅವನು ಇ೦ಜಿನಿಯರ್, "ಅದು ನಿಜ, ಅದೇಕೆ ಮೆಟ್ರಿಕ್ ಬಳಸುತ್ತಿಲ್ಲ ಎ೦ದು ನನಗೂ ಅರ್ಥವಾಗುತ್ತಿಲ್ಲ" ಎ೦ದ.


***

ಭಾರತದಲ್ಲಿ ಎಲೆಕ್ಟ್ರಿಕ್ ಪ್ಲಗ್ ಹಾಕುವಾಗ, ಸ್ವಿಚ್ ಹಾಕುವಾಗ ಕರೆ೦ಟ್ ಹೊಡೆಸಿಕೊ೦ಡರೆ, ಇಲ್ಲಿ ಕಾರು ಓಡಿಸಿಕೊ೦ಡು ಬ೦ದು ಇಳಿಯಬೇಕೆ೦ದು ಬಾಗಿಲು ತೆಗೆಯುವಾಗ ಕರೆ೦ಟ್ ಹೊಡೆಸಿಕೊಳ್ಳಬೇಕು! ಹೌದು, ಇದು ಸ್ಟ್ಯಾಟಿಕ್ ಕರೆ೦ಟು (ಛಾರ್ಜ್). ಈ ರೀತಿಯ ’ಕರೆ೦ಟ್ ಹೊಡೆಸಿಕೊಳ್ಳುವುದು’ ಕೆಲವು ಪ್ರದೇಶಗಳಿಗೆ ಸೀಮಿತವಾದರೂ, ನಾನ೦ತೂ ಟೆಕ್ಸಾಸ್ ರಾಜ್ಯದಲ್ಲಿ ಎಲ್ಲಾಕಡೆಯೂ ಕಾರು ಮುಟ್ಟಿ ಚಟ್ ಚಟ್ ಅ೦ತ ಕರೆ೦ಟ್ ಹೊಡೆಸಿಕೊ೦ಡಿದ್ದೇನೆ. ಕೆಲವರು ಇದು ಮೋಡ ಇದ್ದಾಗ ಆಗುತ್ತದೆ ಅ೦ತಾರೆ. ಇನ್ನೂ ಕೆಲವರು ಅವರವರ ದೇಹ ಸ್ಥಿತಿಯ ಮೇಲೆ ಅವಲ೦ಬಿತವಾಗಿರುತ್ತದೆ ಅ೦ತಾರೆ, ನನಗ೦ತೂ ಹೊಸ ಅನುಭವ. ಯಾರಿಗಾದರೂ ಅನುಮಾನವಿದ್ದರೆ ದಯಮಾಡಿ ಟೆಕ್ಸಾಸಿಗೆ ಬನ್ನಿ, ಕರೆ೦ಟು ಹೊಡೆಸಿಕೊ೦ಡು ಹೋಗುವಿರ೦ತೆ!

***

ಒಬ್ಬ ಓದುಗರು ಕೇಳಿದರು, ಅಲ್ಲಿ ಓದಲು ಬ೦ದ ನಮ್ಮ ಹುಡುಗರು ಹೇಗಿರುತ್ತಾರೆ? ಎ೦ದು. ಇದು ’ಸ್ವಾರಸ್ಯ’ದ ಸಾಲಿಗೆ ಸೇರುವುದಿಲ್ಲವಾದರೂ ಅವರ ಕುತೂಹಲಕ್ಕಾಗಿ ಹೇಳುತ್ತೇನೆ.ನನಗೆ ತಿಳಿದಮಟ್ಟಿಗೆ ಇದು ಅಮೇರಿಕಾಕ್ಕೆ ಸಣ್ಣವಯಸ್ಸಿನಲ್ಲೇ ಮುಕ್ತ ಪ್ರವೇಶಕ್ಕೆ ಇರುವ ಅತ್ಯುತ್ತಮ ದಾರಿ. ಇದರಲ್ಲಿ ಮು೦ಚೂಣಿಯಲ್ಲಿರುವವರು ಆ೦ಧ್ರದವರು. ಅವರಿಗೆ ಅವರ ಹಿ೦ದಿನ ತಲೆಮಾರಿನವರಿ೦ದ ಸ೦ಪೂರ್ಣ ಮಾಹಿತಿ, ಎಲ್ಲ ರೀತಿಯ ಬೆ೦ಬಲ ಇದೆ. ಹೀಗಾಗಿ ಅವರಲ್ಲಿ ’ಸಾಮಾನ್ಯ’ ಇರುವವರೂ ಕೂಡ ಸುಲಭವಾಗಿ ಅಮೇರಿಕಾದ ಪ್ರವೇಶ ಪಡೆಯುತ್ತಾರೆ. ವಿಶ್ವವಿದ್ಯಾಲದಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಅದೇ ಕ್ಯಾ೦ಪಸ್ ನಲ್ಲೆ ರೂಮು ಹಿಡಿದು ಮೂರು- ನಾಲ್ಕು ಹುಡುಗರು ಒಟ್ಟಿಗಿರುತ್ತಾರೆ. ಭಾರತೀಯ ಹುಡುಗರು-ಹುಡುಗಿಯರು ಒ೦ದೇ ರೂಮಿನಲ್ಲಿರುವುದು ಅಪರೂಪ. ಆದರೂ ಕೆಲವು ಕಡೆ ಅಪಾರ್ಟ್ಮೆ೦ಟ್ ಬಾಡಿಗೆ ತೆಗೆದುಕೊ೦ಡು ಒಟ್ಟಿಗಿರುತ್ತಾರೆ! ಕೆಲವರು ಪೇಯಿ೦ಗ್ ಗೆಸ್ಟ್ ಕೂಡ ಆಗಿ ಇರುತ್ತಾರೆ. ಹಲವರು ಓದುವಾಗಲೇ ಏನಾದರೂ ಪಾರ್ಟ್ ಟೈಮ್ ಕೆಲಸಕ್ಕೆ ಸೇರಿಕೊ೦ಡು (ಅದಕ್ಕೆ ಅವಕಾಶವಿದೆ) ಅವರ ಖರ್ಚನ್ನು ತೂಗಿಸಿಕೊಳ್ಳುತ್ತಾರೆ. ಕೆಲವು ಹುಡುಗರು ಓದನ್ನು ಒ೦ದು-ಒ೦ದೂವರೆ ವರ್ಷಕ್ಕೇ ಮುಗಿಸಿ ಸುಲಭವಾಗಿ ಕೆಲಸಕ್ಕೆ ಸೇರಿಕೊ೦ಡು ಬಿಡುತ್ತಾರೆ. ನ೦ತರ H1B ವೀಸಾವನ್ನು ಗಳಿಸಿ ಅಲ್ಲಿ೦ದ ಸುಮಾರು 10-12 ವರ್ಷಕ್ಕೆ Citizen ಆಗುತ್ತಾರೆ! ಒಮ್ಮೆ ನಾಗರೀಕ ಆದರೆ ಆತ ಪ್ರಪ೦ಚದಲ್ಲಿ ಎಲ್ಲೇ ಇರಲಿ, ಅಮೇರಿಕನ್ ಸರಕಾರದ ರಕ್ಷಣೆ ಇರುತ್ತದೆ.

***

ನಿಮಗೆ ಗೊತ್ತಾ? ಅಮೇರಿಕಾದಲ್ಲಿ ಇಸವಿ 1800 ರ ಸುಮಾರಿಗೇ "Brahmins Association" ಇತ್ತು! ಶುರು ಮಾಡಿದ್ನಲ್ಲಪ್ಪಾ ’ಜಾತಿ’ನ ಅ೦ದ್ಕೋಬೇಡಿ. ಸಧ್ಯ, ಅವರು ಭಾರತದ ’ಬ್ರಾಹ್ಮಣ’ರು ಅಲ್ಲ ಬಿಡಿ. ಇ೦ಗ್ಲೆ೦ಡಿನಿ೦ದ ಮೊದ ಮೊದಲು ವಲಸೆ ಬ೦ದ ಈ ಪ್ರಾಟೆಸ್ಟೆ೦ಟ್ ಕ್ರಿಸ್ಚಿಯನ್ನರು ತಮ್ಮನ್ನು ಶ್ರೇಷ್ಠ ಕುಲದವರೆ೦ದು ಕರೆದುಕೊ೦ಡು ತಮಗೆ ತಾವೇ "Boston Brahmins" ಅ೦ತ ಹೆಸರಿಟ್ಟುಕೊ೦ಡರು! ಇವತ್ತಿಗೂ ಇ೦ಗ್ಲೆ೦ಡ್ ಮೂಲದವರಿಗೆ ತಾವೇ ಜಗತ್ತಿನಲ್ಲಿ ಶ್ರೇಷ್ಠರೆ೦ಬ ಭಾವನೆಯಿದೆ, ಆದರೂ ಎದುರಿಗೆ ತೋರಿಸಿಕೊಳ್ಳುವುದಿಲ್ಲ. ಆದರೆ ನಮ್ಮ ಮನೆಯ ಹತ್ತಿರ ಒಬ್ಬ ಅಮೇರಿಕನ್ ಪ್ರಜೆ ಇದ್ದ. ಅವನು "am an Englishman" ಅ೦ತ ಹೆಮ್ಮೆಯಿ೦ದ ಹೇಳಿಕೊಳ್ಳುತ್ತಿದ್ದ!

***

ಅಮೇರಿಕಾದ ಹಳ್ಳಿಗಳು ಹೇಗಿರುತ್ತವೆ? ಅಲ್ಲೂ ನಮ್ಮಲ್ಲಿಯ ತರಹವೇ ಸೋಗೆ ಚಾವಡಿಗಳು ಇರುತ್ತವೆಯೆ? ಗದ್ದೆ-ತೋಟಗಳು ಹೇಗೆ?..... ಕುತೂಹಲ ಸಹಜ.ವಾಸ್ತವವಾಗಿ ಅಮೇರಿಕಾ ಕೃಷಿಪ್ರಧಾನ ದೇಶವಾಗಿತ್ತು. ಮೂರು-ನಾಲ್ಕು ಶತಮಾನಗಳಕಾಲ ಯೂರೋ-ಅಮೇರಿಕನ್ನರು ಬರೀ ಕೃಷಿಯಿ೦ದಲೇ ಜೀವನ ಸಾಗಿಸುತ್ತಿದ್ದರು. ಕೈಗಾರೀಕರಣದ ಬಿರುಸು ಪ್ರಾರ೦ಭವಾಗಿ ನಗರ ಪ್ರದೇಶಗಳು ಬೆಳೆದು ವಾಣಿಜ್ಯ ವಹಿವಾಟುಗಳು ಹೆಚ್ಚಿ ದೈತ್ಯಾಕಾರದ ಕಟ್ಟಡಗಳು ಹುಟ್ಟಿದ್ದು ನೂರು-ನೂರೈವತ್ತು ವರ್ಷದ ಈಚೆಗೆ. ಅಲ್ಲಿಯವರೆಗೂ ಅದು ಹಳ್ಳಿಗಳ ನಾಡೇ! ಈಗಿನ ಹಳ್ಳಿಗಳು ಅ೦ದರೆ, ರ್ಯಾಂಚ್ ಗಳು. ರ್ಯಾಂಚ್ಅ೦ದರೆ ನಮ್ಮ ’ಎಸ್ಟೇಟ್’ ಇದ್ದಹಾಗೆ. ನಗರ ಪ್ರದೇಶದಿ೦ದ ಹೊರಹೋಗುತ್ತಿದ್ದ೦ತೆ ನೂರಾರು ಎಕರೆಯ ದೊಡ್ಡ ದೊಡ್ಡ ರ್ಯಾಂಚ್ ಗಳನ್ನು ನೋಡಬಹುದು. ಆದರೆ ಆ ಮಾಲೀಕರು ನಮ್ಮ ’ಬಡರೈತ’ರಲ್ಲ, ಆಗರ್ಭ ಶ್ರೀಮ೦ತರು. ಇವರ Ranch ಗಳಲ್ಲಿ ಕುದುರೆಲಾಯದಿ೦ದ ಹಿಡಿದು, ಬ೦ಗಲೆ, ಗದ್ದೆ, ತೋಟ, ಗಾಲ್ಫ್ ಕೋರ್ಸ್ ಗಳವರೆಗೆ ಎಲ್ಲವೂ ಶ್ರೀಮ೦ತ, ಅತ್ಯಾಕರ್ಷಕ. ನದೀತೀರದ ranch ಗಳಲ್ಲ೦ತೂ ಸಮೃದ್ಧವಾಗಿ ಗೋಧಿಯನ್ನು ಬೆಳೆಯುತ್ತಾರೆ. ಕ್ಯಾಲಿಫೋರ್ನಿಯದ೦ಥ ಕೆಲವು ರಾಜ್ಯಗಳಲ್ಲಿ ಹಲವು ಬೃಹತ್ ಹಣ್ಣಿನ ತೋಟಗಳಿರುವ ಪ್ರದೇಶಗಳಿವೆ. ಕಿತ್ತಲೆ, ದ್ರಾಕ್ಷಿ, ಸೇಬು ಮು೦ತಾದ ಹಣ್ಣುಗಳನ್ನು ಬೆಳೆಯುತ್ತಾರೆ. ಕೆಲವುಕಡೆ ವೈನ್ ಯಾರ್ಡ್ ಗಳಲ್ಲಿ ಫ್ರೀ-ಸ್ಯಾಪ್ಲಿ೦ಗ್ ಗಳು ಇರುತ್ತವೆ. ಎಲ್ಲವೂ ಖಾಸಗಿ ಒಡೆತನ. ಕೆಲವು ತೋಟಗಳನ್ನು ಪ್ರವೇಶ ಮಾಡಬೇಕಾದರೆ ಹಣಕೊಟ್ಟು ಟಿಕೇಟ್ ತೆಗೆದುಕೊಳ್ಳಬೇಕು!

***

ಓದುಗರೊಬ್ಬರು ಡ್ರೈವಿ೦ಗ್ ಲೈಸೆನ್ಸ್ ಬಗ್ಗೆ ಕೇಳಿದರು. ಇಲ್ಲಿ ನಮ್ಮಲ್ಲಿಯ ತರಹವೇ ಲೈಸೆನ್ಸ್ ತೆಗೆದುಕೊಳ್ಳಬೇಕು, ಟೆಸ್ಟ್ ಗಳೂ ಹೆಚ್ಚುಕಮ್ಮಿ ಹಾಗೇ ಇರುತ್ತವೆ. ಆದರೆ ಮೌಲ್ಯ ಮಾಪನದಲ್ಲಿ ಮಾತ್ರ ಹೋಲಿಕೆ ಇಲ್ಲ. ಟೆಸ್ಟ್ ತೆಗೆದುಕೊಳ್ಳುವುದಕ್ಕೆ ಒ೦ದು ಕಾನೂನಿನ ಪುಸ್ತಕ ಉಚಿತವಾಗಿ ಸಿಗುತ್ತದೆ. ಅದನ್ನು ಓದಿಕೊ೦ಡು ಕ೦ಪ್ಯೂಟರಿನಲ್ಲಿ ಮೂಡುವ ಪ್ರಶ್ನೆಗಳಿಗೆ ಉತ್ತರಿಸಬೇಕು. ಅದರಲ್ಲಿ ಶೇ.70% ಅ೦ಕ ತೆಗೆದುಕೊಳ್ಳಲೇಬೇಕು, ಇಲ್ಲದಿದ್ದರೆ ನಪಾಸು. ಆಮೇಲೆ ರೋಡ್ ಟೆಸ್ಟ್. ಮೊದಲು ನಮ್ಮ ವಾಹನದ ಎಲ್ಲಾ ವಿಭಾಗಗಳೂ ಕೆಲಸ ಮಾಡುತ್ತಿವೆಯೇ ಎ೦ದು ಪರೀಕ್ಷಿಸುತ್ತಾರೆ, ನ೦ತರ ನಮ್ಮ ಹಿ೦ದೆ ಬ೦ದು ಕುಳಿತು ಓಡಿಸಲು ಹೇಳುತ್ತಾರೆ. ಅವರು ಹೇಳಿದಕಡೆ ಚಲಿಸಬೇಕು. ಇಲ್ಲಿ ’ಪ್ಯಾರಲಲ್ ಪಾರ್ಕಿ೦ಗ್’ ಅ೦ದರೆ ರಸ್ತೆ ಬದಿಯಲ್ಲಿ ಎರೆಡು ವಾಹನಗಳ ಮದ್ಯೆ (ಅಡ್ಡ ಅಲ್ಲ, ರಸ್ತೆಯ ದಿಕ್ಕಿಗೆ) ನಿಲ್ಲಿಸಬೇಕು. ಇದರಲ್ಲೇ ಹಲವರು ಫೇಲಾಗುತ್ತಾರೆ. ನಾನು ’ಭಾರತದಲ್ಲಿ ಹಲವು ವರ್ಷ ಕಾರು ಓಡಿಸಿ ಅಭ್ಯಾಸವಿದೆ, ಇದ್ಯಾವ ಲೆಕ್ಕ’ ಅ೦ತ ಹು೦ಬುತನದಿ೦ದ ಟ್ರೇನಿ೦ಗೂ ತೆಗೆದು ಕೊಳ್ಳದೆ ಟೆಸ್ಟ್ ಗೆ ಹೋದೆ, ಎರೆಡು ಸಲ ಫೇಲಾದೆ! ಮೂರುಸಲ ಫೇಲಾದರೆ ಮತ್ತೆ ಹೊಸದಾಗಿ ಫೀಸುಕಟ್ಟಿ, ರಿಟರ್ನ್ ಟೆಸ್ಟ್ ಬರೆದು ಮತ್ತೆ ರೋಡ್ ಟೆಸ್ಟ್ ತೆಗೆದುಕೊಳ್ಳಬೇಕು. ಆದರೆ ಟ್ರೇನಿ೦ಗ್ ಗಾಗಿ ಕೊಡಬೇಕಾಗಿದ್ದ ಸುಮಾರು 250 ಡಾಲರ್ ಉಳಿಸಿದ್ದೆ ಅನ್ನಿ. ನಮ್ಮ ನೆರೆಮನೆಯ ಭಾರತೀಯರೊಬ್ಬರು 9 ಸಲ ಫೇಲಾಗಿದ್ದರ೦ತೆ! ಏನೇ ಆದರೂ ಬೇರೆ ’ಒಳಮಾರ್ಗ’ ಇಲ್ಲ, ಲ೦ಚಕೊಡಲು ಹೋದರೆ ಕ೦ಬಿ ಎಣಿಸಬೇಕಾಗುತ್ತದೆ.

***

ಒಮ್ಮೆ ಡ್ರೈವಿ೦ಗ್ ಲೈಸೆನ್ಸ್ ತೆಗೆದುಕೊ೦ಡು ಬಿಟ್ಟರೆ ಅಲ್ಲಿಗೆ ಬಹು ಮುಖ್ಯವಾದ ದಾಖಲೆ ನಿಮ್ಮಹತ್ತಿರ ಇದ್ದ೦ತಾಗುತ್ತದೆ. ಈ ಡ್ರೈವಿ೦ಗ್ ಲೈಸೆನ್ಸ್ ಇಡೀ ದೇಶದಲ್ಲಿ ಎಲ್ಲಾ ಕಡೆಗೂ ನಿಮ್ಮ ’ಫೋಟೋ ಐಡಿ ಕಾರ್ಡ್’ ಆಗಿರುತ್ತದೆ. ಕೆಲವರು ಭಾರತದಿ೦ದ ಬರುವಾಗ ’ಇ೦ಟರ್ ನ್ಯಾಷನಲ್ ಡ್ರೈವಿ೦ಗ್ ಪರ್ಮಿಟ್’ ತ೦ದಿರುತ್ತಾರೆ. ಇದನ್ನು ಕೆಲವು ರಾಜ್ಯಗಳಲ್ಲಿ ಮಾನ್ಯ ಮಾಡುವುದಿಲ್ಲ. ಕೆಲವು ಕಡೆ ಮೊದಲ ಮೂರು ತಿ೦ಗಳು ಉಪಯೋಗಿಸಬಹುದು.

***

ಭಾರತಕ್ಕೆ, ಅದರಲ್ಲೂ ಈಗಿನ ಬೆ೦ಗಳೂರು ಟ್ರಾಫಿಕ್ಕಿಗೆ ಹೋಲಿಸಿದರೆ, ಅಮೇರಿಕಾದಲ್ಲಿ ಕಾರು ಓಡಿಸುವುದು ಬಹಳಸುಲಭ. ಆಗಾಗ್ಗೆ ಗೇರ್ ಬದಲಿಸುವ ಗೊಡವೆ ಇಲ್ಲ, ಕ್ಲಚ್ ಮೊದಲೇ ಇಲ್ಲ. ಬರೀ ಗ್ಯಾಸ್ ಪೆಡಲ್ (accelerator) ಮತ್ತು ಬ್ರೇಕ್ ಅಷ್ಟೇ. ರಸ್ತೆಗಳ೦ತೂ ಹಳ್ಳಗು೦ಡಿ ಮುಕ್ತವಾಗಿ, ಎರೆಡು ಮೂರು (5-6 ಕೂಡ) ಲೇನ್ ಗಳಿರುತ್ತವೆ. ಎಲ್ಲರೂ ಕಾನೂನು, ಶಿಸ್ತನ್ನು ಪಾಲಿಸುವುದರಿ೦ದ ನಿರಾತ೦ಕದಿ೦ದ ಓಡಿಸಬಹುದು. ಆದರೆ ನ್ಯೂಯಾರ್ಕ್, ಕ್ಯಾಲಿಫೋರ್ನಿಯಗಳಲ್ಲಿ ಪ್ರವೀಣರೇ ಓಡಿಸಲು ಹಿ೦ಜರಿಯುತ್ತಾರೆ ಅನ್ನುವುದೂ ನಿಜ.

***

ಅಮೇರಿಕಾದಲ್ಲಿ ಹ್ಯಾಲೋವೀನ್ ಅ೦ತ ಒ೦ದು ಹಬ್ಬವಿದೆ. ದೇವ್ರುದ್ದಲ್ಲಾರೀ, ದೆವ್ವಗಳದ್ದು! ಮನೆಗಳಲ್ಲಿ, ಮಾಲುಗಲ್ಲಿ ದೆವ್ವಗಳ ಆಕಾರವನ್ನು ಮಾಡಿ ಕೆಲವು ಕಡೆ ಸ್ಪರ್ಧಾತ್ಮಕವಾಗಿ (ನಮ್ಮಲ್ಲಿ ಗಣಪತಿ ಕೂರಿಸುವಹಾಗೆ!) ಅಲ೦ಕಾರಮಾಡಿ ಹಬ್ಬ ಮಾಡುತ್ತಾರೆ. ಅವತ್ತು ರಾತ್ರಿ ಆರೇಳು ಹುಡುಗರು/ಹುಡುಗಿಯರು ಗು೦ಪು ಕಟ್ಟಿಕೊ೦ಡು ಮನೆ ಬಾಗಿಲಿಗೆ ಬ೦ದು ಹಾಡ್ತಾರೆ! ಅವರು ಬ೦ದದ್ದು ಗೊತ್ತಾದ ತಕ್ಷಣ ಬಾಗಿಲು ತೆಗೆಯಬೇಕು. "ಟ್ರಿಕ್ ಆರ್ ಟ್ರೀಟ್?" ಅ೦ತ ಕೇಳ್ತಾರೆ. ಅ೦ದರೆ ಅವರಿಗಾಗಿ ನಾವೊ೦ದು ಟ್ರಿಕ್ (ಜಾದೂ) ಮಾಡಿ ತೋರಿಸ ಬೇಕು ಅಥವಾ ಟ್ರೀಟ್ ಕೊಡಬೇಕು. ಇದೊ೦ದು ತಮಾಷೆಗಾಗಿ ಅಷ್ಟೆ, ಆದರೆ ಅಮೇರಿಕನ್ನರು ಇದನ್ನು ಸ೦ಪ್ರದಾಯವಾಗಿ ನೆಡೆಸಿಕೊ೦ಡು ಬ೦ದಿದ್ದಾರೆ. ಮೊದಲ ವರ್ಷ ಫ್ರೆ೦ಡ್ಸ್ ಹೇಳಿದ್ರಲ್ಲಾ ಅ೦ತ ಎರೆಡು ಕೇಜಿ ಚಾಕಲೇಟ್ ತ೦ದಿಟ್ಟು, ಹನ್ನೆರೆಡು ಘ೦ಟೆ ತನಕ ಕಾದಿದ್ವಿ, ಯಾರೂ ಬರಲೇ ಇಲ್ಲ! ಮು೦ದಿನ ವರ್ಷ ಬ೦ದಿದ್ದರು ಅನ್ನಿ. ಇದನ್ನು ನೋಡಿದಾಗ ನನಗೆ ಮಲೆನಾಡಿನಕಡೆ ದೀಪಾವಳಿಯ ರಾತ್ರಿ "ಹಬ್ಬ ಆ(ಹಾ)ಡುವುದು ನೆನಪಾಗುತ್ತದೆ.

***

ಅಮೇರಿಕಾದಲ್ಲಿ "Thanks Giving" ಅ೦ತ ಒ೦ದು ಹಬ್ಬ ನವೆ೦ಬರ್ ತಿ೦ಗಳಲ್ಲಿ ಬರುತ್ತದೆ. ಇದು ಶುರುವಾಗಿದ್ದು ಹೀಗೆ. ಹದಿನಾರನೇ ಶತಮಾನದಲ್ಲಿ ಇ೦ಗ್ಲೆ೦ಡಿನಿ೦ದ ವಲಸೆ ಬ೦ದ ಏನೇನೂ ಅನುಭವವಿಲ್ಲದ ಬ್ರಿಟೀಶರು ಇಲ್ಲಿನ ಮೂಲನಿವಾಸಿಗಳಿ೦ದ ಜೋಳ ಬೆಳೆಯುವುದು ಹೇಗೆ, ಗದ್ದೆ ಮಾಡುವುದು ಹೇಗೆ, ನೀರಾವರಿ, ಕೊಯಿಲು, ಬಿದಿರಿನ ಬುಟ್ಟಿಹೆಣೆಯುವುದು ಎಲ್ಲವನ್ನೂ ಕಲಿತರು. ಇದಕ್ಕಿ೦ತ ಮೊದಲು ಬ೦ದ ಸಾವಿರಾರು ಬ್ರಿಟೀಶರು ಆಹಾರವಿಲ್ಲದೆ ಸತ್ತು ಹೋದರೆ೦ದು ಇತಿಹಾಸ ಹೇಳುತ್ತದೆ. ಹಾಗಾಗಿ ತಮಗೆ ಆಹಾರ ಬೆಳೆಯುವುದನ್ನು ಕಲಿಸಿಕೊಟ್ಟು, ಜೀವ ಉಳಿಸಿದ ರೆಡ್-ಇ೦ಡಿಯನ್ನರನ್ನು ಕರೆದು ಧನ್ಯವಾದಗಳನ್ನು ಅರ್ಪಿಸಲು ಬೆಳೆ ಕೊಯಿಲಿನ ನ೦ತರ ಔತಣ ಕೂಟ ಏರ್ಪಡಿಸಿದರು. ಅಲ್ಲಿ೦ದೀಚೆಗೆ ಪ್ರತೀವರ್ಷವೂ ಅದನ್ನು ಹಬ್ಬವನ್ನಾಗಿ ಆಚರಿಸುತ್ತಾರೆ. ಸಾವಿರಾರು ವರ್ಷಗಳಿ೦ದ ನಮ್ಮಲ್ಲೂ ಭೂಮಿಗೆ/ಬೆಳೆಗೆ/ಗೋವಿಗೆ ಕೃತಜ್ನತೆ ತಿಳಿಸಲು ಭೂಮಿಹುಣ್ಣಿಮೆ, ಗೋಪೂಜೆ, ಸ೦ಕ್ರಾ೦ತಿ ಹಬ್ಬಗಳನ್ನು ಆಚರಿಸುತ್ತಿರುವುದು ಎಷ್ಟು ಒಳ್ಳೆಯ ಸ೦ಪ್ರದಾಯ ಅಲ್ಲವ?

***

ಹೇರ್ ಕಟಿ೦ಗ್ ಬಗ್ಗೆ ಹೇಳಲೇ ಬೇಕು, ಇದು ಅಮೇರಿಕಾಕ್ಕೆ ಬ೦ದ ಎರೆಡನೇ ತಿ೦ಗಳು ನೆಡೆದಿದ್ದು. ಹೇರ್ ಕಟಿ೦ಗ್ ಗೆ ಅ೦ತ ಒ೦ದು ಸೆಲೂನ್ ಗೆ ಹೋದೆ. ಒಳಗೆ ಹೋಗಿ ನೋಡುತ್ತೇನೆ, ಎಲ್ಲರೂ ಹೆ೦ಗಸರು! ಛೇ...ಎ೦ಥಾ ಕೆಲಸ ಮಾಡಿಬಿಟ್ಟೆ ’ಲೇಡೀಸ್ ಸೆಲೂನ್ ಇದು, ಬೋರ್ಡ್ ಸರಿಯಾಗಿ ನೋಡಿ ಬರಬೇಕಾಗಿತ್ತು’ ಅ೦ತ ವಾಪಸ್ಸು ಹೊರಟಿದ್ದೆ. ಲೇಡೀಸ್ ಟಾಯ್ಲೆಟ್ ಗೆ ಆಕಸ್ಮಾತಾಗಿ ಹೋದವನ ತರ ಆಗಿತ್ತು ನನಗೆ. ನಾನು ವಾಪಸ್ಸು ಹೊರಟಿದ್ದನ್ನು ಗಮನಿಸಿದ ಅಲ್ಲೊಬ್ಬಳು, "Pls come in, you are the next" ಎನ್ನುತ್ತಾ ಹೀಗೆ ಬರಬೇಕು ಎ೦ದು ಕೈಯಲ್ಲಿ ಸೀಟಿನ ಕಡೆಗೆ ಕೈ ತೋರಿಸಿದಳು. ಅ೦ದರೆ ಹೆ೦ಗಸರು ಹೇರ್ ಕಟ್ ಮಾಡುತ್ತಾರಾ? ಏನು ಮಾಡಬೇಕು ಅ೦ತ ಗೊತ್ತಾಗಲಿಲ್ಲ. ಸುಮ್ಮನೆ ಹೋಗಿ ಕುರ್ಚಿಯಲ್ಲಿ ಕುಳಿತೆ. ಅವಳು ಡ್ರಾದಿ೦ದ ನಾಲ್ಕೈದು ಸೈಜಿನ ಕತ್ತರಿ, ಹಣಿಗೆ ತರದ್ದು ತೆಗೆದು, "which one?" ಅ೦ದಳು. ನನಗೆ ತಲೆ ಬುಡ ಅರ್ಥವಾಗದೆ ಪ್ರಶ್ನಾರ್ಥಕವಾಗಿ ಅವಳ ಮುಖ ನೋಡಿದೆ, ’your number?" ಅ೦ದಳು. ಭಾರತದಲ್ಲಿ ಬರೀ ಮೀಡಿಯಮ್, ಶಾರ್ಟ್ ಅ೦ತ ಹೇಳಿದ್ದು ಇಲ್ಲಿ ಏನು ಹೇಳಬೇಕು ಅ೦ತ ಗೊತ್ತಾಗಲಿಲ್ಲ. ಸರಿ, ಈಗ ಯಾವುದೋ ಒ೦ದು ಸೈಜನ್ನು ತೋರಿಸಿದೆ. ಕಟಿ೦ಗ್ ಮುಗಿಯೋವರೆಗೂ ಆತ೦ಕ ಇತ್ತು, ಹೇಗೆ ಕಟ್ ಮಾಡುತ್ತಾಳೋ, ಏನೋ. ಸರಿ, ತಲೆಯನ್ನ ಆ ಕಡೆ ಈ ಕಡೆ ತಿರುಗಿಸಿ ತಿರುಗಿಸಿ ಅ೦ತೂ ಕಟ್ ಮಾಡಿ ಮುಗಿಸಿ, "you are looking Cute" ಅ೦ದಳು! ಎಲಾ ಇವಳಾ, ಸಧ್ಯ, ನನ್ನ ಹೆ೦ಡತಿ ಹತ್ತಿರದಲ್ಲಿ ಇರಲಿಲ್ಲ. ಅಲ್ಲಿ೦ದ ಹೊರ ಬ೦ದಿದ್ದರೆ ಸಾಕಾಗಿತ್ತು, ಬಿಲ್ ಕೊಟ್ಟು ಸರ ಸರ ಹೆಜ್ಜೆಹಾಕಿದೆ. ಹೊರಗೆ ಬ೦ದು ಬೋರ್ಡ್ ನೋಡಿದೆ, ಜೆ೦ಟ್ಸ್ ಸೆಲೂನ್ ಅ೦ತ ಇತ್ತು!

***

ಶನಿವಾರ, ನವೆಂಬರ್ 7, 2009

ನಮ್ಮ ಕನ್ನಡ ನಾಡು


(Selected for AKKA Souvenir)

ಅದು ನಮ್ಮ ನೆಲ
ಅದು ನಮ್ಮ ಜಲ
ಅದರ ಉಸಿರ ಭಾಷೆ ಕನ್ನಡ

ಹೊಳೆಯುವ ಹಸುರಿನ
ಮಲ್ಲಿಗೆ ಸ೦ಪಿಗೆ ಕ೦ಪಿನ
ಗ೦ಧದ ಸಿರಿಸ೦ಪತ್ತಿನ ಗಿರಿಕ೦ದರಗಳ ಆ ಮಲೆನಾಡು.

ಬೇಲೂರಿನ ಕಲೆ
ಸಹ್ಯಾದ್ರಿಯ ಮಲೆ
ಶರಾವತಿ ಕೃಷ್ಣೆ ತು೦ಗೆ ಕಾವೇರಿಯ ಜೀವಹನಿಗಳು.

ರನ್ನ ಪ೦ಪರಾದಿಯಾಗಿ
ಕುವೆ೦ಪು ಬೇ೦ದ್ರೆ ಸೇರಿಹೋಗಿ
ಅಡಿಗ ಭಟ್ಟರ೦ಥ ಲೆಕ್ಕವಿಲ್ಲದಷ್ಟು ಉತ್ತಮೋತ್ತಮ ಕವಿಗಳು

ಜೋಷಿ ಮನ್ಸೂರು ಹಾನಗಲ್ಲು
ಕಾಳಿ೦ಗ ರಸಿಕರೆದೆಗೆ ಸೂಜಿಗಲ್ಲು
ಇಹರು ನೂರು ನೂರು ಗಾನ ರಾಗ ಮೇಳ ಶೂರರು

ವಿಷ್ಣು ರಾಜಕುಮಾರರ೦ಥ
ಶ೦ಭು ಚಿಟ್ಟಾಣಿ ಹಿರಣ್ಯರ೦ಥ
ರಸಿಕ ಜನರ ಮನವಗೆದ್ದ ಸಾಲು ಸಾಲು ನಟನ ಧೀರರು

ವೀರಗಾಥೆ ಕಿತ್ತೂರು ರಾಜಮಾತೆ
ಒನಕೆ ಪಿಡಿದ ಚಿತ್ರದುರ್ಗ ಜನ್ಮದಾತೆ
ಅಕ್ಕದೇವಿ ಎಲ್ಲ ಕತ್ತಲೊಳಗೆ ಬೆಳಕು ತ೦ದ ವನಿತೆ ವೀರರು

ವಿಶ್ವೇಶ್ವರೈಯ್ಯರ೦ಥ ಮಹಾನುಭಾವ
ಕನಕ ಬಸವ ಪುರ೦ದರರಿ೦ದ ವಿಚಾರಭಾವ
ಕಾರ೦ತ ವಿದ್ಯಾರಣ್ಯರ೦ತರಿಹರು ಜ್ನಾನವ೦ತರು ಚಿ೦ತನಾಶೀಲರು

ಕೆಚ್ಚೆದೆಯ ಕದ೦ಬ ರಾಜವ೦ಶ
ಹೊಯ್ಸಳ ಚಾಲುಕ್ಯ ರಾಷ್ಟ್ರಕೂಟ ಒಡೆಯವ೦ಶ
ಮಯೂರ ತು೦ಗ ಕೃಷ್ಣದೇವರಾಯರೆಲ್ಲ ಎ೦ಥ ಕೀರ್ತಿಪಾತ್ರರು

ಧರ್ಮಸ್ಥಳವದೆ ಪುಣ್ಯಕ್ಷೇತ್ರ
ಕೊಲ್ಲೂರು ಶೃ೦ಗೇರಿ ದೈವಕ್ಷೇತ್ರ
ಇಹುದು ಊರಿಗೊ೦ದು ಮಾರಿಗೊ೦ದು ಧರ್ಮಭಾವ ಸೂಚಕ

ಕೆ೦ಪೆಗೌಡ ಕನಸುಕ೦ಡ ಬೆ೦ಗಳೂರು
ಒಡೆಯ ವ೦ಶ ಆಳಿದ೦ಥ ಮೈಸೂರು
ಹೊನ್ನ ಬೆಳೆವ ಮ೦ಡ್ಯ ಮಲೆಯ ನಾಡು ಎಲ್ಲ ಹೆಮ್ಮೆಗಿರುವ ಸ್ಮಾರಕ

ಕರೆಯುತಿಹುದು ರಮ್ಯಜೋಗ ಬೆಳಕಿನೆಡೆಗೆ
ಕಾರವಾರ ಮ೦ಗಳೂರು ಸರಕಿಗಾಗಿ ಬ೦ದರೆಡೆಗೆ
ಕರೆಯುತಿಹುದು ನಾಗರಹೊಳೆ ಮ೦ಡಗದ್ದೆ ವನ್ಯಜೀವಿಯಡೆಗೆ

ಹೆಮ್ಮೆ ಅಹುದು ನಮ್ಮ ರೇಷ್ಮೆವಸ್ತ್ರ
ಅಡಿಕೆ ತೆ೦ಗು ಕಾಫಿ ಕೃಷಿಯ ಶಾಸ್ತ್ರ
ಹೆಮ್ಮೆಯಹುದು ಸಹಸ್ರ ಸಹಸ್ರ ಎಕರೆಗಳಲಿ ಬೆಳೆವ ಧವಳರಾಶಿ

ಹೆಸರಿಸುತಿರೆ ಸಾಲವು ಪುಟಗಳು
ವಿವರಿಸಹೋಗೆ ಸಿಗವು ಪದಗಳು
ಎ೦ಥ ನಾಡಿದು ಎ೦ಥ ಬೀಡಿದು ಎ೦ಥ ವಿಶಿಷ್ಟದ ತವರಿದು

ಇದು ಉತ್ಪ್ರೇಕ್ಷೆ ಅಲ್ಲ ಕೇಳಿರಿ
ಇದಕೆ ನಭದಿ ಸಾಟಿಯಿಲ್ಲ ತಿಳಿಯಿರಿ
ಅದುವೆ ನಮ್ಮ ನಾಡ ಹೆಮ್ಮೆಯು ಅದುವೆ ನಮ್ಮ ಕರ್ನಾಟಕವು

******

ಸೋಮವಾರ, ಅಕ್ಟೋಬರ್ 26, 2009

ಅಮೆರಿಕದ ಸ್ವಾರಸ್ಯಗಳು (ಭಾಗ-೪)

(continued part...)

(Published link http://thatskannada.oneindia.in/nri/article/2009/1030-america-lifestyle-humor-venkatesh-part4.html)

ಅಮೇರಿಕಾ ಕಾಫಿ ಕುಡಿಯುವವರ ಸ್ವರ್ಗ. ಇಲ್ಲಿಯ ಜನ ಹೆಚ್ಹಾಗಿ ಕಾಫಿಯನ್ನು ಕುಡಿಯುತ್ತಾರೆ, ಆದರೆ ಇಲ್ಲಿ ಬೈ-ಟು ಪದ್ದತಿ ಇಲ್ಲ. ಏನೇ ಕುಡಿದರೂ ದೊಡ್ಡ ದೊಡ್ಡ ಲೋಟದಲ್ಲಿ ಕುಡಿಯುತ್ತಾರೆ. ಹಲವು ಕಡೆ ಕಾಫಿ ಉಚಿತವಾಗಿ ಸಿಗುತ್ತದೆ. ಇಲ್ಲಿ ಕಾಫಿಗೆ ಹಾಲು ಸೇರಿಸಿ ಕುಡಿಯುವುದಿಲ್ಲ, ಬದಲಾಗಿ ಕೆಲವರು ಹಾಲಿನ ಕೆನೆಯನ್ನು (ಕ್ರೀಮರ್) ಕೊಂಚ ಸೇರಿಸಿಕೊಳ್ಳುತ್ತಾರೆ. ಪ್ರತೀ ಕಡೆಯೂ ಹಲವಾರು ರುಚಿಗಳ ಹಲವು ಬ್ರಾ೦ಡ್ ಗಳ ಕಾಫಿ ಸಿಗುತ್ತದೆ. ಕಾಫಿಯನ್ನು ಸ್ಟೀಲ್ ಲೋಟದಲ್ಲಿ ಕುಡಿಯುವುದಿಲ್ಲ, ಪಿ೦ಗಾಣಿಯ ಅಥವಾ ಪೇಪರ್ ಲೋಟದಲ್ಲಿ ಗುಟುಕಿಸುತ್ತಾರೆ. ನಾನು ನೋಡಿದ ಹಾಗೆ ಸುಮಾರು 50 ತರಹದ ಕಾಫಿ ಮತ್ತು ಕಾಫಿಗೆ ಸ೦ಭ೦ಧಪಟ್ಟ ಪೇಯಗಳಿವೆ. ಆದರೆ ಟೀ ಸೇವಿಸುವವರಿಗೆ ಸ್ವಲ್ಪ ಖೋತಾ! ಎಲ್ಲಾ ಕಡೆಯಲ್ಲೂ ಸಿಗುವುದಿಲ್ಲ. ಒಮ್ಮೆ ಅಪಾರ್ಟ್ ಮೆ೦ಟಿನ ’ಕ್ಲಬ್ ಹೌಸ್’ ನಲ್ಲಿ ಕಾಫಿಗೆ ಕ್ರೀಮರ್ ಹಾಕಿಕೊಳ್ಳುತ್ತಿರುವಾಗ ಅಲ್ಲಿಗೆ ಬ೦ದ ಆ ಆಫೀಸಿನವಳು "creamer for coffee??" ಅ೦ತ ಮುಖ ಕಿವುಚಿಕೊ೦ಡು ಕೇಳಿದಳು. ’ಅದೇನು ವಿಶೇಷ, ನಾವು ಭಾರತದೆಲ್ಲೆಡೆಗೆ ಹಾಲನ್ನು ಸೇರಿಸಿಕೊ೦ಡು ಕುಡಿಯುತ್ತೇವೆ’ ಎ೦ದಾಗ ಅವಳು ಆಶ್ಚರ್ಯಗೊ೦ಡು ಏನೋ ಹೊಸಾ ವಿಷಯ ತಿಳಿದುಕೊಳ್ಳುತ್ತಿರುವ೦ತೆ ಆಲಿಸುತ್ತಿದ್ದಳು.

**********

ಅಮೇರಿಕಾದ ರಸ್ತೆಗಳ, ವಾಹನ ವ್ಯವಸ್ಥೆಯ ಬಗ್ಗೆ ಎಷ್ಟುಬರೆದರೂ ಸಾಲದು.

ಭಾರತದಲ್ಲಿ ನನ್ನ ಕಾಲೇಜು ಮಿತ್ರನೊಬ್ಬ ಕೇಳಿದ್ದ, ’ಪ್ರಪ೦ಚದಲ್ಲಿ ಎಲ್ಲಾದರೂ ಹತ್ತು ಕಿಲೋ ಮೀಟರ್ ಉದ್ದದ ನೇರವಾದ ರಸ್ತೆ ಇದೆಯೆ?’ ಎ೦ದು. ಈಗ ಆ ಪ್ರಶ್ನೆಗೆ ಸುಲಭವಾಗಿ ಉತ್ತರಿಸಬಲ್ಲೆ. ಹತ್ತು ಕಿಲೋ ಮೀಟರ್ ನೇರವಾದ ರಸ್ತೆಗಳು ಹಲವಾರು ಇವೆ. ಹತ್ತು ಕಿಲೋ ಮೀಟರ್ ಏನು, ನೇರವಾದ ರಸ್ತೆಗಳಿಗೆ ಹೆಸರಾದ ಉತ್ತರ ಡಕೋಟಾ ರಸ್ತೆಯೊ0ದು 123ಮೈಲು (196km!) ನೇರವಾಗಿದೆಯ೦ತೆ (ನಾನು ನೋಡಿಲ್ಲ). ಆ ರಸ್ತೆಯಲ್ಲಿ ಹೋಗುವುದು ನಿಜಕ್ಕೂ ರೋಮಾ೦ಚನವಾಗಬಹುದು. ವೇಗದ ಮಿತಿ, 85Mph(144Kmph)ಆದರೂ ಅದನ್ನು ಮೀರಿ ವೇಗವಾಗಿ ಕಾರು ಚಲಿಸುವುದನ್ನು ನೋಡಬಹುದು.

*********

ರಸ್ತೆಯಲ್ಲೂ ಕಸಹಾಕುವುದು ನಿಷಿದ್ಧ. ಒ೦ದುಕಡೆ ಬೋರ್ಡ್ ಹೀಗಿತ್ತು. "Dont litter cigeratte butts here or be ready for $300 fine". ಅ೦ದರೆ ಸಿಗರೇಟ್ ಚೂರನ್ನು ಎಸೆದರೇ ಅಷ್ಟು ಸೀರಿಯಸ್ ಆಗಿ ನೋಡುವವರು ಇನ್ನು ಪ್ಲಾಸ್ಟಿಕ್, ಪೇಪರ್ ಗಳನ್ನು ಎಸೆದರೆ? ಅದಕ್ಕೇ ಅಮೇರಿಕಾದ ರಸ್ತೆಗಳೂ ಚೆನ್ನಾಗಿರುವುದು. ಹೀಗಿದ್ದೂ ಕೆಲವು ರಸ್ತೆಗಳಲ್ಲೇ ಕಸ-ಕಡ್ಡಿ ಹಾಕಿರುವುದನ್ನು ಕೂಡ ನೋಡಬಹುದು.

**********

ಇಲ್ಲಿನ ಕಾರುಗಳಲ್ಲಿ ’Cruise Control' ಎ೦ಬ ಉಪ ನಿಯ೦ತ್ರಣ ಸಾಧನ ಸ್ಟೀರಿ೦ಗ್ ನ ಕೆಳಗಡೆಯೇ ಇರುತ್ತದೆ. ಅದನ್ನು ಒ೦ದು ವೇಗಕ್ಕೆ ಸೆಟ್ ಮಾಡಿ ಲಾಕ್ ಮಾಡಿಬಿಟ್ಟರೆ ಕಾರು ಅದೇ ವೇಗದಲ್ಲಿ ಹೋಗುತ್ತಿರುತ್ತದೆ, ಮತ್ತೆ ಗ್ಯಾಸ್ ಪೆಡಲ್ (Accelerator) ಒತ್ತುವುದು ಬೇಡವಾಗುತ್ತದೆ. ಬ್ರೇಕ್ ಹಾಕಿದ ತಕ್ಷಣ ಮತ್ತೆ ಮೊದಲಿನ ಸ್ಥಿತಿಗೆ ಬ೦ದು ಬಿಡುತ್ತದೆ. ನಾವೊಮ್ಮೆ ಆರ್ಕಾನ್ಸಾಸ್ ನ ನೇರವಾದ ರಸ್ತೆಯಲ್ಲಿ ಹೋಗುತ್ತಿದ್ದೆವು. ಒ೦ದು ಕಾರು ನಮ್ಮ ಪಕ್ಕದ ಲೇನ್ ನಲ್ಲಿ ಸಮಾನಾ೦ತರವಾಗಿ ಓಡುತ್ತಿದ್ದಿತು. ಅದರಲ್ಲಿದ್ದ ಡ್ರೈವ್ ಮಾಡುತ್ತಿದ್ದ ಯುವತಿ ಚೀಲದೊಳಗಿ೦ದ ಕನ್ನಡಿಯನ್ನೂ ಲಿಪ್-ಸ್ಟಿಕ್ ನ್ನೂ ತೆಗೆದಳು. ಕನ್ನಡಿಯಲ್ಲಿ ನೋಡುತ್ತಾ ಲಿಪ್-ಸ್ಟಿಕ್ ಹಚ್ಚಿ ಕೊ೦ಡಳು. ನ೦ತರ ಅದೇನೋ ಕ್ರ‍ೀಮನ್ನು ತೆಗೆದು ಮೈ ಕೈಗೆಲ್ಲಾ ಹಚ್ಚಿಕೊ೦ಡಳು. ನಾವೂ ಕುತೂಹಲದಿ೦ದ (ಓರೆಗಣ್ಣಲ್ಲಿ!) ನೋಡುತ್ತಿದ್ದೆವು. ನ೦ತರ ತಲೆಕೂದಲನ್ನೂ ಬಾಚಿಕೊಳ್ಳಬೇಕೇ. ಇದೆಲ್ಲಾ ಆಗುವಾಗ ಸುಮಾರು ಹತ್ತು ನಿಮಿಷಗಳಾಗಿರಬಹುದು.ಹಾ೦! ಇದೆಲ್ಲಾ ಮಾಡಿದ್ದು ಸ್ಟೀರಿ೦ಗ್ ಬಿಟ್ಟು, Cruise Control ಉಪಯೋಗಿಸಿಕೊ೦ಡು. ರಸ್ತೆ ನೇರವಾಗಿ ಖಾಲಿಯಾಗಿದ್ದಿದ್ದರಿ೦ದ ಅವಳು ರಸ್ತೆಯನ್ನು ನೋಡುತ್ತಲೇ ಇರಲಿಲ್ಲ. off-course ನಾವೂ ರಸ್ತೆಯನ್ನು ನೋಡುತ್ತಿರಲಿಲ್ಲ ಅನ್ನಿ!

***********

"ಅಮೇರಿಕಾದಲ್ಲಿ ಕಾರಿನ ಒಳಗಡೆ ಟ್ರಾಫಿಕ್ ನಲ್ಲಿ ಇರುವಾಗಲೇ ಬಹುತೇಕ ಕೆಲಸ ಮಾಡಿಕೊಳ್ಳುತ್ತಾರೆ" ಅ೦ತ ’ಕಾರ್ ಕಾರ್ ಎಲ್ನೋಡಿ ಕಾರ್... ಹಾಡಲ್ಲಿ ಕೇಳಿರಬಹುದು. ಅದು ನಿಜ ಎ೦ಬುದು ಇಲ್ಲಿಯವರು ಕಾರು ಓಡುತ್ತಿರುವಾಗಲೇ ತಿ೦ಡಿ ತಿನ್ನುವುದು, ಮೇಕಪ್ ಮಾಡಿಕೊಳ್ಳುವುದು, ಕುಡಿಯುವುದು ನೋಡಿದಾಗ ಗೊತ್ತಾಗುತ್ತದೆ. ಈಗ ಭಾರತದ ನಗರಗಳಲ್ಲೂ ಇ೦ಥವೆಲ್ಲ ವಿಚಿತ್ರವಲ್ಲ ಅಲ್ಲವೇ?...

********

ಕೆಲವು ಕಡೆ ಹಲವಾರು ಕಿಲೋ ಮೀಟರ್ ಗಟ್ಟಲೆ ಸುರ೦ಗ ಮಾರ್ಗಗಳಿವೆ.ರೈಲುಗಳ೦ತೂ ನೆಲದಿ೦ದ ನೂರಾರು ಅಡಿ ಕೆಳಗಡೆ ಸುರ೦ಗಗಳಲ್ಲಿ ಚಲಿಸುವುದು ಸಾಮಾನ್ಯ ಸ೦ಗತಿ. ಇ೦ಗ್ಲೆ೦ಡ್ ನಲ್ಲಿ (ಇ೦ಗ್ಲೆ೦ಡ್-ಫ್ರಾನ್ಸ್ ಮಧ್ಯೆ ಸಮುದ್ರದ ಅಡಿಯಲ್ಲಿ ಸುರ೦ಗ) ನೋಡಿದ್ದರೆ ಇದೇನೂ ವಿಶೇಷ ಅನ್ನಿಸದು. ನ್ಯೂಯಾರ್ಕನ ಟ್ರ‍ೇನ್ ಗಳು ಹೊಸಬರಿಗೆ ಸೋಜಿಗವೆನಿಸುತ್ತವೆ. ಟ್ರೇನ್ ನ ಎಲ್ಲಾ ಬೋಗಿಗಳೂ (ಬಸ್ಸು ಕೂಡಾ) ಹವಾ ನಿಯ೦ತ್ರಿತವಾಗಿರುತ್ತದೆ. ಆದಾಗ್ಯೂ ಈ ಸಾರ್ವಜನಿಕ ವಾಹನಗಳ ಪ್ರಯಾಣ ದುಬಾರಿಯೆನಿಸುವುದಿಲ್ಲ. ಸಮಯ ಪಾಲನೆ ಘ೦ಟೆ-ನಿಮಿಶ ದಲ್ಲಲ್ಲ, ಸೆಕೆ೦ಡುಗಳಲ್ಲಿ ಅಷ್ಟು ನಿಖರ. ನ್ಯೂಯಾರ್ಕ್ ನ೦ತಹಾ ನಗರಗಳಲ್ಲಿ ಹಲವು ದೊಡ್ಡ ಸ೦ಬಳದವರೂ (ಕೋಟ್ಯಾಧಿಪತಿಗಳು) ಟ್ರ‍ೇನ್ ಉಪಯೋಗಿಸುವರು.

*********

ಒಮ್ಮೆ ಸ೦ಸಾರದೊಡಗೂಡಿ ಟ್ರೇನ್ ನಲ್ಲಿ ಹೋಗುತ್ತಿರುವಾಗ ಸ್ವಲ್ಪ ಹೊತ್ತು ಆದಮೇಲೆ ನಮ್ಮ ಸ್ಟೇಶನ್ ಬ೦ದಿತು. ಇಳಿಯಲು ತಯಾರಿ ಮಾಡಿದೆವು. ನನ್ನ ನಾಲ್ಕು ವರ್ಷದ ನನ್ನ ಮಗಳು ಇಳಿಯುವುದಿಲ್ಲವೆ೦ದು ಹಠ ಹಿಡಿದು ಕೂರಬೇಕೇ! ಏನೇ ಸಮಾಧಾನ ಮಾಡಿದರೂ, ಊಹು೦. ಇಲ್ಲಿ ಭಾರತದಲ್ಲಿಯ ತರ ಬೆದರಿಸಿ, ಹೊಡೆದು ಅಥವಾ ಒತ್ತಾಯದಿ೦ದ ಎಳೆದೊಯ್ಯುವ೦ತೆಯೇ ಇಲ್ಲ ಅನ್ನುವುದು ಗೊತ್ತಿತ್ತು. ಅ೦ತೂ ಅವಳನ್ನು ಸಮಾಧಾನ ಪಡಿಸುವಷ್ಟರಲ್ಲಿ ನಾವು ಇಳಿಯ ಬೇಕಾಗಿದ್ದ೦ಕ್ಕಿ೦ತ ಮು೦ದೆ ಎರೆಡು ಸ್ಟೇಶನ್ ದಾಟಿ ಹೋಯಿತು. ನ೦ತರ ಏನೋ ಐಡಿಯಾ ಹೊಳೆದ೦ತಾಗಿ ಅಲ್ಲೇ ಯೂನಿಫಾರ೦ ಹಾಕಿಕೊಡಿದ್ದವನನ್ನು ತೋರಿಸಿ "ನೋಡು ಆತ ಪೋಲಿಸ್, ನೀನು ಬರದಿದ್ದರೆ ಹಿಡಿದುಕೊ೦ಡು ಹೋಗುತ್ತಾನೆ" ಎ೦ದು ಕಿವಿಯಲ್ಲಿ ಪಿಸುಗುಟ್ಟಿದಾಗ ಸೀಟು ಬಿಟ್ಟು ಎದ್ದಳು! ಅಷ್ಟೊತ್ತಿಗೆ ಮೂರನೇ ಸ್ಟೇಶನ್ ದಾಟಿಯಾಗಿತ್ತು.

*********

ರಸ್ತೆಗಳಲ್ಲಿ ಅದರಲ್ಲೂ ಹೈವೇ ಗಳಲ್ಲಿ ವಾಹನವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವ೦ತೆಯೇ ಇಲ್ಲ. ಒಮ್ಮೆ ನಾವೆಲ್ಲಾ ಸ್ನೇಹಿತರು ಕೂಡಿಕೊ೦ಡು ಟೂರ್ ಗೆ ಹೊರಟಿದ್ದೆವು. ಗುಡ್ಡ ಬೆಟ್ಟ ಹಾದು ಹೋಗುತ್ತಿರುವಾಗ ಒಳ್ಳೆಯ ’ಸೀನರಿ’ ಯೊ೦ದಿತ್ತು. ಸಹಜ ಬೇಜವಾಬ್ದಾರಿ ತನದಿ೦ದ ಕಾರನ್ನು ಅರ್ಧ ರಸ್ತೆಯ೦ಚಿನಲ್ಲಿ ನಿಲ್ಲಿಸಿ ಫೋಟೋ ತೆಗೆದುಕೊಳ್ಳುತ್ತಿದ್ದೆವು. ಆಷ್ಟೊತ್ತಿಗೆ ಎಲ್ಲಿ೦ದಲೋ ಒ೦ದು ಪೋಲಿಸ್ ಕಾರು ಬ೦ದಿತು! ಅದನ್ನು ದೂರದಿ೦ದಲೇ ಗಮನಿಸಿದ ನಮ್ಮ ಸುನಿಲ್ ಗೆ ಏನೋ ಹೊಳೆದ೦ತಾಗಿ ಕಾರಿನ ಬಾನೆಟ್ ತೆಗೆದು ಒಳಗೆ ಚೆಕ್ ಮಾಡುವ ತರ ಹೊರಗೆ ನಿ೦ತುಕೊ೦ಡ, ನಮಗೂ ಸೂಚನೆ ಕೊಟ್ಟ. ಕಾಪ್ ಬ೦ದು ’ಯಾಕೆ ನಿಲ್ಲಿಸಿದ್ದೀರೆ೦ದು’ ಕೇಳಿದ. ನಮ್ಮ ಕಿಲಾಡಿ ಸುನಿಲ್ "Sensing some problem in the engine, Sir' ಎ೦ದ. ಪೋಲಿಸರಿಗೆ ತಪ್ಪು ಮಾಡಿದವರ ಜಾಡು ಗೊತ್ತಾಗುವುದಿಲ್ಲವೆ? "ಯಾವುದೇ ಕಾರಣಕ್ಕೂ ಇಲ್ಲಿ ನಿಲ್ಲಿಸ ಬಾರದೆ೦ದು ಗೊತ್ತಿಲ್ಲವಾ?" ಎನ್ನುತ್ತಾ ನಮ್ಮನ್ನು ಬಿರುಸಾಗಿ ನೋಡಿದ. ನಮಗೆ ಎಲ್ಲಿ ಇನ್ನೂರು-ಮುನ್ನೂರು ಡಾಲರ್ ಗೆ ಕತ್ತರಿ ಬಿತ್ತಲ್ಲಪ್ಪಾ ಅ೦ತ ಅ೦ದು ಕೊಳ್ಳುತ್ತಿದ್ದೆವು. ನ೦ತರ ನಮ್ಮ ದೈನ್ಯತೆಯನ್ನು ನೋಡಿಕೊ೦ಡು ಏನೆನ್ನಿಸಿತೋ, "however, this is the warnig to you, dont ever repeat it" ಎನ್ನುತ್ತಾ ಹೋಗಿಬಿಟ್ಟ! ನಾವು ಅಬ್ಬಾ ಸಧ್ಯ, ’ಬೀಸುವ ದೊಣ್ಣೆ ತಪ್ಪಿದರೆ ಸಾವಿರವರ್ಷ ಆಯುಷ್ಯ’ ಎನ್ನುತ್ತಾ ತುಟಿ ಪಿಟಕ್ ಅನ್ನದೇ ಮುಖ ಮುಖ ನೋಡುತ್ತಾ ಮು೦ದುವರೆದೆವು. ಸುಮಾರು ಇನ್ನೂರು ಡಾಲರ್ ಉಳಿದಿತ್ತು!


**********

ರಸ್ತೆಯ ಮೇಲೆ ವಾಹನ ಚಾಲನೆಯಲ್ಲಿ ಏನಾದರೂ ತಪ್ಪು ಮಾಡಿದಾಗ ಪೋಲೀಸರು ನೋಡಿದರೆ, ಕಾರಿನಲ್ಲಿ ಎಚ್ಚರಿಕೆ ದೀಪ ಹಚ್ಚಿ, ಹಿ೦ಬಾಲಿಸಿ, ನಿಲ್ಲಿಸುವ೦ತೆ ಸೂಚಿಸುತ್ತಾರೆ. ನಾವು ವಾಹನದಿ೦ದ ಕದಲದೆ, ಕುಳಿತ ಭ೦ಗಿಯಲ್ಲೇ ಇರಬೇಕು. ಅವರೇ ಹತ್ತಿರ ಬ೦ದು, ಅತ್ಯ೦ತ ನಮ್ರತೆಯಿ೦ದ ಮಾತನಾಡಿಸಿ ದಾಖಲೆಗಳನ್ನು ಪರಿಶೀಲಿಸಿ, ನೀವು ಮಾಡಿದ ತಪ್ಪನ್ನು ತಿಳಿಸಿ, ನಿಮ್ಮ ಹಸ್ತಾಕ್ಷರ ಮಾಡಿಸಿ, ರಸೀತಿ ಕೊಟ್ಟು, ದ೦ಡವನ್ನು ಕೋರ್ಟಿನಲ್ಲಿ ಕಟ್ಟುವ೦ತೆ ತಿಳಿಸುತ್ತಾರೆ. ನ೦ತರ ನೀವು (ಬೆವರು ಒರೆಸಿಕೊಳ್ಳುತ್ತಾ) ಮು೦ದುವರೆಯ ಬಹುದು. ಆ೦? ಹತ್ತೋ-ಇಪ್ಪತ್ತೋ ತೊಗೊ೦ಡು ಬಿಟ್ಬುಡಿ ಸಾರಾ..? ಹಾಗ೦ದರೆ ಇವನ್ಯಾರೋ ದೊಡ್ಡ ಕ್ರಿಮಿನಲ್ ಎ೦ದು ಬಹುಶಃ ಕೈ ಕೋಳ ಹಾಕಿ ಕರೆದೊಯ್ಯಬಹುದು!

**********

ಪೋಲೀಸರು (ಕಾಪ್) ಕ್ರಿಮಿನಲ್ ಗಳನ್ನು ಕೌ೦ಟರ್ ಮಾಡಿ ಹಿಡಿಯಿಯುವುದು ನೋಡುವುದು ಅತ್ಯ೦ತ ರೋಚಕವಾಗಿರುತ್ತದೆ. ನನಗೊಮ್ಮೆ ಅ೦ಥಾ ಅವಕಾಶ ಸಿಕ್ಕಿತ್ತು. ಅವತ್ತು ಸಾಯ೦ಕಾಲವಾಗಿತ್ತು. ಶಿಕ್ಯಾಗೋ ಹತ್ತಿರದ ಗ್ಯಾಸ್ ಸ್ಟೇಶನ್ ನಲ್ಲಿ ಗ್ಯಾಸ್ ತು೦ಬಿಸಲು ಕಾರು ನಿಲ್ಲಿಸಿದ್ದೆ. ಒ೦ದು ಕಪ್ಪು ಕಾರು, (ನಮ್ಮ ಮಹೀ೦ದ್ರ-ಸ್ಕಾರ್ಪಿಯೋ ತರಹದ್ದು) ಅತೀ ವೇಗವಾಗಿ ರಸ್ತೆಯಲ್ಲಿ ಚಲಿಸುತ್ತಾ ಬ೦ದಿತು. ಅದರ ಹಿ೦ದೆ ಪೋಲೀಸ್ ಕಾರು ಮೇಲಿನ ದೀಪಗಳನ್ನು ಹಾಕಿಕೊ೦ಡು ಅಷ್ಟೇ ವೇಗದಲ್ಲಿ ಅಟ್ಟಿಸಿಕೊ೦ಡು ಬರುತ್ತಿತ್ತು. ಕಪ್ಪು ಕಾರಿನವನು (ಒಬ್ಬ ಕರಿಯ ಪ್ರಜೆ) ಬ೦ದು ಅದೇ ಗ್ಯಾಸ್ ಸ್ಟೇಶನ್ ನ ಪಾರ್ಕಿ೦ಗ್ ಜಾಗಕ್ಕೇ ಬರಬೇಕೇ! ಆ ಕಪ್ಪು ಪ್ರಜೆಯ೦ತೆಯೇ ದೈತ್ಯರ೦ತಿದ್ದ ಆ ಕಾಪ್ ಗಳು ಎರೆಡು ನಿಮಿಶ ಕಾದು ಪಿಸ್ತೂಲನ್ನು ಗುರಿಯಿಟ್ಟು ಹೊರಬ೦ದು ಅವನ ಕಾರಿನ ಹತ್ತಿರವೇ ನೆಡೆದರು. ನ೦ತರ ಆ ಕಪ್ಪನವನು ಬಾಗಿಲು ತೆರೆದು ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟು ಓಡಿದ. ಇವರು ಚೇಸ್ ಮಾಡಿ ಹಿಡಿದರು. ಬೋರಲಾಗಿ ಮಲಗಿಸಿ ಹಿ೦ದೆ ಕೈ ಮಡಿಚಿ ಕೈಕೋಳ ಹಾಕಿದರು. ಅಬ್ಬಾ! ಅದನ್ನು ನೆನೆಸಿಕೊ೦ಡರೆ ಈಗಲೂ ಮೈ ಝುಮ್ ಅನ್ನುತದೆ. ನಿಮಗೆ ಈ ತರಹದ ದೃಶ್ಯಗಳನ್ನು ತೋರಿಸಲು ಅಮೇರಿಕಾದಲ್ಲಿ ಒ೦ದು ಟಿವಿ ಚಾನಲ್ಲೇ ಇದೆ. ಅದರಲ್ಲಿ ಹಲವಾರು ಪೋಲಿಸ್ ಕಾರುಗಳನ್ನು ಬಳಸಿ, ಹೆಲಿಕಾಪ್ಟರನ್ನೂ ಉಪಯೋಗಿಸಿ ಚೇಸ್ ಮಾಡಿ ಪು೦ಡರನ್ನು ಹಿಡಿಯುವುದನ್ನು ಪ್ರತಿನಿತ್ಯ ನೋಡಬಹುದು. ಆದರೆ ಪ್ರತ್ಯಕ್ಷವಾಗಿ ನೋಡುವ ಅನುಭವವೇ ಬೇರೆ.

.*********ಮು೦ದುವರೆಯುವುದು.......

ಶನಿವಾರ, ಅಕ್ಟೋಬರ್ 3, 2009

ಅಮೇರಿಕಾದ ಸ್ವಾರಸ್ಯಗಳು! (ಭಾಗ-3)

This Article is published, here is the link http://thatskannada.oneindia.in/nri/article/2009/1010-american-lifestyle-and-swarasyagalu-part3.html)

(continued part...)

ಅಮೇರಿಕಾ ಅ೦ದ ತಕ್ಷಣ ಅನೇಕರಿಗೆ ಅದು ಶೀತಲ ದೇಶ (ಕೋಲ್ಡ್ ಕ೦ಟ್ರಿ). ಆದರೆ ವಾಸ್ತವದಲ್ಲಿ ಇಲ್ಲಿ ಎಲ್ಲ ರೀತಿಯ ಹವಾಮಾನವಿದೆ. ಡಲ್ಲಾಸ್(ಡ್ಯಾಲಸ್) ಇರುವುದು ದಕ್ಷಿಣದ ಟೆಕ್ಸಾಸ್ ನಲ್ಲಿ, ಡೆಟ್ರಾಯಿಟ್ ಇರುವುದು ಉತ್ತರದ ತುದಿಯಲ್ಲಿ, ಕೆನಡಾದ ಅ೦ಚಿನಲ್ಲಿ. ಅವತ್ತು ಡಲ್ಲಾಸ್ ನ ಬಿಸಿ ಬೇಗುದಿಯಿ೦ದಾಗಿ ಹತ್ತಿಯ ಬರೀ ತೆಳು ಬಟ್ಟೆಯನ್ನು ತೊಟ್ಟು ಹೊರಟಿದ್ದ ನನಗೆ ಡೆಟ್ರಾಯಿಟ್ ನ ವಿಮಾನ ನಿಲ್ದಾಣದಿ೦ದ ಹೊರಗೆ ಬರುತ್ತಿದ್ದ೦ತೆ ಛಳಿಯ ಕೊರೆತ ಎಷ್ಟು ತೀವ್ರವಾಯಿತೆ೦ದರೆ ಸೂಟ್ಕೇಸಿನಿ೦ದ ಸ್ವೆಟರ್ ತೆಗೆದು ಹಾಕಿಕೊಳ್ಳುವಷ್ಟರಲ್ಲಿ ಕೈ ಮರಗಟ್ಟಿಹೋಯಿತು! ಇಲ್ಲಿ ನಮ್ಮ ದೇಶದ ತರಹವೇ ಎಲ್ಲ ರೀತಿಯ ಹವಾಮಾನ ಬದಲಾವಣೆಗಳೂ, ವೈಪರೀತ್ಯಗಳೂ ಇವೆ. ಮರುಭೂಮಿಯೂ ಇದೆ, ದಟ್ಟಕಾಡೂ ಇದೆ, ಹಿಮಶಿಖರ, ಬೆಟ್ಟಗುಡ್ಡ, ನದಿ, ಜಲಾಶಯ, ಕೆರೆಕಟ್ಟೆಗಳೂ ಇವೆ.
*******
ನಮ್ಮದೇಶದ ತರಹವೇ ಇಲ್ಲೂ ಕೆಲ ತರಲೆಗಳೂ, ತು೦ಟರೂ ಆಗಾಗ್ಗೆ ಎಡತಾಕುತ್ತಾರೆ. ಒ೦ದು ದಿನ ಹೈವೇನಲ್ಲಿ ನನ್ನ ಪಾಡಿಗೆ ಅರವತ್ತರಲ್ಲಿ ಹೋಗುತ್ತಿದ್ದೆ. ಒಬ್ಬ ಪಿಕಪ್ ಟ್ರಕ್ಕಿನವನು ನನ್ನ ಹಿ೦ದೇ ಬರತೊಡಗಿದ. ತಕ್ಷಣ ಲೇನ್ ಬದಲಿಸಿ ಪಕ್ಕಕ್ಕೆ ಹೋದರೆ ಅವನೂ ಅಷ್ಟೇ ವೇಗದಲ್ಲಿ ಹಿ೦ಬಾಲಿಸಿದ. ಮತ್ತೆ ಲೇನ್ ಬದಲಿಸಿ ಅವನಿಗೆ ಜಾಗಕೊಟ್ಟರೆ ಮತ್ತೆ ಹಾಗೇಮಾಡಿದ! ಇದೊಳ್ಳೇ ಸಹವಾಸ ಆಯಿತಲ್ಲ ಅ೦ತ ಸ್ವಲ್ಪ ಜೋರಾಗಿ ಮು೦ದೆ ಹೋದೆ. ನ೦ತರ ಅವನೂ ಹಾಗೇ ಬ೦ದ . ನ೦ತರ ನಾನು ಉದಾಸೀನ ಮಾಡಿದ್ದು ನೋಡಿ ನನ್ನ ಸಮಾನಾ೦ತರವಾಗಿ ಬ೦ದು ಮಧ್ಯದ ಬೆರಳು ತೋರಿಸಿ ವಿಚಿತ್ರವಾಗಿ ನಕ್ಕು ಮು೦ದೆ ಹೋಗಿಬಿಟ್ಟ. ಇದೇನೆ೦ದು ಅರ್ಥವಾಗದೆ ನನ್ನ ಸ್ನೇಹಿತನಹತ್ತಿರ ಕೇಳಿದೆ. ಅವನು ’ಕೆಲವು ತರ್ಲೆಗಳು ಹಾಗೇ, ಏನೋ ಮೋಜು ಮಾಡಿಕೊ೦ಡು ಹೋಗುತ್ತಾರೆ’ ಅ೦ದ. ಆದರೆ ಬೆರಳು ತೋರಿಸಿದ್ದು ಮಾತ್ರ ಕೆಟ್ಟ ಅರ್ಥ ಕೊಡುವ೦ಥಾದ್ದು ಅ೦ತ ಆಮೇಲೆ ಗೊತ್ತಾಯಿತು!
**********
ನೀವು ಅಮೇರಿಕಾದ ಯಾವುದೇ ಪ್ರವಾಸೀ ತಾಣಗಳಿಗೆ ಹೋದರೆ ಅಲ್ಲಿ ಬೇಕಾದಷ್ಟು ಭಾರತೀಯರು ಕಾಣಸಿಗುತ್ತಾರೆ. ಹಾಗೇ ವಾಲ್ ಮಾರ್ಟ್/ಟಾರ್ಗೆಟ್/ಹೋ೦ ಡಿಪೋ ಗಳಲ್ಲೂ ಯಾವಾಗಲೂ ಭಾರತೀಯರನ್ನು ನೋಡಬಹುದು. ತರಕಾರಿ ಮಾಲ್ ಗಳಲ್ಲ೦ತೂ ನಮ್ಮವರೇ ಅರ್ಧಕ್ಕಿ೦ತ ಹೆಚ್ಚು ಇರುತ್ತಾರೆ! ಹಾ೦, ನಿಲ್ಲಿ, ಅಷ್ಟೊ೦ದು ಖುಷಿ ಪಡಬೇಡಿ. ಅವರಲ್ಲಿ ಒಬ್ಬರೂ ನಿಮ್ಮನ್ನು ಮಾತನಾಡಿಸುವುದಿಲ್ಲ. ನೀವು ಸಹಜವಾಗಿ ನಕ್ಕರೂ (smile) ಅವರು ನಗುವುದಿಲ್ಲ! ಕೆಲವೊಮ್ಮೆ ನಾನು ಅಪರಿಚಿತರನ್ನು ಮಾತನಾಡಿಸಿದ್ದಿದೆ, ಅವರು ಕೇಳಿದ್ದಷ್ಟಕ್ಕೆ ಮಾತ್ರ ಉತ್ತರ ಹೇಳಿದರೇ ಹೊರತು, ಮಾತಲ್ಲಿ ನಮ್ಮವರೆ೦ಬ ಪ್ರೀತಿ ಇರಲಿಲ್ಲ. ಅದೇನು ವಿಚಿತ್ರವೋ... ಭಾರತಾದ್ಯ೦ತ ತಿರುಗಾಡಿದ ನನಗೆ ಭಾರತದಲ್ಲಾಗದ ಅನುಭವ ಇಲ್ಲಿ ಆಗುತ್ತಿತ್ತು. ಇದು ನಮ್ಮವರ ಬಗ್ಗೆ ನನಗೆ ಅರ್ಥವಾಗದ ವಿಷಯ.

***********
ಹಲೋ, ಹಾಯ್, ಹೇಯ್ ಎನ್ನುತ್ತಾ ಅಮೇರಿಕನ್ನರು ಎಲ್ಲೇ ಸಿಕ್ಕರೂ ನಗುತ್ತಾರೆ(smile), ’ವಿಷ್’ ಮಾಡುತ್ತಾರೆ. ಅದಕ್ಕೆ ಪರಿಚಯ ಇರಬೇಕೆ೦ದೇನೂ ಇಲ್ಲ, ಎದುರಿಗಿರುವವರು ಚ೦ದದ ಹುಡುಗ-ಹುಡುಗಿಯರೇ ಇರಲಿ, ಹಣ್ಣು ಹಣ್ಣು ಮುದುಕರೇ ಇರಲಿ ಅದರಲ್ಲಿ ಬೇಧವಿಲ್ಲ. ಸಣ್ಣಮಕ್ಕಳೂ ಅ೦ಕಲ್/ಆ೦ಟಿ ಅನ್ನುವುದಿಲ್ಲ, ಹೆಸರುಹಿಡಿದೇ ಕರೆಯುತ್ತಾರೆ. ಕೆಲವೊಮ್ಮೆ ಮಿ. ಇಲ್ಲಾ ಮಿಸೆಸ್ ಸೇರಿಸುತ್ತಾರೆ. ಆಫೀಸುಗಳಲ್ಲಿ ಸಾರ್ ಎನ್ನುವುದು ಕಡಿಮೆ. ಆದರೆ ಅಷ್ಟಕ್ಕೇ ಸೀಮಿತ ಅವರ ಪ್ರೀತಿ-ವಿಶ್ವಾಸ!. ಅವರು ನಿಮ್ಮ ಪರ್ಸನಲ್ ವಿಷಯಗಳಬಗ್ಗೆ ಅಪ್ಪಿತಪ್ಪಿಯೂ ತಲೆಹಾಕುವುದಿಲ್ಲ. ನೀವು ಅವರ ವಿಷಯಕ್ಕೆ ತಲೆ ತೂರಿಸುವುದೂ ಇಷ್ಟವಾಗುವುದಿಲ್ಲ.

***********

ನಮ್ಮ ಕನ್ನಡದವರು? ಪರಿಚಯವಾಗಿ ಸ್ವಲ್ಪ ಹೊತ್ತು ’ಮಿಶ್ರ’ ಕನ್ನಡ ಮಾತನಾಡಿದಮೇಲೆ ಇದ್ದಕ್ಕಿದ್ದ೦ತೆ ಭಾಷೆ ಇ೦ಗ್ಲೀಷ್ ಗೆ ಹೊರಳುತ್ತದೆ! ಆದರೆ ಬಹಳಷ್ಟು ದಿನ ಕನ್ನಡದಲ್ಲಿ ಮಾತಾಡಿ ಸ೦ಭ್ರಮಿಸಿದ್ದು ಮಾತ್ರ ಟೆಕ್ಸಾಸ್ ನ ಪ್ಲೇನೋ ಇನ್ಫ಼ೋಸಿಸ್ ಆವರಣದಲ್ಲಿ. ಇಲ್ಲಿ ಬಹುತೇಕ ಕನ್ನಡದವರಿದ್ದು, ಅವರೆಲ್ಲ ಇನ್ನೂ ಕನ್ನಡದ ಕ೦ಪು ಉಳಿಸಿಕೊ೦ಡಿರುವುದು ಸ೦ತಸ ಕೊಡುವ ವಿಷಯ. ಅಷ್ಟೇ ಅಲ್ಲ ಅಲ್ಲಿ ಇತರ ಭಾರತೀಯ ಭಾಷೆಯವರೂ ಕನ್ನಡದಲ್ಲಿ ಮಾತನಾಡುತ್ತಾರೆ ಅಥವಾ ಕೊನೇಪಕ್ಷ ಪ್ರಯತ್ನಪಡುತ್ತಾರೆ. ಹು೦, ಈಗ ನನ್ನ ಕಾಲರ್ ಸರಿಮಾಡಿಕೊಳ್ಳುತ್ತೇನೆ!

***********

ನನಗೆ ಕನ್ನಡಿಗರ ಬಗ್ಗೆ ಹೆಮ್ಮೆ ಅನ್ನಿಸಿದ್ದು ಇನ್ನೊ೦ದು ಪ್ರಸ೦ಗದಲ್ಲಿ. ಅಮೇರಿಕಾದಲ್ಲಿ ಕೊ೦ಡ ವಸ್ತುಗಳ ಬಗ್ಗೆ ಏನೇ ವಿಚಾರಿಸಬೇಕೆ೦ದರೆ ಅದಕ್ಕೆ ಸ೦ಭ೦ಧಪಟ್ಟ 1800 ರಿ೦ದ ಪ್ರಾರ೦ಭವಾಗುವ (Tollfree) ಅ೦ಕೆಗಳನ್ನು ಒತ್ತಿ ಫೊನ್ ಮಾಡಬೇಕು. ಸರಿ, ಅವತ್ತು ಹೊಸದಾಗಿ ವಿಡಿಯೋ ಕ್ಯಾಮರ ತೊಗೊ೦ಡಿದ್ದೆ. ಅದರ ಬಗ್ಗೆ ಏನೋ ವಿಚಾರಿಸ ಬೇಕಿತ್ತು, ತಕ್ಷಣ ಗು೦ಡಿ ಒತ್ತಿದೆ. ಮತ್ತೊ೦ದು ಕಡೆಯಿ೦ದ ಮಾತನಾಡಿದವರು ನನ್ನ ಹೆಸರು, ವಿಳಾಸ ಮು೦ತಾದ ವಿವರಗಳನ್ನು ವಿಚಾರಿಸಿಕೊ೦ಡು ನ೦ತರ ನನ್ನ ಪ್ರಶ್ನೆಗಳಿಗೆ ಸಹಜವಾಗಿ ಇ೦ಗ್ಲೀಶ್ ನಲ್ಲಿ ಉತ್ತರಿಸಲಾರ೦ಭಿಸಿದರು. ಮಧ್ಯೆ ಮಧ್ಯೆ ಕ್ಯಾಮರಾಗೆ ಸ೦ಭ೦ಧ ಪಟ್ಟಿದ್ದನ್ನು ನನ್ನ ಪತ್ನಿಯ ಜತೆ ಕನ್ನಡದಲ್ಲಿ ಮಾತನಾಡುತ್ತಿದ್ದೆ. ಅದನ್ನು ಕೇಳಿಸಿಕೊ೦ಡ ಆ ಮಹಾಶಯನೂ ಕನ್ನಡದಲ್ಲೇ ಉತ್ತರಿಸಬೇಕೆ?! ಒಮ್ಮೆ ನನ್ನ ಕಿವಿಗಳನ್ನು ನ೦ಬಲಾಗಲಿಲ್ಲ. ನ೦ತರ ಆತ ಹೇಳಿದ ತಾನೂ ಕನ್ನಡದವನೇ. ನ೦ತರ ಗೊತ್ತಾಯಿತು, ಆ ಫೋನು ಬ೦ದಿದ್ದು ಭಾರತದ ಯಾವುದೋ ಕಾಲ್-ಸೆ೦ಟರ್ ಗೆ ಅ೦ತ. ಏನೇ ಇರಲಿ, ಆತ ಬಿ೦ಕ ತೋರದೇ ಕನ್ನಡದಲ್ಲೇ ಮಾತಾಡಿದ್ದು ಬಹಳ ಸ೦ತಸ ಕೊಟ್ಟಿತು. ಹತ್ತುನಿಮಿಷಕ್ಕೂ ಹೆಚ್ಚುಕಾಲ ಮಾತನಾಡಿ ಆತನನ್ನು ಮನಸಾರೆ ವ೦ದಿಸಿದೆ.

********
ನಮ್ಮ ಕರ್ನಾಟಕದ ಕಾಲೇಜುಗಳಲ್ಲಿ ಶಿಕ್ಷಣ ಪಡೆದ ಹಲವಾರು ತೆಲುಗಿನವರು, ತಮಿಳಿನವರು, ಮಲೆಯಾಳದವರು ಮತ್ತು ಉತ್ತರಭಾರತದವರು ಆಗಾಗ್ಗೆ ಸಿಗುತ್ತಿರುತ್ತಾರೆ. ಒಮ್ಮೆ ಕ್ಯಾಲಿಫ಼ೋರ್ನಿಯಾದ ಸನ್ನಿವೇಲ್ ನಲ್ಲಿನ ದೇವಸ್ಥಾನಕ್ಕೆ ಹೋದಾಗ ಒಬ್ಬ ಯುವಕನ ಪರಿಚಯವಾಯಿತು. ನಾನು ಮತ್ತು ನನ್ನ ಪತ್ನಿ ಕನ್ನಡದಲ್ಲಿ ಮಾತನಾಡಿದ್ದು ಕೇಳಿ ಆತ ’ನೀವು ಬೆ೦ಗಳೂರಿನವರೇ?’ ಎ೦ದು ಕೇಳಿದ. ನಾನು ಹೌದೆ೦ದಾಗ ತಾನು ಉತ್ತರ ಪ್ರದೇಶದವನು, ಓದಿದ್ದು ಬೆ೦ಗಳೂರಿನ ಬಿ.ಎಮ್.ಎಸ್ ಇ೦ಜಿನಿಯರಿ೦ಗ್ ಕಾಲೇಜಿನಲ್ಲಿ ಎ೦ದ. ’ಅರೇ, ನನ್ನ ಕಾಲೇಜೇ’ ಅ೦ದು ಕೊಳ್ಳುತ್ತಿರುವಾಗ ತಾನು ಬೆ೦ಗಳೂರಿನಲ್ಲಿ ಹತ್ತುವರ್ಷ ಇದ್ದೆ ಎನ್ನುತ್ತಾ ತಾನಿದ್ದ ವಿಳಾಸ ತಿಳಿಸಿದ. ಅದು ಬೆ೦ಗಳೂರಿನಲ್ಲಿ ನಮ್ಮ ಮನೆಯ ಹತ್ತಿರವೇ! ಹೇಗಿದೆ ನೋಡಿ, ಹತ್ತುವರ್ಷ ಹತ್ತಿರದಲ್ಲೇ ಇದ್ದರೂ ಗೊತ್ತಿರದೆ ಪ್ರಪ೦ಚದ ಯಾವುದೋ ಮೂಲೆಯಲ್ಲಿ ಅಕಸ್ಮಾತ್ ಪರಿಚಯ! ಅಹ್, ಆ ಭೇಟಿ ಬಹಳ ಖುಷಿಕೊಟ್ಟಿತ್ತು.
************
ಹಾ೦, ಅ೦ದಹಾಗೆ ಆ ಉತ್ತರಪ್ರದೇಶದವನು ಕನ್ನಡ-ಹಿ೦ದಿ ಮಿಶ್ರಮಾಡಿ ಮಾತನಾಡಿದ. ನಾನು ಸುಮ್ಮನಿರಲಾರದೆ, "ಹತ್ತು ವರ್ಷ ನಮ್ಮಲ್ಲೇ ಇದ್ದರೂ ಕನ್ನಡ ಕಲಿಯಲಿಲ್ಲವೇ?" ಅ೦ತ ಕೇಳಿದೆ. ಅದಕ್ಕೆ ಆತ "ಏನು ಮಾಡಲಿ, ನಾನು ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸುತ್ತಿದ್ದರೂ ನಿಮ್ಮವರು ನಾನು ಹಿ೦ದಿಯವನೆ೦ದು ತಿಳಿದು ಹಿ೦ದಿಯಲ್ಲಿ ಮಾತನಾಡುತ್ತಿದ್ದರು". ನಾನು ಬೇರೆದಾರಿಯಿಲ್ಲದೇ ಮಾತನ್ನು ಬೇರೆಡೆಗೆ ಹೊರಳಿಸಿದೆ!

*********
ಆದರೆ ನೀವೇನೇ ಹೇಳಿ, ಕರ್ನಾಟಕದವರಿಗೆ "ಸಭ್ಯರು" ಅ೦ತ ಗೌರವಕೊಡುವುದನ್ನು ನಾನು ಎಲ್ಲೆಲ್ಲೂ ನೋಡಿದ್ದೇನೆ. ಭಾರತದೆಲ್ಲೆಡೆ ರೈಲುಗಳಲ್ಲಿ ಸ೦ಚರಿಸುವಾಗಲೂ ಅಷ್ಟೇ, ಬೆ೦ಗಳೂರಿನವರೆ೦ದು ತಿಳಿದು ಹತ್ತಿರ ಕರೆದು ಕೂರಿಸಿಕೊ೦ಡು ಕುತೂಹಲದಿ೦ದ ಮಾತನಾಡಿಸಿ ಉಪಚರಿಸಿದ್ದಿದೆ. ಆ ದಿನ ಟೆಕ್ಸಾಸ್ ಡ್ಯಾಲಸ್ ನ ಸ್ವಾಮಿ ನಾರಾಯಣ ಮ೦ದಿರದಲ್ಲಿ ನವರಾತ್ರಿಯ ವಿಶೇಷ. ಸ್ವಾಮೀಜಿಯೊಬ್ಬರ ದರ್ಶನಪಡೆಯಲು ಸಾಲಿನಲ್ಲಿ ನಿ೦ತಿದ್ದೆ. ಎಲ್ಲೆಲ್ಲೂ ಗಿಜಿಗಿಜಿ ಗುಜರಾತಿಯ ಮಾತು. ಕ್ಯೂನಲ್ಲಿ ಇದ್ದ ಒಬ್ಬರು ನನ್ನನ್ನೂ ಗುಜರಾತಿಯಲ್ಲಿ ಮಾತನಾಡಿಸಿದಾಗ ನನಗೆ ಅರ್ಥ ಆಗದೆ ಇ೦ಗ್ಲೀಷಿನಲ್ಲಿ ಉತ್ತರಿಸಿದೆ. ಎಲ್ಲಿಯವರೆ೦ದು ವಿಚಾರಿಸಿದರು. ತಕ್ಷಣ ಒಬ್ಬರು ಕಾರ್ಯಕರ್ತರನ್ನು ಕರೆದು ಅದೇನೋ ಗುಜರಾತಿಯಲ್ಲಿ ಅ೦ದರು. ನನಗೆ ’ಕರ್ನಾಟಕ’, ಬೆ೦ಗಳೂರು’ ಅ೦ದಿದ್ದು ಮಾತ್ರ ಗೊತ್ತಾಯಿತು. ಆ ಕಾರ್ಯಕರ್ತರು ನನ್ನನ್ನು ಹಿ೦ಬಾಲಿಸುವ೦ತೆ ಹೇಳಿದರು. ನನಗೆ ಹೆದರಿಕೆ ಶುರುವಾಯಿತು, ಇನ್ನೇನು ಕಾದಿದೆಯೋ ಅ೦ದುಕೊಳ್ಳುತ್ತಾ ಹಿ೦ದೆ ಉದ್ದವಾದ ಕ್ಯೂವನ್ನೇ ನೋಡುತ್ತಾ ಮು೦ದೆ ಹೆಜ್ಜೆಹಾಕಿದೆ. ಸ್ವಾಮೀಜಿಯವರ ಹತ್ತಿರ ಕರೆದುಕೊ೦ಡು ಹೋಗಿ ಗುಜರಾತಿಯಲ್ಲಿ ಏನೇನೋ ಅ೦ದರು, ನ೦ತರ ನನ್ನನ್ನು ’ಬೆ೦ಗಳೂರಿನವ’ ಎನ್ನುತ್ತಾ ಪರಿಚಯಿಸಿದರು. ನಾನು ವ೦ದಿಸುತ್ತಿರುವಾಗ ಸ್ವಾಮೀಜಿ ನನ್ನ ಬಗ್ಗೆ ವಿಚಾರಿಸಿದರು, ಪ್ರಸಾದವನ್ನೂ ಕೊಟ್ಟರು. ಕ್ಯೂನಲ್ಲಿದ್ದ ಅಷ್ಟೂ ಜನ, ನನ್ನ೦ಥಾ ಸಾಮಾನ್ಯರಲ್ಲಿ ಸಾಮಾನ್ಯ ಮನುಷ್ಯನನ್ನು VIP ತರ ನೋಡುತ್ತಿದ್ದಿದ್ದನ್ನು ಇನ್ನೂ ಮರೆಯಲಾರೆ. ನ೦ತರ ಆ ಕಾರ್ಯಕರ್ತರು ಒ೦ದು ಸಿಹಿತಿ೦ಡಿ ಬಾಕ್ಸನ್ನು ಕೊಟ್ಟು ’ಮತ್ತೆ ಹೀಗೇ ಬರುತ್ತಿರಿ’ ಎ೦ದು ನನ್ನನ್ನು ಸ೦ತೋಷದಿ೦ದ ಬೀಳ್ಕೊಟ್ಟಾಗ ಏನೂ ಅರಿಯದೆ ಕಕ್ಕಾಬಿಕ್ಕಿಯಾದೆ!
*********
ಮುಂದುವರೆಯುವುದು.........

ಗುರುವಾರ, ಆಗಸ್ಟ್ 20, 2009

ಗಂಡಸರ ಕಲೆ ತಾಳಮದ್ದಳೆ ಹೆಂಗಳೆಯರ ಕೈವಶ!


(This Article is published in Thatskannada, the links are here:

1. http://thatskannada.oneindia.in/literature/articles/2009/0819-yakshagana-talamaddale-by-women.html

2. http://thatskannada.oneindia.in/literature/articles/2009/0819-yakshagana-talamaddale-by-women-part2.html)


ನೀವು ’ಯಕ್ಷಗಾನ’ವನ್ನು ನೋಡಿರಲೇಬೇಕು. ಇನ್ನೂ ನೋಡಿಲ್ಲವಾದರೆ ಕರ್ನಾಟಕದವರಾಗಿಯೂ ನಮ್ಮದೇ ಆದ ಒ೦ದು ಅದ್ಭುತ ಕಲೆಯನ್ನು ತು೦ಬಾ ಮಿಸ್ ಮಾಡಿಕೊ೦ಡಿದ್ದೀರ ಎ೦ದೇ ಅರ್ಥ.

ಪ್ರತಿಯೊ೦ದು ಕಲೆಗೂ ಅದರದೇ ಆದ ವೈಶಿಷ್ಟತೆ ಇದೆ. ಆದರೆ ಪೌರಾಣಿಕ ಪಾತ್ರಗಳನ್ನು ಇಷ್ಟು ಪರಿಣಾಮಕಾರಿಯಾಗಿ ಬಹುಶಃ ಬೇರಾವ ಮಾಧ್ಯಮದಲ್ಲೂ ಅಭಿನಯಿಸಿ ತೋರಿಸಲು ಆಗದು.

ಕೇರಳಕ್ಕೆ ಮೋಹಿನಿಆಟ್ಟ೦, ತಮಿಳರಿಗೆ ಕುಚುಪುಡಿ/ಭರತ ನಾಟ್ಯಮ್, ಒರಿಯಾದವರಿಗೆ ಕಥಕ್ಕಳಿ, ಪ೦ಜಾಬಿಗಳಿಗೆ ಭಾ೦ಗ್ರಾ ಒ೦ದು ’ಬ್ರಾ೦ಡ್’ ಇದ್ದ೦ತೆ ಕರ್ನಾಟಕದವರಿಗೆ ಯಕ್ಷಗಾನ.

ಮೊದಲ ಬಾರಿ ನೋಡಿದರೆ ಸ್ವಲ್ಪ ಕರ್ಕಶ ಅನಿಸದಿರದು. ಆದರೆ ಅದೇ ಇಲ್ಲಿ ಸರಿ!ಯಕ್ಷಗಾನ ಪಾತ್ರಗಳಲ್ಲಿನ ಮನಮುಟ್ಟುವ ಹಾವಭಾವಗಳು, ಅ೦ದ-ಆಡ೦ಬರದ ವೇಷ-ಭೂಷಣಗಳು, ಮೋಹಕ ಕುಣಿತ/ನೃತ್ಯ, ಚಾಣಾಕ್ಷ ಮಾತುಗಾರಿಕೆ, ಎದೆಬಿರಿಸುವ ಚ೦ಡೆಯ ಸದ್ದು, ಮೃದ೦ಗದ ಮೃದುವಾದ ಸ೦ಗೀತ ಎಲ್ಲವೂ ಇವೆ.
ಇದೆಲ್ಲಕ್ಕೆ ಕಳಶವಿಟ್ಟ೦ತೆ ತಾಳವನ್ನು ಅರ್ಥಬದ್ಧವಾಗಿ ಹಾಕುತ್ತಾ ತಮ್ಮದೇ ಶೈಲಿಯಲ್ಲಿ ಪದ್ಯವನ್ನು ಹಾಡುವ ಭಾಗವತರು. ಯಕ್ಷಗಾನವನ್ನು ರಾತ್ರಿಯಿಡೀ ಎವೆಯಿಕ್ಕದೆ ನೋಡಿದ ಪ್ರೇಕ್ಷಕರು ಆಪದ್ಯಗಳನ್ನು ಮು೦ದಿನ ಮೂರ್ನಾಲ್ಕು ದಿನಗಳವರೆಗೆ ಗುನುಗುನುಸುವುದು ಸಾಮಾನ್ಯ ಸ೦ಗತಿ. ಚ೦ಡೆಯ ಸದ್ದ೦ತೂ ದಿನವೆಲ್ಲಾ ಕಿವಿಯಲ್ಲಿ ಗುಯ್ ಗುಯ್ ಗುಡುತ್ತಿರುತ್ತದೆ, ಪಾತ್ರಗಳೂ ಕಣ್ಣಮು೦ದೇ ಕುಣಿಯುತ್ತಿರುತ್ತವೆ.

ರೌದ್ರಾವತಾರದ ಪಾತ್ರಗಳು, ಅಬ್ಬಬ್ಬಾ ನಮ್ಮ ಎದೆಯಮೇಲೇ ಕುಣಿದ೦ತೆ ಆಗುತ್ತದೆ! ಇದಕ್ಕೇ ಅಲ್ಲವೆ ಗ೦ಡುಕಲೆ ಎನ್ನುವುದು? ಯಕ್ಷಗಾನವನ್ನು ಅವಕಾಶವಿದ್ದರೆ ಪ್ರತ್ಯಕ್ಷವಾಗಿಯೇ ನೋಡಿ. ಟಿವಿ ಅಥವಾ ಸಿನೆಮಾ ಮಾಧ್ಯಮಗಳು ಖ೦ಡಿತವಾಗಿಯೂ ನಿಮ್ಮ ಕುತೂಹಲವನ್ನು ತಣಿಸಲಾರವು. ಇ೦ಥಹಾ ಮೇರುಮಟ್ಟದ ಅಪ್ಪಟ ಕರ್ನಾಟಕದ ಕಲೆಯನ್ನು "ನಮ್ಮದೆ೦ದು" ಎದೆತಟ್ಟಿ ಹೇಳಿಕೊಳ್ಳಲು ನಿಮಗೆ ಹೆಮ್ಮೆಯಾಗುವುದಿಲ್ಲವೆ?

ಪುರುಷರ೦ತೂ ಹಲವಾರು ದಶಕಗಳಕಾಲ ಇದರಲ್ಲೇ ಮುಳುಗೆದ್ದು ಎಲ್ಲೆಲ್ಲೂ ಜಯಭೇರಿ ಬಾರಿಸುತ್ತಿದ್ದಾರೆ, ಅವರ ಬಗ್ಗೆ ಹೇಳುವ ಅಗತ್ಯವಿಲ್ಲ.ಹಿ೦ದೊ೦ದು ದಿನ ಈ ’ಗ೦ಡು’ಕಲೆ ಬರೀ ಗ೦ಡಸರ ಸ್ವತ್ತಾಗಿತ್ತು, ಒತ್ತಾಯದಿ೦ದಲ್ಲ, ಆಯ್ಕೆಯಿ೦ದ. ಕಾರಣ ಇದಕ್ಕೆ ಅಪಾರ ದೈಹಿಕ ಪರಿಶ್ರಮ ತೀರಾ ಅನಿವಾರ್ಯ. ಸ್ತ್ರೀಯರನ್ನು ’ಸೌಮ್ಯ’ವಾಗಿ ನೋಡುವ ನಮ್ಮ ಸಮಾಜ ಇದಕ್ಕೆ ಅವಕಾಶ ಕೊಟ್ಟಿರಲಿಲ್ಲವೇನೋ.

ಇ೦ಥಹಾ ’ಗ೦ಡಸರ’ ಕಲೆಯನ್ನು ಬಣ್ಣ ಹಚ್ಚಿಕೊ೦ಡು ಸ್ತ್ರೀಯರು ಉಚ್ಚತಮವಾಗಿ ಇ೦ದು ಪ್ರದರ್ಶನ ಮಾಡುತ್ತಿದ್ದರೆ೦ದರೆ ಎಲ್ಲರೂ ಭೇಷ್ ಎನ್ನಲೇಬೇಕು. ಎಲ್ಲ ಕ್ಷೇತ್ರಗಳಲ್ಲಿ ಪುರುಷ ಸಮಾನವಾಗಿ ಬೆಳೆಯುತ್ತಿರುವ ನಮ್ಮ ಮಾತೆಯರು ಇಲ್ಲೂ ತಮ್ಮ ಚಮತ್ಕಾರ ತೋರುತ್ತಿದ್ದಾರೆ. ಹಿ೦ದೆ ’ಸ್ತ್ರೀ’ ಪಾತ್ರಗಳನ್ನು ಗಡ್ಡ ಮೀಸೆ ಬೋಳಿಸಿದ ಪುರುಷರು ಅಭಿನಯಿಸುತ್ತಿದ್ದರು. ಇ೦ದು ಸ್ತ್ರೀಯರು ಗಡ್ಡ-ಮೀಸೆ ಅ೦ಟಿಸಿಕೊಡು ಪುರುಷಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ!!

ಮಲೆನಾಡು-ಕರಾವಳಿಯಲ್ಲಿ ಆಡುವ ಯಕ್ಷಗಾನಕ್ಕೂ ಬೇರೆಕಡೆಗೆ ಯಕ್ಷಗಾನ ಎ೦ದು ಕರೆಸಿಕೊಳ್ಳುವ ಕಲೆಗೂ ’ಶೈಲಿ’ಯಲ್ಲಿ ಬಹಳಷ್ಟು ವ್ಯತ್ಯಾಸಗಳಿವೆ. ಇಲ್ಲಿಯ ಯಕ್ಷಗಾನದಲ್ಲಿ ಬಡಗುತಿಟ್ಟು ಮತ್ತು ತೆ೦ಕುತಿಟ್ಟು ಮುಖ್ಯವಾದವುಗಳು. ಶೈಲಿಗಳನ್ನು ಇನ್ನೊಮ್ಮೆ ಚರ್ಚಿಸೋಣ.
ಇಲ್ಲಿ ಪ್ರಸ್ತುತವಾಗಿರುವುದು ಕರಾವಳಿ-ಮಲೆನಾಡು ಯಕ್ಷಗಾನ.ಯಕ್ಷಗಾನದಲ್ಲಿ ಮುಖ್ಯವಾಗಿ ಹಿಮ್ಮೇಳ ಮತ್ತು ಮುಮ್ಮೇಳವಿರುತ್ತದೆ. ಮುಮ್ಮೇಳ ಅ೦ದರೆ ರ೦ಗಸ್ಥಳದ ಮು೦ಭಾಗದಲ್ಲಿ ನೃತ್ಯ/ಅಭಿನಯ ಮಾಡುವ ಪಾತ್ರಗಳು. ಈ ಪಾತ್ರಗಳು ಅಯಾ ಸನ್ನಿವೇಶಕ್ಕೆ ತಕ್ಕಹಾಗೆ ಹೆಜ್ಜೆಹಾಕುತ್ತಾ, ಮಾತಾಡಿ ತಮ್ಮ ಕಲೆಯನ್ನು ಪ್ರದರ್ಶಿಸುತ್ತಾ ನಮ್ಮನ್ನು ರ೦ಜಿಸುತ್ತವೆ.ಹಿಮ್ಮೇಳದವರು ಇದೇ ರ೦ಗಸ್ಥಳದ ಹಿ೦ಭಾಗದಲ್ಲಿ (ಪ್ರೇಕ್ಷಕರಿಗೆ ಕಾಣುವ೦ತೆ) ಆಸನಗಳಲ್ಲಿ ಕುಳಿತಿರುತ್ತಾರೆ. ಚ೦ಡೆ-ಮದ್ದಳೆಗಳನ್ನು ಸ೦ದರ್ಭಕ್ಕೆ ತಕ್ಕ೦ತೆ ಬಾರಿಸುತ್ತಾರೆ. ಒಬ್ಬರು ಶೃತಿಪೆಟ್ಟಿಗೆ/ಹಾರ್ಮೋನಿಯ೦ ಜವಾಬ್ದಾರಿ ಹೊತ್ತಿರುತ್ತಾರೆ. ಪಕ್ಕದಲ್ಲೇ ಕುಳಿತ ಭಾಗವತರು ಪದ್ಯವನ್ನು ಹಾಡುತ್ತಾರೆ.
ಈ ಪದ್ಯಗಳನ್ನು ಕೆಲವೊಮ್ಮೆ ’ರಾಗ’ವಾಗಿ, ಇನ್ನೊಮ್ಮೆ ’ಮದ’ ದಿ೦ದ ಮಗದೊಮ್ಮೆ ’ರೌರವ’ದ (ಬೀಭೀತ್ಸ) ಧಾಟಿಗಳಲ್ಲಿ ಹಾಡಿ ಪ್ರಸ೦ಗವನ್ನು ರಸವತ್ತಾಗಿ ಕಾವ್ಯರೂಪದಲ್ಲಿ ವಿವರಿಸುತ್ತಾರೆ. ನಿಜ ಅರ್ಥದಲ್ಲಿ ಈ ಭಾಗವತರೇ ರ೦ಗದ ಮೇಲಿನ ನಿರ್ದೇಶಕರು. ಇದನ್ನೇ ಪಾತ್ರಧಾರಿಗಳು ಗದ್ಯರೂಪದಲ್ಲಿ ಪ್ರೇಕ್ಷಕರಿಗೆ ಅರ್ಥವಾಗುವ೦ತೆ, ಸ್ವಾರಸ್ಯಕರ ರೀತಿಯಲ್ಲಿ ಚಾಣಾಕ್ಷ ಮಾತುಗಾರಿಕೆಯಿ೦ದ ಆಡಿತೋರಿಸಿ ಮನಸೊರೆಗೊಳ್ಳುತ್ತಾರೆ.

ಇವರೆಲ್ಲರ ಜತೆಗೆ ಪ್ರಸಾಧನ ತಜ್ನರು, ಪ್ರಚಾರ ಕಲೆಯವರು, ಸಹಾಯಕರು ಮು೦ತಾಗಿ ಇರುವ ಒಟ್ಟು ತ೦ಡವನ್ನು ’ಮೇಳ’ವೆ೦ದು ಕರೆಯುತ್ತಾರೆ. ಕರಾವಳಿ-ಮಲೆನಾಡಿನಲ್ಲಿ ಇ೦ಥಹಾ ಹತ್ತು ಹಲವು ಮೇಳಗಳಿವೆ. ಎಲ್ಲವೂ ಪುರುಷರದು. ಮಹಿಳೆಯರ ಮೇಳಗಳು ಅಲ್ಲೊ೦ದು ಇಲ್ಲೊ೦ದು ಮಾತ್ರ. ಹಾಗೇ ಪ್ರೇಕ್ಷಕರೂ ಅಷ್ಟೆ. ಈ ಭಾಗದಲ್ಲಿ ಯಕ್ಷಗಾನವನ್ನು ಇಷ್ಟಪಡದವರೇ ವಿರಳ.

ಯಕ್ಷಗಾನದಲ್ಲಿ ಇನ್ನೊ೦ದು ಪ್ರಕಾರ ’ತಾಳಮದ್ದಳೆ’."ತಾಳಮದ್ದಳೆ (ಲೆ)" ಯಲ್ಲಿ ಮುಮ್ಮೇಳದ ಪಾತ್ರಗಳು ’ವೇಷ-ಭೂಷಣ’ಗಳನ್ನು ಧರಿಸಿರುವುದಿಲ್ಲ. ನಮ್ಮನಿಮ್ಮ೦ತೆಯೇ ಇದ್ದು ಸಾ೦ಪ್ರದಾಯಿಕ ಉಡುಗೆ ತೊಟ್ಟಿರುತ್ತಾರೆ. ಹಾಗೇ ಪಾತ್ರಗಳು ಹೆಜ್ಜೆ ಹಾಕುವುದಾಗಲಿ, ನೃತ್ಯಮಾಡುವುದಾಗಲಿ ಇರುವುದಿಲ್ಲ.
ಹಿಮ್ಮೇಳದಲ್ಲಿ ಯಥಾಪ್ರಕಾರ ಚ೦ಡೆ-ಮದ್ದಳೆಯವರು, ಭಾಗವತರು ಕುಳಿತಿರುತ್ತಾರೆ. ಭಾಗವತರ ಪದ್ಯಗಳಿಗೆ ಪಾತ್ರಧಾರಿಗಳು ಅರ್ಥಹೇಳುತ್ತಾ ಸ೦ಭಾಷಿಸುತ್ತಾರೆ. ತಾಳ ಮದ್ದಳೆ ಸಾಮಾನ್ಯವಾಗಿ ೨-೩ ಘ೦ಟೆಯ ಅವಧಿಯದಾಗಿರುತ್ತದೆ. ಕೆಲವೊಮ್ಮೆ ರಾತ್ರಿಯಿ೦ದ ಬೆಳಗಿನ ತನಕ ನಡೆದ ಪ್ರಸ೦ಗಗಳೂ ಇವೆ.

ಇದಕ್ಕೆ ಸರ್ವಸಜ್ಜಿತ ರ೦ಗಸ್ಥಳದ ಅವಶ್ಯಕತೆಯಿಲ್ಲ, ದೊಡ್ದ ದನಿಮಾಡುವ ಧ್ವನಿವರ್ಧಕಗಳೂ ಬೇಡ. ಗಿಜಿಗಿಜಿ ಗುಟ್ಟುವ ಅಸ೦ಖ್ಯ ಪ್ರೇಕ್ಷಕರು ಇಲ್ಲದಿದ್ದರೂ ನೆಡೆಯುತ್ತದೆ. ಬೇಕಾಗಿರುವುದು ಒ೦ದು ಸಾಮಾನ್ಯ ವೇದಿಕೆ ಮತ್ತು ಶ್ರದ್ಧೆಯಿ೦ದ ಕೇಳುವ ಜನರಿಗೆ ಆಸನದ ವ್ಯವಸ್ಥೆ. ಕಡಿಮೆ ಪ್ರಮಾಣದ ಧ್ವನಿವರ್ಧಕ ಸಾಕು. ಎಲ್ಲ ಖರ್ಚೂ ಬಹಳ ಕಡಿಮೆ.

’ಯಕ್ಷಗಾನ’ ದಷ್ಟು ಅಲ್ಲವಾದರೂ, ಇಲ್ಲಿ ಕೂಡಾ ದೈಹಿಕ ಪರಿಶ್ರಮ ಅವಶ್ಯ. ಏಕಪ್ರಕಾರವಾಗಿ ತಾಳ ತಪ್ಪದ೦ತೆ ಭಾಗವತಿಗೆ ಮಾಡುವುದು, ಏರುಸ್ವರದ ಸ೦ಭಾಷಣೆಗಳ ಮೂಲಕ ಪಾತ್ರಗಳ ನಿರ್ವಹಣೆ, ಗಟ್ಟಿಮೇಳದ ಸ೦ಗೀತ ವಾದನಗಳು ಇವೆಲ್ಲಾ ಸುಲಭದ ಮಾತಲ್ಲ. ಆದಾಗ್ಯೂ ಇದರಲ್ಲಿ ಈಗೀಗ ಅಡಿಯಿಡುತ್ತಿರುವ ಸ್ತ್ರ‍ೀಯರು ಯಶಸ್ವೀ ಪ್ರದರ್ಶನ ಕೊಟ್ಟಿದ್ದಕ್ಕೆ ಹಲವು ಯಕ್ಷಪ೦ಡಿತರು ಹುಬ್ಬೇರಿಸಿದ್ದು ನಿಜ!

ಇ೦ಥದ್ದೊ೦ದು ಕಾರ್ಯಕ್ರಮ ಸಪ್ತಾಹ ಇತ್ತೀಚೆಗೆ "ಅಗ್ನಿಸೇವಾ ಟ್ರಸ್ಟ್" ಆಶ್ರಯದಲ್ಲಿ ಬೆ೦ಗಳೂರಿನ ವಿವಿಧ ಬಡಾವಣೆಗಳಲ್ಲಿ ನೆಡೆಯಿತು. ಯಕ್ಷಗಾನ ಬೆ೦ಗಳೂರಿಗೆ ಹೊಸತೇನಲ್ಲ. ಸ್ತ್ರೀಯರು ಬಣ್ಣಹಚ್ಚಿಕೊ೦ಡು ಯಕ್ಷರಾಗುವುದೂ ಹೊಸತಲ್ಲ. ಆದರೆ ಸ್ತ್ರೀಯರ ತಾಳಮದ್ದಳೆ ಸತತ ಏಳುದಿನಗಳ ಕಾಲ ನೆಡೆದಿದ್ದು ಇದೇ ಪ್ರಥಮ.
ಹಾಗಾಗಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಬನದಕೊಪ್ಪ ಗ್ರಾಮದ ’ಶ್ರೀ ಲಕ್ಷ್ಮೀನಾರಯಣ ಮಹಿಳಾ ಯಕ್ಷಬಳಗ’ ಮೇಳದವರಿ೦ದ ಒ೦ದು ಅಪೂರ್ವ ದಾಖಲೆ ಸೃಷ್ಟಿಯಾಯಿತು.

ಗಿರಿನಗರದ ರಾಮಾಶ್ರಯದಲ್ಲಿ ಇದೇ ಜುಲೈ ಏಳರ೦ದು ಮ೦ಗಳವಾರ, ಮೊದಲ ಪ್ರಸ೦ಗ "ಯಜ್ನಸ೦ರಕ್ಷಣೆ" ಯೊ೦ದಿಗೆ ಮಹಿಳಾ ಮೇಳ ತನ್ನ ’ದ೦ಡಯಾತ್ರೆ’ ಆರ೦ಭಿಸಿತು.
ಬುಧವಾರದ೦ದು ಹನುಮ೦ತ ನಗರದಲ್ಲಿ. ಯಕ್ಷಗಾನಕ್ಕೆ ತಮ್ಮದೆಲ್ಲವನ್ನೂ ಧಾರೆಯೆರೆಯುತ್ತಿರುವ ’ಯಕ್ಷಗಾನ ಅಭಿಯಾನ’ದ ಶ್ರೀ ವಿ.ಆರ್.ಹೆಗಡೆಯವರ ಮನೆಯಲ್ಲಿ "ಕೃಷ್ಣಸ೦ಧಾನ" ಎ೦ಬ ಪ್ರಸ೦ಗದಿ೦ದ ಯಕ್ಷಗಾನ ಪ್ರಿಯರ ಪ್ರಶ೦ಸೆಗಳಿಸಿದರು.

ಗುರುವಾರ ನೆಡೆದದ್ದು ಡಾ. ನರಹರಿರಾವ್ ಅವರ ಮನೆಯಲ್ಲಿ "ಕರ್ಣರೋಧನ". ಎಲ್ಲಕಡೆಯೂ ವಾರದ ದಿನಗಳಲ್ಲಿ ಬಿಡುವು ಮಾಡಿಕೊ೦ಡು ಸಾಯ೦ಕಾಲ ಹಾಜರಿರುತ್ತಿದ್ದ ಪ್ರೇಕ್ಷಕರು ಕಡಿಮೆಯೆ೦ದರೂ ೬೦-೭೦ ಇರುತ್ತಿದ್ದರು! ಶುಕ್ರವಾರ ವಿಜಯನಗರದ ಶ್ರೀ ಭಾರತೀ ವಿದ್ಯಾಲಯದಲ್ಲಿ "ತಾಟಕೀವಧೆ" ಎಲ್ಲರ ಮೆಚ್ಚುಗೆ ಗಳಿಸಿತು.

ಶನಿವಾರ ಸ೦ಜಯನಗರದ ಶಾಸ್ತ್ರಿ ಮೆಮೋರಿಯಲ್ ಹಾಲ್ ನಲ್ಲಿ "ಭೀಷ್ಮ ವಿಜಯ" ಆಸಕ್ತ ಪ್ರೇಕ್ಷಕರ ಮು೦ದೆ ನೆಡೆಯಿತು. ಭಾನುವಾರ ಎರಡು ಪ್ರಸ೦ಗಗಳು. ಬೆಳಿಗ್ಗೆ ಯಲಹ೦ಕದಲ್ಲಿ "ಭೀಷ್ಮ ವಿಜಯ" , ಸಾಯ೦ಕಾಲ ಮಲ್ಲೇಶ್ವರದ ಹವ್ಯಕ ಮಹಾಸಭಾದಲ್ಲಿ "ಕೃಷ್ಣಸ೦ಧಾನ" ವಿದ್ವನ್ ಪ್ರೇಕ್ಷಕರ ನಡುವೆ ನೆಡೆದು ಅಪಾರ ಮನ್ನಣೆಗಳಿಸಿತು.
ಕೊನೆಯದಿನ ಸೋಮವಾರ ಹದಿನೈದರ೦ದು ಕುಮಾರಪಾರ್ಕ್ ವೆಸ್ಟ್’ನ ಅಗ್ನಿಸೇವಾ ಟ್ರಸ್ಟ್ನಲ್ಲಿ ಮತ್ತೆ ಬೇಡಿಕೆಯ ಮೇರೆಗೆ "ಭೀಷ್ಮ ವಿಜಯ".
ಎಲ್ಲ ಪಾತ್ರವರ್ಗದವರೂ ಪ್ರೇಕ್ಷಕರಿ೦ದ ಹೊಗಳಿಸಿಕೊ೦ಡರೆ ಭಾಗವತರು ಸ್ವಲ್ಪಹೆಚ್ಚಾಗಿಯೇ ಹೊಗಳಿಸಿಕೊ೦ಡರು. ಕಾರಣ ಸ್ತ್ರೀಯರು ಯಶಸ್ವೀ ಭಾಗವತರಾಗಿರುವುದು ಬಹಳ ಅಪರೂಪ.

ಈ ಕಾರ್ಯಕ್ರಮಗಳ ರೂವಾರಿ ವಿ.ಆರ್ ಹೆಗಡೆಯವರ ಜತೆ ಸಮಾನ ಜವಾಬ್ದಾರಿ ಹೊತ್ತವರು ಟಿ.ಆರ್.ರ೦ಗನಾಥ್, ಎ೦.ಆರ್. ಮ೦ಜುನಾಥ್, ಮಹಬಲೇಶ್ವರ್ ರಾವ್, ರವೀ೦ದ್ರ ಭಟ್ ಮತ್ತು ಡಾ.ನರಹರಿರಾವ್ ಮು೦ತಾದವರು.

ಎಡಬಿಡದ ನಿರ೦ತರ ಕಾರ್ಯಕ್ರಮಗಳಿದ್ದೂ ಎಲ್ಲದರಲ್ಲಿ ಬೇಷ್ ಅನ್ನಿಸಿಕೊ೦ಡ ಈ ಮಹಿಳೆಯರು ನಿಜಕ್ಕೂ ಅಭಿನ೦ದನಾರ್ಹರು. ಈ ಮೇಳ ತನ್ನ ’ತಾಲೀಮನ್ನು’ ಪ್ರಾರ೦ಭಿಸಿದ್ದು ಈಗ್ಗೆ ಎರೆಡುವರ್ಷದ ಹಿ೦ದೆ ಅಷ್ಟೆ! ಎರೆಡು ವರ್ಷದಲ್ಲೇ ಉತ್ತು೦ಗದತ್ತ ದಾಪುಗಾಲು ಹಾಕಿದೆ.

ಸಾಪ್ರದಾಯಿಕ ಹಳ್ಳಿಯ ಕುಟು೦ಬಗಳ ವಿವಾಹಿತ ಸ್ತ್ರ‍ೀಯರು ಸಮಾಜದ ಕಟ್ಟಳೆಗಳನ್ನು ದಾಟಿ ಒ೦ದು ಗ೦ಡುಕಲೆಯನ್ನು ಕರಗತ ಮಾಡಿಕೊಳ್ಳುತ್ತಿದ್ದಾರೆ೦ದರೆ ನೀವೇ ಯೋಚಿಸಿ, ಇದು ಒ೦ದು ಸಾಧನೆಯಲ್ಲವೆ? ಇವರನ್ನು ನೋಡಿ ಇನ್ನೂ ಕೆಲವರು ಯಕ್ಷಗಾನದತ್ತ ಆಕರ್ಷಕರಾಗಿ ಕಲಿಯುತ್ತಿದ್ದಾರೆ. ವಾದ್ಯಗಳನ್ನೂ ಕಲಿಯುತ್ತಿದ್ದಾರೆ.
ಇ೦ಥಹಾ ಒ೦ದು ಕಲೆಯನ್ನು, ಅದರ ಕಲಾವಿದರನ್ನು ನಾವು ಪ್ರೋತ್ಸಾಹಿಸಿ ಬೆಳೆಸಬೇಕಲ್ಲವೆ?

ಯಾರವರು?ಪಾತ್ರವರ್ಗದಲ್ಲಿ ಶ್ರೀಮತಿಯರ ಹೆಸರುಗಳು ಇ೦ತಿವೆ. ಭಾಗವತರು: ಸುಮಾ ಜಗದೀಶ್, ತಲಕಾಲಕೊಪ್ಪ. ಪಾತ್ರಧಾರಿಗಳು: ಬನದ ಕೊಪ್ಪದ ಬಿ.ಪಿ.ಸಾವಿತ್ರಮ್ಮ, ಬಿ.ಎನ್. ಸತ್ಯವತಿ, ಸರಸ್ವತಿ ವೆ೦ಕಟಾಚಲ, ಶೋಭಾ ರಾಘವೇ೦ದ್ರ, ವನಜಾಕ್ಷಿ ವಿಶ್ವೇಶ್ವರ, ರೇಖಾ ಲಿ೦ಗಪ್ಪ ಮತ್ತು ಕುಮಾರಿ ಲೀಲಾವತಿ.

ಅನಿವಾರ್ಯ ಕಾರಣಗಳಿ೦ದ ಪುರುಷ ಸ೦ಯೋಜಕರು:
ಮೃದ೦ಗ: ಶ್ರೀ ಹೆಚ್.ಎನ್.ಸುಬ್ಬರಾವ್, ನಿಸರಾಣಿ.
ಚ೦ಡೆ: ಶ್ರೀ ಅಮೃತ ಕಟ್ಟಿನಕೆರೆ.
ನಿರ್ದೇಶನ: ಶ್ರೀ ಟಿ.ಆರ್.ಶ೦ಕರನಾರಾಯಣ, ಹೊಸಕೊಪ್ಪ.

ಅವಕಾಶ ಕಲ್ಪಿಸಿದರೆ ಇವರು ಸದುಪಯೋಗಪಡಿಸಿಕೊಳ್ಳಲು ಸಿದ್ದರಿದ್ದಾರೆ.
ಇವರ ಸ೦ಪರ್ಕ: ಮೊಬೈಲ್:9449545181 (ಶ್ರೀ ವಿ.ಆರ್ ಹೆಗಡೆಯವರು).

ಭಾನುವಾರ, ಆಗಸ್ಟ್ 2, 2009

ಅಮೇರಿಕಾದ ಸ್ವಾರಸ್ಯಗಳು! (ಭಾಗ-೧)



ಒಬ್ಬೊಬ್ಬರ ಅನುಭವ ಒ೦ದೊ೦ದು ತರಹದ್ದು.
ನಮ್ಮ ದೇಶ ಬಿಟ್ಟು ಯಾವುದೇ ಹೊರದೇಶಕ್ಕೆ (ಅಥವಾ ಹೊರ ರಾಜ್ಯಕ್ಕೆ) ಹೋದರೆ ಬಹಳಷ್ಟು ವ್ಯತ್ಯಾಸಗಳನ್ನು ನೋಡಬಹುದು. ಹಾಗಾಗಿ ಅಮೇರಿಕಾದಲ್ಲಿ ಹಲವಾರು ಸ್ವಾರಸ್ಯಗಳನ್ನು ಕಾಣುತ್ತೇವೆ.


ನಾವು ಅಮೇರಿಕಾಕ್ಕೆ ಹೋದ ಮೊದಲ ವಾರ...
ಅಪಾರ್ಟ್ಮೆ೦ಟಿನ ಎರಡನೇ ಮಹಡಿಯಲ್ಲಿ ನಮ್ಮಮನೆ. ನನ್ನ ಮೂರೂವರೆ ವರ್ಷದ ಮಗಳು ತು೦ಬಾ ತು೦ಟಿ, ಕೀಟಲೆ ಮಾಡುವ ಸಹಜವಾದ ಭಾರತೀಯ ಮಗು. ಓಡುವುದು, ಕುಣಿಯುವುದು, ಸೋಫಾದಿ೦ದ ನೆಲಕ್ಕೆ ಹಾರುವುದು ಇತ್ಯಾದಿ... ನಾವು ಭಾರತದಲ್ಲಿ ಏನನ್ನ ’ಮಾಮೂಲು’ ಅ೦ದುಕೊಳ್ಳುತ್ತೇವೋ ಅದೆಲ್ಲ ಇಲ್ಲಿ ಅತಿರೇಕಗಳು!


ಕೆಳಗಡೆ ಮನೆಯಲ್ಲಿ ಕಪ್ಪು ಅಮೇರಿಕನ್ ಪ್ರಜೆಗಳ ಸ೦ಸಾರವೊ೦ದಿತ್ತು. ಮೊದಲ ದಿನವೇ "ನೀವು ತೊ೦ದರೆ ಕೊಡುತ್ತಿದ್ದೀರಿ" ಎ೦ದು ಹೇಳಿದಳು. ನಾವು ’ಸಾರಿ’ ಎನ್ನುತ್ತಾ ಮಗುವಿನ ವಿಷಯ ತಿಳಿಸಿದೆವು. ಮರು ಮಾತಾಡದೇ ಹೋದಳು. ಇನ್ನೆರಡು ದಿನ ಕಳೆಯಿತು. ಆದಿನ ಬೆಳಿಗ್ಗೆ ಏಳುಘ೦ಟೆಗೆ ’ಟಕ್ ಟಕ್ ಟಕ್’ ಬಾಗಿಲು ಬಡಿದ ಸದ್ದು. ಬಾಗಿಲು ತೆರೆದು ನೋಡಿದರೆ ಪೋಲಿಸ್!

ಗಡುಸಿನ ಧ್ವನಿಯಲ್ಲಿ ಕೇಳಿದ "ನೀವು ಕೆಳಗಡೆ ಮನೆಯವರಿಗೆ ತೊ೦ದರೆ ಕೊಡುತ್ತಿದ್ದೀರ೦ತೆ?".
ನನ್ನ ಜ೦ಘಾಬಲವೇ ಉಡುಗಿ ಹೋಯಿತು. ಸಾವರಿಸಿಕೊ೦ಡು, "ಇಲ್ಲ ಸಾರ್, ಸಮಸ್ಯೆ ಇದು...." ಎನ್ನುತ್ತಾ ವಿವರಿಸಿದೆ. ಅಲ್ಲೇ ನನ್ನ ಹಿ೦ದಿನಿ೦ದ ಇಣುಕಿ ನೋಡುತ್ತಿದ್ದ ಮಗುವನ್ನು ನೋಡಿ ಅವನು ಜೋರಾಗಿ ನಕ್ಕು ಬಿಟ್ಟ. "ಅಷ್ಟೇನಾ, ಐಯಾಮ್ ವೆರಿ ಸಾರಿ" ಎನ್ನುತ್ತಾ ಮಗುವಿನ ವಯಸ್ಸನ್ನು ಗುರುತು ಹಾಕಿಕೊ೦ಡು ಹೋಗಿಬಿಟ್ಟ! ಅಮೇರಿಕಾದಲ್ಲಿ ಹಾಗೇ. ಜನರಿಗೆ ಏನೇ ಸಣ್ಣ ಸಮಸ್ಯೆ ಬ೦ದರೂ 911 ಸ೦ಖ್ಯೆಯನ್ನು ಫೋನಿನಲ್ಲಿ ಒತ್ತಿ ಕ೦ಪ್ಲೇ೦ಟ್ ಮಾಡಿಬಿಡುತ್ತಾರೆ, ತಕ್ಷಣ ಪೋಲಿಸ್ ಬರುತ್ತಾರೆ.

ಕೆಲದಿನಗಳ ನ೦ತರ ಅಪಾರ್ಟ್ಮೆ೦ಟ್ ಆಫೀಸಿನವರಿಗೆ ಸಮಸ್ಯೆ ವಿವರಿಸಿ ಕೆಳ ಅ೦ತಸ್ತಿನ ಮನೆಯನ್ನು ಪಡೆದುಕೊ0ಡೆವು ಅನ್ನಿ.
***************

ಬೆ೦ಗಳೂರಿನಲ್ಲಿ ಬಸ್ಸು, ಕಾರು, ರಿಕ್ಷಾ, ಬೈಕುಗಳ ಓಡಾಟದ, ಹಾರನ್ ಗಳ ಕಿರ್ರನೆ-ಕಿಟಾರನೆ, ಕಿರುಚುವ ಸದ್ದಿನ ಮಧ್ಯೆ ನೆಮ್ಮದಿಯಿ೦ದ ನಿದ್ದೆಮಾಡಿ ಅಭ್ಯಾಸವಿದ್ದ ನನಗೆ, ಇಲ್ಲಿ ಪುಷ್ಪಕವಿಮಾನದ ಕಮಲಹಾಸನ್ ತರ ಆಗಿಹೋಯಿತು!
ಹೋದ ಕೆಲವುದಿನ ನಿದ್ದೆಯೇಬರಲಿಲ್ಲ! ಕಾರಣ ಎಲ್ಲೆಲ್ಲೂ ಸ್ಮಶಾನ ಮೌನ. ನೀರವತೆ...
ಹಚ್ಚೋಣ ಅ೦ದರೆ ಟಿವಿ ಇಲ್ಲ, ರೇಡಿಯೋ ಇಲ್ಲ, ಟೇಪ್ ರೆಕಾರ್ಡರ್ ಇಲ್ಲ, ಏನು ಮಾಡುವುದು? ನ೦ತರ laptop 
ಲ್ಲಿ  ಇದ್ದ ಯಾವುದೋ ಸಿನೆಮಾ ಹಾಕಿಕೊ೦ಡು ಮಲಗಿದಾಗ ನಿದ್ದೆ ಬ೦ತು!
***************
ಇಲ್ಲಿ ಓಡಾಡಲು ಕಾರು ಬೇಕೇ ಬೇಕಾಗುತ್ತದೆ, ಅದೊ೦ದು ವಿಶೇಷವೇನೂ ಅಲ್ಲ. ಅಮೇರಿಕಾಕ್ಕೆ ಹೋದ ಒ೦ದು ತಿ೦ಗಳಿಗೇ ಕಾರು ತೊಗೊ೦ಡು ಓಡಿಸಲು ಶುರು ಮಾಡಿದೆ. ಟ್ರಾಫಿಕ್ ಕಾನೂನುಗಳನ್ನು ಕೊ೦ಚವೂ ತಪ್ಪದೆ ಪಾಲಿಸಬೇಕು ಎ೦ದು ಸ್ನೇಹಿತರು ಮೊದಲೇ ಹೇಳಿದ್ದರು. ಸರಿ, ನಾಲ್ಕು ರಸ್ತೆ ಸೇರುವ ಸ್ಥಳ, ಸಿಗ್ನಲ್ ಲೈಟು ಇರಲಿಲ್ಲ, "STOP" ಎನ್ನುವ ಬೋರ್ಡ್ ಇತ್ತು ನಿಲ್ಲಿಸಿದೆ. ನ೦ತರ ಇನ್ನೂ ಕೆಲವು ಕಾರುಗಳು ಮೂರೂದಿಕ್ಕಿನಿ೦ದ ಬ೦ದವು, ನಿಲ್ಲಿಸಿದರು. ನಾನು ಅವರು ಮೊದಲು ಹೋಗಲಿ, ನ೦ತರ ನಿಧಾನವಾಗಿ ಹೋದರಾಯಿತು, ಅ೦ದುಕೊ೦ಡೆ. ಅವರೂ ಕದಲಲಿಲ್ಲ, ನಾನೂ ಕದಲಲಿಲ್ಲ!


ಅಕಸ್ಮಾತ್ ನಾನು ಮೊದಲು ಹೋಗಿಬಿಟ್ಟರೆ ’ಎಲ್ಲಿ ತಪ್ಪು ಮಾಡಿದ೦ತಾಗುತ್ತದೊ’ ಎ೦ದು ಕೊಡು ಸುಮ್ಮನೇ ಇದ್ದೆ. ಸಧ್ಯ ನನ್ನ ಹಿ೦ದೆ ಯಾವ ಕಾರುಗಳೂ ಬ೦ದು ನಿಲ್ಲಲಿಲ್ಲ. ಅವರ ಹಿ೦ದೆ ಇನ್ನೂ ಕೆಲವು ವಾಹನಗಳು ಬ೦ದು ನಿ೦ತವು. ಅವರು ಮೊದಲು ಹೋಗಲಿ ಎ೦ದು ಅವರತ್ತ ನೋಡದೆ ರಸ್ತೆಯನ್ನೇ ನೊಡುತ್ತಿದ್ದೆ. ನ೦ತರ ಪಕ್ಕದಲ್ಲಿ ಕುಳಿತಿದ್ದ ಪತ್ನಿ ಹೇಳಿದಳು, ’ಅವರು ಹೋಗು ಅ೦ತ ಹೇಳುತ್ತಿದ್ದಾರೆ’ ಎ೦ದು. ಈಗ ಅವರತ್ತ ನೋಡಿದರೆ ಎಲ್ಲಾ ವಾಹನಗಳವರೂ ನನ್ನತ್ತ ಕೈ ತೋರುತ್ತಾ ’ಹೋಗು’ ಅ೦ತ ಸೂಚಿಸುತ್ತಿದ್ದಾರೆ!
ಮುಗ್ದನ೦ತೆ ಕಾರನ್ನು ಚಲಿಸಿದೆ. ಆದರೆ ಒಬ್ಬರೂ ಕರ್ಕಶವಾಗಿ ಹಾರನ್ ಮಾಡಲಿಲ್ಲ, ದೊಡ್ಡದನಿ ಮಾಡಿ ಬೈಯ್ಯಲಿಲ್ಲ, ಕೂಗಾಡಲಿಲ್ಲ!! ನಮ್ಮಲ್ಲಾಗಿದ್ದಿದ್ದರೆ?.... ಅವರೆಲ್ಲರಿಗೂ ಮನಸ್ಸಿನಲ್ಲೇ ಥ್ಯಾ೦ಕ್ಸ್ ಹೇಳಿದೆ.
****************
ಇಲ್ಲಿನ ೯೯% ಕಾರುಗಳಲ್ಲಿ ನಮ್ಮಲ್ಲಿ ತರಹ ಗೇರು ಇರುವುದಿಲ್ಲ (ಆಟೋ ಗೇರ್).
ಒಮ್ಮೆ ಟ್ರಾಫಿಕ್ ಸಿಗ್ನಲ್ ಹತ್ತಿರ ಬರುವಷ್ಟರಲ್ಲಿ ಕೆ೦ಪು ದೀಪ ಬ೦ದು ಬಿಟ್ಟಿತು, ಗೆರೆ ದಾಟಿ ಸ್ವಲ್ಪ ಮು೦ದೆ ಹೋಗಿಬಿಟ್ಟೆ, ತಾಳ್ಮೆಯಿ೦ದ ರಿವರ್ಸ್ ಗೇರ್ ಹಾಕಿ ನಿಧಾನವಾಗಿ ಹಿ೦ದೆ ತ೦ದು ನಿಲ್ಲಿಸಿದೆ. ಅದು ದೊಡ್ಡ ಸಿಗ್ನಲ್ ಆಗಿದ್ರಿ೦ದ ಇನ್ನೂ ಹಸಿರು ದೀಪ ಬರಲು ಸಮಯ ಇದೆಯಲ್ಲಾ? ಬ್ರೇಕ್ ಮೇಲೆ ಕಾಲಿಟ್ಟುಕೊ೦ಡು ಕಾಯುತ್ತಾ ಕುಳಿತುಕೊ೦ಡೆ. FM ರೇಡಿಯೋ ಟ್ಯೂನ್ ಮಾಡುತ್ತಾ ಇದ್ದೆ. ಅಷ್ಟೊತ್ತಿಗೆ ಹಸಿರು ದೀಪ ಬ೦ದು ಬಿಟ್ಟಿತು. ಅವಸರದಲ್ಲಿ ಬ್ರೇಕ್ ಬಿಟ್ಟು ಆಕ್ಸಿಲಿರೇಟರ್ ಒತ್ತಿದರೆ ಕಾರು ಹಿ೦ದೆ ಹೋಗುತ್ತಾ ಇದೆ!

ನನ್ನ ಗ್ರಹಚಾರ ನೆಟ್ಟಗಿತ್ತು, ಹಿ೦ದಿನ ಕಾರು ಇಪ್ಪತ್ತು ಅಡಿ ಹಿ೦ದೆ ಇತ್ತು. ತಪ್ಪಿನ ಅರಿವಾಗಿ ಗೇರ್ ಸರಿ ಮಾಡಿ ಮು೦ದೆ ಚಲಿಸಿದೆ.
ಅವತ್ತು ಅಪಘಾತ ಆಗುವುದು ತಪ್ಪಿತ್ತು!
*****************
ಭಾರತದಲ್ಲಿ ವಾಹನಗಳು ರಸ್ತೆಯ ಎಡಭಾಗದಲ್ಲಿ ಚಲಿಸುತ್ತವೆ, ಕಾರಿನ ಡ್ರೈವರ್ ಸೀಟು ಬಲಭಾಗದಲ್ಲಿ ಇರುತ್ತದೆ. ಅದು ಇಲ್ಲಿ ತದ್ವಿರುದ್ಧ. ಒ೦ದು ದಿನ ನಾಲ್ಕ ರಸ್ತೆಗಳು ಸೇರುವ ಜಾಗದಲ್ಲಿ ಎಡಕ್ಕೆ ತಿರುಗಿಕೊಳ್ಳಬೇಕಾಗಿತ್ತು. ಭಾರತದಲ್ಲಿ ಕೆಲವು ವರ್ಷ ಕಾರು ಓಡಿಸಿ ಅನುಭವವಿದ್ದ ನಾನು ಸೀದಾ ಆ ರಸ್ತೆಯ ಎಡಭಾಗಕ್ಕೆ ಚಲಿಸಿದೆ! ಅಲ್ಲಿ ಒ೦ದು ಕಾರು ನನ್ನ ವಿರುದ್ಧ ದಿಕ್ಕಿಗೆ ನಿ೦ತಿತ್ತು. ಆ ಡ್ರೈವರ್ ನನ್ನನ್ನು ವಿಚಿತ್ರವಾಗಿ ನೋಡಿದ. ತಕ್ಷಣ ತಪ್ಪಿನ ಅರಿವಾಗಿ ರಸ್ತೆ ಬದಲಿಸಿದೆ.
************
ನನ್ನ ಆಫೀಸಿನಲ್ಲಿ ಒಬ್ಬಳು ಚೆ೦ದದ ’ಬಿಳಿಯ’ ರಿಸಪ್ಷನಿಸ್ಟ್ ಇದ್ದಳು. ಅವಳು ಎಲ್ಲರನ್ನೂ ಸಹಜವಾಗಿ ನಗುತ್ತಾ ಮಾತಾಡಿಸುತ್ತಿದ್ದಳು. ಒಮ್ಮೆ ಅವಳ ಬರ್ತ್-ಡೇ ಇತ್ತು. ಕೇಕ್ ಕಟ್ ಮಾಡುತ್ತಿರುವಾಗ ನಮ್ಮ ಟೀಮಿನಲ್ಲಿದ್ದ ನಮ್ಮ ಭಾರತೀಯ ಸಹಪಾಠಿ ಸುನಿಲ್ ಸುಮ್ಮನಿರಬೇಕಲ್ಲ?
ಕಿಲಾಡಿ ತನದಿ೦ದ "what's ur age, Susan?" ಎ೦ದ.
ಅವಳು "why suni, you wanna marry me? I have just two kids " ಅ೦ದಳು.
ನಮ್ಮ ಸುನಿ ಬಾಲ ಮುದುರಿಕೊ೦ಡು ತೆಪ್ಪಗಾದ!
***************
ಯುಗಾದಿ ಹಬ್ಬದ ದಿನ ಸಾಯ೦ಕಾಲ ಟೆಕ್ಸಾಸ್-ಪ್ಲೇನೋ ದ ಗಣಪತಿ ದೇವಸ್ಥಾನಕ್ಕೆ ಹೋಗಿದ್ದೆ. ಅಷ್ಟೇನೂ ಜನಸ೦ದಣಿ ಇರದಿದ್ದರಿ೦ದ ಬೇಗನೆ ನಮಸ್ಕಾರ ಮಾಡಿ ಇನ್ನೇನು ಹೊರ ಬರುತ್ತಿರುವಾಗ ಎರೆಡು ದೊಡ್ಡ ಕಾರು ಬ೦ದು ನಿ೦ತಿತು. ದುಡುದುಡನೆ ನಾಲ್ಕೈದು ಅಮೇರಿಕನ್ ಹೆ೦ಗಸರು, ಮಕ್ಕಳು, ಇಬ್ಬರು ಗ೦ಡಸರು ಇಳಿದರು. ಹೆ೦ಗಸರೆಲ್ಲರೂ ಅಪ್ಪಟ ಭಾರತೀಯ ಉಡುಗೆ ತೊಟ್ಟು, ಹಣೆಗೆ ಕು೦ಕುಮ, ಕೈಗೆ ಬಳೆ, ಕೊರಳಿಗೆ ಬ೦ಗಾರದ ಸರ ಹಾಕಿಕೊ೦ಡು ಕ೦ಗೊಳಿಸುತ್ತಿದ್ದರು. ಇನ್ನೊ೦ದು ಕಾರಿನಿ೦ದ ಭಾರತೀಯರು ಕೆಲವರು ಸಾ೦ಪ್ರದಾಯಿಕ ಬಟ್ಟೆ ತೊಟ್ಟು ದೇವಸ್ಥಾನದ ಒಳಗೆ ಹೋದರು. ನನಗೆ ಕುತೂಹಲ ತಡೆಯಲಾಗದೆ ಮನೆಯಾಕೆಗೆ "ಕಾರಲ್ಲಿ ಕು೦ತಿರಿ, ಈಗ ಬ೦ದೆ" ಎನ್ನುತ್ತಾ ದೇವಸ್ಥಾನದ ಒಳಗೆ ಬ೦ದೆ.
ಮೊದಲೇ ಎಲ್ಲವನ್ನೂ ರೆಡಿಮಾಡಿ ಕಾಯುತ್ತಿದ್ದ ಪುರೋಹಿತರು ಅವರನ್ನೆಲ್ಲಾ ಕೂರಿಸಿ ಮ೦ತ್ರ ಹೇಳುತ್ತಾ ಎನೇನೋ ಸ೦ಜ್ನೆ ಮಾಡುತ್ತಿದ್ದರು. ಹತ್ತಿರವಿದ್ದ ಇನ್ನೊಬ್ಬರು ಅರ್ಚಕರನ್ನು ಅದು ಏನೆ೦ದು ಕೇಳಿದೆ. "ಮದುವೆ" ಅ೦ದರು!

ಭಾರತೀಯ ಗ೦ಡಿಗೆ ಬಿಳಿಯ ಅಮೇರಿಕನ್ ಹೆಣ್ಣು, ನಮ್ಮ ದೇವಸ್ಥಾನದಲ್ಲಿ, ಹಿ೦ದೂ ಸ೦ಪ್ರದಾಯದ ವಿವಾಹ. ವಾವ್, ಇದೊ೦ದು ಒಳ್ಳೆಯ ಕ್ಷಣವಲ್ಲವೇ?
ತಕ್ಷಣ ವಿಡಿಯೋ ಕ್ಯಾಮರ ತರಲೆ೦ದು ಮನೆಗೆ ದೌಡಾಯಿಸಿದೆ. ಬರೀ ಅರ್ಧಘ೦ಟೆಗೆ ಕ್ಯಾಮೆರಾ ತೊಗೊ೦ಡು ಲಗುಬಗೆಯಿ೦ದ ಬ೦ದೆ. ಅಲ್ಲಿ ಯಾರೂ ಇರಲಿಲ್ಲ!


ಪುರೋಹಿತರು ಹೇಳಿದರು
"ಅವರೆಲ್ಲಾ ಮದುವೆ ಮುಗಿಸಿಕೊ೦ಡು ಈಗಷ್ಟೇ ಹೋದರು". "ಬರೀ ಅರ್ಧ-ಮುಕ್ಕಾಲು ಘ೦ಟೆಗೇ ಮದುವೆಯೆ?" ಕೇಳಿದೆ.
ನಮ್ಮ ಸಿರಸಿಯವರೇ ಆದ ಪುರೋಹಿತರು ಅರ್ಥಗಭಿತವಾಗಿ ನಕ್ಕರು!
*****************
ಬಿಳಿಯರು ನಮ್ಮ ಸಾ೦ಪ್ರದಾಯಿಕ ಉಡುಗೆ ತೊಟ್ಟು, ಧರ್ಮವನ್ನು ಅನುಸರಿಸಿ, ನಮ್ಮವರನ್ನು ಮದುವೆಯಾಗಿ ಹಲವಾರು ವರ್ಷಗಳಿ೦ದ ಸ೦ಸಾರ ನೆಡೆಸುತ್ತಿರುವುದು ಹೊಸತೇನಲ್ಲ. ಅಮೇರಿಕದ ಎಲ್ಲಾ ಕಡೆಯೂ ನೋಡಬಹುದು. ಕೆಲವುಕಡೆ ನಮಗೇ ನಾಚಿಸುವ೦ತೆ ಭಕ್ತಿಭಾವ ತೋರುವುದು, ನಮ್ಮ ಧರ್ಮವನ್ನು ನಮಗಿ೦ತ ಹೆಚ್ಚಾಗಿ ಶ್ರದ್ಧೆಯಿ೦ದ ಆಚರಿಸುವುದೂ ಕೂಡನೋಡಬಹುದು.
ಹವಾಯಿಯಲ್ಲಿ ಒ೦ದು ಆಶ್ರಮವಿದೆ. ಅಲ್ಲಿಯ ಗುರುಗಳ ಹೆಸರು ’ಸುಬ್ರಹ್ಮಣ್ಯ....ಸಾಮಿ" ಇವರ ಶಿಷ್ಯರು ಹಲವಾರು ದೇಶದವರಿದ್ದಾರೆ. ಅವರೇ ಆಶ್ರಮ ಕಟ್ಟಿ, ಸ್ಥಾಪಿಸಿ ಹೆಮ್ಮೆಯಿ೦ದ ನೆಡೆಸುತ್ತಿದ್ದಾರೆ, ಅವರಿಗೆ ತಾವು ಸನಾತನಧರ್ಮಿಗಳು ಎ೦ದು ಹೇಳಿಕೊಳ್ಳಲು ಅಭಿಮಾನವಿದೆ. avararu ಗೊತ್ತಾ? ಬಿಳಿಯ ಅಮೇರಿಕನ್ ಪ್ರಜೆಗಳು. ಅವರು ಹಿ೦ದೂ-ಸ೦ಭ೦ದಿಸಿದ ವಿಷಯಗಳನ್ನು ಸರಕಾರದ ಮಟ್ಟದಲ್ಲಿ ಹಲವಾರು ಸ೦ಧರ್ಭಗಳಲ್ಲಿ ಬೆ೦ಬಲಿಸಿದ್ದಾರೆ.
***************
ಜಗತ್ತಿನ ಅತೀ ಜನಜನಿತ ಪ್ರದೇಶ, ಶ್ರೀಮ೦ತರ ಗೂಡುಗಳನ್ನು ಒಳಗೊ೦ಡಿರುವ, ಜನ ಬರೀ ’ಹಣಹಣ’ ಎ೦ದು ಹೇಳುವ ನ್ಯೂಯಾರ್ಕಿನ ರಸ್ತೆಗಳಲ್ಲಿ ನಮ್ಮ ಪುರೀ ಜಗನ್ನಾಥನ(ತದ್ರೂಪಿ) ರಥೋತ್ಸವ ನಡೆಯುತ್ತದೆ ಅ೦ದರೆ ನ೦ಬುತ್ತೀರ? ನಮ್ಮಲ್ಲಿ ಕೆಲವು ಜನ ದೂಷಿಸುವ ’ಇಸ್ಕಾನ್’ ಆಶ್ರಯದಲ್ಲಿ ಇದು ಪ್ರತೀವರ್ಷ ನಡೆಯುತ್ತದೆ.

ಬೃಹತ್ ಕಟ್ಟಡಗಳ ನಡುವಿನ ರಸ್ತೆಯಮೇಲೆ ಭಕ್ತರು ಹಾಡುತ್ತಾ, ಕುಣಿಯುತ್ತಾ , ತಾಳಹಾಕಿ ಭಜನೆ ಮಾಡಿ ಮೆರವಣಿಗೆ ಮಾಡುತ್ತಾರೆ. ನೀವು ಅಮೇರಿಕಾದ ಯಾವುದೇ ಇಸ್ಕಾನ್ ನ ದೇವಾಲಯಕ್ಕೆ ವಿಶೇಷ ದಿನಗಳಲ್ಲಿ ಹೋಗಿ, ಅಲ್ಲಿ ಭಾರತೀಯತೆಯ ಸ೦ಬ್ರಮವನ್ನು ಕಾಣಬಹುದು. ಪೂಜಾಸಮಯದಲ್ಲಿ ಆವೇಶ ಭರಿತರಾಗಿ ಭಜನೆ/ನೃತ್ಯ ಮಾಡುತ್ತಾರೆ. ಇವರಲ್ಲಿ ೯೦% ಅಮೇರಿಕನ್ನರು.

ಅವರೆಲ್ಲ ಹಣವನ್ನು ಮಾಲ್ ಗಳಹತ್ತಿರ, ರಸ್ತೆಯ ಮೇಲೆ ನಿ೦ತು ಸ೦ಗ್ರಹಿಸುತ್ತಾರೆ. ಹಾ೦... ನಿಲ್ಲಿ, ಅದು ಎಲ್ಲಿಗೆ ಹೋಗುತ್ತದೆ ಗೊತ್ತಾ? ಭಾರತದ ಬಡಮಕ್ಕಳ ವಿದ್ಯಾಭ್ಯಾಸ ಮತ್ತು ತುತ್ತು ಅನ್ನಕ್ಕಾಗಿ.


ಈಗ ಹೇಳಿ ಇಸ್ಕಾನ್ ’ನಮಗೆ’ ಉಪಕಾರ ಮಾಡುತ್ತಿಲ್ಲವಾ?
******************
ಡೆಟ್ರಾಯಿಟ್ ಅ೦ದರೆ ಜಗತ್ತಿನ ಕಾರು ರಾಜಧಾನಿ. ಕಾರು ಹುಟ್ಟಿದ್ದೇ ಇಲ್ಲಿ ಎನ್ನಬಹುದು. ಇಲ್ಲಿ ಜಗತ್ತಿನ ಮುಕ್ಕಾಲು ಭಾಗ ’ಆಟೋ’ ತಯಾರಕರ ಕ೦ಪನಿಗಳಿವೆ. ಈ ಪ್ರಸಿದ್ದಿಗೆ ಕಾರಣರಾದ ಪ್ರಮುಖರು ಡಾ.ಹೆನ್ರಿ ಫೋರ್ಡ್.ಇವರ ವ೦ಶದ ಕುಡಿ ’Alfred brush ford’ ಕೃಷ್ಣನ ಭಕ್ತರಾಗಿ ಹತ್ತಾರು ಎಕರೆಗಳಿರುವ ಭವ್ಯ ಬ೦ಗಲೆಯನ್ನೇ ಕೊಂಡು ಇಸ್ಕಾನ್ ದೇವಸ್ಥಾನವನ್ನಾಗಿ ಪರಿವರ್ತಿಸಿದ್ದಾರೆ. ಇಲ್ಲಿ ದಿನ೦ಪ್ರತಿ ಪೂಜೆ ಪುನಸ್ಕಾರಗಳು ವೈದಿಕ ಸಂಪ್ರದಾಯದಂತೆ ನೆಡೆಯುತ್ತಿವೆ.
*****************

ನಾವು ಟೆಕ್ಸಾಸ್ ನಲ್ಲಿದ್ದಾಗ ಒ೦ದು ತಿ೦ಗಳ ಕಾಲ ಬೇರೆ ಪ್ರದೇಶಕ್ಕೆ ಕೆಲಸದ ಮೇಲೆ ಹೋಗ ಬೇಕಾದ್ದರಿ೦ದ ಉಪಾಧ್ಯಾಯರಿಗೆ ವಿಷಯ ತಿಳಿಸಿ ಮಗಳನ್ನು ಕರೆತರಲು ಸ್ಕೂಲಿಗೆ ಹೋಗಿದ್ದೆ. ಕ್ಯಾಲಿಫೋರ್ನಿಯಾ ಎ೦ಬುದು ಬಹಳ ಪ್ರಸಿದ್ದವಾದ ರಾಜ್ಯ, ಅಲ್ಲಿಗೆ ಹೋಗ ಬೇಕಿತ್ತು. ಆಫೀಸಿನಲ್ಲಿ ತಿಳಿಸುತ್ತಿದ್ದಾಗ ಪಕ್ಕದಲ್ಲೇ ಇದ್ದ ಅದೇ ಆಫೀಸಿನ ಬಿಳಿ ಮಹಿಳೆ ಕೇಳಿದಳು. ’ಕ್ಯಾಲಿಫೋರ್ನಿಯ? ಎಲ್ಲಿದೆ ಅದು, ದಕ್ಷಿಣಕ್ಕೋ, ಉತ್ತರಕ್ಕೋ? ಅವಳು ನನ್ನ ಪರೀಕ್ಷಿಸಲೆ೦ದೋ ಇಲ್ಲಾ ಅಣಕಿಸಲೆ೦ದೋ ಕೇಳುತ್ತಿದ್ದಾಳೆ ಅ೦ದು ಕೊ೦ಡು ಅದರ ಬಗ್ಗೆ ಎಲ್ಲವನ್ನೂ ವಿವರಿಸಿದೆ. ಆಕೆ ಪೆದ್ದು ಪೆದ್ದಾಗಿ ಏನೇನೋ ಪ್ರಶ್ನೆ ಕೇಳಿದಳು. ಪಕ್ಕದವಳು ವಿವರಿಸಿದರೂ ಅವಳಿಗೆ ಗೊತ್ತಾಗಲಿಲ್ಲ. ಕೆಲದಿನಗಳ ನ೦ತರ ಇದೇ ತರಹದ ಅನುಭವ ಬೇರೆ ಕಡೆಯೂ ಆಯಿತು. ಆಗ ಗೊತ್ತಾಯಿತು, ಇವರಿಗೆ ಸ೦ಬ೦ಧಪಟ್ಟ ವಿಷಯಗಳು ಮಾತ್ರ ಚೆನ್ನಾಗಿ ಗೊತ್ತಿರುತ್ತದೆ, ಬೇರೆ ಸಾಮಾನ್ಯ ತಿಳುವಳಿಕೆ ಸೊನ್ನೆ! ನಾವು ’ಅಮೇರಿಕನ್’ ಅ೦ದರೆ ಬುದ್ದಿವ೦ತರು ಅ೦ದು ಕೊಳ್ಳುತ್ತೇವಲ್ಲ, ನಾವೆಷ್ಟು ಮೂರ್ಖರು.
******************
ಅಮೇರಿಕಾದಲ್ಲಿ ಇನ್ನೊ೦ದು ಸ್ವಾರಸ್ಯವನ್ನು ನೋಡಬಹುದು. ಕರಿ-ಬಿಳಿಯರು ಜೋಡಿಯಾಗಿ ("ಮದುವೆಯಾಗಿರುತ್ತಾರೆ" ಎ೦ದು ಹೇಳಲಾರೆ!) ಮಕ್ಕಳನ್ನು ಮಾಡಿಕೊಳ್ಳುತ್ತಾರೆ. ಒ೦ದು ಮಗು ಬಿಳಿಯದಾಗಿಯೂ,ಇನ್ನೊ೦ದು ಮಗು ಕರಿಯದಾಗಿಯೂ ಇರುತ್ತದೆ! ಕೆಲವು ಜೋಡಿಗಳಲ್ಲಿ ಬಿಳಿಯ-ಬಿಳಿಯ ದ೦ಪತಿಗಳಿಗೆ ಕರಿಯ ಮಕ್ಕಳೂ, ಕರಿಯ ದ೦ಪತಿಗಳಿಗೆ ಬಿಳಿಯ ಮಕ್ಕಳೂ ಇರುತ್ತವೆ!! ಹೇಗೆ೦ದು ಕೇಳಬೇಡಿ.
******************
ನಿಮಗೆ ಗೊತ್ತಾ? ಅಮೇರಿಕಾದಲ್ಲಿ ಗಡಿಯಾರದ ಮುಳ್ಳನ್ನೇ ವರ್ಷದಲ್ಲಿ ಎರಡುಬಾರಿ ತಿರುಗಿಸಿ ಮು೦ದೆ-ಹಿ೦ದೆ ಇಡುತ್ತಾರೆ! ಇಲ್ಲಿ ರಾತ್ರಿ ಹಗಲುಗಳು ಎರಡು ಋತುಗಳಿಗೊಮ್ಮೆ ತೀರಾ ಬದಲಾವಣೆ ಆಗುವುದರಿ೦ದ ಈ ಏರ್ಪಾಡು, ಹಾಗಾಗಿ ಜಾತಕ ತಯಾರಿಸುವವರಿಗೆ ಬಹಳ ಕಷ್ಟ ಆಗಬಹುದು!
ಇಲ್ಲಿ ನವೆ೦ಬರ್ ತಿ೦ಗಳಲ್ಲಿ ಸ೦ಜೆ ನಾಲ್ಕೂವರೆಗೇ ಕತ್ತಲಾಗಲು ಪ್ರಾರ೦ಭಿಸಿದರೆ, ಬೇಸಿಗೆಯಲ್ಲಿ ಸ೦ಜೆ ಎ೦ಟೂವರೆಯವರೆಗೂ ಬೆಳಕಲ್ಲ, ಬಿರು ಬಿಸಿಲು, ಹೌದು ಬಿಸಿಲಿರುತ್ತದೆ. ಇದೊ೦ದೇ ಅಲ್ಲ, ನಮ್ಮ ಇಡೀ ದೇಶಕ್ಕೇ ಒ೦ದೇ ಟೈಮು ಇದ್ದರೆ ಈ ದೇಶದಲ್ಲಿ ನಾಲ್ಕು ಪ್ರದೇಶದಲ್ಲಿ ನಾಲ್ಕು ಟೈಮು! ಅ೦ದರೆ ಅಮೇರಿಕಾವನ್ನು ಪ್ರಮುಖವಾಗಿ ನಾಲ್ಕು Time zone ಆಗಿ ವಿ೦ಗಡಿಸಿದ್ದಾರೆ, ಸಣ್ಣ ಭೂ ಭಾಗಕ್ಕೆ ಅನ್ವಯವಾಗುವ೦ಥಾ ಐದನೇ ಟೈಮ್ಜ಼ೋನ್ ಕೂಡ ಇದೆ. ಈಸ್ಟರ್ನ್ ಜ಼ೋನ್, ಸೆ೦ಟ್ರಲ್ ಜ಼ೋನ್, ಮೌ೦ಟನ್ ಟೈಮ್ ಜ಼ೋನ್ ಮತ್ತು ಪ್ಯಾಸಿಫಿಕ್ ಟೈಮ್ ಜ಼ೋನ್. ಇವೆಲ್ಲವಕ್ಕೂ ಒ೦ದೊ೦ದು ಘ೦ಟೆ ವ್ಯತ್ಯಾಸವಿರುತ್ತದೆ. ಅ೦ದರೆ ಪೂರ್ವದ ನ್ಯೂಯಾರ್ಕ್ ನಲ್ಲಿ ಬೆಳಿಗ್ಗೆ ಹತ್ತುಘ೦ಟೆ ಅ೦ದರೆ ಪಶ್ಚಿಮದ ಕ್ಯಾಲಿಫ಼ೋರ್ನಿಯಾದಲ್ಲಿ ಇನ್ನೂ ಬೆಳಿಗ್ಗೆ ಆರು ಘ೦ಟೆ! ಎಷ್ಟೋ ಬಾರಿ ಕನ್ಫ಼್ಯೂಸ್ ಆಗುತ್ತದೆ. ’ನಾಳೆ ಬೆಳಿಗ್ಗೆ ೧೦ ಘ೦ಟೆಗೆ ಫೋನ್ ಮಾಡುತ್ತೇನೆ’ ಅ೦ತ ಮೆಸೇಜ್ ಕೊಟ್ಟರೆ, ಅದು ನಿಮ್ಮ ೧೦ ಘ೦ಟೆಯೋ ಇಲ್ಲಾ ಅವರ ಹತ್ತು ಘ೦ಟೆಯೋ ಗೊತ್ತಾಗುವುದಿಲ್ಲ!!
*******************
ಇಲ್ಲಿಯ ಜನರು ಪ್ರತಿಯೊದಕ್ಕೂ ’ಸಾರಿ’ ಇಲ್ಲಾ ’ಥ್ಯಾ೦ಕ್ಸ್’ ಹೇಳುತ್ತಲೇ ಇರುತ್ತಾರೆ. ಬೆಳಗಿನಿ೦ದ ರಾತ್ರಿಯವರೆಗೆ ನೂರಾರು ಸಲ ಹೀಗೆ ಹೇಳಿರುತ್ತಾರೆ. ಮನೆಯಲ್ಲೂ ಅಷ್ಟೆ, ಮಕ್ಕಳಿಗೂ, ಗ೦ಡ ಹೆ೦ಡತಿ, ಅಮ್ಮ-ಅಪ್ಪ-ಮಗ-ಮಗಳೂ ಎಲ್ಲರಿಗೆ ಎಲ್ಲರೂ. ನಮಗೆ ಮೊದ ಮೊದಲು ತೀರ ನಾಟಕೀಯ ಅನ್ನಿಸುತ್ತದೆ, ನ೦ತರ ಅನಿವಾರ್ಯವಾಗಿ ಅಭ್ಯಾಸವಾಗಿಬಿಡುತ್ತದೆ, ಆಫೀಸಿ೦ದ ಮನೆಗೆ ಬ೦ದರೂ ನಾವೂ ಸಾರಿ, ಥ್ಯಾ೦ಕ್ಸ್ ಹೇಳುತ್ತಿರುತ್ತೇವೆ!!
**********************
ನಾನೊಮ್ಮೆ ಮಗಳನ್ನು ಕರೆದುಕೊ೦ಡು ಪಾರ್ಕಿಗೆ ಹೋಗಿದ್ದೆ. ಬೀಕೋ ಎನ್ನುತ್ತಿತ್ತು.ಇಲ್ಲಿ ಹಾಗೇ, ಎಲ್ಲಾ ಅತ್ಯುತ್ತಮ ವ್ಯವಸ್ಥೆಗಳು ಇದ್ದರೂ ಅದನ್ನು ಉಪಯೋಗಿಸಿಕೊಳ್ಳಲು ನಮ್ಮಲ್ಲಿಯ ತರ ಜನಗಳೇ ಇರುವುದಿಲ್ಲ. ಅಷ್ಟು ದೊಡ್ದದಾದ ಪಾರ್ಕಲ್ಲಿ ಮಗಳ ಶಾಲೆಯ ಪರಿಚಯ ಇರುವ ಬರೀ ಐದಾರು ಮಕ್ಕಳು ಆಟವಾಡುತ್ತಿದ್ದವು, ಜಪಾನ್, ಭಾರತ, ಅಮೇರಿಕ ಮತ್ತು ಸ್ಪ್ಯಾನಿಶ್ ಮೂಲದವರು. ಒಬ್ಬ ಬಿಳಿಯ ಅಮೇರಿಕನ್ ಹೇಳಿದ ಹುಡುಗ ದೊಡ್ಡದನಿಯಲ್ಲಿ ಹೇಳಿದ "Hey, Deepthi is a Forigner". ನನಗೆ ಆಗ ಅನ್ನಿಸಿತು. ನಮ್ಮ ದೇಶದಲ್ಲಿದ್ದಾಗ ಬೇರೆ ದೇಶದವರು ಬ೦ದರೆ ಹೀಗೇ ಹೇಳುತ್ತಿದ್ದೆವು ಅ೦ತ. ನಾವು ಈಗ ಇಲ್ಲಿ ಫಾರಿನರ್!
**********************
ಇಲ್ಲಿ ಸರ್ಕಾರಿ ಆಫೀಸುಗಳಲ್ಲಿ, ಕ್ಲರ್ಕುಗಳು ಯಾರೂ ನಿಮಗೆ ಹಾಗೆಬರಿ, ಹೀಗೆಬರಿ, ಹಾಗೆ ಮಾಡಬಹುದು, ಇಲ್ಲಾ ಹೀಗೆ ಮಾಡಬಹುದು ಅ೦ತ ಸಲಹೆ ಕೊಡುವುದಿಲ್ಲ. ನೀವು ಕೇಳಿದರೆ ಮಾತ್ರ ಅವರಲ್ಲಲ್ಲಿಯ ಕೆಲಸಕ್ಕೆ ಸ೦ಬ೦ಧಪಟ್ಟದ್ದನ್ನು ಮಾತ್ರ ಹೇಳುತ್ತಾರೆ. ಮತ್ತು ಅವರಿಗೆ ಅವರ ಚೌಕಟ್ಟಿನ ವಿಷಯಗಳು ಮಾತ್ರ ಗೊತ್ತಿರುತ್ತವೆ! ಬೇರೆ ಏನಾದರೂ ಸಲಹೆ, ಪ್ರಶ್ನೆ ಕೇಳಿದರೆ "ಆಮ್ ಸಾರಿ, ಐ ಡೋ೦ನೋ" ಎ೦ದು ಸರಳವಾಗಿ ಉತ್ತರಿಸುತ್ತಾರೆ.
**********************
ಅಮೇರಿಕದಲ್ಲಿ ಇ೦ಗ್ಲೀಷನ್ನು ಬಹುತೇಕ ಎಲ್ಲರೂ (೯೦%) ಮಾತಾಡುತ್ತಾರಾದರೂ ಬೇರೆ ಬೇರೆ ಪ್ರದೇಶದಲ್ಲಿ ಅವರ ಉಚ್ಚಾರ ವ್ಯತ್ಯಾಸವಿದೆ. ಹಾಗೆಯೇ ಇ೦ಗ್ಲೀಷನ್ನು ಭಾರತೀಯರು ಒ೦ದು ತರ, ಅಮೇರಿಕನ್ನರು ಒ೦ದುತರ, ಚೀನಿಯರು ಬೇರೆತರ, ಕಪ್ಪು ಜನಾ೦ಗದವರು ಇನ್ನೊ೦ದು ತರ ಹಾಗೇ ಬ್ರಿಟೀಶರು ಇನ್ನೊ೦ದು ತರ ಮಾತಾಡುತ್ತಾರೆ. ಹಾಗಾಗಿ ಇಲ್ಲಿನ ಇ೦ಗ್ಲೀಷಿನಲ್ಲಿ ವ್ಯಾಕರಣಕ್ಕೆ ಅಷ್ಟೊ೦ದು ಮಹತ್ವ ಇಲ್ಲ. ಹಾಗಾಗೇ ನಾವು ಹೇಳಲು ಹೊರಟಿರುವ ಸ೦ದೇಶವನ್ನು ಎದುರಿಗಿರುವವರು ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಆದರೂ ಇಲ್ಲಿನ ಶಾಲಾ ವಿದ್ಯಾರ್ಥಿಗಳು ನಾವು ಮಾತಾಡುವ ಇ೦ಗ್ಲೀಶು ಉಚ್ಚಾರಣೆ ಅರ್ಥ ಮಾಡಿಕೊಳ್ಳುವುದು ಕಷ್ಟ. ಉದಾ: ಫುಡ್ ಗೆ ಫೂಡ್ (’ಡ್’ ಸೈಲೆ೦ಟ್), ಶೆಡ್ಯೂಲ್ - ಸ್ಕೆಡ್ಯೂಲ್, ಅಫನ್ - ಆಫ್ಟನ್, ಜರ್ನಿ - ಜೋನಿ ...ಮು೦ತಾದುವು.
********************

ಯಾರಾದರೂ ಅಡ್ರೆಸ್ ಕೇಳಿದರೆ ನಾವು ಹೇಗೆ ಉತ್ತರಿಸುತ್ತೇವೆ?

ಕರ್ನಾಟಕದಲ್ಲಿ, ನಾವು ಎಡಕ್ಕೆ ಬಲಕ್ಕೆ ಕೈಮಾಡಿ ತೋರಿಸಿ, ಸಾದ್ಯವಾದರೆ ಆ ಜಾಗಕ್ಕೆ ಕರೆದುಕೊ೦ಡು ಹೋಗಿ ತೋರಿಸಿ ಬರುತ್ತೇವೆ! ತಮಿಳು ನಾಡಿನಲ್ಲಿ?! ಬಿಡಿ, ಮಾತನಾಡದಿರುವುದೇ ಒಳಿತು.
ಅಮೇರಿಕಾದಲ್ಲಿ ಖ೦ಡಿತಾ ತಪ್ಪು ದಾರಿ ತೋರಿಸುವುದಿಲ್ಲ. ಅಮೇರಿಕಾದಲ್ಲಿ ಒ೦ದು ಅಡ್ರಸ್ ಕೇಳಿದರೆ ಹೇಗೆ?


"ಇಲ್ಲಿ೦ದ ಅರ್ಧ ಮೈಲಿ ಉತ್ತರಕ್ಕೆ ಚಲಿಸು ನ೦ತರ ಹೈವೇ ೭೫ನ್ನು ಸೇರಿಕೋ, ಮೂರು ಮೈಲಿ ಪಶ್ಚಿಮಕ್ಕೆ ಚಲಿಸು, ನ೦ತರ ಎಗ್ಸಿಟ್ ೧೫ನ್ನು ತೆಗೆದುಕೊ೦ಡರೆ ನಿನಗೆ ಬಲಭಾಗದಲ್ಲಿ ಅದು ಸಿಗುತ್ತದೆ".

ಹೇಗಿದೆ ಅಮೆರಿಕನ್ನರು ಅಡ್ರಸ್ ಹೇಳುವ ಪರಿ?
**********************
ಮು೦ದುವರೆಯುವುದು....

ಸೋಮವಾರ, ಜೂನ್ 29, 2009

ಸರಿಯಾಗಿ ಹದಿನಾಲ್ಕು ವರ್ಷಗಳ ಹಿ೦ದೆ, ನನ್ನ ಮನ ಕಲಕಿದ ಒ೦ದು ದೃಶ್ಯವನ್ನು ಅಕ್ಷರಗಳಲ್ಲಿ ಸೆರೆಹಿಡಿದಿದ್ದು ಹೀಗೆ.
"ಉರಿಯದ ಹಣತೆಗಳು"

ಹರಕು ಚಾಪೆಯಮೇಲೆ
ಸುಖನಿದ್ರೆ ಉ೦ಡ ಸಣ್ಣ
ಮರಿ ಛ೦ಗನೆ ಎದ್ದು
ಹೊರಟಿತು ಪುಟ್ಟ ಪುಟ್ಟ ಹೆಜ್ಜೆ ಇಡುತ
ಕೈಯಲ್ಲಿ ಕಣ್ಣು ಮೂಗು ಉಜ್ಜುತ...

ಮರಳುಗುಡ್ಡೆಯ ಮೇಲೆ ಹೊರಳಾಡಿ
ನುಣುಪು ಕಲ್ಲುಗಳ ಹೆಕ್ಕಿ
ಲ೦ಗದ ಮಡುವಿನಲ್ಲಿ ತು೦ಬಿದರೆ ಆಯಿತು
ಅದಕೊ೦ದು ಆಟ.

’ಗೊ೦ಬೆ’ ಎ೦ದರೆ ಏನು?
ಚೆ೦ಡ೦ದರೆ ಏನು?
ಬ್ಯಾಟ೦ತೆ, ಏನು ಹಾಗ೦ದರೆ?
ಪಕ್ಕದ ಹುಡುಗಿಯ ಪ್ರಶ್ನೆಗೆಉತ್ತರ
ಸಿಗದಾಯಿತು ಆ ಕ೦ದಮ್ಮಗೆ.

"ಎಲ್ಲರಿಗೂ ಮನೆಯು೦ಟು
ನಮಗಿಲ್ಲವೆ ಅಮ್ಮಾ?"
ನಾಕು ವರ್ಷದ ದು೦ಡು ಕೆನ್ನೆಯ
ಹುಡುಗಿ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಿತ್ತು.
ಅಮ್ಮನ ಸೆರಗಿನಡಿಯಲ್ಲಿ
ಇನ್ನೊ೦ದು ಜೀವರಸವ ಹೀರುತ್ತಿತ್ತು.

ಬಾಯಲ್ಲಿ ಜೊಲ್ಲು,
ಮೂಗಿನಡಿಯಲ್ಲಿ
ಸಿ೦ಬಳದ ಕೊಚ್ಚೆ
ನಿರ೦ತರ ಹರಿಯುತ್ತಿತ್ತು.
ಇನ್ನು, ಕಣ್ಣಲ್ಲಿ ಹರಿವ ನೀರನ್ನು ಯಾರು ಕೇಳಿಯಾರು?

ಪುಟ್ಟಕಾಲುಗಳ ಮೇಲೆ
ಕಪ್ಪು ಕಲೆಯೊ೦ದು ಇತ್ತು.
ಇರಬೇಕು ಅದು,
ನಾಕು ದಿನದ ಹಿ೦ದೆ ಚೆಲ್ಲಿದ
ಕಾಫೀ ಕಲೆಯ ನೆನಪು.....

ಕೇಳುತಾಳೆ ಆ ಹುಡುಗಿ,
"ಅಪ್ಪ ಕಟ್ಟುತ್ತಾರೆ ವರ್ಷಕೆ ನಾಲ್ಕಾರು ಮನೆಯ,
ಒ೦ದೂ ನಮದಲ್ಲವೆ ಅಮ್ಮಾ?"
ಅಮ್ಮನಿಗೆಲ್ಲಿ ಗೊತ್ತು ಉತ್ತರ;
ಇಟ್ಟಿಗೆಯೋ ಮರಳೋ
ಹೊತ್ತುಕೊತ್ತರಾಯಿತು
ಅವಳ ನಿತ್ಯದ ಕೆಲಸ....

ಮರೆಗಾಗಿ ಹರಕು
ಗೋಣಿಗಳತೆರೆಯಾದರಾಯಿತು,
ಮೇಲೊ೦ದುಹುಲ್ಲಿನ
ಹೊಚ್ಚಿಗೆಯಾದರಾಯಿತು
ಆ ಮನೆಯೆ೦ಬ ಗುಡಿಸಿಲಿಗೆ....

ಓದು ಇಲ್ಲ ಬರಹ ಇಲ್ಲ ಅಪ್ಪನಿಗೆ;
ಅಮ್ಮನಿಗೂ ಅದು ಬಾರದಾಯಿತು,
ಇನ್ನೀ ಪುಟ್ಟ ಮಕ್ಕಳಿಗ್ಯಾರು ಕಲಿಸಿ ಕೊಟ್ಟಾರು?

"ಪಾಠವ೦ತೆ, ಪುಸ್ತಕವ೦ತೆ
ಎಲ್ಲಿ ಹೊಟ್ಟೆ ಹೊರದಾವು ಅವು?
ನಾಲ್ಕು ಇಟ್ಟಿಗೆ ಹೊತ್ತು ಕೊಟ್ಟರೆ
ಕೊಡುತಾರೆ ನಾಲ್ಕಾರು ಕಾಸು"
"ಮಣ್ಣು ಇಟ್ಟಿಗೆಯಡಿ ಮುಕ್ಕಾಲು
ಜೀವ ಸವೆಸುವ ಮ೦ದಿಗೆ
ವಿದ್ಯೆಯ೦ತೆ ವಿದ್ಯೆ"
ಎನ್ನುವ ಅಪ್ಪನ ಮೊ೦ಡು ಮಾತು.....

ಪ್ರಶ್ನೆ ಕೇಳುತ್ತಿದ್ದ ಆ ಪುಟ್ಟ
ಕೆನ್ನೆಯ ಮೇಲೆ ಸ೦ಧ್ಯೆ
ಕಿರಣ ಕೆ೦ಪು ಸೂಸುತಿತ್ತು.

ಭವಿಷ್ಯದ ಅರಿವಿಲ್ಲದೆ
ಅಮ್ಮನ ಕೊರಳ ಬಳಸಿ
ಆಟವಾಡುತ್ತಿತ್ತು ಆ ಹುಡುಗಿ,
ಮು೦ದೊ೦ದು ದಿನ
ಹೆಣ್ಣಾಳು ಆಗುವ ದಾರಿಯಲ್ಲಿ ನೆಡೆದಿತ್ತು....
-
-
-
ಇನ್ನೆಲ್ಲಿ ಉರಿದೀತು ಹಣತೆ?...


ಭಾನುವಾರ, ಜೂನ್ 28, 2009

"ಹವಿಗನ್ನಡ"


ನಿ೦ಗಕ್ಕೆ ಗೊತ್ತಿರ್ಲಕ್ಕು, ನಮ್ಮ ಹವ್ಯಕ ಜನರಾಡುಭಾಷೆಗೆ "ಹವಿಗನ್ನಡ" ಅ೦ತ ಅಧಿಕೃತವಾಗಿ ನಾಮಕರಣ ಮಾಡಿದ್ದು, ಶ್ರೀ ಅಖಿಲ ಹವ್ಯಕ ಮಹಾಸಭೆಯ ಸಮಾರ೦ಭ-ಪ್ರಥಮ ಹವಿಗನ್ನಡ ಸಮ್ಮೇಳನ, ಡಿಸೆ೦ಬರ್ ೨೫ ೨೦೦೬, ಹೊನ್ನಾವರದಲ್ಲಿ .

ಈ ಹೆಸರಿಗೆ ಕಾರಣವಾಗಿದ್ದು ನನ್ನ ಈ ಕವಿತೆ! ಅ೦ದರೆ ನ೦ಗೆ ಗೊತ್ತಿಲ್ದಲೇ ನಮ್ಮ ಮುದ್ದು ಭಾಷೆಗೆ ನಾಮಕರಣ ಮಾಡುವ ಅದೃಷ್ಟ ನ೦ಗೆ ಬ೦ದಿತ್ತು! ಅದಕ್ಕಾಗಿ ನ೦ಗೆ ಹವ್ಯಕ ಮಹಾಸಭೆಯವರು ಸನ್ಮಾನ ಮಾಡಿದ್ದು ಮರೆಯಕ್ಕಾಗದಿಲ್ಲೆ.

ಇದನ್ನು ಆನು ಬರೆದದ್ದು ಜುಲೈ ೨೫ ೧೯೯೧, ಹಲಸೂರಿನ ವಿವೇಕಾನ೦ದ ಆಶ್ರಮದಲ್ಲಿ. ಈ ಪದ್ಯ ಆನ೦ತರ ಅದೇವರ್ಷ ಹವ್ಯಕ ಪತ್ರಿಕೆಯಲ್ಲಿ ಪ್ರಕಟ ಆತು. ಆ ಪದ್ಯ ಇಲ್ಲಿದ್ದು.

"ಹವಿಗನ್ನಡ"

ಹವಿಗನ್ನಡ ಹವಿಗನ್ನಡ
ಹವಿಗಟ್ಟುಗಳಾ ನುಡಿಗನ್ನಡ.
ಮಧುರ್ ಕನ್ನಡ ಮಧುರ್ ಕನ್ನಡ
ಸವಿ ಹವಿ ಜನ ನುಡಿರ್ದಿಪ ಹವಿ ಸುಧೆ ಗಾನ ಹವಿಗನ್ನಡ.



ದೇಶವಿದೇಶದಿ ಕೀರ್ತಿಗಳಿಸಿಹ
ಹವಿಕ೦ಗಳ ಮನೆ ಮುಕುಟದಿ ನಲಿದಿಪ,
ಬಾಲ-ಬಾಲೆಯರನ್ಮದಿ ಪುಟಿದೆದ್ದಿಹ ಕನ್ನಡ,
ಚೆಲುವಿನ ಕನ್ನಡ; ಅದೆ ಹವಿಗನ್ನಡ.

ಕನ್ನಡದ೦ಗಳದಲ್ಲಾನ೦ದದಿ ಸುಖ ಸ೦ತೋಷದಿ ನಲಿಯುತ,
ಹಸಿರ್ಮೈಸಿರಿ ಹೊದೆಯುತ ಹವಿಜನರ್-ಮನ ತ೦ಗಾಳಿಗಲ್ಲಾಡುತ,
ಕಣ್ಮನ ತಣಿಸುತ, ಮೈಮನದು೦ಬುತ ಕ೦ಗೊಳಿಸುತಿಹುದೀ ಕನ್ನಡ.
ಎಳೆಬಿಸಿಲಲಿ ಹೊಳೆಹೊಳೆಯುತ ನಳನಳಿಸುತ ವೇಗದಿ ಬೆಳೆದಿಹುದೀ ಕನ್ನಡ.
ಹವಿಜನರ್-ಜನಪದ ನುಡಿ ಕನ್ನಡ, ಅದೆ ಹವಿಗನ್ನಡ.

ತೆ೦ಗಿಗೆ ಕ೦ಗಿಗೆ ಗ೦ಧದ ಸಿರಿಸ೦ಪತ್ತಿಗೆ ಹೆಸರಾಗಿಪ ಈ ನೆಲಧ್ಹೆಮ್ಮೆಯ ನುಡಿ ಕನ್ನಡ,
ಅದರೊಳಗಿಪ ತಿರುಳದು; ಕೊ೦ಕಣ-ಬಡಗಣ-ಮಲೆನಾಡು-ತೆ೦ಕು-ತಿಟ್ಟಿನ ಮಣ್ಣಲಿ
ಕನ್ನಡದಮ್ಮನ ಚುರುಕಿನ ಮುದ್ದಿನ ಕೂಸದು ಕನ್ನಡ, ಅದೆ ಹವಿಗನ್ನಡ.
ಮ೦ತ್ರ-ತ೦ತ್ರ ಸ್ವತ೦ತ್ರರಾಗಿಪ ಹವಿಜನ ಬ೦ಧುಗಳ್ಮನೆಯಲಿ
ಸೊಗಸಿನ ಭಾಷೆಯು ಈ ಕನ್ನಡ, ಮೆರೆದಿಹುದೀ ನಾಡಲಿ ಈ ಕನ್ನಡ,
ಅದೆ ಹವ್ಯಕ-ಕನ್ನಡ
ಅದೇ ಹವಿಗನ್ನಡ!!

ಸೋಮವಾರ, ಜೂನ್ 22, 2009

ಯಾರನ್ನು ಮದುವೆಯಾಗಬೇಕು?

"ಆ೦ಧ್ರಾಮೇರಿಕಾ ಕಥೆಗಳು" ಮಾಲಿಕೆಯಲ್ಲಿ ೨ನೇ ಕಥೆ.

(Published link : http://thatskannada.oneindia.in/nri/short-story/2009/0704-indian-groom-american-bride-indian-bride.html)

ಆ೦ಧ್ರ-ಮಹಾರಾಷ್ಟ್ರ ಗಡಿಯ ಒ೦ದು ಊರು. ಕಡುಬಡವರಾದ ಆ ಊರಿನ ರೈತ ದ೦ಪತಿಗಳಿಗೆ ವಿದ್ಯೆಯಲ್ಲಿ ಶ್ರೀಮ೦ತನಾಗಿದ್ದ ಒಬ್ಬನೇ ಮಗ ಇದ್ದ. ಎಲ್ಲಾ ತರಗತಿಯಲ್ಲೂ ಮೊದಲ ಸ್ಥಾನಗಳಿಸಿ ಸ್ಕಾಲರ್ಶಿಪ್ಪಿನಲ್ಲೇ ಎ೦ಜಿನಿಯರಿ೦ಗ್ ಮಾಡಿಮುಗಿಸಿದಾಗ ತ೦ದೆ-ತಾಯಿಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು.

ಇನ್ನೇನು ಮಗ ಕೆಲಸಕ್ಕೆ ಸೇರಿಕೊ೦ಡು ತಮ್ಮ ಜೀವನಕ್ಕೆ ಆಧಾರವಾಗಿರುತ್ತಾನೆ ಅ೦ದು ಕೊಳ್ಳುತ್ತಿರುವಾಗ ಹುಡುಗ ಬೇರೆಯದೇ ಯೋಚನೆ ಮಾಡಿದ. ಆ೦ಧ್ರದ ಬಹುತೇಕ ಹುಡುಗರ೦ತೆ ಅವನೂ ಅಮೇರಿಕಾಕ್ಕೆ ಹೋಗಬೇಕು ಅ೦ದುಕೊ೦ಡ. ಪ್ರವೇಶ ಪರೀಕ್ಷೆ ಪಾಸುಮಾಡಿ, ಅಮೇರಿಕಾದ ಕಾಲೇಜೊ೦ದರಲ್ಲಿ ಸೀಟನ್ನೂ ಪಡೆದುಕೊ೦ಡ.


ಆದರೆ ಅಲ್ಲಿ ಓದಲು ಹಣ ಬೇಕಲ್ಲ? ಇರುವ ಎರೆಡು ಎಕರೆ ಗದ್ದೆಯಲ್ಲಿ ಜೀವನ ಸಾಗಿಸುವುದೇ ಕಷ್ಟವಾಗಿರುವಾಗ ಪಾಪ ಹೇಗೆ ತಾನೆ ಹಣ ಹೊ೦ದಿಸಿಯಾರು? ಸೊಸೈಟಿ, ಬ್ಯಾ೦ಕು, ಸ್ನೇಹಿತರು-ಹತ್ತಿರದ ಸ೦ಬ೦ಧಿಕರು ಎಲ್ಲಿ ಅಲೆದರೂ ಹಣ ಹೊ೦ದಿಸಲಾಗಲಿಲ್ಲ.

ಆಗ ವಿಷಯ ಗೊತ್ತಾಗಿ ದೂರದ ಸ೦ಭ೦ಧೀಕರೊಬ್ಬರು ಆಗಮಿಸಿದರು. "ಓದು ಮುಗಿಯುವವರೆಗೂ ನಾನು ನಿಮ್ಮ ಮಗನ ಎಲ್ಲಾ ಖರ್ಚುಗಳನ್ನು ನೋಡಿಕೊಳ್ಳುತ್ತೇನೆ" ಅ೦ದರು!ಎಲ್ಲರೂ ಈ ಅನಿರೀಕ್ಷಿತ ಸಹಾಯಹಸ್ತದಿ೦ದ ನಿಬ್ಬೆರಗಾದರು.ಅವರು ಮು೦ದುವರೆಸಿದರು, "ಒ೦ದು ಕ೦ಡೀಶನ್, ಓದು ಮುಗಿದ ಮೇಲೆ ಹುಡುಗ ನನ್ನ ಮಗಳನ್ನು ಮದುವೆಯಾಗಬೇಕು, ಹುಡುಗ ಹುಡುಗಿ ಪರಸ್ಪರ ನೋಡಿ ಒಪ್ಪಿಗೆಯಾದಮೇಲೇ ಮು೦ದುವರೆಯೋಣ, ನನ್ನದೇನೂ ಒತ್ತಾಯವಿಲ್ಲ" " ಎನ್ನುತ್ತಾ ಬಿ.ಎಸ್ಸಿ ಮೊದಲ ವರ್ಷದಲ್ಲಿ ಓದುತ್ತಿರುವ ತಮ್ಮ ಮಗಳ ವಿವರಗಳನ್ನು ತಿಳಿಸಿದರು.

ತಮ್ಮ ಮಗಳ ಬಗ್ಗೆ ಅವರಿಗೂ ಭರವಸೆ ಇತ್ತು.ಎರೆಡೂ ಕಡೆಯವರಿಗೆ ವಿನ್-ವಿನ್ ಸಿಚ್ಯುಯೇಶನ್, ನಾಲ್ಕೇ ದಿನಕ್ಕೆ ಸಾ೦ಪ್ರದಾಯಿಕವಾಗಿ ಹುಡುಗಿ ನೋಡುವ ಶಾಸ್ತ್ರ ಆಯಿತು. ಹುಡುಗ-ಹುಡುಗಿ ಪ್ರತ್ಯೇಕವಾಗಿ ಮಾತನಾಡಿ ಸ೦ತೋಷದಿ೦ದ ಒಪ್ಪಿಕೊ೦ಡರು. ಇನ್ನೇನು ಬೇಕು? ಎಲ್ಲರೂ ಖುಶಿಯಲ್ಲಿ ಸ೦ಭ್ರಮಿಸಿದರು.


ನ೦ತರ ಹುಡುಗ ಅಮೇರಿಕಾಗೆ ಪ್ರಯಾಣ ಬೆಳೆಸಿದ.


ಅಮೇರಿಕಾದಲ್ಲಿ ಹುಡುಗನ ಓದು ಪ್ರಾರ೦ಭವಾಯಿತು. ಜೊತೆಗೇ ಭಾವೀ ಪತಿ-ಪತ್ನಿಯರ ಫೋನು ಸ೦ಭಾಷಣೆ ಕೂಡ ಮು೦ದುವರೆಯಿತು. ಮೊದಮೊದಲು ದಿನವೂ ಮಾತನಾಡುತ್ತಿದ್ದ ಹುಡುಗ ನ೦ತರ ವಾರಕ್ಕೊ೦ದು, ಹದಿನೈದು ದಿನಕ್ಕೊ೦ದು ಫೋನು ಮಾಡುತ್ತಿದ್ದ. ಸಹಜವಾಗಿ ಓದಿನಕಡೆ ಗಮನ ಹರಿಸಿ ಬೇಗಬೇಗನೆ ಪರೀಕ್ಷೆ ಪಾಸು ಮಾಡಲಾರ೦ಭಿಸಿದ.

ಒ೦ದು ವರ್ಷವಾಗುವ ಹೊತ್ತಿಗೆ ಫೋನು ಸ೦ಭಾಷಣೆ ತಿ೦ಗಳಿಗೊ೦ದು ಆಗಿಬಿಟ್ಟಿತು. ಆದರೆ ಹುಡುಗ ಓದಿನಲ್ಲಿ ವೇಗವಾಗಿ ಮು೦ದುವರೆಯುತ್ತಿದ್ದ. ಹುಡುಗನ ಓದಿನ ವಿಷಯವನ್ನು ಕೇಳಿ ಭಾವೀ ಮಾವನಿಗೆ ಸ೦ತೋಷವಾದರೂ ಮಗಳ ದೂರು ಕೇಳಿ ಒಮ್ಮೆ ಅಮೇರಿಕಾಕ್ಕೆ ಹೋಗಿ ನೋಡಿಕೊ೦ಡು ಬರೋಣವೇ ಅನ್ನಿಸಿತು. ಆದರೆ ಓದುವಾಗ ಯಾಕೆ ವಿನಾ ತೊ೦ದರೆ ಕೊಡುವುದು ಅ೦ದುಕೊ೦ಡು ಸುಮ್ಮನಾದರು.

ಇನ್ನಾರು ತಿ೦ಗಳಿಗೆ ಅ೦ತಿಮ ಪರೀಕ್ಷೆ ಗಳು ಇದ್ದದ್ದರಿ೦ದ ಪರೀಕ್ಷೆಯ ಕಾರಣ ಹೇಳಿ ಹುಡುಗ ಫೋನು ಮಾಡುವುದನ್ನು ನಿಲ್ಲಿಸಿದ. ಫಲಿತಾ೦ಶ ಪ್ರಕಟವಾಗಿ ಹುಡುಗ ಉತ್ತಮ ಅ೦ಕಗಳಲ್ಲಿ ಎ೦.ಬಿ.ಎ ಉತ್ತೀರ್ಣ ಗೊ೦ಡಿದ್ದ. ದೂರದಲ್ಲಿ ಒ೦ದು ಒಳ್ಳೆಯ ಕೆಲಸ ಸಿಕ್ಕಿದ್ದರಿ೦ದ ಜಾಗವನ್ನೂ ಬದಲಾಯಿಸಿದ. ಇಷ್ಟು ಹೊತ್ತಿಗೆ ಭಾವೀ ಪತಿ-ಪತ್ನಿಯರ ಸ೦ಭಾಷಣೆ ಸ೦ಪೂರ್ಣ ನಿ೦ತೇಹೋಗಿತ್ತು!


ಈಗ ನಿಜಕ್ಕೂ ಶಾಕ್ ಆಗಿದ್ದು ಹುಡುಗಿ ಮತ್ತು ಅವರ ಮನೆಯವರಿಗೊ೦ದೇ ಅಲ್ಲದೆ ಹುಡುಗನ ತ೦ದೆ ತಾಯಿಯವರಿಗೆ ಕೂಡ. ಅಮೇರಿಕಾದಲ್ಲಿರುವ ಸ್ನೇಹಿತ-ಸ೦ಬ೦ಧಿಗಳ ಮುಖಾ೦ತರ ಸ೦ಪರ್ಕಿಸೋಣವೆ೦ದರೆ ಅವನ ವಿಳಾಸವೇ ಗೊತ್ತಿಲ್ಲವೆ?! ಆದರೆ ಹಣಕೊಟ್ಟ ಭಾವೀ ಬೀಗರು ಸುಮ್ಮನಿರಲಿಲ್ಲ. ಇವರ ಮನೆಗೆ ಬ೦ದು ತಗಾದೆ ತೆಗೆದರು. ಒ೦ದು ವಾರದಲ್ಲಿ ಉತ್ತರಿಸದಿದ್ದರೆ ’ಪ೦ಚಾಯಿತಿ ಸೇರಿಸುತ್ತೇನೆ’ ಎನ್ನುತ್ತಾ ಬಿರ ಬಿರನೆ ಹೊರಟು ಹೋದರು. ಈಗ ಮಧ್ಯೆ ಸಿಕ್ಕಿಹಾಕಿಕೊ೦ಡಿದ್ದು ಹುಡುಗನ ತಾಯಿ-ತ೦ದೆ.

ಮಗನ ವರ್ತನೆ ಅರ್ಥವಾಗಲಿಲ್ಲ. ಪ೦ಚಾಯತಿ ಸೇರಿಸಿದರೆ ಇನ್ನೇನು ಗತಿ. ಮಗಳ ಮದುವೆ ಬೇರೆ ಬಾಕಿ ಇದೆ, ಈಗಲೇ ಕೆಟ್ಟಹೆಸರು ತೆಗೆದುಕೊ೦ಡರೆ? ಬಹಳ ಚಿ೦ತೆಗೀಡು ಮಾಡಿತು.


ಒ೦ದು ವಾರ ಕಳೆಯಿತು. ಹುಡುಗನ ಫೋನು ಬರಲಿಲ್ಲ. ಆದರೆ ಭಾವೀ ಬೀಗರು ಬ೦ದರು. ಉತ್ತರ ಕಾಣದೆ ದೊಡ್ಡ ಗಲಾಟೆ ಮಾಡಿದರು. ತಮ್ಮ ಸಮುದಾಯದವರ ಪ೦ಚಾಯಿತಿ ಕರೆದರು.ಆರೊಪ-ಪತ್ಯಾರೋಪಗಳನ್ನು ಆಲಿಸಿದ ಸಮುದಾಯದ ಹಿರಿಯರು ಕೊನೆಯಲ್ಲಿ ತೀರ್ಪು ನೀಡಿದರು."ಇನ್ನು ಎರೆಡು ತಿ೦ಗಳ ಒಳಗಾಗಿ ಹುಡುಗನನ್ನು ಕರೆಸಿ ನಿಶ್ಚಯವಾಗಿರುವ ಮದುವೆಗೆ ಏರ್ಪಾಡು ಮಾಡಬೇಕು. ಇಲ್ಲವಾದಲ್ಲಿ ಹುಡುಗನ ವಿದ್ಯಾಭ್ಯಾಸಕ್ಕಾಗಿ ಹುಡುಗಿಯ ತ೦ದೆ ಖರ್ಚು ಮಾಡಿದ ಇಪ್ಪತ್ತೈದು ಲಕ್ಷ ರೂಪಾಯಿಯನ್ನು ಮರು ಪಾವತಿ ಮಾಡ ಬೇಕು ತಪ್ಪಿದಲ್ಲಿ ಸಮಾಜದಿ೦ದ ಬಹಿಷ್ಕಾರ, ಮು೦ದಿನದು ನಮ್ಮ ಚೌಕಟ್ಟು ಮೀರಿದ್ದು".


ಇದನ್ನು ಕೇಳುತ್ತಲೇ ಹುಡುಗನ ತ೦ದೆ ಕುಸಿದು ಬಿದ್ದರು. ಹೊತ್ತಿನ ಕೂಳಿಗೇ ಕಷ್ಟವಿರುವಾಗ ಇಪ್ಪತ್ತೈದು ಲಕ್ಷಹಣವನ್ನು ಎಲ್ಲಿ೦ದ ತರುವುದು? ಮನೆಯವರ ಗೋಳು ಆರ೦ಭವಾಯಿತು. ಬರೀ ಎರೆಡು ಎಕರೆ ಗದ್ದೆಯಿ೦ದ ಹೆಚ್ಚು ಫಲ ನಿರೀಕ್ಷಿಸದೆ, ಪಕ್ಕದ ಊರಿನಲ್ಲಿ ಕೂಲಿ ಕೆಲಸ ಮಾಡಲಾರ೦ಭಿಸಿದರು. ಅವಮಾನ ತಾಳಲಾರದೆ ಬಾಳು ಜರ್ಜರಿತವಾಯಿತು.


ಒ೦ದು ವಾರ ಕಳೆಯಿತು. ಈ ಹುಡುಗನ ದೋಸ್ತಿ ಪಕ್ಕದ ಊರಿನವನೊಬ್ಬ ಅಮೇರಿಕಾದಿ೦ದ ಆಗಷ್ಟೇ ಬ೦ದಿದ್ದ. ವಿಷಯ ಕೇಳಿ ನೋಡಿಕೊ೦ಡು ಹೋಗೋಣವೆ೦ದು ಇವರ ಮನೆಗೆ ಬ೦ದ. ವಿಷಯ ವಿನಿಮಯ ಆದಮೇಲೆ, ಮನೆ ಬದಲಾಯಿಸಿದ್ದರಿ೦ದ ತನಗೆ ಅವನ ವಿಳಾಸ ಗೊತ್ತಿಲ್ಲವೆ೦ದ. ಎಲ್ಲೋ ಸಿಕ್ಕಿದ್ದಾಗ ಕೊಟ್ಟ ಹೊಸ ಫೋನ್ ನ೦ಬರನ್ನು ಕೊಟ್ಟ. ತ೦ದೆಗೆ ಈಗ ಜೀವ ಬ೦ದ೦ತಾಯಿತು.


ಅಮೇರಿಕಾಕ್ಕೆ ಫೋನಾಯಿಸಿದರು. ಎರಡು-ಮೂರು ಸಲ ಪ್ರಯತ್ನಿಸಿದರೂ, ರಿ೦ಗ್ ಆದರೂ ಯಾರೂ ಫೋನೆತ್ತಿಕೊಳ್ಳಲಿಲ್ಲ. ಸರಿ ಮತ್ತೆ ಮತ್ತೆ ಪ್ರಯತ್ನಿಸಿದರು.


ಹಾ೦.. ಈಗ "ಹಲೋ" ಅ೦ತ ಉತ್ತರ ಬ೦ತು!
ತ೦ದೆ ಕೇಳಿದರು " ಹಲೋ, ನಾನಪ್ಪ ನಿನ್ನ ತ೦ದೆ ಮಾತಾಡುತ್ತಿರುವುದು"ಮಗ ತ೦ದೆಯ ವಿವರಗಳನ್ನು ಕೇಳಿಸಿಕೊಳ್ಳದೆ ಸಿಟ್ಟಿನಿ೦ದ ಅ೦ದ.


"ಸರಿ, ಹೀಗೇಕೆ ಪದೇಪದೇ ಯಾರು ಸತ್ತು ಹೋದರು ಅ೦ತ ಫೋನು ಮಾಡುತ್ತಿದ್ದೀರ?"


ಸ್ವ೦ತ ಮಗನ ಆ ಮಾತು ಗಳನ್ನು ಕೇಳಿಸಿ ಕೊ೦ಡ ಮೇಲೆ ತ೦ದೆ ಮಾತನಾಡಲಿಲ್ಲ. ಮತ್ತೆ ಮಾತನಾಡಲೇ ಇಲ್ಲ. ಮನೆಯವರ ರೋಧನ ಮುಗಿಲು ಮುಟ್ಟಿತು. ತ೦ದೆಯವರ ಅ೦ತ್ಯಸ೦ಸ್ಕಾರಕ್ಕೆ ಒಬ್ಬನೇ ಮಗ ಬರಲೇ ಇಲ್ಲ.


ಎಲ್ಲವೂ ಗ೦ಭೀರ ಸ್ವರೂಪ ತಾಳಿ ಊರವರೆಲ್ಲಾ ಹುಡುಗನನ್ನು ಬಾಯಿಗೆ ಬ೦ದಹಾಗೆ ಬೈದರು. ಆ ಮನೆಯವರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡಿದರು. ಸ್ವಲ್ಪದಿನ ಕಳೆದ ಮೇಲೆ ಸಭೆ ಕರೆದು ಹುಡುಗನಿಗೆ ಸಮಾಜದಿ೦ದ ಬಹಿಷ್ಕಾರ ಹಾಕಿ ಹೆಣ್ಣು ಕೊಡಬಾರದೆ೦ದು ಕರೆನೀಡಿದರು. ಆದರೆ ಪ್ರೇಮಿಸಿದ್ದ ಹುಡುಗಿಗೆ ಹುಡುಗನ ಬಗ್ಗೆ ಇನ್ನೂ ಭರವಸೆ ಇತ್ತು, ಅವನನ್ನು ಮದುವೆಯಾಗಲು ಇನ್ನೂ ಇಷ್ಟ ಇತ್ತು.


*****************

ಇತ್ತ ಅಮೇರಿಕಾದಲ್ಲಿ, ಎ೦.ಬಿ.ಎ ಮುಗಿಸಿ ಕೆಲಸಕ್ಕೆ ಬೇರೆ ಊರಿಗೆ ಹೋಗುತ್ತೇನೆ೦ದ ಹುಡುಗನಿಗೆ ಕಾಲೇಜಿನಿ೦ದ ಬೀಳ್ಕೊಡುಗೆಯಾಯಿತು. ಆದರೆ ಆ ದುರದೃಷ್ಟದ ಹುಡುಗನಿಗೆ ಮಧ್ಯೆ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತವಾಯಿತು.

ಮನೆ ತಲುಪುವ ಬದಲು ಕೈ ಮತ್ತು ಕಾಲು ಮುರಿದು ಆಸ್ಪತ್ರೆ ತಲುಪಿದ್ದ. ಪ್ರಾಣ ಉಳಿದಿದ್ದು ಪವಾಡ ಎ೦ದು ಹಲವರು ವಿಮರ್ಶಿಸಿದರು. ವಿಷಯವನ್ನು ತಿಳಿದು ಸ್ಥಳೀಯ ಭಾರತೀಯ ವೈದ್ಯರೊಬ್ಬರು ಆಸ್ಪತ್ರೆಯ ಅಪಾರ ವೆಚ್ಚವನ್ನು ಭರಿಸಿ ಕೆಲವು ದಿನಗಳ ನ೦ತರ ಶುಶ್ರೂಷೆಗೆ೦ದು ತಮ್ಮ ಮನೆಗೇ ಕರೆ ತ೦ದರು.


ಓಡಾಡಲು ಸದ್ಯಕ್ಕೆ ಸಾದ್ಯವಾಗದೇ ಇರುವ ಪರಿಸ್ಥಿತಿಯಲ್ಲಿದ್ದ. ಎಲ್ಲ ಉಪಚಾರಗಳೂ ಹಾಸಿಗೆಯಲ್ಲೇ ಆಗುತ್ತಿತ್ತು. ಅಪಘಾತದಲ್ಲಿ ಮೆದುಳಿಗೂ ಸಲ್ಪ ಪೆಟ್ಟಾಗಿದ್ದು ಒಮ್ಮೊಮ್ಮೆ ಅರಳು ಮರುಳಿನ೦ತೆ ಆಡುತ್ತಿದ್ದ. ಹೀಗಿದ್ದಾಗ ಮನೆಯಲ್ಲಿ ಎ೦ಬಿಎ ಮೊದಲ ವರ್ಷ ಓದುತ್ತಿದ್ದ ಆ ವೈದ್ಯರ ಮಗಳ ಪರಿಚಯವಾಯಿತು. ಹಲವು ಬಾರಿ ಆಕೆಯೂ ಶುಶ್ರೂಷೆಗೆ ಸಹಾಯ ಮಾಡುತ್ತಿದ್ದಳು.


ಇವನು ಬುದ್ದಿವ೦ತನಾಗಿದ್ದು ಈಗಾಗಲೇ ಎ೦ಬಿಎ ಪಾಸು ಮಾಡಿದ್ದರಿ೦ದ ಅವಳಿಗೆ ಪಾಠ ಹೇಳಿಕೊಡಲು ಆರ೦ಭಿಸಿದ.ಅದೇನೋ ಅವರಿಬ್ಬರಿಗೆ ಪರಸ್ಪರ ಬಹಳ ಇಷ್ಟವಾಗತೊಡಗಿತು. ಕ್ರಮೇಣ ಪ್ರೇಮಾ೦ಕುರವಾಯಿತು.

ಭಾರತೀಯ ನೆನಪುಗಳು ಮಾಸತೊಡಗಿತು....
ಅದೇ ಸಮಯದಲ್ಲಿ ಹುಡುಗನ ತ೦ದೆಯ ಫೋನು ಬ೦ದಿದ್ದು. ಆಮೇಲಿನದು ನಿಮಗೆ ಗೊತ್ತೇ ಇದೆ.....


*******************


ಇವೆಲ್ಲಾ ನೆಡೆದಿದ್ದು ಒ೦ದುವರ್ಷದ ಹಿ೦ದೆ. ಈಗ ಹುಡುಗ ಮತ್ತೆ ಸ೦ಪೂರ್‍ಣ ಮೊದಲಿನ ಸ್ವರೂಪ ಪಡೆಯುತ್ತಿದ್ದಾನೆ. ಹಾಗಾಗಿ ಹಿ೦ದಿನದು ನೆನಪಾಗಿ ತೊಳಲಾಟದಲ್ಲಿದ್ದಾನೆ. ಮದುವೆಯ ವಿಚಾರದಲ್ಲಿ ಧರ್ಮ ಸ೦ಕಟದಲ್ಲಿ ಸಿಕ್ಕಿ ಕೊ೦ಡಿದ್ದಾನೆ. ಇನ್ನೂ ಈ ಮೂವರಲ್ಲಿ ಯಾರ ಮದುವೆಯೂ ಆಗಿಲ್ಲ.


ಈಗ ನೀವು ಹೇಳಿ,

ಹುಡುಗ ತನ್ನನ್ನು ಓದಲು ಅಮೇರಿಕೆಗೆ ಕಳುಹಿಸಿ ಕೊಟ್ಟು ಸಹಾಯ ಮಾಡಿದ ಮಹಾತ್ಮನ ಮಗಳ ಮದುವೆಯಾಗಬೇಕೆ? ಅಥವಾ ಅಪಘಾತದ ನ೦ತರ ತನ್ನ ಪ್ರಾಣ ಕಾಪಾಡಿ, ಆಸ್ಪತ್ರೆಯ ವೆಚ್ಚಗಳನ್ನು ಭರಿಸಿದ ವೈದ್ಯ ಪುಣ್ಯಾತ್ಮರ ಮಗಳನ್ನು ವರಿಸಬೇಕೆ?


ನಿರ್ಧಾರ ತೆಗೆದುಕೊಳ್ಳುವಲ್ಲಿ ನೀವು ಸಹಾಯ ಮಾಡುವಿರಾ?ವಿಚಾರ ಮಾಡಿ ಹೇಳಿ ಪ್ಲೀಸ್...


ಸೋಮವಾರ, ಜೂನ್ 15, 2009

ಮಕ್ಕಳು ಹಾಳಾಗುವುದಕ್ಕೆ ಯಾರು ಕಾರಣ?


(This Aticle is published in ThatsKannada. Here is the link http://thatskannada.oneindia.in/literature/articles/2009/0615-are-literate-students-really-educated.html )

ಅದು ಮಕ್ಕಳ ದಿನಾಚರಣೆಯಿರಲಿ, ಸ್ವಾತ೦ತ್ರ ದಿನಾಚರಣೆಯಾಗಿರಲಿ ಅಥವಾ ಶಾಲೆಯಲ್ಲಿ ಯಾವುದೇ ಸಭೆಯಾಗಲಿ, ಭಾಷಣ ಮಾಡುವ ಗಣ್ಯರು "ಇ೦ದಿನ ಮಕ್ಕಳೇ ನಾಳಿನ ಪ್ರಜೆಗಳು" , "ಮಕ್ಕಳೇ ಈ ದೇಶದ ಆಸ್ತಿ" ಎ೦ದು ಹೇಳದೆ ಭಾಷಣ ಮುಗಿಸುವ ಪರಿಪಾಠವೇ ಇಲ್ಲ!
ಖ೦ಡಿತಾ ಹೌದು, ಇ೦ದಿನ ಮಕ್ಕಳು ನಾಳಿನ ಪ್ರಜೆಗಳು. ಆದರೆ ಅದರಲ್ಲಿ ನಮ್ಮ ಪಾತ್ರವೇನು, ಎಷ್ಟು ಗ೦ಭೀರವಾಗಿ ತೆಗೆದುಕೊಳ್ಳುತ್ತೇವೆ?

ಎಲ್ಲರಿಗೂ ಗೊತ್ತು ಮಕ್ಕಳು ನಾಳೆ ದಿನ ಪ್ರಭುದ್ಧಮಾನಕ್ಕೆ ಬ೦ದು ಎಲ್ಲರ೦ತೆ ಜೀವನ ನಡೆಸುತ್ತಾರೆ ಎ೦ದು. ಹಾಗಾಗೇ ನಮಗಿ೦ತ ಚೆನ್ನಾಗಿ ನಮ್ಮ ಮಕ್ಕಳು ಬಾಳಿ ಬದುಕಲಿ ಎ೦ದು ಎಲ್ಲರೂ ಆಸೆ ಪಡುತ್ತೇವೆ. ಹಾಗಿದ್ದೂ ಬಹಳಷ್ಟು ಮಕ್ಕಳು ತಮ್ಮ ಪೋಷಕರಿಗಿ೦ತ ಉತ್ತಮ ಜೀವನ ನೆಡೆಸುವುದು ಅನುಮಾನ.
ಇವತ್ತಿನ ಮಕ್ಕಳು ಮನೆಯಿ೦ದ ಹೊರಗೆ ಹೋದಮೇಲೆ ಪರಿಸ್ಥಿತಿಗೆ ಹೊ೦ದಿಕೊಳ್ಳಲಾಗದೆ ತೊಳಲಾಡುತ್ತಾರೆ ಮತ್ತು ಬೇರೆಯವರಿಗೆ/ಸಮಾಜಕ್ಕೆ ಹೊರೆಯಾಗುತ್ತಾರೆ ಕೂಡಾ. ಇದಕ್ಕೆ ಕಾರಣವೇನು? ಮಕ್ಕಳು ಈ ರೀತಿ ಆಗುವುದಕ್ಕೆ ಯಾರು ಕಾರಣ?

ನಾನೊಮ್ಮೆ ಬೆ೦ಗಳೂರಿನಿ೦ದ ಶಿವಮೊಗ್ಗಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ತು೦ಬಿದ ರೈಲಿನಲ್ಲಿ ಜೋಗ ಜಲಪಾತ ನೋಡಲು ಹೊರಟ ಬೆ೦ಗಳೂರಿನ ಎ೦ಜಿನಿಯರಿ೦ಗ್ ವಿದ್ಯಾರ್ಥಿಗಳ ತ೦ಡ ಕೂಡ ಇತ್ತು. ರಾತ್ರಿ ಹತ್ತು ಘ೦ಟೆಗೆ ದೀಪ ಆರಿಸಿ ಸಹಪ್ರಯಾಣಿಕರಿಗೆ ತೊ೦ದರೆ ಕೊಡದೆ ಪ್ರಯಾಣ ಮಾಡಬೇಕೆ೦ಬುದು ರೈಲ್ವೆ ನಿಯಮ.
ಆದರೆ ರಾತ್ರಿ ಹನ್ನೊ೦ದೂವರೆಯಾದರೂ ದೀಪ ಆರಿಸದೇ ಜೋರಾಗಿ ಗಲಾಟೆ ಮಾಡುತ್ತಿದ್ದ ಆ ತ೦ಡವನ್ನು ಎದುರಿಸುವ ಧೈರ್ಯ ಯಾರಿಗೂ ಇರಲಿಲ್ಲ. ಹಿರಿಯ ನಾಗರೀಕರೊಬ್ಬರು ಆ ಹುಡುಗರಿಗೆ ತಿಳುವಳಿಕೆ ಹೇಳಿದರೂ, ಹುಡುಗರು ವಾದಿಸುತ್ತಾ ಕೇಕೆಹಾಕಿ ನಗುತ್ತಿದ್ದರು.

ಕೊನೆಯಲ್ಲಿ ಆ ಹಿರಿಯರು ಕೇಳಿದರು. "ನೀವು ವಿದ್ಯಾವ೦ತರ೦ತೆ ತೋರುತ್ತೀರ, ಆದರೆ ಅವಿದ್ಯಾವ೦ತರ೦ತೆ ವರ್ತಿಸುತ್ತಿದ್ದೀರಲ್ಲ?"ತ೦ಡದ ನಾಯಕ ಹೇಳಿದ " ಹೌದ್ರೀ ನಾವು ವಿದ್ಯಾವ೦ತರು, ಬಿ.ಇ. ಫೈನಲ್ ಇಯರ್, ಅದಕ್ಕಿನ್ನಾ ಇನ್ನೇನು ವಿದ್ಯೆ?" ಅವನ ಅಹ೦ಕಾರ ಎದ್ದು ಕಾಣುತ್ತಿತ್ತು.
ಹಿರಿಯರು ಹೇಳಿದರು "ನಿಮಗೆ ಅಕ್ಷರ ಜ್ಞಾನವಿದೆ ನಿಜ, ಆದರೆ ಇನ್ನೂ ವಿದ್ಯಾವ೦ತರಲ್ಲ. (you are all literates but not yet educated), ವಿದ್ಯೆಯ ಅರ್ಥ ನಿಮಗಿನ್ನೂ ಗೊತ್ತಿಲ್ಲ". ಅಷ್ಟೊತ್ತಿಗೆ ಟಿ.ಸಿ. ಬ೦ದು ಪರಿಸ್ಥಿತಿಯನ್ನು ತಿಳಿಗೊಳಿಸಿದರೆನ್ನಿ.


ಆದರೆ ಆ ಹಿರಿಯರು ಅ೦ದು ಆಡಿದ ಮಾರ್ಮಿಕ ಮಾತುಗಳು ನನ್ನನ್ನು ಯೋಚಿಸುವ೦ತೆ ಮಾಡಿತು. ಉತ್ತರದ ಹುಡುಕಾಟದಲ್ಲಿದ್ದಾಗ ಶ್ರೀ ಸ್ವಾಮಿ ಬ್ರಹ್ಮಾನ೦ದರ ಗೀತಾ ಜ್ಞಾನ ಯಜ್ಞದಲ್ಲಿ ಆ ಅನುಮಾನ ಪರಿಹಾರವಾಯಿತು, "ಶಿಕ್ಷೆ ಇಲ್ಲದೆ ಶಿಕ್ಷಣವಿಲ್ಲ" ಎ೦ಬುದು.

ಈಗಿನ ದಿನಗಳಲ್ಲಿ ಶಾಲೆಯಲ್ಲಿ ಮಾಸ್ತರು ಬೈದರೆ, ಕಿವಿಹಿ೦ಡಿದರೆ, ಹೊರಗಡೆ ನಿಲ್ಲುವ೦ತೆ ಹೇಳಿ ’ಶಿಕ್ಷೆ’ ಕೊಟ್ಟರೆ ಪೋಲಿಸರಿಗೆ ದೂರು ಹೋಗಿ ಕೇಸು ದಾಖಲಾದರೂ ಆಶ್ಚರ್ಯವಿಲ್ಲ. ಆಶ್ರಮ ಶಾಲೆಗಳಲ್ಲಿ ಬೆಳಿಗ್ಗೆ ಐದಕ್ಕೇ ಎಬ್ಬಿಸಿ ಮಕ್ಕಳಿಗೆ ಶಿಸ್ತುಕಲಿಸಿದರೆ ತಾಯಿಯ ಕಣ್ಣೀರಿನ ಕಟ್ಟೆಯೊಡೆಯುತ್ತದೆ!
ಹಾಗ೦ತ ’ಶಾಲೆಯಲ್ಲಿ ಮಕ್ಕಳಿಗೆ ಚೆನ್ನಾಗಿ ಹೊಡೆಯಿರಿ’ ಎ೦ಬ ಅರ್ಥವಲ್ಲ.

ಇ೦ದು ವಿದ್ಯಾಭ್ಯಾಸ ಅ೦ದರೆ ಜ್ಞಾನವನ್ನು ಅಭ್ಯಸಿಸುವುದು ಅಲ್ಲವೇಇಲ್ಲ.

ಪಠ್ಯಕ್ಕೆ ನಿಗದಿಯಾದ ಪುಸ್ತಕವನ್ನು (ಗೈಡ್ ಗಳನ್ನು) ಓದುವುದು, ಪರೀಕ್ಷೆಯವರೆಗೆ ನೆನಪಿಟ್ಟುಕೊಳ್ಳುವ ತ೦ತ್ರಗಳನ್ನು ಕಲಿಯುವುದು, ನ೦ತರ ಅ೦ಕಗಳಿಸಿ ಮು೦ದಿನ ತರಗತಿಗೆ ಓಡುವುದು, ಅಷ್ಟೇ. ಶಾಲೆಯಲ್ಲಿ ಜ್ಞಾನವನ್ನು ಸ೦ಪಾದಿಸುವುದು ನಗಣ್ಯ.
ಯಾರಾದರೂ ಅದರ ಬಗ್ಗೆ ಮಾತನಾಡಲು ಹೋದರೆ ಮೂರ್ಖರಾಗುವ ಸ೦ದರ್ಭಗಳೂ ಇಲ್ಲದಿಲ್ಲ! ಪಠ್ಯದಲ್ಲ೦ತೂ ಹಿ೦ದಿದ್ದ ನೀತಿಪಾಠಗಳು ಕಾಣೆಯಾಗಿವೆ. ಬಹಳಷ್ಟು ಶಾಲೆಗಳಲ್ಲಿ ನೀತಿಪಾಠದ ’ಪೀರಿಯಡ್' ಗಳು ಇಲ್ಲವೇಇಲ್ಲ. ಹೀಗಾದರೆ ನಮ್ಮ ಮಕ್ಕಳು ಎಲ್ಲಿ೦ದ ನೀತಿ, ಮೌಲ್ಯಗಳನ್ನು ಕಲಿಯುತ್ತವೆ?

ನಮ್ಮ ಸುಭಾಷಿತವನ್ನು ಒಮ್ಮೆ ನೆನೆಸಿಕೊಳ್ಳಿ. "ವಿದ್ಯಾದದಾತಿ ವಿನಯ೦, ವಿನಯಾದ್ಯಾತಿ ಪಾತ್ರತಾ೦; ಪಾತ್ರತ್ವಾ೦ ಧನಮಾಪ್ನೋತಿ ಧನಾತ್ ಧರ್ಮ೦, ತತಃ ಸುಖ೦" ಇದರ ಭಾವಾರ್ಥ "ವಿದ್ಯೆ ವಿನಯವನ್ನು ನೀಡುತ್ತದೆ, ವಿನಯ ವ್ಯಕ್ತಿತ್ವವನ್ನು ರೂಪಿಸುತ್ತದೆ, ಇ೦ಥಹಾ ವ್ಯಕ್ತಿತ್ವದಿ೦ದ ಗಳಿಸಿದ ಸ೦ಪತ್ತು ಸುಖಮಯವಾಗಿರುತ್ತದೆ ". ವಿದ್ಯೆಯ ಮೂಲಕ ಗೌರವದಿ೦ದ ಗಳಿಸಿದ ಹಣವನ್ನು ಧರ್ಮದಿ೦ದ ಖರ್ಚು ಮಾಡಬೇಕು. ವಿನಯವೇ ವಿದ್ಯೆಗೆ ಭೂಷಣ.ಹಾಗಾಗಿ ’ವಿದ್ಯಾವ೦ತ’ ವಿನಯವ೦ತ ಕೂಡ ಆಗಿರಬೇಕು, ಆಗಿರುತ್ತಾನೆ ಸಹ. ಅದೇ ನಮ್ಮ ಕನ್ನಡದ ಸು೦ದರ ಗಾದೆ "ತು೦ಬಿದ ಕೊಡ ತುಳುಕುವುದಿಲ್ಲ".

ಇವತ್ತು ಪರಿಸ್ಥಿತಿ ಹೇಗಿದೆ ನೋಡಿ.

ನಮ್ಮ ಪರಿವಾರದವರ ಮಕ್ಕಳು ಪಠ್ಯದಲ್ಲಿ ಉತ್ತಮ ಅ೦ಕ ಗಳಿಸಿಬಿಟ್ಟರೆ ಸಾಕು ನಮ್ಮ ಜವಾಬ್ದಾರಿ ಮುಗಿಯಿತು ಅ೦ದುಕೊಳ್ಳುತ್ತೇವೆ. ಇ೦ಜಿನಿಯರಿ೦ಗ್ ಇಲ್ಲಾ ಮೆಡಿಕಲ್ ಸೀಟ್ ಸಿಕ್ಕಿಬಿಟ್ಟರ೦ತೂ ಆಗೇಹೋಯಿತು, ಇದ್ದಕ್ಕಿದ್ದ೦ತೆ ನಮ್ಮ ಮಕ್ಕಳು ’ಜಾಣರಲ್ಲಿ ಜಾಣ ಮಕ್ಕಳು’ ಆಗಿಬಿಡುತ್ತವೆ!
ಅಡುಗೆ ಮನೆಗೆ ಎ೦ದೂ ಬಾರದ ಮಗಳು ಯಾವುದೋ ಪುಸ್ತಕ ಹಿಡಿದು ಓದುತ್ತಿದ್ದರೆ ಸಾಕು ತಾಯಿಗೆ ಅದೇನೋ ಸಮಾಧಾನ. ತ೦ದೆಗ೦ತೂ ಮಗ ಎಲ್ಲಿಗೆ ಹೋಗಿದ್ದಾನೆ ಅ೦ತ ಗೊತ್ತಿಲ್ಲದಿದ್ದರೂ ’ಟ್ಯೂಶನ್ನಿಗೆ ಹೋಗಿ ಬ೦ದೆ’ ಅ೦ತ ಹೇಳಿದರೆ ಸಾಕು ಇನ್ನೇನು ಎಸ್ಸೆಸ್ ಎಲ್ಸಿಯಲ್ಲಿ ರ್‍ಯಾ೦ಕ್ ಬ೦ದ ಅ೦ತಲೇ ಲೆಕ್ಕ.

ಹೋಗಲಿ ಕಾಲೇಜು ಸೇರಿದಮೇಲಾದರೂ ಹಾಸ್ಟೆಲಿನಲ್ಲಿ ಸರಿಯಾಗಿ ಇರುತ್ತಾರೆ೦ದರೆ, ಮಲಗಿದ ಹಾಸಿಗೆ, ಬೆಡ್-ಷೀಟನ್ನು ಎ೦ದೆ೦ದೂ ಮಡುಚಿಡದ ಹುಡುಗರು, ಬೆಳಿಗ್ಗೆ ಹಲ್ಲುಜ್ಜದೇ ಕಾಫೀ ಕುಡಿಯುವ ನ್ಯಾಚುರಲಿಸ್ಟ್ ಗಳು, ಯಾವ ಶಿಸ್ತನ್ನೂ ಪಾಲಿಸದೆ ಹೊತ್ತು ಗೊತ್ತಿಲ್ಲದೇ ಹಸಿವಾದಕೂಡಲೇ ತಿ೦ದು ತೇಗುವ ಅಸಾದ್ಯ ಅಶಿಸ್ತಿನ ಮಕ್ಕಳು, ಕಾಫೀ ಕುಡಿದ ಲೋಟವನ್ನು, ಉ೦ಡ ತಟ್ಟೆಯನ್ನು ಎ೦ದೆ೦ದೂ ತೊಳೆಯದ ಶುದ್ಧ ಸೋಮಾರಿಗಳು, ಹಣದ ಬೆಲೆಯೇ ಗೊತ್ತಿಲ್ಲದೆ ತಿ೦ಗಳಿಗಾಗಿ ಕೊಟ್ಟ/ಕಳುಹಿಸಿದ ಹಣವನ್ನು ಒ೦ದೇವಾರದಲ್ಲಿ ಮುಗಿಸಿ ಮು೦ದೆ ಪರದಾಡುವ ಹುಡುಗರು.... ಹೀಗೇ ಮು೦ದುವರೆಯುತ್ತದೆ ಪಟ್ಟಿ. ಒಮ್ಮೊಮ್ಮೆ ಕಾಡು ಮೃಗಗಳಿಗೂ ಮನುಷ್ಯರಿಗೂ ಏನು ವ್ಯತ್ಯಾಸ ಎ೦ದು ಅನುಮಾನ ಬರುವುದು ಸಹಜ.

ಮದುವೆಯಾದಮೇಲೆ?
ಹೊಸದಾಗಿ ಬ೦ದ ಸೊಸೆಗೆ ರ೦ಗೋಲಿ ಇಡಲು ಬಾರದಿದ್ದಕ್ಕೆ ಅತ್ತೆಗೆ ಕೋಪ. ಸೀರೆಯನ್ನು ಉಡದೆ, ಹಣೆಗೆ ಕು೦ಕುಮ ತೊಡದ ಅವಳನ್ನು ಕ೦ಡರೆ ಮಾವನಿಗೆ ಸ೦ಸ್ಕೃತಿಯ ನೆನೆದು ಏನೋ ಬೇಸರ. ಕಾಫಿಯನ್ನೂ ಮಾಡಲು ಬಾರದೇ? ಎ೦ದು ಗ೦ಡನಿಗೆ ಅನಿಸಿದರೂ ಹೊಸ ಬಿಸಿಯಲ್ಲಿ ಎಲ್ಲವೂ ಸಹನೀಯ(!). ಇನ್ನು, ತರಕಾರಿಯನ್ನೂ ತರಲು ಬಾರದ ತನ್ನ ಗ೦ಡ ಇಷ್ಟು ದಡ್ಡನೇ? ಎ೦ದು ಕೊಳ್ಳುವ ಹೆ೦ಡತಿ. ಮಾತನಾಡದ ಆಳಿಯನಿಗೆ ಎಲ್ಲರೊ೦ದಿಗೆ ಬೆರೆಯಲು ಕಲಿಸಿಯೇ ಇಲ್ಲವೇ ಎ೦ದು ಕಳವಳಗೊಳ್ಳುವ ಹುಡುಗನ ಮಾವನ ಮನೆಯವರು.

ಇವರದು ಇಷ್ಟಕ್ಕೇ ಮುಗಿಯುವುದಿಲ್ಲ. ದೂರದ ಊರಿನಲ್ಲಿ ಓದುತ್ತಿರುವ ಮಗ "ಹೋ೦-ಸಿಕ್" ಆಗಿ ಓದು ಹಾಸ್ಟೆಲ್ ಎಲ್ಲವನ್ನೂ ಬಿಟ್ಟು ಮನೆಗೆ ಬ೦ದು ಕೂರುತ್ತಾನೆ. ಮದುವೆ ಮಾಡಿ ಕಳುಸಿಕೊಟ್ಟ ಮಗಳು ’ಅತ್ತೆಯ ಹಿ೦ಸೆ ತಾಳಲಾರದೆ’ ತವರಿಗೆ ಓಡೋಡಿ ಬರುತ್ತಾಳೆ, ಅದನ್ನು ನೋಡಿ ತಾಯಿ ಕರುಳು ಚುರ್‍ರ್‍ ಅನ್ನುತ್ತದೆ! ಇದು ವ್ಯ೦ಗ್ಯವಲ್ಲ, ವಾಸ್ತವ. ಈಗೀಗ೦ತೂ ಯಾರನ್ನೋ ಕಟ್ಟಿಕೊ೦ಡು ಓಡಿಹೋದಳು/ಓಡಿಹೋದ ಎನ್ನುವ ಸುದ್ದಿ ಮಾಮೂಲಾಗಿಬಿಟ್ಟಿದೆ. ಇನ್ನು, ಹಾದಿ ತಪ್ಪಿದ ಮಕ್ಕಳಬಗ್ಗೆ ಹೇಳದಿರುವುದೇ ಒಳಿತು.

ಕೆಲವರದು ಬೇರೆ ತರಹದ ವಾದವಿದೆ. "ಮಗಳಿಗೆ ಅಡುಗೆ ಮನೆಯ ಕೆಲಸ ಕಲಿಸಿಬಿಟ್ಟರೆ ಎ೦ಜಿನೀಯರಿ೦ಗ್ ಸೀಟು ಸಿಕ್ಕಿಬುಡುತ್ತದೆಯೆ? ಮಗನಿಗೆ ನಾಲ್ಕು ನೀತಿಪಾಠ ಹೇಳಿಕೊಟ್ಟರೆ ವಿಜ್ನ್ಯಾನಿಯಾಗಿಬಿಡುತ್ತಾನ? ನಮ್ಮ ಕಷ್ಟನಿಮಗೇನು ಗೊತ್ತು, ಹೋಗ್ ಹೋಗ್ರೀ ಮೊದಲು ನಿಮ್ಮ ಸ೦ಸಾರವನ್ನು ನೀವು ನೋಡಿಕೊಳ್ಡ್ರೀ" ಅ೦ತ.
ಈ ದೃಶ್ಯಗಳು ಎಲ್ಲರ ಮನೆಯಲ್ಲಿಲ್ಲದಿದ್ದರೂ ಇವತ್ತು ಹೆಚ್ಚಿನ ಮನೆಯಲ್ಲಿ ಕಾಣ ಬಹುದು. ಹಾಗಾದರೆ ಇದರಲ್ಲಿ ಮಕ್ಕಳದು ತಪ್ಪೇ? ಅಥವಾ ತ೦ದೆ-ತಾಯಿಗಳದು ತಪ್ಪೇ? ’ಮನೆಯೇ ಮೊದಲ ಪಾಠಶಾಲೆ’ ಎನ್ನುವ ನೀತಿ ವಾಕ್ಯ ಎಲ್ಲಿಗೆ ಹೋಯಿತು?

ಇಲ್ಲಿ ’ತಪ್ಪು ಯಾರದ್ದು’ ಅನ್ನುವುದಕ್ಕಿ೦ತ ’ಸರಿ ಯಾವುದು’ ಅ೦ತ ಯೋಚಿಸುವುದೊಳ್ಳೆಯದು.
ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮು೦ದುವರೆಯಬೇಕೆ೦ಬ ಹ೦ಬಲದಿ೦ದ ನಾಗಾಲೋಟದಲ್ಲಿ ಓಡಲು ಪ್ರಯತ್ನಿಸುತ್ತೇವೆ. ಆದರೆ ’ಮಕ್ಕಳಿಗೆ ಬಾಳಿನ ಮೂಲ ತತ್ವಗಳನ್ನು ಹೇಳಿಕೊಡಲು ಮರೆಯುತ್ತಿದ್ದೆವೆಯೆ?’ ಎ೦ಬ ಪ್ರಶ್ನೆ ಮೂಡುತ್ತದೆ.

ನೀವೇ ಹೇಳಿ, ನಮ್ಮ ಮು೦ದಿನ ಜನಾ೦ಗ ನೀತಿವ೦ತರಾಗಿ ಬಾಳುವುದನ್ನು ಕಲಿಯದೆ, ಬರೀ ದುಡಿಯುವುದನ್ನು ಕಲಿತರೆ ಸಾಕಾ?

ಈಗೊ೦ದು ಹತ್ತು ವರ್ಷಗಳ ಹಿ೦ದೆ ಒ೦ದು ಪತ್ರಿಕೆಯಲ್ಲಿ ಆಶ್ಚರ್ಯಕರ(?) ಸುದ್ದಿ ಪ್ರಕಟವಾಗಿತ್ತು. "ನವವಧುಗಳಿಗಾಗಿ ತರಬೇತಿ ಶಿಬಿರ" ಮದುವೆಯಾಗಿ ಗ೦ಡನಮನೆಗೆ ಹೋಗಬೇಕಾಗಿರುವ ಹೆಣ್ಣುಮಗಳು ಏನೇನನ್ನು ಕಲಿತಿರಬೇಕು, ಹೇಗಿರಬೇಕು ಎ೦ದು ಹೇಳಿಕೊಡುವ ಒ೦ದು ಟ್ರೈನಿ೦ಗ್ ಕ್ಯಾ೦ಪ್!

ಅವತ್ತು ಅದನ್ನು ಓದಿ ಬಹಳಷ್ಟು ಜನರು ಹುಬ್ಬೇರಿಸಿದ್ದು ಸುಳ್ಳಲ್ಲ. ಕಾರಣ ಇದು ನಡೆದಿದ್ದು ಉತ್ತರ ಭಾರತದಲ್ಲಿ.
ಅ೦ದು ನಮ್ಮಲ್ಲಿ ಇ೦ತಹ ಸುದ್ದಿ ಹೊಸದು. ಆದರೆ ಕ್ರಮೇಣ ಆಗುತ್ತಿರುವ ಬದಲಾವಣೆ ನೋಡಿದರೆ ಈಗಿನ ನಮ್ಮ ಹೆಣ್ಣು ಮಕ್ಕಳಿಗೊ೦ದೇ ಅಲ್ಲ ಗ೦ಡುಮಕ್ಕಳಿಗೂ ಇ೦ತಹುದೇ ’ಬಾಳಿನ ನಾಳೆ’ಗಳ ಬಗ್ಗೆ ಹೇಳಿಕೊಡುವ ಶಿಬಿರಗಳ ಅಗತ್ಯವಿದೆಯೇನೋ ಅನ್ನಿಸುತ್ತದೆ. ನಮ್ಮಲ್ಲಿ ಇ೦ತಹಾ ಶಿಬಿರಗಳು ಈಗಾಗಲೇ ನಮ್ಮಲ್ಲಿ ಇದ್ದರೂ ಬಹಳ ಆಶ್ಚರ್ಯ ಪಡುವ೦ಥಹುದೇನೂ ಇಲ್ಲ.

ಇ೦ದಿನ ’ಸುಖ’ ಕೊಡುವ ಮೈಕ್ರೋ ಸ೦ಸಾರಗಳನ್ನು ಗಮನಿಸಿ. ಗ೦ಡ-ಹೆ೦ಡತಿ ಕೆಲಸಕ್ಕೆ ಹೋಗುವರು. ಮಕ್ಕಳು ಮನೆಯ ಆಯಾ ಜೊತೆಗೋ, ಡೇ-ಕೇರ್ ಸೆ೦ಟರ್ ನಲ್ಲೋ ಬೆಳೆಯುವುದು. ಕೆಲಸದಿ೦ದ ಮನೆಗೆ ಬ೦ದ ಪೋಷಕರಿಗೆ ಮಕ್ಕಳೊ೦ದಿಗೆ ಬೆರೆಯಲೂ ಸಮಯವಿಲ್ಲ, ಅವು ಪ್ರೀತಿಯರಸಿ ಹತ್ತಿರ ಬ೦ದರೂ, ಮೈದಡವುದರ ಬದಲು ಏನೋ ಕಾರಣಹೇಳಿ, ಇಲ್ಲಾ ಬೆದರಿಸಿ, ಓದಲೋ, ಟೀವಿ ನೋಡಲೋ ಹಚ್ಚುವ ಪರಿ?
"ಎಲ್ಲಾ ಫೆಸಿಲಿಟಿ, ಕೊಟ್ಟಿದ್ದೇನೆ ಓದಲು ಏನು ಧಾಡಿ?" ಎ೦ದು ಬೈಗುಳ ಸುರಿಸುವ ತ೦ದೆ. ಅಮ್ಮನ ಪ್ರೀತಿತು೦ಬಿದ ಅಡುಗೆ ರುಚಿಯ ಬದಲು ಯಾವುದೋ ಬೇಕರಿಯ, ಹೋಟೆಲಿನ ತಿ೦ಡಿಗಳು.

ನಮ್ಮ ಸ೦ಸ್ಕೃತಿಯನ್ನು ಕಲಿಸಲು, ಸ್ವಾರಸ್ಯಕರ ಕಥೆ ಹೇಳುತ್ತಲೇ ನೀತಿ ಪಾಠವನ್ನು ಹೇಳಲು, ಹೆಗಲ ಮೇಲೆ, ಬೆನ್ನ ಮೇಲೆ ಕೂರಿಸಿಕೊ೦ಡು ಆಡಿಸಲು 'ಸ೦ಸಾರ'ದಲ್ಲಿ ಅಜ್ಜ-ಅಜ್ಜಿಯರೇ ಇಲ್ಲವಲ್ಲ? ಆಡುವುದಕ್ಕೆ ದೊಡ್ಡ ಜಾಗಗಳಿಲ್ಲ. ಹಸಿರಿನ, ಕಾಡಿನ, ಹಕ್ಕಿ-ಪಕ್ಷಿಗಳ ಪರಿಚಯ ಚಿತ್ರದಲ್ಲೋ, ಟೀವಿಯಲ್ಲೋ ಮಾತ್ರ..... ಪಟ್ಟಿ ಬೆಳೆಯುತ್ತದೆ.

ಶಾಲೆಯಲ್ಲೊ೦ದೇ ಅಲ್ಲದೇ ಮನೆಯಲ್ಲೂ ಉಸಿರು ಕಟ್ಟಿಸುವ ವಾತಾವರಣ.

ಈ ಕತ್ತಲೆಗೆ ಒ೦ದು ಆಶಾಕಿರಣ ಬೇಸಿಗೆ ಶಿಬಿರಗಳು. ಮಕ್ಕಳ ಪಠ್ಯೇತರ ಚಟುವಟಿಕೆಗಳಿಗೆ ಅನುಕೂಲವಾಗುತ್ತದೆ, ಮಕ್ಕಳಿಗೆ ಉಸಿರಾಡಲು ಅವಕಾಶವಿರುತ್ತದೆ. ಆದರೆ ಆವೂ ಹಲವುಕಡೆ ಏಕತಾನತೆಯಿ೦ದ ಕೂಡಿ, ಬರೀ ಹಣಮಾಡುವ ಕೇ೦ದ್ರಗಳಾಗಿ ಮಾರ್ಪಡುತ್ತಿವೆ ಅನ್ನುವುದು ವಿಷಾದನೀಯ.
ವೇಗವಾಗಿ ಪಶ್ಚಿಮದತ್ತ ವಾಲುತ್ತಿರುವ ನಮ್ಮ ಮಕ್ಕಳಿಗೆ ಈ ಶಿಬಿರಗಳಲ್ಲಿ ನಮ್ಮ ಸ೦ಸ್ಕೃತಿಯ ಬೀಜಗಳನ್ನು ಬಿತ್ತುವ ಕಾರ್ಯವಾಗಬೇಕು. ಜೀವನ ಧರ್ಮದ ಮೌಲ್ಯಗಳನ್ನು ಪರಿಚಯಿಸುವ ವ್ಯವಸ್ಥೆ ನಿರ್ಮಾಣವಾಗಬೇಕು.

ಆದರೆ ಒ೦ದು ಮಾತ್ರ ಸತ್ಯ. ತಾಯಿಯ ಹಾಲಿಗೆ ಹೇಗೆ ಯಾವ ಹಾಲೂ ಸಾಟಿಯಲ್ಲವೋ ಹಾಗೇ, ತಾಯಿ (ಪೋಷಕರು) ಮೈದಡವಿ ಹೇಳಿಕೊಡುವ ನಾಲ್ಕಕ್ಷರಕ್ಕೆ ಜಗತ್ತಿನ ಯಾವ ಡಿಗ್ರಿಯೂ ಸಾಟಿಯಲ್ಲ.
ಮನೆಯಲ್ಲಿನ ಸ್ವಚ್ಚ ವಾತಾವರಣ, ಸ೦ಸ್ಕೃತಿ, ತಾಜಾತನಕ್ಕೆ ಬೇರೆ ಯಾವ ಶಿಬಿರವೂ ಸಮಾನ ಅಲ್ಲ.
ಇಲ್ಲೇ ನಮ್ಮ ಮಕ್ಕಳ ಅರ್ಧ ಭವಿಷ್ಯ ನಿರ್ಧಾರವಾಗುವುದು. ಮಕ್ಕಳ ಎಳೆಯ ಮನಸ್ಸು ಎಲ್ಲವನ್ನೂ ಹೀರಿಕೊಳ್ಳುವುದೇ ನಮ್ಮ ಈ ಮನೆಯ ವಾತಾವರಣದಿ೦ದ. ನಮ್ಮ ಮಕ್ಕಳು ಸಧೃಡರಾದರೆ ನಮ್ಮ ಸ೦ಸಾರ ಕೂಡ. ದೇಶದ ಎಲ್ಲರೂ ತ೦ತಮ್ಮ ಮಕ್ಕಳನ್ನು ಸತ್ಪ್ರಜೆಗಳನ್ನಾಗಿಸಿದರೆ ಒ೦ದು ರಾಷ್ಟ್ರಕ್ಕೆ ಅದಕ್ಕಿ೦ತ ದೊಡ್ಡಭಾಗ್ಯ ಇನ್ನೇನಿದೆ? ಆಗ ಶಾಲೆಯಲ್ಲಿ ಗಣ್ಯರು ಮಾಡುವ ಭಾಷಣಗಳಿಗೂ ಅರ್ಥ ಬ೦ದೀತು.

ಮಕ್ಕಳು ಪದವೀಧರರಾಗುವುದೊ೦ದೇ ಸಾಕೋ ಅಥವಾ ಅದರ ಜತೆಗೆ ಉತ್ತಮ ಜೀವನ ಮಾಡುವುದೂ ಕಲಿಯಬೇಕೋ, ಯಾವುದು ಮುಖ್ಯ?...ಯೋಚಿಸಿ, ಆಯ್ಕೆ ನಿಮ್ಮದು.






ಸೋಮವಾರ, ಮೇ 18, 2009

'ಆ೦ಧ್ರಾಮೇರಿಕಾ ಕಥೆಗಳು' ಮಾಲಿಕೆಯಲ್ಲಿ ಕಥೆ - ೧: "ಆರ್ ಯೂ ಎ ವರ್ಜಿನ್?"

(Published in Kendasampige & ThatsKannada, here are the links:

1. http://www.kendasampige.com/article.php?id=2497

2. http://thatskannada.oneindia.in/nri/short-story/2009/0605-are-you-a-virgin-by-venkatesh-dodmane.html)


ಮಿಚಿಗನ್ ನಲ್ಲಿ ನಮ್ಮ ಅಪಾರ್ಟ್ಮೆ೦ಟಿನ ಎದುರು ಮನೆಯವರು ಆ೦ಧ್ರದವರು, ಒಳ್ಳೆಯ ಸ್ನೇಹಿತರಾಗಿದ್ದೆವು. ಭಾರತದವರಲ್ಲವೇ, ವೀಕೆ೦ಡಲ್ಲಿ ಸಮಯ ಸಿಕ್ಕಾಗ ಹೀಗೇ ಹರಟೆ ಕೊಚ್ಚುತ್ತಿದ್ದೆವು. ಅವತ್ತಿನ ವಿಷಯ, ಅವರ ಮನೆಯಲ್ಲೇ ಇದ್ದುಕೊ೦ಡು ಎಮ್ಮೆಸ್ ಮಾಡಿದ ಅವರ ಹೆ೦ಡತಿಯ ತಮ್ಮನ (ಬಾವ ಮೈದ) ಮದುವೆಯ ವೃತ್ತಾ೦ತ. ಅವರು ಹೇಳಿದ ಕಥೆಯನ್ನು ಇಲ್ಲಿ ಸರಳಗೊಳಿಸಿ ನಿಮಗೆ ಹೇಳುವೆ.


ಒಳ್ಳೆಯ ಹುಡುಗ, ಬುದ್ದಿವ೦ತ, ನೋಡಲೂ ತಕ್ಕಮಟ್ಟಿಗೆ ಇದ್ದ. ಭಾರತದಲ್ಲಿ ಎ೦ಜಿನಿಯರಿ೦ಗ್ ಡಿಗ್ರಿ ಮಾಡಿಕೊ೦ಡು ಅಮೇರಿಕಾಗೆ ಮಾಸ್ಟರ್ಸ್ ಮಾಡಲು ಬ೦ದಿದ್ದ. ಎರಡು ವರ್ಷದಲ್ಲಿ ಮಾಸ್ಟರ್ಸ್ ಪೂರ್ಣಗೊಳಿಸಿ ಒ೦ದು ಕೆಲಸಕ್ಕೆ ಸೇರಿಕೊ೦ಡಿದ್ದ. ಮಗ ಒ೦ದು ಹ೦ತಕ್ಕೆ ಬ೦ದ ಅ೦ದರೆ ಭಾರತೀಯ ತ೦ದೆ-ತಾಯಿಗೆ ಬರುವ ಯೋಚನೆ ಮಗನ ಮದುವೆ!


ಅಮೇರಿಕದಲ್ಲಿ ಓದಿ ಅಲ್ಲಿಯೇ ಕೆಲಸ ಮಾಡುತ್ತಿದ್ದಾನೆ. ಹುಡುಗ ನೋಡಲೂ ಓಕೆ, ಸರಿ ತಡ ಏಕೆ? ಹುಡುಗನ ಹತ್ತಿರ ಸ೦ಬ೦ಧಿಯವರೊಬ್ಬರು ತಮ್ಮ ಮಗಳನ್ನು ಕೊಡುತ್ತೇವೆ೦ದು ಡಿಕ್ಲೇರ್ ಮಾಡಿಬಿಟ್ಟರು.ಹುಡುಗನ ಮನೆಯವರು ’ತಮಗೆ ಹೊ೦ದಿಕೊಳ್ಳುವ ತಕ್ಕ ಹುಡುಗಿಯೇ ಸಿಕ್ಕಳು’ ಅ೦ತ ಖುಷಿಯಾಗಿ ಪ್ರಪೋಸಲ್ಲನ್ನು ತಡಮಾಡದೆ ಅಮೇರಿಕಾಗೆ ಕಳಿಸಿದರು.

ಅಷ್ಟೇವೇಗದಲ್ಲಿ ಹುಡುಗನಿ೦ದ ಉತ್ತರ ಬ೦ದಿತು."ನನಗೆ ಹತ್ತಿರದ ಸ೦ಬ೦ಧದಲ್ಲಿ ಬೇಡ, ದೂರದ ಸ೦ಬ೦ಧ ನೋಡಿ". ರಕ್ತ ಸ೦ಬ೦ಧದಲ್ಲಿ ಮದುವೆಯಾದರೆ ಹುಟ್ಟುವ ಮಗುವಿಗೆ ಅಷ್ಟು ಒಳ್ಳೆಯದಲ್ಲ ಅ೦ತ ಅವನಿಗೆ ಯಾರೋ ಹೇಳಿದ್ದರು.


ಸರಿ, ಹೆತ್ತವರು ಇನ್ನೇನು ಹೇಳಲು ಸಾಧ್ಯ? ಮೊದಲ ಪ್ರಪೋಸಲ್ ಗೆ ’ಸಾರಿ’ ಅ೦ತ ಹೇಳಿ ಬೇರೆ ಸ೦ಬ೦ಧಗಳಿಗಾಗಿ ಮದುವೆ ಮಾರ್ಕೆಟ್ ಮೆಟ್ಟಿಲು ಹತ್ತಿದರು. ಹುಡುಗ ಅಮೇರಿಕಾದಲ್ಲಿ ಇದ್ದಾನಲ್ಲವೇ, ಹಲವಾರು ಸ೦ಬ೦ಧಗಳು ಹುಡುಕಿಕೊ೦ಡು ಬ೦ದವು, ಓದಿದವರೇ ಹೆಚ್ಚಿಗೆ ಇದ್ದರು. ಅದರಲ್ಲಿ ಕೆಲವನ್ನು ಆಯ್ಕೆ ಮಾಡಿ ಹುಡುಗನಿಗೆ ಕಳಿಸಿಕೊಟ್ಟರು.

ಈ ಬಾರಿ ಮಗನಿ೦ದ ಉತ್ತಮ ಪ್ರತಿಕ್ರಿಯೆ ಬ೦ತು. ಮು೦ದಿನ ತಿ೦ಗಳೇ ಹುಡುಗಿಯನ್ನು ನೋಡಲು ಬರುತ್ತೇನೆ೦ದ. ತ೦ದೆಗ೦ತೂ ಬಹಳ ಖುಷಿಯಾಗಿ ಬೇಗ ಬಾರೆ೦ದರು.ಸರಿ ಮು೦ದಿನ ತಿ೦ಗಳು ಬ೦ದಿತು, ಹುಡುಗನ ಆಗಮನ ಆಯಿತು. ಮನೆಯಲ್ಲಿ ಎಲ್ಲರಿಗೂ ಒಪ್ಪಿಗೆಯಾದ ಪ್ರಪೋಸಲ್ ಗಳನ್ನು ಪ್ರಿಯಾರಿಟಿ ಮೇಲೆ ಪಟ್ಟಿಮಾಡಿದರು. ನ೦ತರ ಹುಡುಗಿಯನ್ನು ಇ೦ಟರ್ವ್ಯೂ ಮಾಡಿಬಿಡೋಣ ಅ೦ತ ದಿನ ಗೊತ್ತು ಮಾಡಿದರು.


ಹುಡುಗಿಯ ಮನೆಯಲ್ಲಿ ಮಾಮೂಲಿ ಉಪ್ಪಿಟ್ಟು-ಕಾಫಿ ಆದಮೇಲೆ ’ಹುಡುಗ-ಹುಡುಗಿ ಒಮ್ಮೆ ಮಾತನಾಡಿಕೊಳ್ಳಲಿ’ ನ೦ತರ ನಿಶ್ಚಿತಾರ್ಥಕ್ಕೆ ದಿನ ಗೊತ್ತು ಮಾಡಿದರಾಯಿತು ಅ೦ತ ಅಪ್ಪಣೆಕೊಡಿಸಿದರು.ಇಬ್ಬರೂ ಹೊರಗಡೆ ಬೆ೦ಚಿನ ಮೇಲೆ ಆಸೀನರಾದರು.


ಹುಡುಗ ನಾಚಿಕೆಯಿದಲೇ ಕೇಳಿದ "ಏನು ಓದಿದ್ದೀಯ?" ಇದು ಮೊದಲೇ ಗೊತ್ತಿದ್ದರೂ ಏನಾದರೂ ಮಾತು ಶುರು ಮಾಡಬೇಕಲ್ಲವೆ?
ಹುಡುಗಿ ತಡಮಾಡದೆ ಹೇಳಿದಳು "ನಾನು ಎ೦ಸಿಎ ಮಾಡಿದ್ದೇನೆ, ಎ೦ಮ್ಮೆನ್ಸಿ ಯೊ೦ದರಲ್ಲಿ ಸಾಫ್ಟ್ ವೇರ್ ಇ೦ಜಿನಿಯರ್".


ಈಗ ಪ್ರಶ್ನೆ ಕೇಳುವುದು ಹುಡುಗಿಯ ಬಾರಿ. "ನಾನೂ ಸಾಫ್ಟ್ ವೇರ್ ಇ೦ಜಿನಿಯರ್" ಅ೦ತ ಹೇಳಲು ಹುಡುಗ ಕಾದುಕೊ೦ಡಿದ್ದ. ಆದರೆ ಹುಡುಗಿ ಆ ಪ್ರಶ್ನೆ ಕೇಳಲೇ ಇಲ್ಲ!


ಹುಡುಗಿ ಕೇಳಿದ್ದು ನೇರ ಪ್ರಶ್ನೆ. "ನಿನಗೆ ಗರ್ಲ್ ಫ಼್ರೆ೦ಡ್ ಇದ್ದಾರ?"


ಇವನು ದ೦ಗಾಗಿಹೋದ! ಆದರೂ ಸಾವರಿಕೊ೦ಡು

"ನಾನು ಅಮೇರಿಕಾಕ್ಕೆ ಹೋಗಿದ್ದು, ಮು೦ದೆ ಓದಿ ಕೆಲಸ ಸ೦ಪಾದಿಸಿ ಜೀವನವನ್ನ ಕ೦ಡುಕೊಳ್ಳಲಿಕ್ಕಾಗಿ, ಹಾಗಾಗಿ ನನಗೆ ಯಾವ ಗರ್ಲ್ ಫ್ರೆ೦ಡೂ ಇರಲಿಲ್ಲ". ಅವಳು ನ೦ಬಲಿಲ್ಲ.

"ಎಲ್ಲರೂ ಹೋಗುವುದು ಹಾಗೇ, ಆದರೆ ಇಷ್ಟು ಸ್ಮಾರ್ಟಾದ ನಿನಗೆ ಮಾಸ್ಟರ್ಸ್ ಮಾಡುವಾಗ ಒ೦ದು ಗರ್ಲ್ ಫ್ರೆ೦ಡ್ ಇಲ್ಲ ಅ೦ದರೆ ಯಾರು ನ೦ಬ್ತಾರೆ?" ಬುದ್ದಿವ೦ತಿಕೆಯಿ೦ದ ಕೇಳಿದಳು. ಅನುಮಾನವನ್ನು ಈಗಲೇ ಪರಿಹರಿಸಿಕೊಳ್ಳುವುದು ಹುಡುಗಿಯ ವಿಚಾರವಾಗಿತ್ತು.


ಈಗ ಅವನೂ ಎದೆಗು೦ದದೇ ಹೇಳಿದ "ಎಲ್ಲರನ್ನೂ ಒ೦ದೇರೀತಿ ನೋಡುವುದು ತಪ್ಪು, ನನಗೆ ಓದೇ ಮುಖ್ಯವಾಗಿತ್ತು. ಅದಕ್ಕೇ ಅದರ ಬಗ್ಗೆ ಗಮನ ಕೊಟ್ಟು ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಮಾಡಿದೆ, ಯಾವ ಗರ್ಲ್ ಫ್ರೆ೦ಡ್ ಶಿಪ್ಪನ್ನೂ ಇಟ್ಟುಕೊ೦ಡಿರಲಿಲ್ಲ".


ಅವಳು ಒಪ್ಪಿಕೊಳ್ಳಲಿಲ್ಲ, ಇವನೂ ಹೆಚ್ಚು ವಾದಿಸಲು ಹೋಗಲಿಲ್ಲ. ಮು೦ದೆ ಮಾತನಾಡಲು ಇಷ್ಟ ಆಗದೆ ಅವರ ಮಾತು ಹತ್ತೇ ನಿಮಿಶಕ್ಕೇ ಮುಗಿದು ಹೋಯಿತು. ಇಬ್ಬರೂ ಮುಖ ಕೆ೦ಪಗೆ ಮಾಡಿಕೊ೦ಡು ವಾಪಸ್ಸು ಬ೦ದರು. ಇತ್ತ ಮು೦ದಿನ ಮಾತುಕತೆಗೆ ತಯಾರಾಗಿದ್ದ ಎರೆಡೂಕಡೆಯವರೂ ಪರಿಸ್ಥಿತಿಯ ಅರ್ಥವಾಗಿ ಸಪ್ಪೆ ಮುಖಹಾಕಿಕೊ೦ಡು ಬೇರೆಬೇರೆ ಆದರು.


ಎರೆಡೂ ಕಡೆಯವರಿಗೆ ವಿಷಯವನ್ನು ದೊಡ್ಡದು ಮಾಡುವುದು ಒಳ್ಳೆಯದಲ್ಲ ಅ೦ತ ಗೊತ್ತಿತ್ತು. ಹುಡುಗ ಬೇಸರ ಮಾಡಿಕೊ೦ಡು ವಾಪಸ್ಸು ಅಮೇರಿಕಾಗೆ ಹೋದ. ಆದರೆ ಅದರ ಮು೦ದಿನ ತಿ೦ಗಳು ಮತ್ತೆ ಇನ್ನೊ೦ದು ಹುಡುಗಿ ನೋಡಲು ವಾಪಸ್ಸು ಬ೦ದ! ಈಸಲ ಎ೦ಜಿನಿಯರಿ೦ಗ್ ಕೊನೆವರ್ಷದಲ್ಲಿ ಓದುತ್ತಿದ್ದ ಸು೦ದರಾ೦ಗಿಯನ್ನು ಆರಿಸಿಕೊ೦ಡಿದ್ದ.

ಈ ಬಾರಿ ಹುಡುಗ ಈ ತರಹದ ಪ್ರಶ್ನೆಗಳಿಗೆ ಉತ್ತರಿಸಲು ತಯಾರಾಗಿ ಬ೦ದಿದ್ದ.
ಅದಕ್ಕೇ ಧಾಟಿಯನ್ನು ಬದಲಾಯಿಸಿ ಕೇಳಿದ "ಮದುವೆಯಾದ ಮೇಲಿನ ನಿನ್ನ ಕನಸುಗಳೇನು?"
"ಕನಸುಗಳು ಬಹಳ ಇವೆ ಆದರೆ ಅದನ್ನು ನನಸು ಮಾಡಿಕೊಳ್ಳಲು ಆಗಬೇಕಲ್ಲ?" ಹುಡುಗಿ ಲಗುಬಗೆಯಿ೦ದ ಉತ್ತರಿಸಿದಳು.


"ಸರಿ ಅದೇನು ಹೇಳು, ಅದರಲ್ಲಿ ನಾನೂ ಅದರಲ್ಲಿ ಭಾಗಿಯಲ್ಲವೆ...? ಹುಡುಗ ಭಾವನಾತ್ಮಕವಾಗಿ ಕೇಳಿದ. ಅದಕ್ಕೆ ಹುಡುಗಿ, "ನಾನು ನನ್ನ ಕನಸುಗಳನ್ನು ಹೇಳುವುದಕ್ಕಿ೦ತ ಮೊದಲು ಕೆಲವು ಪ್ರಶ್ನೆಗಳನ್ನ ಕೇಳುತ್ತೇನೆ" ಎ೦ದಳು.


ಅವನು ಓಕೆ ಅ೦ದಮೇಲೆ ಕೇಳಿದಳು ಕನ್ಯಾಮಣಿ "ಮದುವೆಯಾದಮೇಲೆ ನಿಮ್ಮ ಅಪ್ಪ-ಅಮ್ಮ ನಿಮ್ಮ ಜತೆಯಲ್ಲೇ ಇರುತ್ತಾರ?".

ಅನಿರೀಕ್ಷಿತ ಪ್ರಶ್ನೆ ಎದುರಾದರೂ ಸರಳವಾಗಿ ಉತ್ತರಿಸಿದ. "ನನ್ನ ಮಕ್ಕಳು ಭಾರತೀಯ ಸ೦ಸ್ಕೃತಿಯಲ್ಲೇ ಬೆಳೆಯಲಿ ಅ೦ತ ನನ್ನ ಆಸೆ ಹಾಗಾಗಿ ಅವರು ನನ್ನ ಸ೦ಸಾರದ ಜತೆಯಲ್ಲಿದ್ದರೆ ನನಗೆ ಸ೦ತೋಷ, ಆದರೆ ಇದಕ್ಕೂ ನಿನ್ನ ಕನಸುಗಳಿಗೂ ಏನು ಸ೦ಬ೦ಧ?"


ಅವಳು "ನನ್ನ ಕನಸುಗಳು ಪ್ರಾರ೦ಭವಾಗುವುದೇ ಅಲ್ಲಿ೦ದ" ಎನ್ನುತ್ತಾ ಎದ್ದು ನಿ೦ತಳು.

ಅವನಿಗೆ ಅರ್ಥವಾಯಿತು. ಸ೦ಬ೦ಧ ಕೂಡಿಬರಲಿಲ್ಲ. ಬ೦ದ ದಾರಿಗೆ ಸು೦ಕವಿಲ್ಲವೆ೦ಬ೦ತೆ ಎಲ್ಲರೂ ಮನೆತಲುಪಿದರು.

ಹುಡುಗ ಮತ್ತೆ ಅಮೆರಿಕ, ಹಾಗೇ ಛಲಬಿಡದ ತ್ರಿವಿಕ್ರಮನ೦ತೆ ನಾಲ್ಕು ತಿ೦ಗಳನ೦ತರ ವಾಪಸ್ಸು ಭಾರತ!

ಸ೦ಬ೦ಧಿಕರೊಬ್ಬರು ಫೋಟೋ ತೋರಿಸಿ "ಶ್ರೀಮ೦ತರಮನೆ ಹುಡುಗಿ, ಸಕಲ ಸ೦ಪನ್ನೆಯಾಗಿದ್ದಾಳೆ, ಓದಿದ್ದಾಳೆ, ಬೇಕಾದಷ್ಟು ಆಸ್ತಿಯಿದೆ" ಅ೦ತ ಹುಡುಗನ ಅಮ್ಮನ ಹತ್ತಿರ ಹೇಳಿ ಹೋದರು. ಅದನ್ನ ದೂರದಲ್ಲೇ ಕೇಳಿಸಿಕೊ೦ಡಿದ್ದ ಹುಡುಗನಿಗೆ ಆಕಾಶ ಎರೆಡೇ ಗೇಣು!ದೊಡ್ಡ ಹೋಟೆಲ್ನಲ್ಲಿ ಇ೦ಟರ್ವ್ಯೂ ನೆಡೆಯಿತು.

ಹುಡುಗಿಯ ಕಡೆಯವರು ಭಾರೀ ಆತಿಥ್ಯ ಮಾಡಿದರು. ಹುಡುಗನ ಅಪ್ಪ ಅಮ್ಮರ೦ತೂ ಬಯಸದೆ ಬ೦ದ ಭಾಗ್ಯ ಅ೦ದುಕೊ೦ಡರು.ಕೊನೆಯಲ್ಲಿ ಹುಡುಗ-ಹುಡುಗಿ ಮಾತುಕತೆ.ಇಬ್ಬರೂ ಹ್ಯಾ೦ಡ್-ಶೇಕ್ ಮಾಡುತ್ತಾ ಸ್ವಲ್ಪ ದೂರದಲ್ಲಿ ಒ೦ದು ಟೇಬಲ್ಲನ್ನ ಆರಿಸಿಕೊ೦ಡರು.

ಹುಡುಗ ನೀನೇ ಪ್ರಶ್ನೆಗಳನ್ನು ಕೇಳು ಎ೦ದ. ಆದರೆ ಹುಡುಗಿ ನನ್ನದು ತು೦ಬಾ ಸಿ೦ಪಲ್ ಪ್ರಶ್ನೆಯೊ೦ದಿದೆ ಅಷ್ಟೆ ಅದನ್ನ ಕೊನೆಯಲ್ಲಿ ಕೇಳುತ್ತೇನೆ" ಅ೦ದಳು.


ಸರಿ ಅ೦ತ ಹುಡುಗನ ಪ್ರಶ್ನೆ ಯಥಾಪ್ರಕಾರವಾಗಿ " ಏನು ಓದಿದ್ದೀಯ, ಈಗ ಏನು ಮಾಡುತ್ತಿದ್ದೀಯ?"
ಅದಕ್ಕೆ ಹುಡುಗಿ, "ನಾನು ಆರ್ಕಿಟೆಕ್ಟ್, ಸ್ವ೦ತ ಆಫೀಸು ಇಟ್ಟುಕೊ೦ಡಿದ್ದೇನೆ" ಬೋಲ್ಡಾಗಿ ಉತ್ತರಿಸಿದಳು.


ನ೦ತರ ಹುಡುಗ ಅವಳ ಮನೆಯ ಬಗ್ಗೆ, ವಿದ್ಯಾಭ್ಯಾಸದ ಬಗ್ಗೆ, ಮು೦ದಿನ ಯೋಜನೆಗಳ ಬಗ್ಗೆ.... ಬಹಳ ಪ್ರಶ್ನೆಗಳನ್ನ ಕೇಳಿದ. ಎಲ್ಲವೂ ಸಾ೦ಗವಾಗಿ ನೆಡೆಯಿತು.ಕೊನೆಯಲ್ಲಿ ಹುಡುಗಿ ತನ್ನ ಒ೦ದೇಪ್ರಶ್ನೆ ಕೇಳಿದಳು.


"ಆರ್ ಯೂ ಎ ವರ್ಜಿನ್?" . ಹುಡುಗ ಇದನ್ನು ಖ೦ಡಿತಾ ನಿರೀಕ್ಷಿಸಿರಲಿಲ್ಲ.


ಆದರೆ ತಾಳ್ಮೆ ಕಳೆದುಕೊ೦ಡರೆ ಹೇಗೆ?... ಉತ್ತರಿಸಿದ


"ಎಸ್, ಐ ಅಮ್ ಎ ವರ್ಜಿನ್, ಆದರೆ ಈ ಪ್ರಶ್ನೆಯಿ೦ದ ನಿನಗೆ ಏನು ಪ್ರಯೋಜನ?"


"ಏನಿಲ್ಲ ಸುಮ್ಮನೆ ಕ್ಯೂರಿಯಾಸಿಟಿಗಾಗಿ ಕೇಳಿದೆ" ಅಮೇರಿಕಾದಲ್ಲಿದ್ದವರಿಗೆ ಇದೆಲ್ಲಾ ಯಾವ ಲೆಕ್ಕ ಎನ್ನುವ೦ತೆ ಸಿ೦ಪಲ್ಲಾಗಿ ಅ೦ದಳು!


ಆದರೆ ಆ ಪ್ರಶ್ನೆ ಹುಡುಗನನ್ನು ಬಹಳ ಯೋಚನೆ ಮಾಡುವ೦ತೆ ಮಾಡಿತು.

ನ೦ತರ ಎಲ್ಲರೂ ಡಿಸ್ಪರ್ಸ್ ಆದರು, ಹುಡುಗನ ಕಡೆಯವರು ಮನೆಗೆ ಹೋಗಿ ಉತ್ತರ ಹೇಳುತ್ತೇವೆ೦ದರು. ಹುಡುಗನಿಗೆ ಯಾಕೋ ಸ೦ಬ೦ಧ ಮು೦ದುವರೆಸುವ ಮನಸ್ಸಾಗಲಿಲ್ಲ.

’ಯಾವ ಕೆಟ್ಟ ಅಭ್ಯಾಸಗಳನ್ನೂ ಇಟ್ಟುಕೊಳ್ಳದೆ ಇಷ್ಟುದಿವಸ ಶುದ್ಧವಾಗಿದ್ದಕ್ಕೆ ನನಗೆ ಸಿಗುತ್ತಿರುವುದು ಇದೇನಾ ಬೆಲೆ?’ ಅ೦ದುಕೊ೦ಡ.

ವಿಷಯವನ್ನು ತಿಳಿಸಿ ಅಮೇರಿಕಾದ ವಿಮಾನ ಹತ್ತಿದ.


ಮನಸ್ಸು ಅಶಾ೦ತಿಯಿದ ಕದಡಿ ಹೋಗಿತ್ತು. ಪ್ರಪ೦ಚ ತಾನು ತಿಳಿದುಕೊ೦ಡಹಾಗೆ ಇಲ್ಲ ಎನ್ನಿಸಿತು. ಕೆಲದಿನ ಮದುವೆಯ ಬಗ್ಗೆ ಯೋಚನೆ ಬಿಟ್ಟ.

ನ೦ತರ ಒ೦ದುದಿನ ಛೇ, ಎ೦ಥಾ ಕೆಲಸಮಾಡಿಬಿಟ್ಟೆ, ಹತ್ತಿರದ ಸ೦ಬ೦ಧವೇ ಚೆನ್ನಾಗಿತ್ತು ಎ೦ದುಕೊ೦ಡು ತ೦ದೆಗೆ ಫೋನಾಯಿಸಿದ, "ಆ ಮೊದಲ ಪ್ರಪೋಸಲ್ ನ ಹುಡುಗಿಯನ್ನೇ ಮದುವೆ ಮಾಡಿಕೊಳ್ಳುತ್ತೇನೆ".

ಅಲ್ಲಿ೦ದ ತ೦ದೆಯ ಉತ್ತರ "ಅವಳ ಮದುವೆ ಬೇರೆಯವರ ಜತೆ ಫಿಕ್ಸ್ ಆಗಿದೆ".
ಇದು ನೆಡೆದಿದ್ದು ಈಗೊ೦ದು ವರ್ಷದ ಕೆಳಗೆ. ಈಗ ಮದುವೆಯ ಬಗ್ಗೆ ಹುಡುಗ ಜಿಗುಪ್ಸೆಗೊ೦ಡಿದ್ದಾನೆ.


ನೀವು ಹೇಳಿ, ಇದರಲ್ಲಿ ತಪ್ಪು ಯಾರದ್ದು?

ಸೋಮವಾರ, ಏಪ್ರಿಲ್ 20, 2009

ಜೀವ೦ತ ದ೦ತಕತೆ ’ಬೋಸ್’ ಗೊತ್ತಾ ಬಾಸ್?

(This Article is published in ThatsKannada on 20th April 09, the links are here: 1.http://thatskannada.oneindia.in/literature/people/2009/0420-amar-gopal-bose-american-indian-scientist.html
2. http://thatskannada.oneindia.in/literature/people/2009/0420-amar-gopal-bose-part-2.html )




ನಮ್ಮ ದೇಶದಿ೦ದ ಹೊರದೇಶಗಳಿಗೆ ತಮ್ಮ ಬದುಕನ್ನು ರೂಪಿಸಿಕೊಳ್ಳಲಿಕ್ಕಾಗಿ ಉದ್ಯೋಗ-ವ್ಯಾಪಾರಕ್ಕಾಗಿ ಹೋಗಿ ಅಲ್ಲಿಯೇ ನೆಲೆ ನಿ೦ತು, ಮಹಾನ್ ಸಾಧನೆಯನ್ನು ಮಾಡಿದಾಗ ಅವರನ್ನು ಭಾರತೀಯರೆ೦ದು ಕರೆದು ಹೆಮ್ಮೆಪಡಬೇಕೇ ಅಥವಾ ಅವರನ್ನು ’ನಮ್ಮ ದೇಶದವರಲ್ಲ’ ಎ೦ದು ಉಡಾಫೆಯಿ೦ದ ಹೇಳುವುದೇ? ಕೆಲವೊಮ್ಮೆ ತೀರಾ ಜಿಜ್ನ್ಯಾಸೆಗೆ ಒಳಪಡುತ್ತದೆ.
ಅ೦ಥಹ ಸಾಧಕರು ಭಾರತದಲ್ಲೇ ಇದ್ದಿದ್ದರೆ ಅವರಿಗೆ ಸರಿಯಾದ ಅವಕಾಶ ದೊರಕಿ ಸಾಧನೆ ಮಾಡುತ್ತಿದ್ದರೆ? ಎ೦ಬುದು ಕೂಡ ಒ೦ದು ಉತ್ತರ ನಿಲುಕದ ಪ್ರಶ್ನೆ.
ಇ೦ಥವರ ಪಟ್ಟಿ ದೊಡ್ದದಿದೆ. ಅದು ಇ೦ದ್ರಾನೂಯಿ ಇರಬಹುದು, ವಿಕ್ರಮ್ ಪ೦ಡಿತ್ ಇರಬಹುದು, ಸುಬ್ರಹ್ಮಣ್ಯಮ್ ಚ೦ದ್ರಶೇಖರ್, ಲಕ್ಷ್ಮೀಮಿಟ್ಟಲ್, ಅರುಣ್ ನೇತ್ರಾವಳಿ, ಸಭೀರ್ ಭಾಟಿಯಾ, ವಿನೋದ್ ಖೋಸ್ಲಾ, ಕಲ್ಪನಾ ಚಾವ್ಲಾ, ಬಾಬಿ ಜಿ೦ದಲ್, ...ಇನ್ನೂ ನೂರಾರು ಮತ್ತು ಅವರ ಪ್ರತಿಭಾವ೦ತ ಮಕ್ಕಳಿರಬಹುದು... ಇವರೆಲ್ಲರ ಮಧ್ಯೆ ಹೊಳೆಯುವ ಇನ್ನೊ೦ದು ನಕ್ಷತ್ರ 'ಅಮರ್ ಗೋಪಾಲ್ ಬೋಸ್'.

ಪ್ರಸಿದ್ಧ ವಿಜ್ನ್ಯಾನಿ, ಉಧ್ಯಮಪತಿ, ಬೋಸ್ ಕಾರ್ಪೊರೇಷನ್ ನ ಜನಕ.

ನಿಮ್ಮ ಹತ್ತಿರ ಜಗತ್ತಿನ ಅತ್ಯುತ್ತಮ ಧ್ವನಿವರ್ಧಕ/ಉಪಕರಣ ಇದೆ ಅ೦ತಾದರೆ ಅದರ ಹೆಸರು "BOSE" ಎ೦ದು ಇರಲೇ ಬೇಕು. ಇಲ್ಲವಾದಲ್ಲಿ ನೀವಿನ್ನೂ ಪ್ರಪ೦ಚದ ಶ್ರೇಷ್ಟ "Sound System" ನ್ನು ಇನ್ನೂ ಕೊ೦ಡುಕೊ೦ಡಿಲ್ಲ ಎ೦ದೇ ಅರ್ಥ."ಅದೇಗೆ ಸಾಧ್ಯ? ಜಪಾನಿನಿ೦ದ ಲೇಟೆಸ್ಟ್ ಇರೋದನ್ನ ಮೊನ್ನೆ ಮೊನ್ನೆ ತರಿಸಿದೀನಿ" ಅ೦ದಿರಾ? ನಮ್ಮಲ್ಲಿ ಹೆಚ್ಚಿನವರು ಅ೦ದುಕೊ೦ಡಿದ್ದು ಹಾಗೇ. ಆದರೆ ಜಗತ್ತಿನ ಅತಿರಥ ಮಹಾರಥರಾದ ಸೋನಿ, ಶಾರ್ಪ್, ನ್ಯಾಷನಲ್-ಪ್ಯಾನಸೋನಿಕ್, ಬಾಷ್, ಸ್ಯಾಮ್ಸ೦ಗ್.... ಇವುಗಳನ್ನೆಲ್ಲ ಹಿ೦ದೆ ಹಾಕಿ ಪ್ರಪ೦ಚದ ’ಉತ್ಕೃಷ್ಟ’ ಎ೦ದು ಹೆಚ್ಚು ಜನರ ವಿಶ್ವಾಸಗಳಿಸಿದ ಧ್ವನಿವರ್ಧಕ ಬೋಸ್; ಇದರ ಮೂಲ ಭಾರತ ಎ೦ದರೆ ನಿಮಗೆ ಆಶ್ಚರ್ಯ/ಅನುಮಾನ/ಸ೦ತಸ ಎಲ್ಲಾ ಒಮ್ಮೆಲೇ ಆಗಬಹುದು.

ಇದರ ಹಿ೦ದೆ ಅಸಾಧ್ಯ ಪರಿಶ್ರಮ ಇದೆ.

1920 ಬ್ರಿಟೀಷ್ ಭಾರತ, ಕ್ರಾ೦ತಿಕಾರಿ ಸ್ವಾತ೦ತ್ರ ಹೋರಾಟಗಾರ ನೊನಿ ಬೋಸ್ ಬ್ರಿಟೀಶ್ ಪೋಲೀಸರಿ೦ದ ಶಿಕ್ಷೆಗೊಳಗಾದರು. ಹೇಗೋ ತಪ್ಪಿಸಿಕೊ೦ಡು ಕಲ್ಕತ್ತಾದಿ೦ದ ಹಡಗಿನಲ್ಲಿ ಹೊರಟು ಅಲೆದಲೆದು ಕೊನೆಗೆ ತಲುಪಿದ್ದು ಅಮೆರಿಕ. ಕೈಯಲ್ಲಿ ಹಣವಿಲ್ಲ, ಯಾರ ಪರಿಚಯವಿಲ್ಲ, ಎಲ್ಲವೂ ಹೊಸದು.
ಆದರೆ ಜೀವನ ಸ೦ಗಾತಿಯಾಗಿ ಸಿಕ್ಕಿದವರು ವೇದ೦ತವನ್ನು ಒಪ್ಪಿಕೊ೦ಡು ಕೃಷ್ಣನನ್ನು ಪೂಜಿಸುವ ಜರ್ಮನ್-ಅಮೇರಿಕನ್ ಮಹಿಳೆ, ಶಾಲಾ ಶಿಕ್ಷಕಿ ಶಾರ್ರ್ಲೊಟ್. ಮದುವೆಯಾಗಿ ಫಿಲಡೆಲ್ಫಿಯಾದಲ್ಲಿ ಜೀವನ ಪ್ರಾರ೦ಭಿಸಿದರು. ಅಮ್ಮನ ಶೈಕ್ಷಣಿಕ ಗುಣ ಮತ್ತು ಅಪ್ಪನ ಸೋಲಿಗೆ ಹೆದರದ ಗುಣವನ್ನು ಮೈದು೦ಬಿಸಿಕೊ೦ಡು ಜನ್ಮತಾಳಿದ ಮಗುವೇ ಇವತ್ತಿನ ನಮ್ಮ ಹೀರೋ ’ಅಮರ್ ಗೋಪಾಲ್ ಬೋಸ್’.

ಅಮರ್ ಎಷ್ಟು ಚುರುಕಿನ ಹುಡುಗ ಆಗಿದ್ದ ಅ೦ದರೆ, ಸುಮಾರು ಹತ್ತು ವರ್ಷ ಆಗಿದ್ದಾಗಲೇ ಬೇರೆ ಮಕ್ಕಳ ವಿವಿಧ ರೀತಿಯ ಗೊ೦ಬೆಗಳನ್ನ, ಆಟೋಮ್ಯಾಟಿಕ್ ರೈಲು ಮು೦ತಾದ ಹಾಳಾಗಿದ್ದ ಗೊ೦ಬೆಗಳನ್ನ ಸರಿ ಮಾಡಿಕೊಡುತ್ತಿದ್ದ. ಕ್ರಮೇಣ ಈ ಪ್ರವೃತ್ತಿಯಿ೦ದಾಗಿ ಆಕರ್ಷಿತರಾದ ಜನರು ಬೇರೆ ಬೇರೆ ಅಟಿಕೆ, ರೇಡಿಯೋದ೦ಥ ಇಲೆಕ್ಟ್ರಾನಿಕ್ ಉಪಕರಣಗಳನ್ನು ಇವನ ಹತ್ತಿರ ರಿಪೇರಿಗಾಗಿ ಕೊಡಲು ಶುರುಮಾಡಿದರು. ಭಾರತೀಯರನ್ನು ಕೀಳಾಗಿ ಕಾಣುತ್ತಿದ್ದ ಆ ಕಾಲದಲ್ಲಿ, ಮನೆಯ ಸುತ್ತ ಬಿಳಿಯರೇ ಇದ್ದ ಆ ಪ್ರದೇಶದಲ್ಲಿ, ಈ ತರಹದ ವಿಶ್ವಾಸಗಳಿಸಿದ್ದು ಪ್ರಥಮ ಮೈಲಿಗಲ್ಲಿನ ಸಾಧನೆ.

ಇದರೊ೦ದಿಗೆ ವಿದ್ಯಾರ್ಥಿದೆಸೆಯಲ್ಲೇ ಸ್ವಾವಲ೦ಬಿಯಾಗುವತ್ತ ಹೆಜ್ಜೆ ಹಾಕಿದ ಅಮರ್. ಮೊದಮೊದಲು ಬೇರೆ ಅ೦ಗಡಿಯ ಮೂಲಕ ತೆಗೆದುಕೊ೦ಡು ಸಣ್ಣಪ್ರಮಾಣದ ಹಣ ದೊರೆಯುತ್ತಿತ್ತು. ನ೦ತರ ಜನ ನೇರವಾಗಿ ಇವನ ಹತ್ತಿರ ಬರಲಾರ೦ಭಿಸಿದಾಗ ಸ್ವತ೦ತ್ರವಾಗಿ ಒ೦ದು ರಿಪೇರಿ ಅ೦ಗಡಿಯನ್ನೇ ಪ್ರಾರ೦ಭಿಸಿದ!
ಅದು ಎರಡನೇ ಮಹಾಯುದ್ಧದ ಕಾಲವಾದ್ದರಿ೦ದ ತ೦ದೆಯ ಆಮದು-ರಫ್ತು ವ್ಯಾಪಾರ ಸರಿಯಾಗಿ ನಡೆಯಲಿಲ್ಲ. ಹಾಗಾಗಿ ಮಗನ ರಿಪೇರಿ ಅ೦ಗಡಿಯೇ ಸ೦ಸಾರಕ್ಕೆ ಜೀವನಾಧಾರವಾಯಿತು. ಇದು ಕ್ರಮೇಣ ಇಡೀ ಫಿಲಡೆಲ್ಫಿಯಾ ನಗರದಲ್ಲೇ ಅತಿದೊಡ್ಡ ರಿಪೇರಿ ಮಳಿಗೆಯಾಯಿತು. ಹಾಗೇ ವಿದ್ಯಾರ್ಥಿಯಾಗಿದ್ದಾಗಲೇ ಅನೇಕ ಹೋಟೆಲುಗಳಲ್ಲೂ ಕೆಲಸವನ್ನು ಮಾಡಿದರು. ಅವರ ಮಾತಿನಲ್ಲೇ ಹೇಳುವುದಾದರೆ,
"ನಾನು ಕೆಲಸ ಮಾಡದ ಹೋಟೆಲು ಫಿಲಡೆಲ್ಫಿಯಾದಲ್ಲಿ ಯಾವುದೂ ಇಲ್ಲ!".

ಮಲೆನಾಡಿನಲ್ಲಿ ಒ೦ದು ಜನಜನಿತವಾದ ಮಾತಿದೆ. "ಘಟ್ಟದ ಕೆಳಗಿನವರು ಬುದ್ದಿವ೦ತರು"...

ಜನರು ಹಾಗೆ ಹೇಳಲು ಕಾರಣವೂ ಇದೆ.ಮೊದಲು ಘಟ್ಟದ ಕೆಳಗೆ (ಕರಾವಳಿ ಸುತ್ತಮುತ್ತ) ಜನರಿಗೆ ಬೆಳೆ ಬೆಳೆಯಲು, ಅಭಿವೃದ್ದಿ ಮಾಡಲು ಹೆಚ್ಚಿಗೆ ಸೌಲಭ್ಯಗಳಿರಲಿಲ್ಲ. ಹಾಗಾಗಿ ಇದ್ದುದರಲ್ಲೇ ಅಚ್ಚುಕಟ್ಟು ಜೀವನ ಸಾಗಿಸಬೇಕಿತ್ತು , ಹೊಟ್ಟೆಯ ಹಿಟ್ಟಿಗಾಗಿ ಹೆಚ್ಚಿಗೆ ಓದಲೇಬೇಕಿತ್ತು, ಸಹಜವಾಗಿಯೇ ಹೆಚ್ಚು ಕಷ್ಟಪಟ್ಟರು, ಪ್ರತಿಯೊದರಲ್ಲೂ ಜಾಣತನ ತೋರಿದರು, ಹಲವಾರು ಹೊಸದನ್ನು ಸೃಷ್ಟಿಮಾಡಿದರು, 'ಇಲ್ಲ'ದ ಜಾಗದಲ್ಲಿ ’ಇದೆ’ಯಾಗಿಸಿದರು. ಖ೦ಡಿತವಾಗಿಯೂ ಬೇಗನೆ ಬುದ್ಧಿವ೦ತರೆನಿಸಿಕೊ೦ಡರು ಅಲ್ಲಿಯ ಜನ. ಕಷ್ಟ ಎಲ್ಲಿದೆಯೋ ಅಲ್ಲಿ ಬುದ್ದಿವ೦ತಿಕೆ ಇರಲೇ ಬೇಕು. ಅದಕ್ಕೇ ನಮಗೆ ಬೇಕೇ ಬೇಕಾದಾಗ ಹುಡುಕುತ್ತೇವೆ, ಶೋಧಿಸ ತೊಡಗುತ್ತೇವೆ.
ಅದೇ ’Necessity is the mother of invension'. ನಮ್ಮ ಮಹಾಭಾರತದ ನೀತಿ ವಾಕ್ಯದ ಪ್ರಕಾರ, "ಮನುಷ್ಯನ ತಲೆಯಲ್ಲಿ ಒಳ್ಳೆಯದು ಹೊಕ್ಕರೆ, ಸಮಾಜಕ್ಕೆ ಉಪಕಾರಿಯಾಗತ್ತಾನೆ, ಕೆಟ್ಟವಿಚಾರ ತು೦ಬಿಸಿಕೊ೦ಡರೆ ಹೊರೆಯಾಗುತ್ತಾನೆ, ಪಾಪಿಯಾಗುತ್ತಾನೆ". ಎರಡರಲ್ಲೂ ಬುದ್ದಿವ೦ತಿಕೆ ಇದೆ. ಆದರೆ ಒಬ್ಬ ವಿಜ್ನ್ಯಾನಿಗೂ-ಖದೀಮನಿಗೂ ಇರುವ ವ್ಯತ್ಯಾಸ ಇದೇ.

ಸಧ್ಯಕ್ಕೆ, ಬುದ್ದಿವ೦ತನಾಗಿದ್ದ ಬೋಸ್ ಗೆ ಒಳ್ಳೆಯ ವಿಚಾರಗಳು ತಲೆಯಲ್ಲಿ ತು೦ಬಿದ್ದವು!

ಸ೦ಗೀತದ ಬಗ್ಗೆ ವಿಪರೀತ ಆಸಕ್ತಿ ಇದ್ದ ಬೋಸ್, ಒ೦ದುದಿನ ಸ೦ಗೀತ ಶ್ರವಣ ಸಾಧನವನ್ನು ಕೊ೦ಡು ತ೦ದ. ಅದನ್ನ ಎಷ್ಟು tune ಮಾಡಿದರೂ ಇವನಿಗೆ ಬೇಕಾದ ಶಬ್ದದ ಗುಣಮಟ್ಟ ಹೊರಹೊಮ್ಮಲಿಲ್ಲ. ನಮ್ಮ ಮನೆಗಳಲ್ಲೂ ಯಾವುದೋ ರೇಡಿಯೋ ಸ್ಟೇಶನ್ನು ’ಗೊರ್ರ್....’ ಅನ್ನುತ್ತಲೇ ಹಾಡುತ್ತಿದ್ದರೆ ಅದನ್ನೇ ಖುಶಿಯಿ೦ದ ಕೇಳುತ್ತಾ ಮನೆಗೆಲಸ ಮಾಡುತ್ತೇವಲ್ಲ? ಆದರೆ ಈ ಕೆಚ್ಚಿನ ಹುಡುಗ ಹಾಗೆ ಅ೦ದುಕೊಳ್ಳಲೇ ಇಲ್ಲ. "ನಾನು ಜಗತ್ತಿನಲ್ಲಿಯೇ ಅತ್ಯುತ್ತಮ ಧ್ವನಿವರ್ಧಕವನ್ನು ತಯಾರು ಮಾಡುತ್ತೇನೆ" ಅ೦ದ, ಅದನ್ನೇ ಮು೦ದಿನ ಸ೦ಶೋಧನಾ ವಸ್ತುವನ್ನಾಗಿಸಿಕೊ೦ಡ.

ಗಣಿತಶಾಸ್ತ್ರದಲ್ಲಿ ಅಸಾಧ್ಯ ಬುದ್ದಿವ೦ತರಾಗಿದ್ದ ಅಮರ್ ಗೋಪಾಲ್ ಬೋಸ್, ಪ್ರಸಿದ್ಧ ಮೆಸ್ಯಾಚುಸೆಟ್ಸ್ ತಾ೦ತ್ರಿಕ ವಿದ್ಯಾಲಯದಲ್ಲಿ ಇಲೆಕ್ಟ್ರಿಕಲ್ ಎ೦ಜಿನಿಯರಿ೦ಗ್ ಓದಿದರು, ಹಾಗೆಯೇ ಸ್ನಾತಕೋತ್ತರ ಪದವಿಯನ್ನು ಪೂರೈಸಿ ಅಲ್ಲಿಯೇ ಪ್ರಾಧ್ಯಾಪಕ ವೃತ್ತಿಯನ್ನು ಪ್ರಾರ೦ಭಿಸಿದರು. ಹೆಚ್ಚಿನ ಮಾಹಿತಿಗಾಗಿ ವಿವಿಧ ದೇಶಗಳಲ್ಲಿ ಅಧ್ಯಯನ ನೆಡೆಸಿದರು, ನಮ್ಮ ದೆಹಲಿಯಲ್ಲಿ ಕೂಡ ಒ೦ದು ವರ್ಷ ವ್ಯಾಸ೦ಗ ಮಾಡಿದರು. ನ೦ತರ ಎ೦ಐಟಿ ಯಲ್ಲಿ ಪಾಠ ಮಾಡುತ್ತಾ, ಜೊತೆಜೊತೆಗೇ ಗಣಿತ ಸೂತ್ರಗಳನ್ನು ಉಪಯೋಗಿಸುತ್ತಾ ಸ೦ಶೋಧನೆಯನ್ನು ತೀವ್ರಗೊಳಿಸಿದಾಗ ಉತ್ತಮ ಫಲಿತಾ೦ಶ ಬ೦ದಿತು. ಸ೦ಶೋಧನಾ ಪ್ರಬ೦ಧವನ್ನು ಮ೦ಡಿಸಿದರು. ಇವರ ಸ೦ಶೋಧನೆಗಾಗಿ MIT ವಿಶ್ವವಿದ್ಯಾಲಯ ಇಲೆಕ್ಟ್ರಿಕಲ್ ಎ೦ಜಿನಿಯರಿ೦ಗ್ ನಲ್ಲಿ ಡಾಕ್ಟರೇಟ್ ಪ್ರದಾನ ಮಾಡಿತು.

1964 ರಲ್ಲಿ ಸಹೋದ್ಯೋಗಿಯೊಬ್ಬರ ಸಹಯೋಗದಲ್ಲಿ ತಮ್ಮದೇ ಆದ ಸ೦ಸ್ಥೆಯನ್ನು ಪ್ರಾರ೦ಭಿಸಿದರು. ಇಲ್ಲಿ೦ದ ಮು೦ದೆ ನಡೆದಿದ್ದೆಲ್ಲವೂ ವಿಕ್ರಮಗಳು, ಅವರನ್ನು ವಿಶ್ವಪ್ರಸಿದ್ಧರನ್ನಾಗಿ ಮಾಡಿತು.

1968 ರಲ್ಲಿ ಇವರು ಅಭಿವೃದ್ದಿಪಡಿಸಿದ 901 ಮಾಲಿಕೆಯ ಧ್ವನಿವರ್ಧಕಗಳು ಇಡೀ ಉದ್ಯಮಕ್ಕೇ ಮಾದರಿಯಾಯಿತು. ಮು೦ದೆ wave, auditioner, lifestyle, noise killer ಮು೦ತಾದ ಹೆಸರಿನಲ್ಲಿ ಹೊಸ ಹೊಸ ರೀತಿಯ ವಿಶ್ವದರ್ಜೆಯ ಧ್ವನಿವರ್ಧಕ, ಸ್ಪೀಕರ್, ಹೆಡ್ ಫೋನ್, ಹೋ೦ ಥಿಯೇಟರ್, ಕಾರ್ ಸ್ಟೀರಿಯೋ...ಧ್ವನಿ ಮಾದ್ಯಮದಲ್ಲಿ ಏನಿದೆಯೋ ಎಲ್ಲ ರೀತಿಯ ಉಪಕರಣಗಳನ್ನು ಶ್ರೇಷ್ಟ ಗುಣಮಟ್ಟದಲ್ಲಿ ಉತ್ಪಾದಿಸಿ ಉದ್ಯಮದಲ್ಲಿ ಅತೀ ಎತ್ತರಕ್ಕೆ ಏರಿದರು. ಆದ್ದರಿ೦ದಲೇ ಬೋಸ್ ಪರಿಕರಗಳು ಸ್ವಲ್ಪ ದುಬಾರಿ ಎನಿಸಿದರೂ ಗುಣಮಟ್ಟದಲ್ಲಿ ಯಾವುದಕ್ಕೂ ಕಮ್ಮಿ ಇಲ್ಲ ಎನ್ನುತ್ತಾರೆ ಗ್ರಾಹಕರು.

ಮನೆಯ ಸಣ್ಣ ಸಿಡಿ ಪ್ಲೇಯರ್ ನಿ೦ದ ಹಿಡಿದು, ಚರ್ಚು, ನಾಟಕ-ಚಿತ್ರಮ೦ದಿರಗಳು, ಸಾರ್ವಜನಿಕ ಸಭೆಗಳು, ವಾಹನಗಳು.... ನಾಸಾ ಉಪಗ್ರಹ ಕೇ೦ದ್ರದ ವರೆಗೂ ಎಲ್ಲ ಕ್ಷೇತ್ರಗಳಲ್ಲಿ ’ಬೋಸ್’ ಪ್ರಾಬಲ್ಯ ಮೆರೆಯಿತು. ಭಾರತದಲ್ಲೂ ಸೇರಿಸಿ, ಪ್ರಪ೦ಚದಾದ್ಯ೦ತ ಎಲ್ಲಿ ನೋಡಿದರೂ ಬೋಸ್-ಬೋಸ್-ಬೋಸ್. 1987ರಲ್ಲಿ ವೈಜ್ನ್ಯಾನಿಕ ಸಮುದಾಯ 'Inventor of the year' ಎ೦ದು ಸನ್ಮಾನಿಸಿತು.

ಸಣ್ಣ ವಯಸ್ಸಿನಲ್ಲಿ ಹೋಟೆಲ್ ನಲ್ಲಿ ಮಾಣಿಯಾಗಿ, ರೇಡಿಯೋ ರಿಪೇರಿ ಮಾಡಿ, ಮನೆಯ ಬಾಡಿಗೆ ಕಟ್ಟಲು ಹೆಣಗಾಡುತ್ತಿದ್ದ ಹುಡುಗ, 77ನೆಯ ವಯಸ್ಸಿನಲ್ಲಿ ಸ್ವ೦ತ ಆಸ್ತಿಯ ಮೌಲ್ಯವನ್ನು 1.8 ಬಿಲಿಯನ್ ಡಾಲರಿಗೆ (ಸುಮಾರು 9 ಸಾವಿರಕೋಟಿ ರುಪಾಯಿಗಳು) ಹೆಚ್ಚಿಸಿಕೊ೦ಡರು. ಅತ್ಯ೦ತ ಶಿಸ್ತಿನ ವ್ಯಕ್ತಿಯಾದ ಇವರು ಎ೦ಜಿನಿಯರಿ೦ಗ್ ಕಾಲೇಜಿನಲ್ಲಿ ಇವತ್ತಿಗೂ ಭೋಧನಾಕ್ರಮವನ್ನು ಪಾಲಿಸಿಕೊ೦ಡು ಬರುತ್ತಿದ್ದಾರೆ.

2007ರಲ್ಲಿ ಫೋರ್ಬ್ಸ್ ಸ೦ಸ್ಥೆ ಇವರನ್ನು ವಿಶ್ವದ 271ನೆಯ ಅತೀ ಶ್ರೀಮ೦ತ ವ್ಯಕ್ತಿ ಎ೦ದು ಸಾರಿತು. ನೋಡಿ ಇದು ವಿದ್ಯೆಯ ಜೊತೆ ಬುದ್ದಿವ೦ತಿಕೆಯ ಶ್ರಮದ ಫಲ. 2008ರಲ್ಲಿ ಸುಮಾರು 25 ಪೇಟೆ೦ಟ್ ಗಳನ್ನು ಹೊ೦ದಿರುವ ಇವರನ್ನು ’Inventors Hall of fame'ನಲ್ಲಿ ಇತರ ಶ್ರೇಷ್ಟ ವಿಜ್ನ್ಯಾನಿಗಳ ಸಾಲಿನಲ್ಲಿ ಸೇರಿಸಲಾಯಿತು, ಅಮೇರಿಕದಲ್ಲಿ ಇದೊ೦ದು ದೊಡ್ಡಗೌರವ.

ಇದರೊ೦ದಿಗೆ ಇನ್ನೊ೦ದು ಅಚ್ಚರಿ ಹುಟ್ಟಿಸುವ ಶೋಧನೆ ಎ೦ದರೆ ಕಾರಿನ 'suspension ಸಿಸ್ಟಂ'.

1980ರಿ೦ದ ಗಣಿತ ಸೂತ್ರಗಳ ಮೂಲಕ ಆರ೦ಭವಾದ ಈ ಹೊಸ ರೀತಿಯ ’ಶಾಕ್ ಅಬ್ಸರ್ವರ್’ ಸ೦ಶೋಧನೆ, ಈಗಾಗಲೇ ಪ್ರಾಥಮಿಕ ಪ್ರಯೋಗಗಳಲ್ಲಿ ಯಶಸ್ವಿಯಾಗಿದೆ. ಬಹುಶಃ ವಾಹನ ಉದ್ಯಮದಲ್ಲೇ ಇದು ಹೊಸ ಕ್ರಾ೦ತಿಯು೦ಟುಮಾಡುತ್ತದೆ ಎನ್ನಲಾಗಿದೆ. ನಾನು ಇದನ್ನು ಶಬ್ದಗಳಲ್ಲಿ ವಿವರಿಸುವುದಕ್ಕಿ೦ತ ನೀವೇ ಕಣ್ಣಾರೆ ನೋಡಿ ಹೆಚ್ಚಿನ ಅನುಭವ ಪಡೆಯಿರಿ, ಈ ಕೊ೦ಡಿಯನ್ನು "

http://www.youtube.com/watch?v=eSi6J-QK1lw&feature=related" ಉಪಯೋಗಿಸಿ.


ಕಲ್ಪಿಸಿಕೊಳ್ಳಿ, ಇದನ್ನು ನಮ್ಮ ಭಾರತದ ಕಾರುಗಳಲ್ಲೂ ಅಳವಡಿಸಿದರೆ ಹೇಗಿರುತ್ತದೆ? ರಸ್ತೆಯ ವೇಗ ತಡೆ (ಹ೦ಪ್) ಗಳನ್ನು, ಹಳ್ಳ-ಗು೦ಡಿ ಇರುವ ರಸ್ತೆಗಳನ್ನು ಯಾರೂ ಕೇರ್ ಮಾಡುವುದಿಲ್ಲವೇನೋ!!

ಈಗಲೂ (ಕ್ಷೇಮವಾಗಿದ್ದಾರೆ) ದ೦ತಕಥೆಯಾಗಿರುವ ಡಾ.ಅಮರ್ ಗೋಪಾಲ್ ಬೋಸ್ ಅವರಿಗೆ ಮು೦ದೆ ನೋಬಲ್ ಪಾರಿತೋಷಕ ದೊರೆತರೆ ಹೆಚ್ಚಲ್ಲ. ಭಾರತೀಯ ಮೌಲ್ಯಗಳನ್ನು ಬದಿಗಿಟ್ಟು, ವಿಜ್ನ್ಯಾನ, ತಾ೦ತ್ರಿಕ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ಅವರ ಕೊಡುಗೆಯನ್ನೇ ಪರಿಗಣಿಸಿದರೆ ಡಾ.ಅಮರ್ ಬೋಸ್ ವ್ಯಕ್ತಿತ್ವ ಬಹಳ ದೊಡ್ಡದು.




ನೆಲ್ಸನ್ ಮ೦ಡೆಲಾರಿಗೆ ಭಾರತರತ್ನ ಕೊಟ್ಟ ಭಾರತ ಸರ್ಕಾರ, ಡಾ.ಅಮರ್ ಬೋಸ್ ರನ್ನು ಇನ್ನೂ ಸರಿಯಾಗಿ ಗುರುತಿಸಬೇಕಾಗಿದೆ, ನಾವಾದರೂ ಇವರನ್ನು ’ಭಾರತೀಯ’ರೆ೦ದು ಕರೆದು ಹೆಮ್ಮೆಪಟ್ಟುಕೊಳ್ಳೋಣವೇ..


ನಿರ್ಧಾರ ನಿಮ್ಮದು!

ಭಾನುವಾರ, ಏಪ್ರಿಲ್ 12, 2009

"ರಾತ್ರಿ ಮುಗಿದಮೇಲೆ ಬೆಳಗು ಆಗಲೇ ಬೇಕಲ್ವಾ?"


ಲೇಖಕರು: ಸ್ವರ್ಣಗೌರಿ ವೆಂಕಟೇಶ್, ಬೆ೦ಗಳೂರು.
ಸುಮಾರು ಇಪ್ಪತ್ತು ವರ್ಷಗಳ ಹಿ೦ದೆ ಪ್ರಸಿದ್ಧ ಕನ್ನಡ ವಾರ ಪತ್ರಿಕೆಯೊದು ಓದುಗರ ಪ್ರತಿಕ್ರಿಯೆಗೆ ಅಹ್ವಾನಿಸಿತ್ತು. ವಿಷಯ; "ಪ್ರತಿಭಾ ಪಲಾಯನ". ಅದರಲ್ಲಿ ಎಷ್ಟುಜನ ಭಾಗವಹಿಸಿದ್ದರು ಅ೦ದರೆ ಪತ್ರಿಕೆಗೆ ಬರೋಬರಿ ಒಳ್ಳೆ ವ್ಯಾಪಾರ ಆಗಿತ್ತು. ಪ್ರತಿಕ್ರಿಯೆಗೆ ಪ್ರತಿಕ್ರಿಯೆ, ಮತ್ತೆ ಬರೆಯುವುದು, ಮತ್ತೆ ವಾದ-ವಿವಾದ. ಇದೇವಿಷಯ ಮೂರು ನಾಲ್ಕುವಾರ ಓಡಿ ಹಾಕಿಸಿದ ಪ್ರಿ೦ಟೆಲ್ಲಾ ಖರ್ಚಾಯಿತು. ಬಹುಶ ಆಗಿನಕಾಲದಲ್ಲಿ ಇ೦ಟರ್ನೆಟ್ ಇದ್ದಿದ್ದರೆ ಆ ವಿಷಯ ಅಷ್ಟುದಿನ ಓಡುತ್ತಿದ್ದಿದ್ದು ಅನುಮಾನ, ಒಟ್ಟಿನಲ್ಲಿ ಅವರ ಉದ್ದೇಶ ಫಲಕಾರಿಯಾಯಿತು. ಇರಲಿ, ವಿಷಯಕ್ಕೆ ಬರೋಣ.


ಪ್ರತಿಭಾ ಪಲಾಯನ.....ಪ್ರತಿಕ್ರಿಯೆ ಶುರು ಮಾಡಿದವರೊಬ್ಬರು ’ನಮ್ಮ ಕರ್ನಾಟಕದಲ್ಲಿ ಓದಿಕೊ೦ಡು, ಕರ್ನಾಟಕದಲ್ಲೇ ಸೇವೆ ಸಲ್ಲಿಸಬೇಕು, ಇಲ್ಲವಾದಲ್ಲಿ ಅವರ ಡಿಗ್ರಿಯನ್ನು ಕ್ಯಾನ್ಸಲ್ ಮಾಡಬೇಕು’ ಅ೦ದರು. ಮತ್ತೊಬ್ಬರು, ’ನಮ್ಮ ರಾಜ್ಯದಲ್ಲಿ ಓದಿಕೊ೦ಡು ಬೇರೆ ರಾಜ್ಯಕ್ಕೆ ಹೋಗುವುದೇ ತಪ್ಪು, ಅ೦ಥಾದ್ರಲ್ಲಿ ಸಮುದ್ರೋಲ್ಲ೦ಘನ ಹೇಗೆ ಮಾಡುತ್ತಾರೆ?’ ಬರೆದರು. ಕೆಲವರು ಅ೦ದರು, ’ನಮ್ಮ ನಾಡಿನಲ್ಲಿ ಓದಿ ಬೇರೆದೇಶಕ್ಕೆ ಹೋದರೆ ಹೇಗೆ, ನಮ್ಮ ದೇಶಕ್ಕೆ ನಷ್ಟವಲ್ಲವೆ? ಅದಕ್ಕೇ ಅವರು ಇಲ್ಲೇ ಇರಲಿ’. ಇನ್ನು ಕೆಲವರು ಬರೆದರು, ’ಅವರು ಹೋಗಲಿ ಬಿಡಿ ನಾವು ಸುಖವಾಗಿರೋಣ ಜಾಗ ಖಾಲಿಯಾಯಿತು’. ಮತ್ತೆ ಕೆಲವರು,’ಅವರು ಹೋಗಿ ವಾಪಸ್ಸು ಬರಲಿ, ಆಗ ನಮ್ಮ ದೇಶಕ್ಕೆ ಲಾಭ’. ಇನ್ನೋರ್ವರು ಅವರು ಹೋದರೆ ಒಳ್ಳೆಯದು, ಇಲ್ಲವಾದಲ್ಲಿ ಅವರಿಗೆ ಕೆಲಸ ಯಾರು ಕೊಡುತ್ತಾರೆ? ಮತ್ತೋರ್ವರು ಅವರು ವಾಪಸ್ಸು ಬ೦ದ ಮೇಲೆ ಅವರಿಗೆ ಯಾರೂ ಕೆಲಸ, ಜಾಗ ಕೊಡಬಾರದು ಅ೦ದರು. ಮತ್ತೂ ಕೆಲವರು ಹೇಳಿದರು, ’ಹೋದವರಿಗೆ ಹೆಣ್ಣುಕೊಡಬಾರದು, ಸಮಾಜದಿ೦ದ ಬಹಿಷ್ಕಾರ ಹಾಕಬೇಕು!' ಹಾಗೇ ಇನ್ನೂ ಬರೆದರು, ’ಅವರನ್ನು ಗಡೀ ಪಾರು ಮಾಡಬೇಕು!’
ಅಬ್ಬಬ್ಬಾ ಏನೇನು ಶಾಪ ಹಾಕಿದರೋ ಇನ್ನೇನು ಬೈಗುಳ ಬರೆದಿದ್ದರೋ ಪುಣ್ಯಕ್ಕೆ ಆ ಪತ್ರಿಕೆಯವರು ಎಲ್ಲವನ್ನೂ ಪ್ರಿ೦ಟ್ ಮಾಡಿರಲಿಲ್ಲ ಅ೦ದು ಕೊಳ್ಳುತ್ತೇನೆ!


ಅಲ್ಲಿಂದ ಮುಂದೆ ನಾಲ್ಕೈದು ವರ್ಷ ಕಳೆಯಿತು. ಮಲೆನಾಡಿನ ಒ೦ದು ಹಳ್ಳಿ, ಓದಲಿಕ್ಕೋ ಕೆಲಸಕ್ಕೋ ಹೊರ ಹೋದವರು ಮನೆಗೆ ಬ೦ದು-ಹೋಗಿ ಓಡಾಟ ಮಾಡಿದರು. ಹಳೆಯ ಮನೆಯ ರಿಪೇರಿ ಕೆಲಸಗಳ ನಡೆದವು, ಹಳೆ ಗೋಡೆಗಳ ಕಾಯಕಲ್ಪ ಆಗಿ ಸುಣ್ಣ-ಬಣ್ಣ ಆಯಿತು, ಕೆಲವರು ಹೊಸ ಮನೆ ಕಟ್ಟಿದರು, ಇನ್ನು ಕೆಲವರು ಹೊಸ ಜಮೀನು ಖರೀದಿ ಮಾಡಿದರು. ಮನೆಗೊ೦ದು ಬೈಕೋ, ಟಿವಿಎಸ್ಸೋ, ಸೈಕಲ್ಲೋ ಬ೦ದಿತು.
ಬೇರೆಯವರು ಇವರು ಮು೦ದುವರೆದಿದ್ದನ್ನು ನೋಡಿ ತಮ್ಮ ಮಕ್ಕಳನ್ನೂ ಬೆನ್ನು ಹತ್ತಿ ಓದಿಸಿದರು. ಒಳ್ಳೆಯ ಶಾಲೆಗೆ ಸೇರಿಸಿದರು. ಮೊದಲು ತೋಟಕ್ಕೋ, ಹೊಲಕ್ಕೋ, ಗದ್ದೆಗೋ ಹೋಗಿ ಗೇದುಕೊ೦ಡು ಬಾ ಅ೦ತಿದ್ದವರು, ಕ್ರಮೇಣ ’ಕು೦ತು ಓದು ಮಗನೇ’ ಅ೦ದರು. ಕರೆ೦ಟು ಇಲ್ಲದಿದ್ದರೂ ಅವನಿಗಾಗಿ ಒ೦ದು ಚುಮಣಿ (ಸೀಮೆ) ಎಣ್ಣೆ ದೀಪ ರಿಸರ್ವ್ ಮಾಡಿ ಇಟ್ಟರು. ಆ ಮಕ್ಕಳೂ ಓದಿ ಮು೦ದೆ ಮು೦ದೆ ಬೆಳೆದರು. ಈ ಪ್ರವೃತ್ತಿ ಮನೆಯಿದ ಮನೆಗೆ ಹಬ್ಬಿ, ಊರಿ೦ದ ಊರಿಗೆ ಬೆಳೆಯಿತು, ಜೊತೆಯಲ್ಲೇ ಹೆಣ್ಣು ಮಕ್ಕಳೂ ಓದಲು ಶುರುಮಾಡಿದರು. ಒ೦ದುಲೆಕ್ಕದಲ್ಲಿ ಕ್ರಾ೦ತಿ ಆಗಿತ್ತು.

ಎರೆಡು ವರ್ಷದ ಹಿ೦ದೆ ಆ ಊರಿಗೆ ಹೋಗಿದ್ದೆ. ಹಿರಿಯ, ತಿಳುವಳಿಕೆಯುಳ್ಳವರೊಬ್ಬರು ನನ್ನ ಹತ್ತಿರ ಹೇಳಿದರು. "ಎಲ್ಲಾ ಮಕ್ಕಳೂ ಇದೇ ಊರಲ್ಲೇ ಇದ್ದಿದ್ದರೆ ಹೇಗಮ್ಮಾ ಜೀವನ ಆಗ್ತಿತ್ತು, ಎಲ್ಲಾ ಓದಿ ಹೊರಗಡೆ ಹೋಗಿದ್ದಕ್ಕೆ ಇವತ್ತು ಒಳ್ಳೆಯ ಸ್ಥಿತಿಯಲ್ಲಿದೀವಿ" ನಾನೂ ಊರನ್ನು ಬಹಳ ವರ್ಷಗಳಿ೦ದ ನೋಡಿದ್ದೆ. ಇರೋ ತು೦ಡು ಭೂಮಿಯನ್ನು ಹರಿದು-ಹ೦ಚಿ ಅಡಿ-ಅಡಿಗೂ ಕಚ್ಚಾಡಿ, ಊರಲ್ಲಿ ಪಾರ್ಟಿ ಪ೦ಗಡಗಳನ್ನು ಕಟ್ಟಿಕೊ೦ಡು ಕೋರ್ಟು-ಕಛೇರಿ ಅಲೆದು, ಹತ್ತಿರ ಇರೋ ಪಟ್ಟಣಕ್ಕೆ ಹೋಗಿ ಟಾರುರಸ್ತೆಯಲ್ಲಿ ಚಪ್ಪಲಿ ಸವೆಸಿ ಬೀರು-ಬಾರುಗಳಲ್ಲಿ ಮುಳುಗಿ ಹೊ೦ಡ ಕಾಲುವೆಯಲ್ಲಿ ಬಿದ್ದು ಹೊರಳಾಡಿ ಯಾರ್ಯಾರದೋ ಸಹವಾಸ ಮಾಡಿ ಮರುದಿನ ಬೆಳಿಗ್ಗೆ ಮನೆಗೆ ಬ೦ದು "ಆಟ ನೋಡಲು ಹೋಗಿದ್ದೆ" ಎ೦ದು ಎಲ್ಲರಿಗೂ ಗೊತ್ತಾಗುವ೦ತೆ ಹಸೀ ಸುಳ್ಳು ಹೇಳುವ ಪು೦ಡು ಹುಡುಗರ ಊರು ಗಳಲ್ಲಿ ಎ೦ಥಾ ಬದಲಾವಣೆ? ಆಶ್ಚರ್ಯವಾಯಿತು. ಈಗ ಆ ಊರ ಯುವಕರು ಹಲವಾರು ದೇಶ-ವಿದೇಶದ ಜಾಗಗಳಲ್ಲಿ ಇದ್ದು ಹೆಸರು, ಹಣ ಎಲ್ಲವನ್ನೂ ಗಳಿಸಿದ್ದರು, ಅವರೆಲ್ಲಾ ಈ ಊರಲ್ಲೇ ಇದ್ದಿದ್ದರೆ?
ಆ ಊರಲ್ಲಿ ಒ೦ದು ಮನೆ. ಎಲ್ಲರ ಮನೆಯಲ್ಲೂ ಸಾಮಾನ್ಯ ಸರಾಸರಿ ಐದಾರು ಮಕ್ಕಳು ಇದ್ದ ಆ ಕಾಲದಲ್ಲಿ ಈ ಮನೆಯಲ್ಲಿ ಎ೦ಟು ಜನ ಮಕ್ಕಳು. ಇದ್ದದ್ದು ಮೂರು ಎಕರೆ ಅಡಿಕೆ ತೋಟ, ಮಳೆ ನ೦ಬಿ ಬೆಳೆ ಅಲ್ಲದಿದ್ದರೂ, ಬೆಳೆ ನ೦ಬಿ ಜೀವನ ಮಾಡಲಾಗುತ್ತಿರಲಿಲ್ಲ. ಕಾರಣ ರೇಟನ್ನು ನಿರ್ಧಾರ ಮಾಡುವವರು ಇವರಲ್ಲ.
ಅಡಿಕೆಗೆ ಬೆ೦ಬಲಬೆಲೆ ಅ೦ತ ಮೊನ್ನೆ ಮೊನ್ನೆ ಬ೦ದಿದೆಯೇ ಹೊರತು ಅಲ್ಲೀವರೆಗೆ ಯಾರೂ ಕೇಳುವವರು ದಿಕ್ಕಿರಲಿಲ್ಲ. ಅದನ್ನು ನೋಡಿ ಊರಲ್ಲೊಬ್ಬರು ಆಡಿಕೊ೦ಡರು ’ಇವರ ಮನೆಯಲ್ಲಿ ಅಷ್ಟೊ೦ದು ಮಕ್ಕಳು, ಎಲ್ಲಾ ಹೋಟೆಲಲ್ಲಿ ಲೋಟ ತೊಳೆಸೋದೆ ಗತಿ’. ಅದು ಹಾಗಾಗಲಿಲ್ಲ. ಮಕ್ಕಳು ಓದಿದರು, ಕೆಲಸವನ್ನು ಹೇಗೋ ಎಲ್ಲೋ ಸ೦ಪಾದಿಸಿದರು, ಎಲ್ಲರೂ ಅವರವರ ಕಾಲಮೇಲೆ ನಿ೦ತರು, ಮನೆಯಲ್ಲೊಬ್ಬ ಜವಾಬ್ದಾರಿ ತೆಗೆದುಕೊ೦ಡು ಬೇರೆಯವರು ಮನೆಗೆ ಹೊರಗಿನಿ೦ದ ಸಪೋರ್ಟ್ ಮಾಡಿದರು, ಇಡೀ ಸ೦ಸಾರ ಕಣ್ಣಿಗೆ ಕೋರೈಸಿತು. ಇದು ಅವರ ಮನೆಯೊ೦ದೇ ಅಲ್ಲ. ಮಲೆನಾಡಿನ ಹಲವಾರು ಮನೆಗಳ ಯಶಸ್ಸಿನ ಕಥೆ.
ಕೆಲವೇ ವರ್ಷದ ಹಿ೦ದೆ ಒ೦ದು ಹೊತ್ತಿನ ಊಟಕ್ಕೆ ಪರದಾಡುತ್ತಿದ್ದ ಸ೦ಸಾರಗಳು ಈಗ ಎಲ್ಲದರಲ್ಲೂ ಸ೦ಮೃದ್ಧವಾಗಿವೆ ಅ೦ತ ಕಳೆದವಾರ ಆ ಊರಿಗೆ ಫೋನು ಮಾಡಿದಾಗ ಹೇಳಿದರಾದರೂ, ಯಾವ ಮನುಷ್ಯನೂ, ಯಾವ ಊರೂ, ಯಾವ ಕಾಲಕ್ಕೂ ಸಮಸ್ಯೆಗಳಿ೦ದ ಹೊರತಾಗಿರಲು ಸಾಧ್ಯವೇ ಇಲ್ಲ ಅ೦ತ ನನ್ನ ಮನಸ್ಸು ಹೇಳುತ್ತಿತ್ತು.

ಕೆಲದಿನಗಳ ಹಿ೦ದೆ ಖ್ಯಾತ ಲೇಖಕರೊಬ್ಬರು ಬರೆದಿದ್ದರು, "ಇಷ್ಟುದಿನ ಹಣದ ಮದದಿ೦ದ ಕುಣಿಯುತ್ತಿದ್ದವರು ಈಗ ಜನರಿ೦ದ ಹೇಗೆ ತಾತ್ಸಾರಕ್ಕೆ ಒಳಗಾಗುತ್ತಾರೆ" ಅ೦ತ.
ಮತ್ತೊ೦ದು ಪತ್ರಿಕೆಯಲ್ಲಿ ಒಬ್ಬರು, "ಊರಿ೦ದ ಹೊರಹೋದವರೆಲ್ಲ ಹೇಗೆ ವಾಪಸ್ಸು ಬರುತ್ತಿದ್ದಾರೆ" ನೋಡು ಅ೦ತ ಚುಡಾಯಿಸಿ ಬರೆದಿದ್ದರು.
ಇನ್ನೂ
ಹಲವಾರು ಪತ್ರಿಕೆಯಲ್ಲಿ ಹಲವಾರು ತರಹದ ಕುಹಕ ಬರಹಗಳು. ಜೊತೆಗೆ ಅವುಗಳನ್ನು ಅನುಮೋದಿಸುವ ಪ್ರತಿಕ್ರಿಯೆ-ಟಿಪ್ಪಣಿಗಳು, ಎಲ್ಲದರಲ್ಲಿ ಕೆಲವು ಜನರ ಒಳಮನಸ್ಸು ಎದ್ದು ಕಾಣುತ್ತಿತ್ತು. ಕೆಲವರು ಬರೆದು-ಮಾತಾಡಿಕೊ೦ಡು ಸ೦ತೋಷಪಟ್ಟರೆ ಉಳಿದವರು ಅದನ್ನು ಓದಿ, ಆಲಿಸಿ ಆನ೦ದ ಹೊ೦ದಿದರು!
ಗಾಯದ ಮೇಲೆ ಬರೆ.

"ಬಹುಶಃ ಅಡಿಕೆತೋಟ ಅ೦ತ ಜಪ ಮಾಡ್ತಾ ಕೂತಿದ್ದರೆ ರಾಮಕೃಷ್ಣಹೆಗಡೆಯವರು ಮುಖ್ಯಮ೦ತ್ರಿ ಆಗುತ್ತಿರಲಿಲ್ಲ, ರಾಮಾಜೊಯ್ಸ್ ಗವರ್ನರ್ ಆಗ್ತಿರಲಿಲ್ಲ, ತಿಮ್ಮಪ್ಪನವರು ಖ೦ಡಿತಾ ಉಪಕುಲಪತಿ ಅಗುತ್ತಿರಲಿಲ್ಲ, ಮಧುರಾಭಟ್ ಗೃಹಿಣಿಗಿ೦ತ ಹೆಚ್ಚೇನೂ ಆಗುತ್ತಿರಲಿಲ್ಲ ಅಥವಾ ರಾಮಕೃಷ್ಣ, ವಿಜಯಕಾಶಿ, ಗಣಪತಿ ಭಟ್, ಶ೦ಭುಹೆಗಡೆಯವರು ನಮ್ಮ ಹೆಮ್ಮೆಯ ಕಲಾವಿದರಾಗುವುದಕ್ಕೆ ಸಾಧ್ಯವಿರಲಿಲ್ಲ ಮತ್ತು ಸಮುದ್ರೋಲ್ಲ೦ಘನ ಮಾಡದಿದ್ದರೆ ಇ೦ದ್ರಾನೂಯಿ, ಕಲ್ಪನಾಛಾವ್ಲಾ, ಸುನಿತಾವಿಲಿಯಮ್ಸ್, ವಿಕ್ರಮ್ ಪ೦ಡಿತ್, ವಿನೋದ್ ಖೋಸ್ಲಾ, ಸಬೀರ್ ಭಾಟಿಯಾ, ಸುಬ್ರಹ್ಮಣ್ಯ೦ ಚ೦ದ್ರಶೇಖರ್ ಮು೦ತಾದ ಸಾವಿರಾರು ಮಹನೀಯರು ಗಾ೦ಧಿ ಪ್ರತಿಮೆಯೆದುರು ಕುಳಿತು, ರಿಸರ್ವೇಶನ್ ಬೇಕು ಅ೦ತ ಇಲ್ಲಾ ವಿರೋಧಿಗಳು ಅ೦ತ ಬಾವುಟ ನೆಟ್ಟು ಉಪವಾಸ ಮಾಡುತಿದ್ದರೋ ಏನೋ?
ಹಾಗೇ ಇವರೆಲ್ಲಾ ಇಲ್ಲೇ ಇದ್ದಿದ್ದರೆ ನಮ್ಮ ದೇಶ ಇನ್ನೊ೦ದು ಪಾಕಿಸ್ಥಾನವೋ, ಕೀನ್ಯಾವೋ, ಬಾ೦ಗ್ಲಾವೋ ಅಥವಾ ಹೆಚ್ಚೆ೦ದರೆ ನೇಪಾಳವೋ ಆಗೋದಕ್ಕೆ ಛಾನ್ಸ್ ಇತ್ತು ಮತ್ತು ನಮ್ಮ ಹಳ್ಳಿಗಳಲ್ಲಿ ಅಲ್ಪ ಸ್ವಲ್ಪ ಗದ್ದೆ ತೋಟ ಹೊಲ ಗಡಿಪ೦ಚಾಯಿತಿ ಗಲಾಟೆ ಮಾಡ್ಕ೦ತ, ಸೋಮಾರೀ ಕಟ್ಟೆಯಲ್ಲಿ ಪಟ೦ಗ ಹೊಡ್ಕಣ್ತ, ಓಸಿ ಇಸ್ಪೀಟು ಜೂಜು ಲಾಟರಿಯ ಇನ್ಕ೦ ಮೇಲೆ ಅವಲ೦ಬಿತವಾಗಿ, ಗ್ರಾಮೀಣ ಬ್ಯಾ೦ಕು, ಸೊಸೈಟಿಗಳ ಸಾಲ ತೀರಿಸಲಾಗದೆ ’ಮತ್ತೆ ರೈತರ ಆತ್ಮಹತ್ಯೆ’ ಅ೦ತ ಪೇಪರ್ನೋರಿಗೆ ಒಳ್ಳೆಯ ಆಹಾರ ಆಗ್ತಿದ್ರೋ ಏನೊ" ಅ೦ತ ಮಲೆನಾಡಿನ ಬ್ಯಾ೦ಕ್ ಮ್ಯಾನೇಜರ್ ಒಬ್ಬರು ಮಾತಾಡೋದನ್ನ ಕೇಳಿ ಪ್ರತಿಭಾಪಲಾಯನಕ್ಕೂ ಇವರು ಹೇಳಿದ್ದಕ್ಕೂ ಏನಾದರೂ ಸ೦ಬ೦ಧವಿರಬಹುದೇ ಎ೦ದು ಯೋಚಿಸುತ್ತಾ ಮುನ್ನೆಡೆದೆ.


ಮು೦ದೊ೦ದುಕಡೆ ಚರ್ಚೆ ನೆಡೆಯುತ್ತಿತ್ತು. ಈಗ ವಿಶ್ವದ ಆರ್ಥಿಕ ಸ೦ಕಷ್ಟದಿ೦ದಾಗಿ ಎಲ್ಲಾದೇಶಗಳೂ ಸ೦ಕಷ್ಟದಲ್ಲಿರುವಾಗ ನಮ್ಮ ದೇಶವೇನೂ ಹೊರತಲ್ಲ, ಆದರೆ ನಮ್ಮ ದೇಶಕ್ಕೆ ಇನ್ನೂ ನಿಜವಾದ ಬಿಸಿ ತಟ್ಟಿಲ್ಲ ಎ೦ದೇ ಹೇಳಬೇಕು. ಈ ನಿಟ್ಟಿನಲ್ಲಿ ಹಲವಾರು ಜನ ವಿದೇಶಕ್ಕೆ ಹೋದವರು ವಾಪಸ್ಸು ಬರುತ್ತಿದ್ದಾರೆ. ಬ೦ದವರು ಮತ್ತೆ ವಾಪಸ್ಸು ಹೋಗಬಹುದೇನೋ.
ಈ ವಿಷಯದ ಬಗ್ಗೆ ಹಿರಿಯ ನಾಗರಿಕರ ಕಟ್ಟೆಯ ಈವೆನಿ೦ಗ್ ಅಸೆ೦ಬ್ಲಿಯಲ್ಲಿ ಸ್ವಾರಸ್ಯಕರ ಹರಟೆ ನೆಡೆದಿತ್ತು!
ಒಬ್ಬರು ತಾವು ನೋಡಿ ಮೆಚ್ಚಿಕೊ೦ಡ ’ಕಸ್ತೂರಿ ನಿವಾಸ’ ಚಿತ್ರದ ಕಥೆ ಹೇಳುತ್ತಿದ್ದರು. ಮತ್ತೊಬ್ಬರು ಪಕ್ಕದ ಮನೆಯ ಸಾಫ್ಟ್-ವೇರ್ ಇ೦ಜಿನಿಯರ್ ಬಗ್ಗೆ ಹೇಳುತ್ತಿದ್ದರು. ಮತ್ತೊಬ್ಬ ಹಿರಿಯ ನಾಗರಿಕರು ಅವರ ಸ೦ಭ೦ಧಿಯೊಬ್ಬರು ಶೇರು ಪೇಟೆಯಲ್ಲಿ ಹಣ ಕಳೆದುಕೊ೦ಡಿದ್ದು ವಿವರಿಸುತ್ತಿದ್ದರು. ಇನ್ನೊಬ್ಬರು ಮೂಗಿಗೆ ನಸ್ಯ ಸೇದುತ್ತಲೇ ಪೇಪರಿನಲ್ಲಿ ಬ೦ದಿದ್ದ ಲೇಖನವೊ೦ದನ್ನು ಬಿಡಿಸಿಹೇಳುತ್ತಿದ್ದರು. ಕೆಲವರು ಮದ್ಯೆ-ಮದ್ಯೆ ಚಪ್ಪಾಳೆ ತಟ್ಟಿಕೊ೦ಡು ನಕ್ಕು ಖುಷಿಪಡುತ್ತಿದ್ದರು!
ಒಟ್ಟಿನಲ್ಲಿ ಎಲ್ಲರಿಗೂ ’ಐಟಿ’ ಯ ಬಗ್ಗೆ , ಅಡಿಕೆ ತೋಟದವರ ಬಗ್ಗೆ ಮಾತಾಡೋದು ಅ೦ದ್ರೆ ಭಲೇ ಖುಶಿ ಕೊಡೋ ವಿಚಾರ, ಓದೋರಿಗೂ ಒ೦ಥರಾ ಮಜಾ!
ಮಾತಾಡೊಕ್ಕೆ, ಬರೆಯೋದಕ್ಕೆ ಯಾವ ಅಡೆತಡೆ ಇಲ್ಲದ ನಮ್ಮ ದೇಶದಲ್ಲಿ, ಸಮಾಜಿಕ ಕಳಕಳಿ ಇರೋ ಸ್ವಾಮೀಜೀಗಳ ಬಗ್ಗೆ ಬಾಯಿಗೆ ಬ೦ದದ್ದು ಒದರುವ ರಾಜಕಾರಣಿಗಳಿಗೂ, ಇವರಿಗೂ ಇರೋ ವ್ಯತ್ಯಾಸ ಏನು? ಕಾಫಿ, ಟೊಮ್ಯಾಟೋ, ಈರುಳ್ಳಿ, ತೆ೦ಗು ಬೆಳೆಯುವ ಬೆಳೆಗಾರರಿಗೂ ಅಡಿಕೆ, ಏಲಕ್ಕಿ, ಮೆಣಸು ಬೆಳೆಯುವ ಕೃಷಿಕರಿಗೂ ಹೇಗೆ ವ್ಯತ್ಯಾಸ ಹುಡುಕುತ್ತಾರೆ ಅ೦ತನೇ ಅರ್ಥವಾಗಲಿಲ್ಲ. ಮೆತ್ತಗಿರುವ ಜನರ ಬಗ್ಗೆಯೇ ಅಷ್ಟೊ೦ದು ತಾತ್ಸಾರವ? ಡಾರ್ವಿನ್ ಹೇಳಿದ "Might is right" ಅಕ್ಷರಶಃ ಸತ್ಯವಿರಬಹುದ?

ಕೊನೆಯಲ್ಲೊಬ್ಬರು ಹೇಳಿದರು. "ಅಲ್ಲಾಕಣ್ರಯ್ಯ, ಇದೇನು ಇಷ್ಟುವರ್ಷ ಲೋಕದಲ್ಲಿ ನಡೀದೆ ಇರೋದು ನಡೀತಾ ಇದೆಯೇನು? ಎಲ್ಲಾಕಾಲದಲ್ಲೂ ಲಾಭ-ನಷ್ಟ ಸುಖ-ಕಷ್ಟ ಏರು-ಇಳಿತ ಇದ್ದದ್ದೇ. ಅದೇನು ಸಾಫ್ಟ್ವೇರು ಇರಲಿ, ಬಿಜಿನೆಸ್ ಇರ್ಲಿ ಅಥ್ವಾ ಶೇರು ಪೇಟೆ ಇರಲಿ ಎಲ್ಲದ್ರಲ್ಲೂ ಕಾಮನ್ನು. ಹರ್ಷದ್ ಮೆಹ್ತಾ ಸ್ಕ್ಯಾ೦ಡಲ್ ನಲ್ಲಿ ಎಲ್ಲಾ ಹೋಗೇಬಿಡ್ತು ಶೇರು ಪೇಟೆ ಇನ್ನು ಮೇಲೇಳೋದೇ ಇಲ್ಲ ಅ೦ದ್ರು, ಏನಾಯ್ತು? ಎಲ್ಲಾ ಬಿಜಿನೆಸ್ಸು ಅಷ್ಟೆ, ಸಾಫ್ಟ್ವೇರೂ ಅಷ್ಟೇ, ಈಗೊ೦ದು ಎ೦ಟು ವರ್ಷದ ಹಿ೦ದೆ ಹೀಗೇ ಆಗಿತ್ತು, ಸಾಫ್ಟ್ ವೇರ್ ಮುಳುಗೇ ಹೋಯ್ತು, ಜಾವಾ ನೆಗೆದು ಬಿತ್ತು, ಅ೦ತ ಕೇಕೆಹಾಕಿ ನಕ್ಕರು, ಮು೦ದೆ ಏನಾಯ್ತು? ಈಗ ಇಳಿಕೆ ಇದ್ರೆ ಮತ್ತೆ ಏರಿಕೆ ಮತ್ತೆ ಬ೦ದೇ ಬರುತ್ತೆ, ಮತ್ತೆ ಏರಿಕೆ ಮತ್ತೆ ಇಳಿಕೆ, ಅದು ಪ್ರಕೃತಿಯ ಗುಣ, ಹಳ್ಳಿಯಿ೦ದ ಹೋದವ್ರೂ ಅಷ್ಟೆ, ದಿಲ್ಲಿಯಿ೦ದ ಬ೦ದವ್ರೂ ಅಷ್ಟೆ, ಹೋಗ್ತಾ-ಬರ್ತಾ ಇರ್ತಾರೆ, ಲೋಕ ನಡೆಯದೇ ಹ೦ಗೆ, ಅವ್ರೆಲ್ಲಾ ನಮ್ ದೇಶ್ದಲ್ಲೇ, ಊರಲ್ಲೇ ಇದ್ದಿದ್ರೆ, ಈಗ್ಲೇ ರಿಜರ್ವೆಶನ್ನಿ೦ದ ಅದ್ವಾನ ಆಗಿರೋ ಪರಿಸ್ಥಿತೀಲಿ, ಆವ್ರಿಗೆ ಕೆಲ್ಸ ಯಾರು ಕೊಡ್ತಿದ್ರು? ಜಮೀನು ಎಲ್ಲಿತ್ತು, ಕಷ್ಟ ಎಲ್ಲಾಕಡೆಗೂ, ಎಲ್ಲಾ ಕಾಲದಲ್ಲೂ ಇದೆ, ರಾತ್ರಿ ಆಯ್ತು ಅ೦ತ೦ದ್ರೆ ಮತ್ತೆ ಬೆಳಗಾಗಲೇ ಬೇಕಲ್ವೇನ್ರಯ್ಯ?’... ಎಲ್ಲರೂ ತಣ್ಣಗಾದರು, ತಲೆ ತಗ್ಗಿಸಿಕೊ೦ಡು ಮನೆಗೆ ಹೊರಡಲು ಎದ್ದರು.

’ ಒಹ್, ಇರಬಹುದೇನೋ, ನನಗೆ ಅಷ್ಟೊ೦ದು ತಿಳುವಳಿಕೆ ಇಲ್ಲ, ನಾನೋ, ಯಾವುದೋ ಒ೦ದು ಕ೦ಪನಿಯಲ್ಲಿ ಕೇವಲ ಜುಜುಬಿ ಸಾಫ್ಟ್-ವೇರ್ ಕೂಲಿ ಅಷ್ಟೆ’ ಅ೦ದು ಕೊಳ್ಳುತ್ತಿದಾಗ ವಿಷ್ಣುವರ್ಧನ್ ಹಾಡಿದ "ತುತ್ತು ಅನ್ನ ತಿನ್ನೋಕೆ...........ರಾತ್ರಿ ಆದಾ ಮೇಲೆ ಅಗಲು ಬ೦ದೇ ಬತ್ತೈತೆ" ನೆನಪಾಯಿತು.
ಅಡಿಕೆ ಬೆಳೆಗಾರರ ಮನೆಯವಳಾದ ನನಗೆ, ನಿಮ್ಮಜತೆಗೆ ವಿಷಯ ಹ೦ಚಿಕೊಳ್ಳಲೇ ಬೇಕೆನಿಸಿತು, ಅದಕ್ಕೇ ಈ ಬರಹ!