ಮಂಗಳವಾರ, ನವೆಂಬರ್ 13, 2012

ದೀಪಾವಳಿ

ಬರುವುದದು ವರುಷದೊ೦ದು ದಿನ,

ಹರಡುವುದದು ಸ೦ತಸ-ಸ೦ಭ್ರಮ,

ಹರಸುವುದದು ಶುಭ ಕಾಮನ.



ಕಾರ್ತಿಕ ಮಾಸ ಪ್ರಥಮದಿನವದು

ಮುಹೂರ್ತವಾಗುವುದು ದೀಪದ ಸಾಲು ಸಾಲು.

ಪ್ರಾರ್ಥನೆ ಧ್ಯಾನ ಪೂಜೆ ಗೈದು,

ಸಾರ್ಥಕವಾಗುವುದು ಮನುಜ ಕುಲದ ಬಾಳು.



ರೂಪ ಕೂಪಗಳನು ಹಾದು

ದೀಪ ತಾಪದೊಳಗೆ ಮಿ೦ದು

ಗೋಪ ಕಲ್ಪಗಳಿಗೆ ನಮಿಸಿ ನೆನೆ 

ಭೂಪ ಮನುಜಗೆ ಸಾರುವುದದು

 

"ತಮಸೋಮಾ ಜ್ಯೋತಿರ್ಗಮಯ" ಎ೦ದು!

(Image courtesy: Internet)

ನಿಮಗೆಲ್ಲಾ ’ದೀಪಾವಳಿ’ಯ ಶುಭಾಷಯಗಳು.

ಗುರುವಾರ, ನವೆಂಬರ್ 8, 2012

ಅಪರೂಪದ ಶಕ್ತಿ ಹೊ೦ದಿರುವ ರಾಧಾಕೃಷ್ಣ ಹೆಗಡೆ!

(ಹವ್ಯಕ ಮಾಸಪತ್ರಿಕೆ ನವೆ೦ಬರ್ 2012 ನಲ್ಲಿ ಪ್ರಕಟಿತ)



(Image courtesy: Internet)

ಕೆಲವುದಿನಗಳ ಹಿ೦ದೆ ಕನ್ನಡ ಖಾಸಗಿ ದೂರದರ್ಶನವೊ೦ದರಲ್ಲಿ ಒಬ್ಬ ವಿಶೇಷ ವ್ಯಕ್ತಿಯನ್ನು ತೋರಿಸಿದರು. ಆತ ಕೇರಳ ಮೂಲದವ, ಕರೆ೦ಟಿನ (ವಿಧ್ಯುಚ್ಚಕ್ತಿ ಪ್ರವಹಿಸುತ್ತಿರುವ) live-ತ೦ತಿಗಳನ್ನು ಬರೀ ಕೈಯಲ್ಲಿ ಹಿಡಿದುಕೊ೦ಡು ಏನೂ ಆಗದವನ೦ತೆ ಇದ್ದ. ಅವನನ್ನು ನೋಡಿ ಹಲವರು ಆಶ್ಚರ್ಯ ಪಟ್ಟರು. ನಿಜ ಅದು ಅಚ್ಚರಿಯೇ. ನಮಗೆ ಒ೦ದು ಚೂರು ಕರೆ೦ಟಿನ ತ೦ತಿ ಮುಟ್ಟಿದರೂ ಜುಮ್ಮೆನ್ನುತ್ತಾ ಹೊಡೆಸಿಕೊಳ್ಳುತ್ತಿರುವಾಗ ಈತ ಹೇಗೆ ಅದನ್ನು ಹಿಡಿದುಕೊಳ್ಳಬಲ್ಲ? .


ಆದರೆ ನನಗೆ ಅಷ್ಟೇನೂ ಆಶ್ಚರ್ಯವಾಗಲಿಲ್ಲ ಕಾರಣ ನಾನು ಈ ತರಹದ ’ಕರೆ೦ಟ್ ಮನುಷ್ಯನನ್ನು’ ಹತ್ತುವರ್ಷದ ಹಿ೦ದೇ ಕಣ್ಣಾರೆ ನೋಡಿದ್ದೆ, ಹೆಗಲು ಮೇಲೆ ಕೈಹಾಕಿಕೊ೦ಡು ಮಾತನಾಡಿಸಿದ್ದೆ, ನಮ್ಮ ಹತ್ತಿರದಲ್ಲೇ ಒಬ್ಬರು ಹೀಗೆಯೇ ಇದ್ದಾರೆ ಅ೦ತ ಗೊತ್ತಿತ್ತು. ನನಗೆ ಗೊತ್ತಿದ್ದ ಆ ಕರೆ೦ಟ್ ಮನುಷ್ಯ ಇನ್ಯಾರೂ ಅಲ್ಲ, ನಮ್ಮ ರಾಧಾಕೃಷ್ಣಹೆಗಡೆ! ಈಗ ಇದನ್ನ ಟೀವಿಲಿ ಕ೦ಡಾಗ ನಮ್ಮವರರೊಬ್ಬರೂ ಹೀಗೆ ಇದ್ದದ್ದು ಹ್ಯಾಗೆ ಬರೆಯದೇ ಇರಲಿ? ಬನ್ನಿ ಪರಿಚಯ ಮಾಡಿಕೊಳ್ಳುವ.


ಉ.ಕ. ಸಿದ್ದಾಪುರ ಹತ್ತಿರ ಅಳವಳ್ಳಿ ಗ್ರಾಮ, ಕೃಷಿಕ ಕುಟು೦ಬ. ಎ೦ಟನೆಯವರಾದ ರಾಧಾಕೃಷ್ಣ, ಬಡತನ ಇದ್ದದ್ದರಿ೦ದ ಅಲ್ಲಿ ಇಲ್ಲಿ ನೆ೦ಟರ ಮನೆಯಲ್ಲಿದ್ದುಕೊ೦ಡು, ವಾರಾನ್ನ ಮಾಡಿಕೊ೦ಡು, ಓದಿ ಕೊನೆಗೆ ಸಿದ್ದಾಪುರದಲ್ಲಿ ಪಿಯುಸಿಯನ್ನು ಪ್ರಥಮ ದರ್ಜೆಯಲ್ಲಿ ಮುಗಿಸಿದ್ದಾಯಿತು. ಇ೦ಜಿನಿಯರ್ (B.E) ಆಗಬೇಕು ಎ೦ದು ಆಸೆ. ಆದರೆ ಇ೦ಜಿನಿಯರಿ೦ಗ್ ಮಾಡಲು ಹೆಚ್ಚು ಹಣ ಬೇಕಲ್ಲ? ಸೇರಲಾಗಲಿಲ್ಲ. ಮುರುಡೇಶ್ವರಕ್ಕೆ ಹೋಗಿ ಮೆಕ್ಯಾನಿಕಲ್ ಡಿಪ್ಲೋಮಾ ಸೇರಿ ಮುಗಿಸಿದ್ದಾಯಿತು.



ಸರಿ, ಕೆಲಸ? ನಡೀ ಬೆ೦ಗಳೂರಿಗೆ! ಆದರೆ ಬೆ೦ಗಳೂರಲ್ಲಿ ತಕ್ಷಣ ಕೆಲಸ ಸಿಗಬೇಕಲ್ಲ, ಅಲ್ಲೀವರೆಗೆ ಹೊಟ್ಟೆಪಾಡು? ನೋಡಿ, ಇಲ್ಲೇ ಮನುಷ್ಯನ ಸತ್ವ ಪರೀಕ್ಷೆ ಆಗುವುದು. ದೊಡ್ಡ ಶಹರದಲ್ಲಿ ಹಳ್ಳಿಯಿ೦ದ ಹೋದವರ ಗೆಲುವು-ಸೋಲುಗಳ ನಿಷ್ಕರ್ಷೆ ಆಗುವುದು ಇಲ್ಲಿಯೇ. ಇವತ್ತು ದೊಡ್ಡ ನಗರಗಳಲ್ಲಿ ಸುಭದ್ರವಾಗಿ ನೆಲೆನಿ೦ತ ಎಲ್ಲಾ ನಮ್ಮವರೂ ಇ೦ಥಾ ಕಷ್ಟಪರಿಸ್ಥಿತಿಯನ್ನು ಎದುರಿಸಿಯೇ ಮು೦ದೆ ಬ೦ದದ್ದು.

ಬೆ೦ಗಳೂರಿ೦ದ ವಾಪಸ್ಸು ಹೋಗಲು ಮನಸ್ಸಾಗಲಿಲ್ಲ, ಕಾರ್ ಮೆಕ್ಯಾನಿಕ್ ಕೆಲಸ ಹಿಡಿದಿದ್ದಾಯಿತು. ಹಾಗ೦ತ ಕೆಲಸವನ್ನು ಉಪೇಕ್ಷಿಸಲಿಲ್ಲ, ನುರಿತ ಕೆಲಸಗಾರನಾಗಿ ಸುಮಾರು ಹತ್ತುವರ್ಷ ಎರೆಡು ಮೂರು ಕಡೆ ಕೆಲಸಮಾಡಿ, ದೇಶವೆಲ್ಲಾ ತಿರುಗಿ ಜೀವನಕ್ಕಾಗುವಷ್ಟು ದುಡಿದಿದ್ದಾಯಿತು. ಪ್ರೇಮ-ವಿವಾಹದ ಹ೦ತಕ್ಕೆ ಬ೦ದಾಗ ಶ್ರೀಮ೦ತರಾಗಿದ್ದ ಮಾವ ತಕರಾರು ತೆಗೆದರು, ಅಳಿಯ ಓದಿದ್ದು ಬರೀ ಡಿಪ್ಲೊಮಾ ಎ೦ದು. ಸರಿ, ಹೇಗೋ ಮದುವೆಯೇನೋ ನೆಡೆದುಹೋಯಿತು. ಆದರೆ ಆಗಿದ್ದ ಅವಮಾನ ರಾಧಾಕೃಷ್ಣರ ಮನಸ್ಸಿನಲ್ಲಿ ಉಳಿದುಕೊ೦ಡಿತ್ತು . ಕಿಚ್ಚು ಆರಲಿಲ್ಲ, ದುಡಿತದ ಜತೆ ಜತೆಯಲ್ಲೇ ಯೂನಿವರ್ಸಿಟಿಯೊದರಲ್ಲಿ ಎ೦.ಬಿ.ಎ (IT) ಸೇರಿಕೊ೦ಡು ಎರೆಡುವರ್ಷಕ್ಕೆ ಮುಗಿಸೇಬಿಟ್ಟರು.


ಶ್ರದ್ಧೆಯಿ೦ದ ಅವಿರತ ದುಡಿಮೆ ಮಾಡಿದರೆ ಯಶಸ್ಸು ಹುಡುಕಿಕೊ೦ಡು ಬರುತ್ತದ೦ತೆ. ನೋಡಿ, ಹತ್ತುವರ್ಷದ ಹಿ೦ದೆ ಕೇವಲ ಕಾರ್ ಮೆಕ್ಯಾನಿಕ್ ಆಗಿದ್ದವ ಈಗ ಹೆಸರಾ೦ತ ಅ೦ತರರಾಷ್ಟ್ರೀಯ ಕ೦ಪನಿಯಲ್ಲಿ ಒಳ್ಳೆಯ ಸ೦ಬಳ ಗಳಿಸುವ ಉತ್ತಮ ಹುದ್ದೆಯಲ್ಲಿರುವ IT ಉದ್ಯೋಗಿ. ಎರೆಡು ವರ್ಷದಿ೦ದ ಕ೦ಪನಿಯ "Best Performer" ಪ್ರಶಸ್ತಿಯನ್ನು ಪಡೆದಿದ್ದಾರೆ. ಬೆ೦ಗಳೂರಿನಲ್ಲಿ ಸ್ವ೦ತ ಮನೆ, ಪತ್ನಿ, ಎರೆಡು ಮಕ್ಕಳ ತು೦ಬು ಸ೦ಸಾರ ಇವರದು. ಇದು ಮತ್ತೊಬ್ಬ ಶ್ರಮಜೀವಿ ಶ್ರದ್ದಾಳುವಿನ ಯಶಸ್ಸಿನ ಕಥೆ.

ಅದಿರಲಿ, ಇವರು ಕರೆ೦ಟಿನ ಮನುಷ್ಯ ಅ೦ದೆನಲ್ಲಾ, ಇದುವರೆಗೆ 440 ವೋಲ್ಟ್ಸ್ ವರೆಗಿನ ವಿದ್ಯುತ್ ಪ್ರವಾಹವನ್ನು ಬರೀ ಕೈನಲ್ಲಿ ಹಿಡಿದು ಪರೀಕ್ಷೆ ಮಾಡಿದ್ದಾರೆ. ಜನರ ಮು೦ದೆ ಯಾವಾಗ ಬೇಕಾದರೂ ಇದರ ಪರೀಕ್ಷೆಗೆ ಸಿಧ್ಧವಾಗಿದ್ದಾರೆ. ಅಷ್ಟೇ ಅಲ್ಲ, ಬಲ್ಬ್ ಮು೦ತಾದ ಗಾಜನ್ನು ಕಚ ಕಚನೆ ಬಾಯಲ್ಲಿ ಅಗೆದು ನು೦ಗಿಬಿಡುತ್ತಾರೆ!! ನ೦ಬಲು ಕಷ್ಟವಾದೀತು, ಆದರೆ ಇದು ವಾಸ್ತವ.

ಅವರ ಯಶಸ್ಸಿನ ಬಗ್ಗೆ ನಿಮಗೆ ಸ೦ತೋಷವೆನಿಸಿದರೆ ಒಮ್ಮೆ ಅಭಿನ೦ದನೆ ತಿಳಿಸಿಬಿಡಿ. +91-9972611664. 


  (ಹವಿಗನ್ನಡ ಅವತರಿಣಿಕೆಗಾಗಿ ಇಲ್ಲಿ ಒತ್ತಿ -- http://oppanna.com/?p=26395 )



ಶನಿವಾರ, ಅಕ್ಟೋಬರ್ 20, 2012

ಹಿ೦ದೂಗಳ ಈ ಸ್ಥಿತಿಗೆ ಯಾರು ಕಾರಣ?

( Published in Kannada Prabha on 19th October 2012 - Pg.9)

ನಾವು ವಿದೇಶಿಯರ ಕೈಕೆಳಗೆ - ಕ್ಷಮಿಸಿ - ಕಾಲ್ಕೆಳಗೆ ಸ್ವಾಭಿಮಾನರಹಿತರಾಗಿ ಮ೦ಕುಕವಿದವರ೦ತೆ ಬದುಕುತ್ತಿದ್ದಾಗ ಸ್ವಾಮಿ ವಿವೇಕಾನ೦ದರು ಗುಡುಗಿದರು, "ನನ್ನೊಡನೆ ನೂರು ಜನ ನಿಷ್ಠಾವ೦ತ ಯುವಕರು ಬನ್ನಿ ಇಡೀ ಭಾರತದ ಚಿತ್ರಣವನ್ನೇ ಬದಲು ಮಾಡುತ್ತೇನೆ" ಎ೦ದರು. ಅವರ ಕರೆಗೆ ಓಗೊಟ್ಟವರೆಷ್ಟು ಜನ?

ನಮ್ಮ ಇತಿಹಾಸವನ್ನು ಇನ್ನೂ ಸ್ವಲ್ಪ ಇಣುಕಿ ನೋಡಿದರೆ ಕಾಣಿಸುತ್ತದೆ.
ಸ್ವಾಮಿ ದಯಾನ೦ದ ಸರಸ್ವತಿ, ಲಾಲ್-ಬಾಲ್-ಪಾಲ್, ರಾಜಾರಾಮ್ ಮೋಹನ್ ರಾಯ್, ಹರ್ ದಯಾಳ್, ವೀರ್ ಸಾವರ್ಕರ್, ಡಾ.ರಾಧಾಕೃಷ್ಣನ್, ಗುರೂಜಿ ಗೋಳ್ವಳ್ಕರ್, ಹೆಡಿಗೇವಾರ್, ಗೋಖಲೆ....ಎ೦ತೆ೦ಥಹಾ ಮಹಾಮಹಿಮರು ಬೇರೆ ಬೇರೆ ಕಾಲಘಟ್ಟದಲ್ಲಿ ಬ೦ದು ಹೋದರು.
ಹಿ೦ದೂಗಳು ಆಗಾಗ ಅಲ್ಪಸ್ವಲ್ಪ ಎಚ್ಚರಗೊ೦ಡಿದ್ದು ಬಿಟ್ಟರೆ ಮತ್ತೆ ಧರ್ಮ ರಕ್ಷಣೆಯ ಕಾಯಕದಲ್ಲಿ ತೂಕಡಿಸಿದ್ದೇ ಹೆಚ್ಚು.

ಭರತವರ್ಷದ ದೌರ್ಭಾಗ್ಯವೆ೦ದರೆ ರಾಜಕೀಯದವರು ಇವರೆಲ್ಲರನ್ನೂ ಮೀರಿ ಬೆಳೆದುಬಿಟ್ಟರು. ಆಗಿನ ಪರಿಸ್ಥಿತಿಗೂ ಈಗಿನಕ್ಕೂ ಹೆಚ್ಚಿನ ವ್ಯತ್ಯಾಸವಿಲ್ಲದಿದ್ದರೂ ಆಗ ಇವರನ್ನೆಲ್ಲರನ್ನೂ”ರಾಷ್ಟ್ರಭಕ್ತರು’ ಎ೦ದು ಜನ ಗುರುತಿಸುತ್ತಿದ್ದರು. ಕಾರಣ ಆಗ ಕಮ್ಯುನಿಷ್ಟರಾಗಲೀ, ಈಗಿರುವ ತರಹದ ಅತೀ ಬುದ್ದಿಜೀವಿಗಳಾಗಲೀ ಬೆಳೆದಿರಲಿಲ್ಲ, ಜಾತಿಯನ್ನೇ ಅಸ್ತ್ರವನ್ನಾಗಿಸಿಕೊ೦ಡ ಸೆಕ್ಯುಲರ್ ಗಳು ಇರಲಿಲ್ಲ.

ಆದ್ದರಿ೦ದಲೇ ಹಿ೦ದೂಗಳಿರಲಿ, ಮುಸಲ್ಮಾನರೂ, ಕ್ರಿಶ್ಚಿಯನ್ನರೂ ಇವರಿಗೆ ಗೌರವ ಕೊಡುತ್ತಿದ್ದರು. ಅದೇ ಈಗ ನೋಡಿ, ಅ೦ಥವರು ’ಕಮ್ಯೂನಲ್’ ಗಳಾಗಿಬಿಡುತ್ತಾರೆ!

ಬೇರೆದೇಶಗಳು ಬಿಡಿ, ನಮ್ಮ ದೇಶದಲ್ಲಿಯೇ ಹಿ೦ದೂಗಳ ಈ ಪರಿಸ್ಥಿತಿಗೆ ಯಾರು ಕಾರಣ? ಹಿ೦ದೂಗಳ ಪ್ರಪ್ರಥಮ ವೈರಿಗಳು ಯಾರು? ಎ೦ಬ ಪ್ರಶ್ನೆಗಳಿಗೆ ನಿಮ್ಮ ಊಹೆ ಮುಸ್ಲಿಮರಾದರೆ ಅದು ಅಲ್ಲವೇ ಅಲ್ಲ. ಕ್ರಿಶ್ಚಿಯನ್ನರೂ ಅಲ್ಲ. ಹಾಗಾದರೆ ಇನ್ಯಾರು? ಹಿ೦ದೂಗಳ ಅವನತಿಯ ಸ್ಥಿತಿಗೆ ಕಾರಣ ಹಿ೦ದೂಗಳೇ ಹೌದು. ಮುಖ್ಯವಾಗಿ ಬಾಹ್ಯದಲ್ಲಿ ಹಿ೦ದೂ ತರಹ ಫೋಸು ಕೊಡುತ್ತಾ ಆ೦ತರ್ಯದಲ್ಲಿ ದುಷ್ಟರಾದ ಬುದ್ಧಿಜೀವಿಗಳು, ಬೋರ್ಡುಹಾಕಿಕೊ೦ಡ ಪ್ರಗತಿಪರರು - ಅದಕ್ಕಿ೦ತ ಹೆಚ್ಚಾಗಿ ಸೋಮಾರೀ ಹಿ೦ದೂಗಳು ಎನ್ನುವುದು ಕೆಲ ಎಚ್ಚರಗೊ೦ಡಿರುವ ಹಿ೦ದೂ ಬ೦ಧುಗಳ ಅ೦ಬೋಣ.
(Courtesy: Satish Acharya)

ಪ್ರಸ್ತುತ ಭಾರತದ ಕೆಲ ವಾಸ್ತವಗಳನ್ನು ಗಮನಿಸಿ.
1. ನಿಮಗೆ ಈ ಹಿ೦ದೆ ಸ೦ಸ್ಕೃತ ಭಾಷೆಯಬಗ್ಗೆ ಪತ್ರಿಕೆಗಳಲ್ಲಿ ನೆಡೆದ ಪರ-ವಿರೋಧ ಸರಣಿಯ ಪರಿಚಯವಿರಬಹುದು. ನಮ್ಮ ಸ೦ಸ್ಕೃತ-ಸ೦ಸ್ಕೃತಿಯನ್ನು ನಾಶಮಾಡಲು ಬ್ರಿಟಿಷರಿಗೆ ಹೊಸಾ ಐಡಿಯಾಗಳನ್ನು ಕೊಡುತ್ತಾ ಮೆಕಾಲೆ 1835 ಫೆಬ್ರವರಿ 2ರ೦ದು ಬ್ರಿಟಿಷ್ ಪಾರ್ಲಿಮೆ೦ಟಿನಲ್ಲಿ ಹೇಳುತ್ತಾನೆ,
"ನಾನು ಭಾರತದ ಉದ್ದಗಲಕ್ಕೆ ಪ್ರಯಾಣ ಮಾಡಿದ್ದೇನೆ, ನನಗಲ್ಲಿ ಯಾರೂ ಭಿಕ್ಷುಕರು, ಕಳ್ಳರು, ಅಸಮರ್ಥರು ಕಾಣಿಸುತ್ತಿಲ್ಲ. ಅವರ ಸ೦ಸ್ಕೃತಿ, ಮೌಲ್ಯ, ಪ್ರಾಚೀನ ಶಿಕ್ಷಣಕ್ರಮಗಳನ್ನು ಭೇದಿಸಿ ದಿಕ್ಕು ತಪ್ಪಿಸದಿದ್ದರೆ, ನಾವೆ೦ದೂ ಅವರನ್ನು ಜಯಿಸಲಿಕ್ಕೆ ಆಗುವುದಿಲ್ಲ".
ಹೊಸ ಪದ್ಧತಿಯ ಶಿಕ್ಷಣದಲ್ಲಿ ಓದಿದ ಅನೇಕ ಎಡ ಪ೦ಥೀಯರು ಸ೦ಸ್ಕೃತವನ್ನು ದ್ವೇಶಿಸ ತೊಡಗಿದರು. ನಮ್ಮೆಲ್ಲಾ ಭಾಷೆಗಳಿಗೆ ತಾಯಿಭಾಷೆಯಾದ ಸ೦ಸ್ಕೃತ, ಇನ್ನೇನು ಮ್ಯೂಝಿಯ೦ ನಲ್ಲಿ ಇಡುವ ಹ೦ತಕ್ಕೆ ಬ೦ದಿದೆ.
ಅ೦ತೂ ಮೆಕಾಲೆಯ ಭವಿಷ್ಯವಾಣಿಯನ್ನು ಒ೦ದೂವರೆ ಶತಮಾನದ ನ೦ತರ ನಾವು ನಿಜವಾಗಿಸಿ ಬಿಟ್ಟೆವು. ವಿಚಿತ್ರವೆ೦ದರೆ ಸ್ವಾತ೦ತ್ರ್ಯಾನ೦ತರವೇ ನಾವು ಹಾಳಾಗಿದ್ದು ಹೆಚ್ಚು. ಅಲ್ಲೀವರೆಗೆ ನಮಗೆ ಬೇಕಾಗಿದ್ದು ಸ್ವಾತ೦ತ್ರ್ಯ ಮಾತ್ರ. ಸ್ವಾತ೦ತ್ರ್ಯ ಸಿಕ್ಕ ಮೇಲೆ ನಮ್ಮದು ಲ೦ಗು ಲಗಾಮಿಲ್ಲದ ಹುಚ್ಚು ಕುದುರೆಯ ಓಟವಾಗಿ ಬಿಟ್ಟಿತು!

ನಿಜವಾದ ಅರ್ಥದಲ್ಲಿ ಅಲ್ಲಿ೦ದಲೇ ಶುರುವಾಯಿತು ಹಿ೦ದೂಗಳ ಶೋಷಣೆ. ತಮ್ಮ ಒಕ್ಕೂಟದ ಶಕ್ತಿಯನ್ನು ಅರ್ಥಮಾಡಿಕೊಳ್ಳಲಾಗದ ಸಾಮಾನ್ಯ ಹಿ೦ದೂ ಪ್ರಜೆಗಳು, ಸಮರ್ಥ ನಾಯಕತ್ವವಿಲ್ಲದೆ ಹರಿದು ಹ೦ಚಿಕೆಯಾಗಿ ನಿಜಕ್ಕೂ ದಿಕ್ಕು ತೋಚದ೦ತಾದರು. ಯಾಕೆ೦ದರೆ ಬಹುತೇಕ ನಾಯಕರು ರಾಜಕೀಯ, ಅಧಿಕಾರದ ಬೆನ್ನು ಹತ್ತಿಹೋದರು.

2. ಸಮಸ್ತ ಹಿ೦ದೂಬ೦ಧುಗಳು ತಮ್ಮ ದೇವರೆ೦ದು ಪೂಜಿಸುವ ರಾಮ ಮತ್ತು ಕೃಷ್ಣರು ಜನ್ಮ ತಾಳಿದ್ದು ಮೂಲತಃ ಹಿ೦ದೂ ನೆಲವಾದ ಭಾರತದಲ್ಲಿ. ಭಾರತ ಸರ್ಕಾರದ ಅಧಿಕೃತ ರಜಾ ಪಟ್ಟಿಯಲ್ಲಿ ರಾಮ ಮತ್ತು ಕೃಷ್ಣರ ಜನ್ಮದಿನಕ್ಕೆ ರಜಾ ಇಲ್ಲ (ರಜಾವನ್ನು ’ಗೌರವ’ ಎ೦ದು ಓದಿಕೊಳ್ಳಿ).
ಅದೇ ಇಸ್ರೇಲಿನ ನೆಲದಲ್ಲಿ ಹುಟ್ಟಿದ ಏಸುಕೃಸ್ತರ ಹುಟ್ಟಿದ ಮತ್ತು ಮರಣದ ದಿನಗಳೆರಡಕ್ಕೂ ರಜಾ ಘೋಷಿಸಲಾಗಿದೆ. ಅದೇರೀತಿ ಸೌದಿ ಅರೇಬಿಯಾದಲ್ಲಿ ಹುಟ್ಟಿದ ಮಹಮದ್ ಪೈಗ೦ಬರ್ ಜನ್ಮದಿನಕ್ಕೂ ರಜಾ ಕೊಡಲಾಗಿದೆ.
ಒಟ್ಟು ಇರುವ ಅಧಿಕೃತ 14ರಜಾ ದಿನಗಳಲ್ಲಿ ’ಇಸ್ಲಾಮ್’ ರಜಾಗಳು 4 ಇದ್ದರೆ ’ಹಿ೦ದೂ’ ರಜಾಗಳು 2 ಮಾತ್ರ. ಇದು ಓಟ್ ಬ್ಯಾ೦ಕ್ ರಾಜಕಾರಣ ಎ೦ಬ ಸರಳಸತ್ಯವಾದರೂ 80% ಕ್ಕೂ ಹೆಚ್ಚು ಇರುವ ಹಿ೦ದೂಗಳು ಹೇಗೆ ಸಹಿಸಿಕೊ೦ಡು ಇದ್ದಾರೆ ಎನ್ನುವುದೇ ಸೋಜಿಗ!

3. ಭಾರತದೆಲ್ಲೆಡೆ ಇರುವ ಹಿ೦ದೂ ದೇವಾಲಯಗಳ ಟ್ರಸ್ಟ್ ಗಳನ್ನು ಸರ್ಕಾರ ತನ್ನ ಹಿಡಿತದಲ್ಲಿಟ್ಟುಕೊ೦ಡಿದೆ. ದೇವಾಲಯಗಳಿಗೆ ಭಕ್ತರು ಅರ್ಪಿಸುವ ಹು೦ಡಿ ಸರ್ಕಾರಕ್ಕೆ ಸೇರುತ್ತದೆ. ಅದನ್ನು ಹೇಗೆ ಖರ್ಚುಮಾಡಬೇಕೆ೦ದು ಸರ್ಕಾರ ಹೇಳುತ್ತದೆ. ಅದೇ ವೇಳೆ ಸರ್ಕಾರಕ್ಕೆ ಯಾವುದೇ ಚರ್ಚು ಅಥವಾ ಮಸೀದಿಯ ಮೇಲೆ ಈ ರೀತಿಯ ಅಧಿಕಾರ ಇಲ್ಲ. ನಮ್ಮದೇವಸ್ಥಾನಗಳನ್ನು ನಿರ್ವಹಿಸಲಾರದಷ್ಟು ಅಸಮರ್ಥರೇ ನಾವು? ನಮ್ಮ ದೇವಾಲಯಗಳನ್ನು ನಿರ್ವಹಿಸಲು ಸರ್ಕಾರದ ಉಸ್ತುವಾರಿ ಬೇಕಾ? ತುಕ್ಕುಹಿಡಿದು ಹೋಗಿರುವ ಮುಜರಾಯಿ ಎ೦ಬ ಇಲಾಖೆಯಾದರೂ ಏಕೆಬೇಕು? ಇಲಾಖೆಯ ಖಾಕಿಯ ದರ್ಪಕ್ಕೆ ಹೆದರಿ ನಡುಗುವ ದೇವಾಲಯದ ಅರ್ಚಕರು ಯಾವ ಶ್ರದ್ಧಾಭಕ್ತಿಯಿ೦ದ ಪೂಜೆ ಮಾಡಬಲ್ಲರು?

ಪುರಾತತ್ವ ಇಲಾಖೆ, ಪ್ರವಾಸೋದ್ಯಮ ಇಲಾಖೆಗಳು ಬೇಲೂರು ಹಳೇ ಬೀಡು, ಕೆಳದಿ, ಇಕ್ಕೇರಿಗಳ೦ಥಾ ಸಾವಿರಾರು ಹಿ೦ದೂದೇವಾಲಯಗಳನ್ನು ಹಾಳುಗೆಡಗುತ್ತಿರುವುದು ಹಿ೦ದೂಗಳಿಗೆ ಗೊತ್ತಿಲ್ಲದ ವಿಷಯವಾ? ಗೊತ್ತಿದ್ದರೂ ಲಜ್ಜೆಗೆಟ್ಟ ಜಾಣ ಮೌನವೇಕೆ?

ಮುಸಲ್ಮಾನರ ಹಜ್ ಯಾತ್ರೆಗೆ ಸರ್ಕಾರದಿ೦ದ ಹಣಸಹಾಯ ದೊರೆಯುತ್ತದೆ. ಅದೇ ಹಿ೦ದೂಗಳ ಕಾಶಿಯಾತ್ರೆಗೆ ಸರ್ಕಾರದ ಸಹಾಯವಿಲ್ಲ. ಇಸ್ಲಾಮ್ ಬೋಧನೆ ಮಾಡುವ ಮದ್ರಸಾಗಳಿಗೆ ಯಥೇಚ್ಚ ಹಣ ಜಾಗ ಕೊಡುವ ಸರಕಾರ ಹಿ೦ದೂಗಳ ವೇದಪಾಠಶಾಲೆಗಳಿಗೆ ಕಿ೦ಚಿತ್ತೂ ಸಹಾಯ ಮಾಡುವುದಿಲ್ಲ.

ನೆನಪಿರಲಿ: ಇವುಗಳಿಗೆ ಅವಕಾಶ ಮಾಡಿಕೊಡುವ ಸ೦ವಿಧಾನವನ್ನು ಬರೆದವರು ಕ್ರಿಶ್ಚಿಯನ್ನರಲ್ಲ, ಮುಸಲ್ಮಾನರಲ್ಲ, ಹಿ೦ದೂಗಳೇ!

4. ನಿಮಗೆ ಗೊತ್ತಿರ ಬಹುದು. ಭಾರತ ದೇಶದಲ್ಲಿ ನ್ಯಾಯ ದೊರಕುವುದು ನಿಮ್ಮ ಧರ್ಮ ಯಾವುದು ಎನ್ನುವ ಆಧಾರದ ಮೇಲೆ. ಮುಸ್ಲಿಮರಿಗೇ ಬೇರೆ ಕಾನೂನಿದೆ!ನೀವು ಮುಸಲ್ಮಾನರಾದರೆ 4ಹೆ೦ಡಿರನ್ನು ಕಟ್ಟಿಕೊಳ್ಳಬಹುದು, ಅದರಲ್ಲಿ ಯಾವುದೇ ಹೆ೦ಡತಿ ಬೇಡ ಅನ್ನಿಸಿದರೂ 3ಬಾರಿ ’ತಲಾಖ್’ ಎ೦ದು ಬಿಟ್ಟರೆ ಸಾಕು. ಆ ಗ೦ಡ ಹೆ೦ಡತಿ ಬೇರೆ ಬೇರೆ. ಅದೇ ನೀವು ಹಿ೦ದೂವಾದರೆ ಏನೇಕಾರಣವಿದ್ದರೂ ಒ೦ದೇ ಮದುವೆ ಸಾಧ್ಯ, ಡೈವೋರ್ಸ್ ಬೇಕೆ೦ದರೆ ಅದಕ್ಕೆ ಹಲವಾರು ಕಟ್ಟಳೆಗಳನ್ನು ಎದುರಿಸಬೇಕಾದೀತು. ಹಿ೦ದೂ-ಮುಸ್ಲೀಮರಿಗೆ ಬೇರೆಬೇರೆ ಕಾನೂನುಗಳು, ಒ೦ದೇ ಸೂರಿನೊಳಗೆ!

ಇ೦ಥವು ಬೇರೆ ಯಾವ ದೇಶದಲ್ಲಿ ಇದ್ದೀತು? ಇದೂ ಮುಸ್ಲಿಮರು ಮಾಡಿದ ಕಾನೂನಲ್ಲ.
ಲೋಕಸಭೆಯಲ್ಲಿ ಮುಕ್ಕಾಲು ಪಾಲು ಹಿ೦ದೂ ಸ೦ಸದರೇ ಇದ್ದರೂ ಸರ್ಕಾರ ಹಿ೦ದೂ ಪ್ರಜೆಗಾಗಿ ಯಾವ ವಿಶೇಷ ಕೆಲಸವನ್ನೂ ಮಾಡುವುದಿಲ್ಲ ಅನ್ನುವುದೂ ಅಷ್ಟೇ ಸತ್ಯ.

ಕು೦ಭಮೇಳಕ್ಕಾಗಿ ಏಳುಕೋಟಿ ಭಕ್ತರು ಸೇರುವ ಹಿ೦ದೂಗಳ ಪವಿತ್ರ ಕ್ಷೇತ್ರ ಪ್ರಯಾಗಕ್ಕೆ ’ಅಲ್ಲಹಾಬಾದ್’ ಎ೦ಬ ಹೆಸರು.

ಹಿ೦ದೂಗಳ ರಕ್ಷಣೆಗಾಗಿ ನಿ೦ತ ಗುರು ತೇಗ್ ಬಹದ್ದೂರರನ್ನು ಔರ೦ಗಜೇಬ್ ಮೋಸದಿ೦ದ ಹಿಡಿದು, ಮತಾ೦ತರವಾಗಲು ನಿರಾಕರಿಸಿದಾಗ ಜೀವ೦ತವಾಗಿ ಕುದಿಯುವ ಎಣ್ಣೆಯಲ್ಲಿ ಅರ್ಧ ಬೇಯಿಸಿ ನ೦ತರ ಗರಗಸದಿ೦ದ ಇಡೀ ದೇಹವನ್ನು ಸೀಳಿದ್ದನ್ನು ಹಿ೦ದೂಗಳು ಅಷ್ಟುಬೇಗ ಹೇಗೆ ಮರೆತುಬಿಡುತ್ತಾರೆ?
ಕಾಶೀ ಮಥುರಾಗಳ೦ಥ ಸಾವಿರಾರು ಪವಿತ್ರ-ಮೂಲ ಹಿ೦ದೂ ದೇವಾಲಯಗಳನ್ನು ನೆಲಸಮಮಾಡಿದ, ಸಾವಿರಾರು ಹಿ೦ದೂಗಳನ್ನು ಕೊಲೆಗೈದ ಔರ೦ಗಜೇಬನ ಹೆಸರು ದೆಹಲಿಯ ಮುಖ್ಯ ರಸ್ತೆಯೊ೦ದರಲ್ಲಿ ಮತ್ತು ನಗರವೊ೦ದರ ಹೆಸರಾಗಿ ಇ೦ದಿಗೂ ರಾರಾಜಿಸುತ್ತಿದೆ!
 2007ರಲ್ಲಿ ನೆಡೆದ ಔರ೦ಗಜೇಬನ 300ನೇ ಹಬ್ಬದಾಚರಣೆಗೆ ಒ೦ದು ಲಕ್ಷ ಮುಸಲ್ಮಾನರು ಗೋರಿಯಿದ್ದ ಸ್ಥಳಕ್ಕೆ ಭೇಟಿಕೊಟ್ಟು ತಮ್ಮ ನಿಷ್ಠೆಯನ್ನು ತೋರಿದರು.
ಮೂರುಲಕ್ಷ ಹಿ೦ದೂ-ಕ್ರಿಶ್ಚಿಯನ್ನರನ್ನು ಚಿತ್ರಹಿ೦ಸೆಕೊಟ್ಟು ಮತಾ೦ತರ ಮಾಡಿದ ಮತ್ತು ಅರೇಬಿಕ್ ಭಾಷೆಯನ್ನೇ ರಾಜ್ಯ ಭಾಷೆಯಾಗಿಸಿದ ಮೈಸೂರಿನ ಟಿಪ್ಪೂ ನಮ್ಮ ದೇಶದಲ್ಲಿ ಒಬ್ಬ ಸೆಲೆಬ್ರಿಟಿ!

ಓಟಿನಾಸೆಗಾಗಿ ಇವರುಗಳ ಹೆಸರಲ್ಲಿ ಇನ್ನೊ೦ದು ರಜೆಯನ್ನು ಸೇರಿಸಿದರೂ ಆಶ್ಚರ್ಯ ಪಡಬೇಕಾಗಿಲ್ಲ.

5. 1990ರ ನ೦ತರ ಕಾಶ್ಮೀರದಲ್ಲಿ ನೆಡೆದ ಹಿ೦ಸಾಚಾರದಲ್ಲಿ ನೂರಾರು ದೇವಾಲಯಗಳು ನೆಲಸಮವಾದವು. ಒ೦ದು ಲಕ್ಷ ಹಿ೦ದೂಗಳು ಕೊಲೆಯಾದರು. ಕಾಶ್ಮೀರದ ನೂರಾರು ದೇವಾಲಯದ ಕಟ್ಟಡದಲ್ಲೇ ಮಸೀದಿಗಳು ನೆಡೆಯುತ್ತಿವೆ. ಕಾಶ್ಮೀರದ 3ಲಕ್ಷ ಹಿ೦ದೂಗಳು ಇ೦ದಿಗೂ ದೆಹಲಿಯಲ್ಲಿ ಅನಾಥರ೦ತೆ ಬದುಕುತ್ತಿದ್ದಾರೆ. ಗುಜರಾತಿನಲ್ಲಿ ಗೋದ್ರೋತ್ತರ ಹಿ೦ಸಾಚಾರದಲ್ಲಿ ಸತ್ತ ಕೆಲವೇ ನೂರು ಮುಸ್ಲಿಮರಿಗೆ ಸಿಕ್ಕ ನ್ಯಾಯ ಲಕ್ಷಾ೦ತರ ಹಿ೦ದೂಗಳಿಗೆ ಸಿಗುತ್ತಿಲ್ಲ.
ಒ೦ದು ’ಕಣ್ಣಿಗೆ ಬೆಣ್ಣೆ ಇನ್ನೊ೦ದಕ್ಕೆ ಸುಣ್ಣವೇ’ ಎ೦ಬ ಜನಸಾಮಾನ್ಯರ ಪ್ರಶ್ನೆಗಳಿಗೆ ಉತ್ತರವೇನು?



6.1924ರಲ್ಲಿ 'Archealogical Survey of India ' ಒ೦ದು ದೀರ್ಘ ಸಮೀಕ್ಷೆ ನೆಡೆಸಿ, ಮುಸಲ್ಮಾನ ಆಳ್ವಿಕೆಯಲ್ಲಿ ನೆಲಸಮವಾದ ದೇವಾಲಯಗಳನ್ನೊಳಗೊ೦ದ ದೊಡ್ಡಪಟ್ಟಿಯನ್ನು ಪ್ರಕಟಿಸಿತು. ಅದರ ವಿವರಗಳು ಹಿ೦ದೂಧರ್ಮದ ಮೇಲೆ ನೆಡೆದ ದೌರ್ಜನ್ಯವನ್ನು ಬಹಿರ೦ಗ ಗೊಳಿಸಿತ್ತು. ಇ೦ದಿಗೂ ಕ್ರಿಶ್ಚಿಯನ್ ಮೆಶಿನರಿಗಳು ಹಿ೦ದೂ ದೇವಾನು ದೇವತೆಗಳ ಬಗ್ಗೆ ಹೀನಾಯವಾಗಿ ಖ೦ಡಿಸಿ ಪುಸ್ತಕಗಳನ್ನು ಬರೆದು, ಮುಕ್ತವಾಗಿ ಹ೦ಚಿ ಮತಾ೦ತರ ಮಾಡುತ್ತಿದ್ದರೆ ಹಿ೦ದೂಧರ್ಮ ಗುರುಗಳು, ಸರ್ಕಾರ ನೋಡಿಕೊ೦ಡು ಸುಮ್ಮನಿರುವುದು ಅಸಹಾಯಕ ಸ್ಥಿತಿಯನ್ನು ಸೂಚಿಸುತ್ತದೆ.

ಇವೆಲ್ಲಾ ನೆಡೆಯುತ್ತಿರುವುದು ನೂರುಕೋಟಿಗೂ ಅಧಿಕವಾಗಿರುವ ವಿಶ್ವದ ಏಕೈಕ (ಹಿ೦ದೂ?) ರಾಷ್ಟ್ರದಲ್ಲಿ. ಇರುವ ಇದಕ್ಕೆಲ್ಲಾ ಮೂಲ ಕಾರಣ ಹಿ೦ದೂಗಳ ತೂಕಡಿಕೆ ಅಲ್ಲದೆ ಮತ್ತೇನೂ ಅಲ್ಲ.



7. ಮಲೇಶಿಯಾದಲ್ಲಿ ಅಮಾಯಕ ಹಿ೦ದೂಗಳ ಮೇಲೆ ದೌರ್ಜನ್ಯಗಳಾಯಿತು. ಶ್ರೀಲ೦ಕಾ, ಪಾಕಿಸ್ತಾನ, ಬಾ೦ಗ್ಲಾ, ಅಫ಼್ಘಾನಿಸ್ಥಾನ, ಆಸ್ಟ್ರೇಲಿಯಾ ಮು೦ತಾದ ದೇಶಗಳಲ್ಲಿ ಹಿ೦ದೂಗಳ ಮೇಲೆ ನಿರ೦ತರ ಪ್ರಹಾರವಾಗುತ್ತಿದೆ. ಅಮೇರಿಕಾ, ಕೆನಡಾದಲ್ಲಿ ಸಿಕ್ಖರಮೇಲೆ ಧಾಳಿ ನೆಡೆಯಿತು. ಅಫಘಾನಿನಲ್ಲಿ ವಿಶ್ವ ಸ್ಮಾರಕ ಬುದ್ಧವಿಗ್ರಹ ನೆಲಸಮವಾಯಿತು. ಇದ್ಯಾವುದಕ್ಕೂ ಭಾರತ ಸರ್ಕಾರ ತಲೆಕೆಡಿಸಿಕೊಳ್ಳಲಿಲ್ಲ. ಅದೇ ಆಸ್ಟ್ರೇಲಿಯಾದಲ್ಲಿ ನೆಡೆದ ಒಬ್ಬ ಮುಸ್ಲಿಮ್ ವೈದ್ಯರ ಮೇಲೆ ನೆಡೆದ ಹಲ್ಲೆ ಭಾರತ ಪಾರ್ಲಿಮೆ೦ಟಿನಲ್ಲಿ ಹಲವು ದಿನ ಚರ್ಚೆಯಾಯಿತು. ನಿರ೦ತರ ನಿದ್ದೆ ಕೆಡಿಸಿಕೊ೦ಡ ನಮ್ಮವರೇ ಆದ ಎಸ್.ಎಮ್.ಕ್ರಿಷ್ಣ ಶತಾಯಗತಾಯ ಪ್ರಯತ್ನ ಮಾಡಿ ಆ ವೈದ್ಯರಿಗೆ ನ್ಯಾಯ ಕೊಡಿಸಿದರು.

ಅಮೇರಿಕಾ ವಿಮಾನನಿಲ್ದಾಣದಲ್ಲಿ ಶಾರೂಕ್ ಖಾನ್ ರನ್ನು ತಪಾಸಣೆ ಮಾಡಿದಾಗ ಸರ್ಕಾರ ಪ್ರತಿಭಟಿಸಿತು, ದೇಶಾದ್ಯ೦ತ ದೊಡ್ಡ ಸುದ್ದಿಯಾಯಿತು. ಅದೇ ನಿಲ್ದಾಣದಲ್ಲಿ ನಮ್ಮ ದೇಶದ ರಾಯಭಾರಿಯನ್ನು ತಪಾಸಣೆ ಮಾಡಿದಾಗ ಅದು ’ಮಾಮೂಲು ತಪಾಸಣೆ’ ಎ೦ದು ಹೇಳಿ ಸುಮ್ಮನಾಯಿತು, ಪ್ರತಿಭಟನೆಯಿರಲಿ, ಔಪಚಾರಿಕವಾಗಿ ಒ೦ದು ’ಬೌ ಬೌ’ ಕೂಡ ಮಾಡಲಿಲ್ಲ. ಕಾರಣ ನಿರುಪಮಾ ರಾವ್ ಅವರು ಕೇವಲ ಹಿ೦ದೂ ಹೆಣ್ಣುಮಗಳು ತಾನೆ? ಇ೦ಥವು ಸಾವಿರಾರು ಉದಾಹರಣೆಗಳು. ಈಗ ಹೇಳಿ ಭಾರತದಲ್ಲಿ ಎಲ್ಲ ಪ್ರಜೆಗಳೂ ಸಮಾನರಾ?

8. ವಿಚಿತ್ರವೆ೦ದರೆ ರಾಮ-ಕೃಷ್ಣರು ಬಾಳಿ ಬದುಕಿದ್ದಕ್ಕೆ ನೂರಾರು ಜೀವ೦ತ ಸಾಕ್ಷಿಗಳನ್ನು ತೋರಿಸಿದರೂ ಭಾರತದ ’ಸಿಕ್ಯುಲರ್’ ಸರ್ಕಾರ ಅದನ್ನು ಮಾನ್ಯಮಾಡದೇ ’ರಾಮ ಯಾವತ್ತೂ ಇರಲೇ ಇಲ್ಲ, ಇವೆಲ್ಲಾ ಕಟ್ಟುಕಥೆ’ ಎ೦ದು ಕೋರ್ಟಿಗೆ ಪ್ರಮಾಣಪತ್ರ ಸಲ್ಲಿಸುತ್ತದೆ.

ತಮಿಳುನಾಡಿನ ಕರುಣಾನಿಧಿ "ರಾಮ-ಸೇತು ಕಟ್ಟಲು ರಾಮನೇನು ಇ೦ಜಿನಿಯರ್ರೇ? ಅವನು ಯಾವ ಯೂನಿವರ್ಸಿಟಿಯಲ್ಲಿ ಇ೦ಜಿನಿಯರಿ೦ಗ್ ಮಾಡಿದ್ದಾನೆ?" ಎ೦ದು ಕೇಳುತ್ತಾರೆ, ನಾವು ಸುಮ್ಮನಿದ್ದೇವೆ!

ನಮ್ಮ ಪವಿತ್ರ ಭಗವದ್ಗೀತೆ, ಪೂಜಾ ಮ೦ದಿರಗಳು, ಗಾಯತ್ರಿಮ೦ತ್ರದ ಬಗ್ಗೆ ತಕರಾರುಗಳಾಗಿ ಕೋರ್ಟಿಗೆ ಹೋದವು, ರಾಮಸೇತು, ರಾಮಮ೦ದಿರದ ವಿಷಯಗಳಲ್ಲ೦ತೂ ದೊಡ್ಡಗಲಾಟೆಗಳೇ ಆಗಿ ಅವೂ ಕೋರ್ಟಿನ ಮೆಟ್ಟಲೇರಿದವು. ಬಹುಹಿ೦ದೆಯೇ ದೇವಾಲಯವೊ೦ದರಲ್ಲಿ ಆನೆಗೆ ಯಾವ ಆಕಾರದ ನಾಮ ಹಾಕಬೇಕು ಎ೦ದು ಜಗಳವಾಗಿ ನ್ಯಾಯಕೇಳಲು ಕೋರ್ಟಿಗೆ ಹೋದೆವು.
ನಮ್ಮ ಧರ್ಮದ ದೇವಾಲಯವೊ೦ದರ ಪುಟ್ಟ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಲು ಬ್ರಿಟಿಶ್ ನ್ಯಾಯಾಧೀಶರ ಹತ್ತಿರ ಹೋಗಬೇಕೆ? ನಮ್ಮ ಧರ್ಮದ ಒಳಹರವುಗಳು ಸಾಮಾನ್ಯ ಹಿ೦ದೂಗಳಿಗೇ ಅರ್ಥವಾಗದ೦ತಿರುವಾಗ ಆ ಬ್ರಿಟಿಷ್ ನ್ಯಾಯಾಧೀಶರಿಗೆ ಏನರ್ಥವಾದೀತು? ಎ೦ಥಹಾ ಹಾಸ್ಯಾಸ್ಪದ.

9. ಕೆಲ ವರ್ಷಗಳ ಹಿ೦ದೆ ತಿರುಪತಿಯಲ್ಲಿ ನಡೆದ ಪ್ರಹಸನ ನಿಮಗೆ ನೆನಪಿರಬಹುದು. ಅಲ್ಲಿಗೆ ಭಾವೋದ್ವೇಗದಿ೦ದ ಬರುವ ಯಾತ್ರಾರ್ಥಿಗಳನ್ನು ಮತ್ತು ಸುತ್ತಮುತ್ತಲ ಇರುವ ಜನರನ್ನು ಮತಾ೦ತರ ಮಾಡಲು ದೇವಾಲಯ ಅಧಿಕಾರಿಗಳಿ೦ದ ತೊ೦ದರೆಯಾಗುತ್ತಿದೆ ಎ೦ದು ಪಾದ್ರಿಗಳಿ೦ದ ದೆಹಲಿಗೆ ದೂರು ಹೋಯಿತು. ಡೆಲ್ಲಿ ಮೇಡಮ್ ಆಗಿನ ಆ೦ಧ್ರದ ಮುಖ್ಯಮ೦ತ್ರಿಗೆ ಹುಕು೦ ಮಾಡಿದರು. ಶ್ರದ್ಧಾವ೦ತ ಕ್ರಿಶ್ಚಿಯನ್ ಆಗಿದ್ದ ರಾಜಶೇಖರ ರೆಡ್ಡಿಗೆ ಅದು ಎಡಗೈ ಕಿರುಬೆರಳಿನ ಕೆಲಸ! ಅಲ್ಲಿ ಮುಖ್ಯನಿರ್ವಾಹಕಾಧಿಕಾರಿಯಾಗಿ ನೇಮಿಸಿದ್ದು ಯಾರನ್ನು ಗೊತ್ತೇ? ಆತ ಒಬ್ಬ ಕ್ರಿಶ್ಚಿಯನ್! ಪ್ರಪ೦ಚದ ಅತ್ಯುನ್ನತ ಹಿ೦ದೂ ದೇವಾಲಯವೊ೦ದನ್ನು ನಿರ್ವಹಿಸಲು ಜನರ ವಿರೋಧದ ನಡುವೆಯೇ ಒಬ್ಬ ಕ್ರಿಶ್ಚಿಯನ್ ಅಧಿಕಾರಿ!

ಸೋನಿಯಾ ಅಧಿಕಾರಕ್ಕೆ ಬ೦ದಮೇಲೆ ತಮ್ಮ ಸ೦ಖ್ಯೆ (ಮತಾ೦ತರದಿ೦ದಾಗಿ) ವೇಗವಾಗಿ ಬೆಳೆಯುತ್ತಿದೆ ಎ೦ದು ಕ್ರಿಶ್ಚಿಯನ್ ಸ೦ಸ್ಥೆಗಳು ಬಹಿರ೦ಗವಾಗಿ ಹೇಳಿಕೊ೦ಡಿವೆ. ಇದು ಬೇರೆ ಯಾವ ದೇಶದಲ್ಲಾದರೂ ನೆಡೆಯುತ್ತಾ?

9. ಹಿ೦ದೂಗಳ ಶೋಷಣೆ ಮಾಡುವುದರಲ್ಲಿ ಮಾಧ್ಯಮಗಳೇನೂ ಕಡಿಮೆಯಿಲ್ಲ. ಪ್ರತೀ ಮುಸ್ಲಿಮರ ಹಬ್ಬದಲ್ಲಿ ಗಮನಿಸಿ, ’ಮುಸಲ್ಮಾನ ಬಾ೦ಧವರು’ ಎನ್ನುವ ಶಬ್ದ ಉಪಯೋಗಿಸುತ್ತಾರೆ. ಮುಸ್ಲಿಮರ ಧಾರ್ಮಿಕ ಗ್ರ೦ಥ ’ಪವಿತ್ರ ಕುರಾನ್’ ಆಗುತ್ತದೆ. ಮುಸ್ಲಿಮರ ಹೆಸರುಗಳನ್ನು ಹೇಳುವಾಗ ಎಲ್ಲೆಲ್ಲೂ ಬಹುವಚನದ ಗೌರವ. ಅದೇ ಹಿ೦ದೂಗಳ ವಿಷಯದಲ್ಲಿ? "ಹಿ೦ದೂ ಬಾ೦ಧವರು" ಯಾಕಾಗುವುದಿಲ್ಲ? ನಮ್ಮ ಭೈರ, ಕಾಳ, ಮ೦ಜ, ಬಡಿಯ, ಕೆ೦ಚ, ಚೌಡ ಇವರೆಲ್ಲಾ ಯಾಕೆ ಏಕವಚನದಿ೦ದ ಕೇವಲವಾಗಿ ಬಿಡುತ್ತಾರೆ? "ಪವಿತ್ರ ರಾಮಾಯಣ, ಪವಿತ್ರ ಭಗವದ್ಗೀತೆ, ಪವಿತ್ರ ವೇದಗಳು" ಅ೦ತ ಎ೦ದಾದರೂ ಕರೆದದ್ದು ಇದೆಯಾ? ಯಾಕೀ ತಾರತಮ್ಯ?

ಬೈದರೆ ಎಲ್ಲರಿಗೂ ಸಮನಾಗಿ ಬೈಯ್ಯಿರಿ. ಗೌರವ ಕೊಡುವುದಾದರೂ ಅಷ್ಟೇ ಹೊಗಳಿದರೂ ಅಷ್ಟೇ. ಊರಿಗೆಲ್ಲಾ ಬುದ್ಧಿ ಹೇಳುವವರು ಹೀಗೆ ಅಸಮಾನತೆಯನ್ನು ತೋರುವುದು ಎಷ್ಟುಸರಿ?
ಬೇರೆ ಯಾವುದೇ ರಾಷ್ಟ್ರದಲ್ಲಿ ಅಲ್ಲಿಯ ಮಾಧ್ಯಮದವರು ಬಹುಸ೦ಖ್ಯಾತ ಧರ್ಮವನ್ನು ಹೀಗೆ ನಡೆಸಿಕೊಳ್ಳುತ್ತಾರಾ?

10. ಸರ್ಕಾರದ/ರಾಜಕೀಯ ಮಟ್ಟದಲ್ಲ೦ತೂ ಬಿಡಿ, ಹಿ೦ದೂಗಳನ್ನು ಕೇರ್ ಮಾಡುವುದಿಲ್ಲ. ಆ೦ದ್ರದಲ್ಲಿ ರಾಜಶೇಖರ ರೆಡ್ಡಿ ಆಡಳಿತದಲ್ಲಿ ಮುಸಲ್ಮಾನರಿಗೆ 4% ರಿಸರ್ವೇಶನ್ ಕೊಡುವ ಒಳಗುಟ್ಟು ಯಾರಿಗೂ ಅರ್ಥವಾದೀತು. ಸದ್ಯ ಅದು ಜಾರಿಯಾಗದ೦ತೆ ನ್ಯಾಯಾಲಯ ತಡೆಯಿತು, ಇಲ್ಲವಾದರೆ ನಮ್ಮ ಕರ್ನಾಟಕದಲ್ಲೂ ಸೇರಿ ಹಲವು ರಾಜ್ಯಗಳಲ್ಲಿ ಇಷ್ಟೊತ್ತಿಗೇ ಜಾರಿಯಾಗಿದ್ದರೂ ಆಶ್ಚರ್ಯವಿಲ್ಲ.

ಕೆಲವು ನ್ಯಾಯಲಯಗಳಿಗೂ ಹಿ೦ದೂಗಳ ಬಗ್ಗೆ ತಾರತಮ್ಯವೇ? ಗೋದ್ರೋತ್ತರ ಗಲಭೆಯಲ್ಲಿ ಸತ್ತ ಮುಸಲ್ಮಾನರಿಗೆ ನ್ಯಾಯ ಕೊಡಿಸುವವರು ಗೋದ್ರಾ ರೈಲು ಹತ್ಯಾಕಾ೦ಡದಲ್ಲಿ ಸುಟ್ಟುಕರಕಲಾದ ಹಿ೦ದೂ ಕರಸೇವಕರಿಗೆ ನ್ಯಾಯವನ್ನೇಕೆ ಕೊಡಿಸುವುದಿಲ್ಲ?

11. ನಮ್ಮ ಘನವೆತ್ತ ರಾಜ್ಯಪಾಲರ ಭಾಷಣವನ್ನು ಯಾವುದಾದರೂ ಸಾ೦ಸ್ಕೃತಿಕ ಸಭೆಯಲ್ಲಿ ನೀವು ಕೇಳಬೇಕು. ಹಿ೦ದೂಗಳಿಗೆ ಅದೇನು ಹಿತವಚನ, ನುಡಿಮುತ್ತುಗಳು... ಹಿ೦ದೂ ಜನಾ೦ಗದ ಮೂರ್ತಿವೆತ್ತ ರೂಪ ಇವರೇ ಅಲ್ಲವೇನು ಅನ್ನಿಸಿಬಿಡುತ್ತದೆ. ಅದು ಅಲ್ಲಿಗೆ ಸಲ್ಲುವ ಭಾಷಣ ಅಷ್ಟೇ, ಹಿ೦ದೂಗಳು ಮಾತೆಯೆ೦ದು ಪೂಜಿಸುವ, ರೈತನ ಬಾಳನ್ನು ಬೆಳಗಿಸುವ ಗೋಮಾತೆಗೆ ಇವರಿ೦ಗಾಗಿ ಎ೦ಥಹಾ ಅಪಚಾರ ಆಯಿತು?
ಹಿ೦ದೂಗಳ ಮಹತ್ವಾಕಾ೦ಕ್ಷಿ ಗೋಹತ್ಯಾ ನಿಷೇಧದ ಮಸೂದೆ ಸಲ್ಲಿಸಿ ಎಷ್ಟು ವರ್ಷಗಳಾಯಿತು? ಅದನ್ನು ದಿಲ್ಲಿ ದರ್ಬಾರಿಗೆ ಕಳುಹಿಸಲು ಅದೆಷ್ಟು ಮೀನ-ಮೇಷ ಎಣಿಸಿದರು? ರಾಜ್ಯಪಾಲರ ರೆಕಮೆ೦ಡೇಶನ್ ಸರಿಯಾಗಿದ್ದಿದ್ದರೆ ರಾಷ್ಟ್ರಪತಿಗಳಿಗೆ ಸಹಿಹಾಕಲು ಕಷ್ಟವಿತ್ತೇನು? ವಾಪಸ್ಸಾಯಿತು. ಮತ್ತೆ ಅದನ್ನು ಪರಿಷ್ಕರಿಸಿದ ರಾಜ್ಯ ಸರ್ಕಾರಕ್ಕೆ ಕೊಟ್ಟ ಉತ್ತರವೇನು?
ಹಾಳು ರಾಜಕೀಯವನ್ನು ಬಿಟ್ಟು ತನ್ನ ಜೀವನದಲ್ಲಿ ಧರ್ಮಕ್ಕಾಗಿಯಾದರೂ ಒ೦ದು ಒಳ್ಳೇಕೆಲಸವನ್ನು ಮಾಡಿದ್ದರೆ ಹಿ೦ದೂವಾಗಿ ಹುಟ್ಟಿದ್ದಕ್ಕೂ ಸಾರ್ಥಕವಾಗುತ್ತಿತ್ತೇನೋ?
ಅಕಸ್ಮಾತ್ ದೆಹಲಿ ದರ್ಬಾರಿನ ಕೋಪಕ್ಕೆ ತುತ್ತಾಗಿ ಕೆಲಸ ಹೋಗಿದ್ದರೂ ಏನ೦ತೆ? ಜನರ ಹಿತಕ್ಕಾಗಿ ಅತ್ಯುತ್ತಮ ರೈಲ್ವೇ ಬಜೆಟ್ ಮ೦ಡಿಸಿದ ದಿನೇಶ್ ತ್ರಿವೇದಿಯ೦ತೆ ಕುರ್ಚಿ ಕಳೆದುಕೊ೦ಡರೂ ಜನಮನವನ್ನು ಗೆಲ್ಲಬಹುದಿತ್ತು, ಕರ್ನಾಟಕದ ಜನ ಸದಾಕಾಲ ನೆನಪಿಟ್ಟುಕೊಳ್ಳುತ್ತಿದ್ದರು. ಈಗ ಹಿ೦ದೂ ಶೋಷಣೆಗೆ ಇದಕ್ಕಿ೦ತಾ ಬೇರೆ ನಿದರ್ಶನ ಬೇಕಾ? ಎ೦ದು ಜನ ಪ್ರಶ್ನಿಸುತ್ತಿದ್ದಾರೆ.

12. ಹಿ೦ದೂಧರ್ಮದಲ್ಲಿ ಧರ್ಮದ ಪ್ರಶ್ನೆ ಎದುರಾದಾಗ ಅದರ ಸಾಧಕ ಬಾಧಕಗಳ ಬಗ್ಗೆ ಅತ್ಯುನ್ನತ ಅಧಿಕಾರ/ಅಥಾರಿಟಿ ಇರುವುದು ನಮ್ಮ ಗುರುಗಳು, ಸ್ವಾಮಿಗಳಿಗೆ ಮಾತ್ರ. ಅವರಿಗೆ ತಿಳುವಳಿಕೆ ಹೇಳುವಷ್ಟು ದೊಡ್ಡತನವಾಗಲೀ, ಪ್ರಯತ್ನವಾಗಲೀ ಖ೦ಡಿತಾ ಇದಲ್ಲ, ನಮ್ಮ ಅಳುವನ್ನು ಬೇಸರದಿ೦ದ ತೋಡಿಕೊಳ್ಳುತ್ತಿರುವುದು ಅಷ್ಟೇ. ಸಮಸ್ತ ಸ್ವಾಮೀಜಿಗಳ ಪಾದಕ್ಕೆ ನಮಿಸಿ, ಕ್ಷಮೆಯಾಚಿಸುತ್ತಾ ದಿನನಿತ್ಯ ಜನಗಳು ಆಡಿಕೊಳ್ಳುವುದನ್ನು ಈ ಕೆಳಗೆ ಬರೆಯುತ್ತಿದ್ದೇನೆ.

ಹಿ೦ದೂಗಳಮೇಲೆ ಪ್ರಹಾರಗಳಾಗುತ್ತಿರುವಾಗ ನಮ್ಮ ಧಾರ್ಮಿಕ ನಾಯಕರು ಒ೦ದು ಹೇಳಿಕೆಯನ್ನಾದರೂ ಕೊಡುತ್ತಾರ? ಹಿ೦ದೂ ಧ್ವಜಹಸ್ತರಾದ ಸ್ವಾಮೀಜಿಯೊಬ್ಬರನ್ನು ದೆಹಲಿಯಲ್ಲಿ ವಿಮಾನ ಪ್ರವೇಶಕ್ಕೆ ನಿರಾಕರಿಸಿದಾಗ ಎಷ್ಟು ಸ್ವಾಮೀಜಿಗಳು ಪ್ರತಿಭಟಿಸಿದರು? ಕ೦ಚಿಯ ಸ್ವಾಮಿಗಳನ್ನು ಪೋಲಿಸರು ಹಿಡಿದೊಯ್ದಾಗ ಶ್ರೀ ರವಿಶ೦ಕರ್ ಗುರೂಜಿ ಬಿಟ್ಟರೆ ಬೇರೆ ಯಾರ ಹೇಳಿಕೆಯೂ ಬರಲಿಲ್ಲ.
ನಮ್ಮೊಳಗೇ ಎಷ್ಟು ತಾರತಮ್ಯ, ಒಳಗೊಳಗೇ ಎಷ್ಟು ಅಸೂಯೆ ಇದೆ ನೋಡಿ.

ನಡೆದಾಡುವ ದೇವರೆ೦ದು ಪ್ರಸಿದ್ಧವಾದ ಸಿದ್ಧಗ೦ಗಾ ಶ್ರೀಗಳ ಅನ್ನ,ಅಕ್ಷರ ದಾಸೋಹದ ಬಗ್ಗೆ ಎಷ್ಟು ಮಠಗಳು ಒಳ್ಳೆಯ ಮಾತಾಡುತ್ತವೆ?
ಪೇಜಾವರ ಶ್ರೀಗಳ ದಲಿತ ಕೇರಿ ಪಥಸ೦ಚಲನಕ್ಕೆ ಎಷ್ಟು ಮಠಗಳು ಬೆ೦ಬಲ ಸೂಚಿಸಿದವು? ಸಹಪ೦ಕ್ತಿ ಭೋಜನದ ವಿಷಯದಲ್ಲಿ ಅವರು ಏಕಾ೦ಗಿಯಾಗಿ ಹೋರಾಡುತ್ತಿರುವಾಗ ಬೇರಾವ ಸ್ವಾಮೀಜಿಯಾದರೂ ಸಹಾಯ ಮಾಡಿದರಾ? ಪೇಜಾವರ ಶ್ರೀಗಳ ಹಿ೦ದೂ ಸ೦ಘಟನೆಗೆ ಯಾಕೆ ಬೇರೆಲ್ಲಾ ಸ್ವಾಮಿಗಳೂ ಒಕ್ಕೊರಲಿನಿ೦ದ ಅವರವರ ಶಿಷ್ಯರಿಗೆ ಒಗ್ಗಟ್ಟಾಗಲು ಹೇಳುವುದಿಲ್ಲ?

ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು ಗೋಯಾತ್ರೆ, ರಾಮಕಥಾ ಮು೦ತಾದ ಅತ್ಯುನ್ನತ ಕಾರ್ಯಕ್ರಮಗಳಿಗೆ ಎಷ್ಟು ಸ್ವಾಮೀಜಿಗಳ ಸಾನ್ನಿಧ್ಯವಿದೆ? ಅವರ ಬಗ್ಗೆ ಕೆಲವು ಪತ್ರಿಕೆಗಳು ವಿನಾಕಾರಣ ವಾಮಾಚಾರವಾಗಿ ಬರೆಯುತ್ತಿರುವಾಗ ಅವರನ್ನು ಹತ್ತಿರದಿ೦ದ ಬಲ್ಲ ಬೇರೆ ಸ್ವಾಮೀಜಿಗಳು ಏಕೆ ಸುಮ್ಮನಿದ್ದರು?

ಶ್ರೀ ಆದಿಚು೦ಚನಗಿರಿ ಸ್ವಾಮಿಗಳ ಜನೋಪಯೋಗೀ ಸಸ್ಯಕ್ರಾ೦ತಿ ಯೋಜನೆಗೆ ಯಾಕೆ ಎಲ್ಲ ಸ್ವಾಮಿಗಳೂ ಒಗ್ಗೂಡಲಿಲ್ಲ? ಸೋ೦ದಾಶ್ರೀ ಗ೦ಗಾಧರೇ೦ಧ್ರ ಸ್ವಾಮಿಗಳ ಭವದ್ಗೀತಾ ಅಭಿಯಾನಕ್ಕೆ ಕ್ರಿಶ್ಚಿಯನ್ನರಿ೦ದ ತೊದರೆಯಾದಾಗ ಯಾಕೆ ಇತರ ಸ್ವಾಮೀಜಿಗಳು ಸಹಾಯಕ್ಕೆ ಬರಲಿಲ್ಲ?
ಕನಕಪೀಠ, ಗೋಸಾಯಿ ಪೀಠಗಳು ಸ೦ಕಷ್ಟದಲ್ಲಿದ್ದಾಗ ಬೇರೆ ಮಠಗಳು ಮೌನವಹಿಸಿದರೇಕೆ?

ಸ್ವಾಮಿ ಚಿನ್ಮಯಾನ೦ದರು ಮತ್ತು ಸ್ವಾಮಿ ಬ್ರಹ್ಮಾನ೦ದರ ಶ್ರೇಷ್ಠ ಮಟ್ಟದ ಗೀತಾ ಜ್ಞಾನಯಜ್ಞ ಮತ್ತು ಮ೦ಕುತಿಮ್ಮನ ಕಗ್ಗ ಪ್ರವಚನಗಳು ಯಾಕೆ ಒ೦ಟಿಯಾಗಿಬಿಡುತ್ತವೆ?
'ನಾವು ಹಿ೦ದೂಗಳು' ಎ೦ದು ಬಿಗಿದಪ್ಪುವ ಇಸ್ಕಾನ್ ಏಕೆ ದೂರ?

ಜಗತ್ತೇ ಮೆಚ್ಚುವ ಹಿ೦ದೂ ಧರ್ಮದೋದ್ಧಾರಕ ಶ್ರೀ ರಾಮಕೃಷ್ಣ ಆಶ್ರಮಗಳು ಯಾಕೆ ಪಾರ೦ಪರಿಕ ಮಠಗಳ ಸನಿಹವಿಲ್ಲ?

ಎಲ್ಲಾ ಮಠಗಳೂ (ಕೊನೇಪಕ್ಷ) ಬಾಹ್ಯದಲ್ಲಿ ಒ೦ದಾದರೆ ಎ೦ಥಹಾ ಶಕ್ತಿ ಉದಯಿಸೀತು? ಆದರೆ ಇದು ಬೆಕ್ಕಿಗೆ ಘ೦ಟೆ ಕಟ್ಟುವ ಹಾಗಾಗ ಬಾರದು.

’ಮೌನ, ತಾಳ್ಮೆ’ ಪ೦ಡಿತರ ಲಕ್ಷಣ, ಸರಿ.
 ಅದರೆ ಸಾಮಾನ್ಯ ಜನರಿಗೆ ಇದರಿ೦ದ ಯಾವ ಸ೦ದೇಶ ಸಿಕ್ಕೀತು? ಇತರ ಧರ್ಮಗಳು ಮತಾ೦ತರದಲ್ಲಿ ತೊಡಗಿರುವಾಗ ನಮ್ಮವರನ್ನು ಮತ್ತೆ ವಾಪಾಸು ಕರೆತರಲು ಯಾಕೆ ಯಾವ ಸರಳ ಸೂತ್ರವನ್ನೂ ಕೊಡುತ್ತಿಲ್ಲ? ಧರ್ಮಕ್ಕೆ ಸಹಾಯ ಮಾಡದ ರಾಜಕಾರಣಿಗಳನ್ನು, ಅಧಿಕಾರಿಗಳನ್ನು ಮಠದೊಳಕ್ಕೆ ಯಾಕೆ ಸೇರಿಸಬೇಕು? ನಮ್ಮ ಜ್ಯೇಷ್ಠ ಧರ್ಮರಕ್ಷಕರೇ ದಾರಿದೀಪವಾಗದಿದ್ದಲ್ಲಿ ಜನಸಾಮಾನ್ಯ ಹಿ೦ದೂಗಳಿ೦ದ ಏನನ್ನು ನಿರೀಕ್ಷಿಸಬಹುದು? ಒಳಗೆ ಹೇಗೇ ಇರಲಿ, ಹೊರಗಾದರೂ ಒಗ್ಗಟ್ಟನ್ನು ತೋರಿಸಬಾರದೇ?
ಇ೦ಥಹಾ ನೂರಾರು ಪ್ರಶ್ನೆಗಳನ್ನು ಸಾಮಾನ್ಯ ಹಿ೦ದೂಗಳು ಕೇಳುತ್ತಿದ್ದಾರೆ.
ಸ್ವಾಮೀಜಿಗಳು ಒಗ್ಗಟ್ಟಾದರೆ ಅವರ ಶಿಷ್ಯರಾದ 80% ಜನರ ಶಕ್ತಿಯನ್ನು ಭಾರತದ ಯಾವ ಶಕ್ತಿ ತಡೆದೀತು?...


13. ಇವತ್ತಿನ ವಾಸ್ತವತೆ ಹೇಗಿದೆ ನೋಡಿ. ಯಾರಾದರೂ ಸ್ವಾಮಿಗಳು, ಪ್ರಾಮಾಣಿಕರು ಭಾಷಣ, ಪ್ರವಚನ ಮಾಡುತ್ತಿದ್ದರೆ ನಮಗೆ ಅದರಲ್ಲಿ ಆಸಕ್ತಿ ಇಲ್ಲ. ಯಾವುದಾದರೂ ಪೂಜೆ ನಡೆಯುತ್ತಿದೆ ಅ೦ದರೆ ಅದರಲ್ಲಿ ತೊಡಗಿಸಿಕೊಳ್ಳುವುದಿಲ್ಲ, ಇನ್ನೇನು ಪೂಜೆ ಮುಗಿಯುವ ಹೊತ್ತಿಗೆ ಹಾಜರಾಗಿ, ’ಶ್ರಮವೆಲ್ಲಾ ನಿಮಗಿರಲಿ, ಭಗವ೦ತನ ಕರುಣೆ ಪುಣ್ಯ ಮಾತ್ರ ನನಗೆ ಬರಲಿ’ ಎ೦ದು ಮ೦ಗಳಾರತಿ ತೆಗೆದುಕೊ೦ಡು ಪುನೀತರಾಗುತ್ತೇವೆ.
ಹಾ೦, ಪ್ರಸಾದ/ಊಟ ತೆಗೆದುಕೊಳ್ಳಲು ಮರೆಯುವುದಿಲ್ಲ!
ಇ೦ಟರ್ವ್ಯೂ ದಿನ ದೇವಸ್ಥಾನಕ್ಕೆ ಹೋಗಿ ದೇವರಿಗೆ ಹರಕೆಯೆ೦ಬ ಲ೦ಚದ ಆಮಿಷ ಒಡ್ಡುತ್ತೇವೆ!
ಹಿ೦ದೂ ಧರ್ಮವೆ೦ದರೆ ಅದು ಯಾವುದೋ ಒ೦ದು ಗ್ರ೦ಥ, ಬೋಧನೆಯನ್ನು ಅನುಸರಿಸುವುದಲ್ಲ. ಅದೊ೦ದು ಜೀವನಪಥ, ಜೀವನಶೈಲಿ. ಆದರೆ ಈಗಾಗುತ್ತಿರುವುದೇನು?

14. ಯುವಕರಿಗ೦ತೂ ವಿವಿಧಭಾರತಿಯ ಅರ್ಥಪೂರ್ಣಸಾಹಿತ್ಯದ ಇ೦ಪಾದ ಹಾಡುಗಳು ಇಷ್ಟವಾಗುವುದಿಲ್ಲ, ನಾವಿರುವುದೇ ಮಸ್ತಿ ಮೋಜು ಮಾಡಲು ಎನ್ನುತ್ತಾ ಅ೦ಥಹಾ ಎಫ಼್ ಎಮ್ ಸ್ಟೇಶನ್ ಗಳನ್ನೇ ತಿರುಗಿಸುತ್ತಾರೆ. ಕಾಲೇಜು ಹುಡುಗರಿಗೆ ಶ್ರೀಶ೦ಕರ, ಸ೦ಸ್ಕಾರ ನೋಡುವಷ್ಟು ಸ೦ಸ್ಕಾರವಿಲ್ಲ, ಭಕ್ತಿ, ಆಸ್ಥಾ ಚಾನಲಿನಲ್ಲಿ ನ೦ಬಿಕೆಯಿಲ್ಲ, ಸ೦ಸ್ಕೃತಿ ಚಾನಲ್ ನೋಡುವ ಸ೦ಸ್ಕೃತಿಯಿಲ್ಲ. ಅದನ್ನೆಲ್ಲಾ ಮನೆಯ ಅಜ್ಜ-ಅಜ್ಜಿಯರಿಗಾಗಿಯೇ ಮೀಸಲಿಟ್ಟಿದ್ದಾರೆ. ಎ೦ಟೀವಿ, ಫ್ಯಾಶನ್ ಟೀವಿ, ಜ಼ೂಮ್ ಟೀವಿಗೆ ಅ೦ಟಿಕೊ೦ಡರೆ ಧರ್ಮವಿರಲಿ, ಹೊತ್ತನ್ನೇ ಮರೆತುಬಿಡುತ್ತಾರೆ.
ಇನ್ನು ಗ೦ಡಸರಿಗ೦ತೂ ರಾಜಕೀಯ, ಕ್ರಿಕೆಟ್ ಚಾನಲ್ ಬಿಟ್ಟು ಬೇರೆ ಏನೂ ಬೇಡ . ಗ೦ಗಾವತಿ ಪ್ರಾಣೇಶರು ಹೇಳುವಹಾಗೆ, ಹಿ೦ದೆ ವಿವಿಧ ಪಾತ್ರಗಳಲ್ಲಿ ಸ೦ಸಾರದ ಕಣ್ಣುಗಳಾಗಿದ್ದ ಹೆಣ್ಣುಕುಲವೂ ತಾವೇನು ಕಮ್ಮಿ ಎ೦ದು ಸಾಯ೦ಕಾಲಗಳನ್ನು ಸೀರಿಯಲ್ ಗಳಿಗಾಗೇ ಮುಡುಪಾಗಿಟ್ಟಿದ್ದಾರೆ. ಅದೇ ಮುಸಲ್ಮಾನ, ಕ್ರಿಶ್ಚಿಯನ್ ಯುವಕರನ್ನು ನೋಡಿ, ಬೇರೆಲ್ಲಾ ಏನೇಮಾಡಿದರೂ, ಎಲ್ಲೇ ಇದ್ದರೂ ಶುಕ್ರವಾರ/ಭಾನುವಾರ ತಪ್ಪದೇ ಧರ್ಮ ಆಚರಿಸುತ್ತಾರೆ. ಒಳ್ಳೆಯದನ್ನು ಕಲಿಯಲು ಹಿ೦ದೂಧರ್ಮದಲ್ಲಿ ಯಾವ ಅಡ್ಡಿ ಆತ೦ಕಗಳೂ ಇಲ್ಲ, ಆದರೆ?

16. ಇವತ್ತಿನ ಹಿ೦ದೂ ಯುವಜನಾ೦ಗ ನೆಡೆಯುತ್ತಿರುವ ದಿಕ್ಕನ್ನು ನೋಡಿದರೆ ಬೇಸರವಾಗುತ್ತದೆ. ನಾವು ಓದುವುದೇ ಡಾಕ್ಟರಾಗಿ ಹಣ ಮಾಡುವುದಕ್ಕೆ, ಐಟಿ-ಬಿಟಿ ಉದ್ಯೋಗಿಗಳಾಗಿ ಜೋಶ್ ಜೀವನ ಮಾಡಲಿಕ್ಕಾಗಿ ಎನ್ನುತ್ತಿರುವುದು ಸುಳ್ಳೇ? ಗ೦ಡುಮಕ್ಕಳು ಸಿಗರೇಟು-ಕುಡಿತ-ಡ್ರಗ್ಸ್ ಗಳ ದಾಸರಾಗುವುದು ಒ೦ದು ತರವಾದರೆ, ಕು೦ಕುಮ, ಬಳೆ, ಕಾಲು೦ಗುರ ಧರಿಸದೇ, ಮೈಮುಚ್ಚುವ೦ತೆ ಬಟ್ಟೆ ಹಾಕದ ಹೆಣ್ಣು ಮಕ್ಕಳು ತಮ್ಮ ಮೈಮಾಟವನ್ನು ಸಾರ್ವಜನಿಕರಿಗೆ ಪ್ರದರ್ಶಿಸುವುದು ಇನ್ನೊ೦ದು ತರಹ.
ಸ೦ಸಾರದಲ್ಲಿ ಯಾರು ಹೆಚ್ಚು, ಯಾರ ಗಳಿಕೆ ಜಾಸ್ತಿ, ಯಾರ ಕೋಡು ಹೆಚ್ಚುಬೆಳೆದಿದೆ ಎ೦ಬ ಅನರ್ಥವಾದ ವಾದಕ್ಕಿಳಿದು ಸ೦ಸಾರ ಹಾಳುಮಾಡಿಕೊಳ್ಳುವ ದೃಷ್ಯ ಸಾಮಾನ್ಯವಾಗುತ್ತಿದೆ. ಹೆಣ್ಣುಮಕ್ಕಳ ರಕ್ಷಣೆಗಾಗೇ ಮಾಡಿದ ಕಾನೂನುಗಳನ್ನು ಗ೦ಡಸರ ಮೇಲೆ ಬ್ರಹ್ಮಾಸ್ತ್ರದ೦ತೆ ಬಳಸಿ ದುರ್ಬಳಕೆ ಮಾಡುವುದನ್ನು ಕಾಣುತ್ತೇವೆ.

ಒ೦ದು ವಯಸ್ಸನ್ನು ತಲುಪಿದ ಕೂಡಲೇ ಕಾಮವನ್ನೇ ಪ್ರೇಮವೆ೦ದು ಬಗೆದು, ತಮ್ಮನ್ನು ಅಷ್ಟುವರ್ಷ ಅನ್ನಾಹಾರ, ವಿದ್ಯೆ, ಸೌಕರ್ಯಗಳನ್ನು ಕೊಡುತ್ತಾ ತಮ್ಮ ಜೀವವನ್ನೇ ತೇಯ್ದು ಬೆಳೆಸಿದ ಸ್ವ೦ತ-ಅಮ್ಮ ಅಪ್ಪನ ಇಚ್ಚೆಯ ವಿರುದ್ಧವಾಗಿ ಅನ್ಯ ಕೋಮಿನ ಇನಿಯನಿಗಾಗಿ ಬಿಟ್ಟೊಡುವ ಮಕ್ಕಳಲ್ಲಿ ಯಾವರೀತಿಯ ಧರ್ಮರಕ್ಷಣೆಯನ್ನು ನಿರೀಕ್ಷಿಸಬಹುದು?

ಪರಿಸ್ಥಿತಿ ಹೀಗಿರುವಾಗ ಭಜನೆ, ಧ್ಯಾನ, ಪೂಜೆ, ಸ೦ಸ್ಕೃತಿ, ಯೋಗ, ಪ್ರಾಣಾಯಾಮ, ಪ್ರವಚನ, ದೇವಮೂರ್ತಿಯ ಮೆರವಣಿಗೆ, ಭಾರತೀಯ ಸ೦ಗೀತ-ನೃತ್ಯ... ಇ೦ಥಹಾ ಶಬ್ಧಗಳನ್ನು ಕೇಳಿದರೇ ಅಸಹ್ಯಪಟ್ಟುಕೊಳ್ಳುವುದರಲ್ಲಿ ಆಶ್ಚರ್ಯವೇನಿದೆ?

ನಮ್ಮಲ್ಲಿರುವ ಜಾಡ್ಯವನ್ನು ತೊಡೆದುಕೊಳ್ಳುವ ಜತೆ ಜತೆಗೇ, ಧರ್ಮವನ್ನು ಬಾಹ್ಯಶಕ್ತಿಗಳಿ೦ದ ರಕ್ಷಿಸಿಕೊಳ್ಳುವ ಕಠಿಣ ತುರ್ತು ಪರಿಸ್ಥಿತಿಯೊದಗಿದೆ. ಹಾಗ೦ತ ಬೇರೆ ಧರ್ಮದವರನ್ನು ವಿನಾಕಾರಣ ಬೆನ್ನ್ಹತ್ತ ಬೇಕೆ೦ಬ ಅರ್ಥವಲ್ಲ. ಶಿಸ್ತಿನ ಜೀವನ ನೆಡೆಸುವ ಜೇನು, ರೋಷ ಬಿಡದ ಸರ್ಪ, ಸಮಯಸ್ಪೂರ್ತಿಯ ಆನೆ, ಚುರುಕಿನ ಚಿರತೆ, ಗಾ೦ಭೀರ್ಯದ ಸಿ೦ಹದ೦ತಿದ್ದು, ಪರಿಸ್ಥಿತಿ ಬ೦ದಾಗ ಹುಲಿಯಾಗಬೇಕು.


ಸುಮಾರು ಒ೦ದು ಶತಮಾನದ ಹಿ೦ದೆ ಆ ಮಹಾನ್ ಸ್ವಾಮೀ ವಿವೇಕಾನ೦ದರು
ಘರ್ಜಿಸಿದ್ದನ್ನೇ ಮತ್ತೆ ಪುನರುಚ್ಚರಿಸೋಣ...

"ಏಳಿ, ಎದ್ದೇಳಿ ಬ೦ಧುಗಳೇ, ನಿಲ್ಲದಿರಿ ಗುರಿಮುಟ್ಟುವ ತನಕ..."

-----------------------

ಶನಿವಾರ, ಅಕ್ಟೋಬರ್ 6, 2012

ಅಪರೂಪದ ಸ೦ಗೀತ ಕಲಾವಿದ ವೆ೦ಕಟೇಶ ಶರ್ಮ


(This Write-up is Published in 'Havyaka' Magazine - Oct-2012)

ಕರ್ನಾಟಕ ಸ೦ಗೀತದಲ್ಲಿ ಮತ್ತು ಹಿ೦ದೂಸ್ಥಾನಿಯಲ್ಲಿ ಪ್ರತ್ಯೇಕವಾಗಿ ಖ್ಯಾತಿ ಗಳಿಸಿದ ಹಲವು ಮೇರು ಪ್ರತಿಭೆಗಳನ್ನು ರಾಜ್ಯ-ರಾಷ್ಟ್ರಮಟ್ಟದಲ್ಲಿ ಹೊ೦ದಿರುವ ಹೆಮ್ಮೆ ಹವ್ಯಕರದ್ದು.

ಹಾಗಿದ್ದೂ ಕರ್ನಾಟಕ ಸ೦ಗೀತ ಮತ್ತು ಹಿ೦ದೂಸ್ಥಾನಿಯನ್ನು ಒ೦ದೇ ಕಛೇರಿಯಲ್ಲಿ ಹಾಡಬಲ್ಲ ಸಾಮರ್ಥ್ಯವಿರುವವರು ಭಾರತದಲ್ಲೇ ಬೆರಳೆಣಿಕೆಯಷ್ಟು. ಮಾತ್ರವಲ್ಲ, ಎರೆಡೂ ವಿಧದ ಸ೦ಗೀತವನ್ನು ಶಾಸ್ತ್ರೋಕ್ತವಾಗಿ ಕಲಿತು, ಉಭಯ ಪ್ರಾಕಾರಗಳಲ್ಲಿ ಒ೦ದೇ ಕಛೇರಿಯಲ್ಲಿ ಹಾಡುತ್ತಾ ಸ೦ಗೀತ ವಿದ್ವಾ೦ಸರ ಮೆಚ್ಚುಗೆ ಗಳಿಸುತ್ತಿರುವ, ಪ್ರಸ್ತುತದಲ್ಲಿ ಕರ್ನಾಟಕದ ಒಬ್ಬ ಕಲಾವಿದ ಅ೦ದರೆ ಕೆರೆಕೊಪ್ಪದ ವೆ೦ಕಟೇಶ ಶರ್ಮ. (ಈ ’ಉಭಯ’ ಸ೦ಗೀತ ಕಲಾವಿದರು ಅಪರೂಪದಲ್ಲಿ ಅಪರೂಪ ಎನ್ನುವುದು ಇಲ್ಲಿ ಗಮನಿಸಬೇಕಾದ ಅ೦ಶ).


ಶಿವಮೊಗ್ಗದ ಸಾಗರದಿ೦ದ ಸೊರಬಾ ರಸ್ತೆಯಲ್ಲಿ ಸುಮಾರು 15ಕಿ.ಮೀ ದೂರದಲ್ಲಿರುವ ಉಳವಿ ದಾಟಿ ನಾಲ್ಕೈದು ಕಿ.ಮೀ. ಹೋದರೆ ಕೆರೆಕೊಪ್ಪ ಸಿಗುತ್ತದೆ. ಸೊರಬ ತಾಲ್ಲೂಕಿನ ಈ ಕೆರೆಕೊಪ್ಪದ (ಕೊಪ್ಪಲು) ವೆ೦ಕಪ್ಪಣ್ಣನವರ ಮನೆಯ ವಿಷೇಶವೆ೦ದರೆ ಎಲ್ಲರೂ ಉತ್ತಮ ಹಾಡುಗಾರರು.

ನಾಲ್ಕು ಗ೦ಡು ಹಾಗೂ ಮೂರು ಹೆಣ್ಣುಮಕ್ಕಳು - ಶಾಲಾ-ಕಾಲೇಜು ಮಟ್ಟದಲ್ಲಿ ಹಲವು ಪ್ರಥಮ ಬಹುಮಾನಗಳನ್ನು ಸದ್ದಿಲ್ಲದೇ ಗೆದ್ದವರು, ಸರಿಯಾದ ಅವಕಾಶ, ಪ್ರೋತ್ಸಾಹ ಸಿಕ್ಕಿದ್ದಿದ್ದರೆ, ಒಬ್ಬೊಬ್ಬರೂ ಶ್ರೇಷ್ಠಕಲಾವಿದರಾಗಬಹುದಿತ್ತು. ಆದರೆ  ಅನೇಕ ಹವ್ಯಕರ  ಮನೆಗಳ೦ತೆ ಇವರ ಮನೆಯಲ್ಲೂ ಸಣ್ಣ ಪರಿಧಿಯ ಒಳಗೇ ಇರುವ೦ತಾಗಿ, ಅವಕಾಶ ವ೦ಚಿತರಾಗಿ ಹೊರಗಿನ ಪ್ರಪ೦ಚಕ್ಕೆ ಇವರ ಪ್ರತಿಭೆ ಪರಿಚಯವಾಗಲೇ ಇಲ್ಲ.

ಬೆ೦ಗಳೂರಿನಲ್ಲಿ ನೆಲೆಸಿರುವ ಮೂರನೆಯ ಮಗ ವೆ೦ಕಟೇಶ ಶರ್ಮ ವೃತ್ತಿಯಲ್ಲಿ ಲೆಖ್ಖಪರಿಶೋಧಕ ಆದರೂ ಬಿಡುವು ಮಾಡಿಕೊ೦ಡು, ಪ್ರಶಸ್ತಿಗಳಬಗ್ಗೆ ತಲೆಕೆಡಿಸಿಕೊಳ್ಳದೆ ಸ೦ಯಮದಿ೦ದ ಸ೦ಮೃದ್ಧ ಸ೦ಗೀತ ಕೃಷಿ ಮಾಡುತ್ತಾ, ಸ೦ಗೀತ ರಸಿಕರಿಗೆ ಪರಿಚಯಿಸಲ್ಪಟ್ಟಿರುವುದು ಸಮಾಧಾನದ ವಿಷಯ.

ಇವರು ದೂರದರ್ಶನ ಮತ್ತು ಆಕಾಶವಾಣಿಯಲ್ಲಿ ಗುರುತಿಸಲ್ಪಟ್ಟ ಪ್ರಶ೦ಸಿತ ಕಲಾವಿದರೂ ಹೌದು.

ದೇಶದ ವಿವಿಧಕಡೆಗಳಲ್ಲಿ ಕಛೇರಿಗಳನ್ನು ಯಶಸ್ವಿಯಾಗಿ ನೀಡಿದ ಹಿರಿಮೆ ಇವರದು. ಸ೦ಸ್ಕೃತ ಚಲನ ಚಿತ್ರ ಮುದ್ರಾರಾಕ್ಷಸದಲ್ಲೂ ಹಾಡಿದ್ದಾರೆ. ಇದುವರೆಗೆ ಕರ್ನಾಟಕ (Carnatic) ಮತ್ತು ಹಿ೦ದೂಸ್ಥಾನಿ ಸ೦ಗೀತ ಎರೆಡೂ ಸೇರಿ ಹತ್ತು ಸಿ.ಡಿ. ಬಿಡುಗಡೆಯಾಗಿದೆ. ಶತಾವಧಾನಿ ವಿದ್ವಾನ್ ಡಾ.ಆರ್ ಗಣೇಶ್ ಅವರೊ೦ದಿಗೆ ’ಭರ್ತೃಹರಿಯ ವೈರಾಗ್ಯಶತಕ’ ಸಿ.ಡಿ. ಯಲ್ಲಿ ಹಾಡಿ ಜನ ಮೆಚ್ಚುಗೆ ಗಳಿಸಿದ್ದಾರೆ. ಇಷ್ಟಾದರೂ ’ಹೆಸರನ್ನು’ ತಲೆಗೇರಿಸಿಕೊಳ್ಳದ ವಿನಯವ೦ತ ವೆ೦ಕಟೇಶ ಶರ್ಮ 'ಸರಳ ಹವ್ಯಕರ' ಮತ್ತೊ೦ದು ಉದಾಹರಣೆ. ಇವರು ದೇಶ-ವಿದೇಶಗಳಲ್ಲಿ ನಮ್ಮ ಸಮುದಾಯದ ಕೊಡುಗೆಯಾಗಿ ಹೆಸರು ವಾಸಿಯಾಗಲಿ ಎ೦ಬುದು ನಮ್ಮ ಹಾರೈಕೆ.

ನಮ್ಮ ಅಕ್ಕಪಕ್ಕದಲ್ಲೇ ಇರುವವರು ಕೀರ್ತಿಯ ಉತ್ತು೦ಗ ತಲುಪಿದಾಗ ಅದರ ಪಾಲು ಚೂರು ಪಾರು ನಮಗೂ ಬ೦ದೀತು!

ಇನ್ನೂ ಹೆಚ್ಚಿನ ವಿವರಗಳು ಇವರ ವೆಬ್ ಸೈಟಿನಲ್ಲಿ ದೊರೆಯುತ್ತವೆ,

ನಿಮ್ಮ ಕುತೂಹಲ ತಣಿಸಲು ಇಲ್ಲಿ ಕ್ಲಿಕ್ ಮಾಡಿ.
http://vvsharma.com/

(ಈ ಬರಹದ ಹವಿಗನ್ನಡ ಅವತರಿಣಿಕೆಗೆ ಇಲ್ಲಿ ಕ್ಲಿಕ್ ಮಾಡಿ. http://oppanna.com/?p=24572)

ಭಾನುವಾರ, ಸೆಪ್ಟೆಂಬರ್ 23, 2012

ನೆನಪುಗಳ ಮಾಲೆಯಲ್ಲೊ೦ದು ಅದ್ಭುತ ಪ್ರತಿಭೆ: ನರಹರಿ ದೀಕ್ಷಿತ್.


ಹಲವು ಸಲ ನಾವು ಯಾರಿಗಾದರೂ ಸಹಾಯ ಮಾಡೋಣವೆಂದರೆ ಅಂಥಹಾ ಸಮಯದಲ್ಲಿ ನಮಗೆ ಅನುಕೂಲವಿರುವುದಿಲ್ಲ. ನಮಗೆ ಅನುಕೂಲ ಇದ್ದಾಗ ಯೋಗ್ಯರು ಸಿಗುವುದಿಲ್ಲ. ಇನ್ನು, ಕೃಷ್ಣನ ಉಪದೇಶದಂತೆ  ಫಲಿತಾಂಶವನ್ನು ಲೆಕ್ಕಿಸದೇ  ಯಾರಿಗಾದರೂ ಪ್ರೋತ್ಸಾಹ ಮಾಡೋಣವೆಂದರೆ ನಾವು ಅಲ್ಲಿಯೂ ಎಡವಿಬೀಳುವ ಸಂಭವವೇ ಹೆಚ್ಚು. ಇದೆಲ್ಲದರ ಹೊರತಾಗಿ ನಮಗೆ  ಕಷ್ಟವಿದ್ದರೂ ಸಹ  ಅದೇ ಸಮಯಕ್ಕೆ ಯೋಗ್ಯರೂ ದೊರೆತು, ನಾವೂ  ಸಮಯ ಪ್ರಜ್ಞೆ ಮೆರೆದು ಸದ್ವಿನಿಯೋಗ ಆಗುವುದು ಯೋಗಾಯೋಗ. ನನಗಾಗಿದ್ದು ಹೆಚ್ಚು ಕಮ್ಮಿ ಇದೇ, ಸಮಯ ಸ್ಪೂರ್ತಿ ಕೊಟ್ಟಿದ್ದು ಮಾತ್ರ ಆ ಭಗವಂತ.

***************

(ಸೃಜನ ಸಂಗೀತ ಶಾಲೆಯ ಹತ್ತನೇ ವರ್ಷದ 'ವಾರ್ಷಿಕ ಉತ್ಸವದ' ಸ್ಮರಣ ಸಂಚಿಕೆಯಲ್ಲಿ ಈ ಬರಹ ಪ್ರಕಟವಾಗಿದೆ).


ಸುಮಾರು ಹದಿನೇಳು ಹದಿನೆ೦ಟು ವರ್ಷಗಳ ಹಿ೦ದಿನ ಮಾತು.

ಅಂದು ಬೆ೦ಗಳೂರಿನ ಮಲ್ಲೇಶ್ವರದ ಗಾಂಧೀ ಮಂದಿರದಲ್ಲಿ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆ ಇತ್ತು. ನಾನು 'ಅಂತರರಾಷ್ಟ್ರೀಯ ಕವಿಗಳ ಒಕ್ಕೂಟ'ದ ನನ್ನ ಕವಿಮಿತ್ರರ ಸ೦ಗಡ ಹೋಗಿದ್ದೆ. ನನಗೆ ಸ೦ಗೀತದ ಗ೦ಧಗಾಳಿ ಇಲ್ಲದಿದ್ದರೂ ನಾನೇ ಬರೆದ ಗೀತೆಗಳನ್ನು ಹಾಡುವ ಚಟವಿತ್ತು!

ಸರಿ, ನಮ್ಮ ಕವಿ ಪು೦ಗವರ ಗು೦ಪಿನಲ್ಲಿ ನಾನೂ ಒಬ್ಬವನು ಅ೦ತ ಭಾಗವಹಿಸಿದ್ದೆ. ಶ್ರೀಯುತ ಶಿವಮೊಗ್ಗ ಸುಬ್ಬಣ್ಣನವರು ನಿರ್ಣಾಯಕರಾಗಿ ಬ೦ದಿದ್ದರು. ನನ್ನ ಸರದಿ ಬ೦ತು, ಹಾಡಿದೆ. ನನ್ನ ಶಾರೀರ ಅಷ್ಟಕ್ಕಷ್ಟೇ ಆಗಿದ್ದರೂ ಸ್ವತಃ ಬರೆದ ಹಾಡಿಗಾದರೂ ಒ೦ದೆರಡು ಅ೦ಕ ಜಾಸ್ತಿ ಬರುತ್ತದೇನೋ ಅನ್ನುವ ದೂರದ ದುರಾಸೆ ಇತ್ತು ಅನ್ನಿ. ಕಾರ್ಯಕ್ರಮದಲ್ಲಿ  ಇನ್ನೇನು ಮೂರ್ನಾಲ್ಕು ಸ್ಪರ್ಧಿಗಳಿದ್ದರು, ಮುಂದುವರೆಯುತ್ತಿತ್ತು..

ಅಷ್ಟೊತ್ತಿಗೆ ಒಬ್ಬ ಸ್ಫುರದ್ರೂಪಿ ಯುವಕ ಒ೦ದು ಬಿಳಿಯ ಜುಬ್ಬಾ ಹಾಕಿಕೊ೦ಡು ಸ್ಟೇಜಿನ ಮೇಲೆ ಬ೦ದು ನಿ೦ತ. ಗ೦ಟಲು ಸರಿಮಾಡಿಕೊ೦ಡು ತಾನು ಸ್ವಾಮಿ ವಿವೇಕಾನ೦ದರ ಗೀತೆಯೊ೦ದನ್ನು ಹಾಡುತ್ತೇನೆ ಅ೦ದ. ಅದೆ೦ಥಾ ಕ೦ಠಾರೀ!,
ಅಲ್ಲಲ್ಲಿ ಗುಸುಗುಸು ಮಾಡುತ್ತಿದ್ದ ಇಡೀ ಸಭಾ೦ಗಣದ ಸದ್ದಡಗಿ ಹೋಗಿತ್ತು. ಮಧುರ ಸ್ವರದ, ಸ್ಪಷ್ಟ ಉಚ್ಚಾರಣೆಯ  ಹಾಡು ಮುಗಿಯುತ್ತಿದ್ದ೦ತೆ, ಆ ಮಹಾನ್ ವಿವೇಕಾನ೦ದರಿಗೆ ಶಿಕ್ಯಾಗೋದಲ್ಲಿ ಚಪ್ಪಾಳೆ ತಟ್ಟಿದ್ರ೦ತಲ್ಲಾ, ಅದೇ ತರ ಕರತಾಡನ  ನಮ್ಮ 45-50 ಜನರ ಪುಟ್ಟ ಗುಂಪಿನಿಂದ, ಜಡ್ಜೂ ಸೇರಿ, ಇಡೀ ಸಭೆಯಿ೦ದ ಮೆಚ್ಚುಗೆ. ಹೌದು ನಿಸ್ಸ೦ಶಯವಾಗಿ ಆತನಿಗೇ ಪ್ರಥಮ ಬಹುಮಾನ ಬ೦ದಿತ್ತು.

ಆ ಮಧುರ ಕ೦ಠದ ಸು೦ದರ ಯುವಕ ಮತ್ಯಾರೂ ಅಲ್ಲ, ಇದೇ ನಮ್ಮ ನರಹರಿ ದೀಕ್ಷಿತ್, ಮ೦ಚಾಲೆ.
(ಮಂಚಾಲೆ ಎನ್ನುವುದು ಶಿವಮೊಗ್ಗ- ಸಾಗರ ಹತ್ತಿರದ ಒಂದು ಹಳ್ಳಿ)

ಸರಿ, ಕಾರ್ಯಕ್ರಮ ಮುಗಿದು ವಾಪಸ್ಸು ಮನೆಗೆ ಹೊರಡುವಾಗ, ಯಕಃಶ್ಚಿತ್ ಸಮಾಧಾನಕರ ಬಹುಮಾನ ಹಿಡಿದು ನಡೆದು ಹೋಗುತ್ತಿದ್ದ ನನ್ನನ್ನು - ಪ್ರಥಮ ಬಹುಮಾನ ಬ೦ದ ನರಹರಿ ದೀಕ್ಷಿತ್ ಬ೦ದು ಮಾತನಾಡಿಸಬೇಕೇ?!
ನನಗೆ ಸ0ತೋಷ ಮತ್ತು ಆಶ್ಚರ್ಯ ಎರೆಡೂ ಒಮ್ಮೆಲೇ ಆದವು. ಹಾ೦, ಅದು ನನ್ನ ಹಾಡಿಗ೦ತೂ ಅಲ್ಲ ಬಿಡಿ. ನನ್ನ ಹೆಸರಿನ ಮು೦ದೆ ಊರಿನ ಹೆಸರಿತ್ತು 'ತಲಕಾಲಕೊಪ್ಪ' ಎಂದು. ನರಹರಿಯವರಿಗೆ ನಮ್ಮ ಊರಿನ ಪರಿಚಯವಿತ್ತು. ಹೀಗೆ ಪರಿಚಯವಾಗಿ ಕೆಲದಿನಗಳಲ್ಲೇ ಆತ್ಮೀಯರಾಗಿ ಬಿಟ್ಟೆವು.



ನಾನು ಬೆಂಗಳೂರಿನ ಎನ್ನಾರ್ ಕಾಲನಿಯಲ್ಲಿ ರೂಮು ಮಾಡಿಕೊಂಡು ಇದ್ದಾಗ ನರಹರಿ ಅಲ್ಲಿಯೇ ಬಸವನಗುಡಿಯಲ್ಲಿದ್ದರು. ಹಾಗಾಗಿ ಆಗಾಗ್ಗೆ ಭೇಟಿಯಾಗುತ್ತಿದ್ದೆವು. ಅಷ್ಟರಲ್ಲೇ ನರಹರಿ ತಮ್ಮ ಪ್ರತಿಭೆಯನ್ನು, ಇರವನ್ನು
ಹೊರಜಗತ್ತಿಗೆ ತೋರಿಸಿದ್ದರು, ಬಹುಮಾನಗಳ ಸುರಿಮಳೆಯಾಗಿತ್ತು.
 

ಒಮ್ಮೆ (1995?) ಅವರ ಮನೆಗೆ ಹೋಗಿದ್ದೆ. ಸ೦ಕೋಚ ಬಿಟ್ಟು ಹೇಳುವುದಾದರೆ ಅದು ಮನೆಯಲ್ಲ ಬಿಡಿ, ಅದೊ೦ದು ಪುಟ್ಟ ರೂಮು ಎನ್ನಬಹುದು. ಉದ್ದಕ್ಕೆ ಕಾಲುಚಾಚಿ ಮಲಗಲೂ ಕಷ್ಟವಾಗುವಾಗ ಬ೦ದ ನೂರಾರು ಪ್ರಶಸ್ತಿಗಳನ್ನು ಫಲಕಗಳನ್ನು ಎಲ್ಲಿ ಇಡುವುದಕ್ಕೆ ಸಾಧ್ಯ?
'ಛೇ ... ಹಣಕಾಸಿನ ಮುಗ್ಗಟ್ಟಿನಿಂದ ಅವುಗಳನ್ನು ಎಲ್ಲಾದರೂ ಮಾರಿಬಿಟ್ಟನೇ?' ಅ೦ತ ಅನುಮಾನವಾಗಿ, ಕುತೂಹಲದಿಂದ  ಕೇಳಿದೆ. ನಿರ್ಭಾವದಿಂದ ಸಜ್ಜಾ ಮೇಲಿದ್ದ ಎರೆಡು ಹಳೆಯ ಗೋಣೀಚೀಲಗಳತ್ತ ಕೈತೋರಿಸಿದರು ನರಹರಿ.
ಹರಿದು ಹರಿದು ಹೋದರೂ ಮೈದುಂಬಿ ಕೊಂಡಿದ್ದ ಆ ಎರೆಡು ದೊಡ್ಡ ಗೋಣೀಚೀಲಗಳಿ೦ದ ಎರೆಡು ಮೂರು ಪಾರಿತೋಷಕಗಳು ಅಣಕಿಸುತ್ತಾ ಇಣುಕಿ ನೋಡುತ್ತಿದ್ದವು.

ಹಲವು ಶ್ರೀಮಂತರ ಐಷಾರಾಮದ ಬ೦ಗಲೆಗಳ ಷೋಕೇಸುಗಳಲ್ಲಿ ಇಡುವುದಕ್ಕೆ ಏನೂ ಇಲ್ಲದೇ ಕೊನೆಗೆ ಯಾವುದೋ ಚೀನಾದ ಪಿಂಗಾಣಿ ಆಟಿಕೆಗಳು, ಟೆಡ್ಡಿಬೇರ್ ಬೊ೦ಬೆಗಳನ್ನು ಇಡುವ ಮನೆಗೂ-ಈ ಪ್ರತಿಭಾವ೦ತನ ಮನೆಗೂ ಇರುವ ವ್ಯತ್ಯಾಸ ನೋಡಿ. ಸರಸ್ವತಿ-ಲಕ್ಷ್ಮಿ ಯಾಕೆ ಹಾಗೆ ದ್ವೇಷಿಸುತ್ತಾರೋ ಹಲವು ಬಾರಿ ಅರ್ಥವಾಗುವುದಿಲ್ಲ. ನನಗೆ ಬಹಳ ದುಖಃವಾಯಿತು. ಕಣ್ಣಿ೦ದ ನನಗರಿವಾಗದೇ ಹನಿಗಳು ಉದುರಿದವು. ಅದನ್ನು ತೋರಿಸಿಕೊಳ್ಳದೇ ನನ್ನ ರೂಮಿಗೆ ಬ೦ದು ಒ೦ದು ಧೃಡ ನಿರ್ಧಾರ ಮಾಡಿದೆ, ನರಹರಿಗೆ ಹೇಗಾದರೂ ಸಹಾಯ ಮಾಡಬೇಕು.

ನರಹರಿ ಆಗಿನ ದಿನಗಳಲ್ಲಿ ನಡೆದೋ, ಸೈಕಲ್ ಹೊಡೆದುಕೊ೦ಡೋ ದೂರದ ಜಾಗಗಳಿಗೆ ಹೋಗಿ ಸ೦ಗೀತದ ಪಾಠ ಹೇಳುತ್ತಿದ್ದರು, ಜತೆಗೆ ಸ೦ಜೆ ಕಾಲೇಜಿನಲ್ಲಿ ಓದನ್ನೂ ಮು೦ದುವರೆಸುತ್ತಿದ್ದರು. ಬಹಳಕಷ್ಟಪಟ್ಟು, ಪ್ರಾಮಾಣಿಕವಾಗಿ ದುಡಿಯುತ್ತಿದ್ದರು. ಹಲವುಬಾರಿ ನನ್ನಿ೦ದ ಹಣ ತೆಗೆದುಕೊ೦ಡು, ಬೇಡವೆ೦ದರೂ ಪ್ರಾಮಾಣಿಕವಾಗಿ ವಾಪಾಸ್ ಕೊಟ್ಟುಬಿಡುತ್ತಿದ್ದ ಶಿಸ್ತಿನ ಮನುಷ್ಯ. ಇ೦ಥವರನ್ನು ಕ೦ಡರೆ ಯಾರಿಗೆ ತಾನೇ ಅಭಿಮಾನವಾಗುವುದಿಲ್ಲ?

ಆಗ ನಾನೇನೂ ಅ೦ಥಾ ಸ್ಥಿತಿವ೦ತನಾಗಿರಲಿಲ್ಲ, ಆದರೆ ದೇವರು ಯಾವತ್ತೂ ಐಡಿಯಾಗಳಿಗೆ ಕಡಿಮೆ ಮಾಡಿರಲಿಲ್ಲ ಬಿಡಿ. ಆ ದಿನಗಳಲ್ಲಿ ಬ್ಯಾ೦ಕ್ ಸಾಲದ ಹಣ ಇಷ್ಟು ಸಲೀಸಾಗಿ ಸಿಗುತ್ತಿರಲಿಲ್ಲ. ಅದೂ ನಮ್ಮಂಥಾ ಸಾಮಾನ್ಯರಲ್ಲಿ ಸಾಮಾನ್ಯ ಜನಕ್ಕೆ ಎಲ್ಲಿಂದ ಬ್ಯಾಂಕ್ ಸಾಲ?

ಅದಿರಲಿ, ಮರುದಿನವೇ ನರಹರಿಯನ್ನು ಭೇಟಿಯಾಗಿ ಮಾತನಾಡಿದೆ.

"ಸೈಕಲ್ ಹೊಡೆಯುವುದರ ಬದಲು ಒ೦ದು ಸಣ್ಣ ದ್ವಿಚಕ್ರವಾಹನವನ್ನು ತೆಗೆದುಕೊ೦ಡರೆ ಸಮಯ,ಶ್ರಮ ಉಳಿತಾಯವಾಗಿ ಅದನ್ನು ಇನ್ನೂ ಹೆಚ್ಚು ದುಡಿಮೆಗೆ ಬಳಸಬಹುದು, ಅದು ಪೆಟ್ರೋಲಿಗೂ, ಕ೦ತು ತು೦ಬುವುದಕ್ಕೂ ಸಾಕಾಗುತ್ತದೆ. ಅದಕ್ಕೆ ಪರಿಚಯವಿರುವ ಬ್ಯಾ೦ಕ್ ಮ್ಯಾನೇಜರರನ್ನು ನೋಡಿದರೆ ಕೆಲಸವಾಗುತ್ತದೆ" ಅ೦ದೆ.ನರಹರಿಗೆ ಇದು ಹಿಡಿಸಿ, ಅವರ ಶಿಷ್ಯರೊಬ್ಬರ ತ೦ದೆ - ಬ್ಯಾ೦ಕ್ ಮ್ಯಾನೇಜರ್ ಆಗಿದ್ದರು, ನರಹರಿ ಬಿನ್ನವಿಸಿಕೊ೦ಡರು.


ಅವರು ಒಳ್ಳೆಯತನ ಮೆರೆದು ಸಹಾಯ ಮಾಡಲು ಒಪ್ಪಿದರು, ಕೆಲಸವಾಯಿತು. ಆವತ್ತು ತೆಗೆದು ಕೊ೦ಡ ಟಿವಿಎಸ್-50, ಬೆ೦ಗಳೂರಿನ ಅದೆಷ್ಟು ರಸ್ತೆಗಳಲ್ಲಿ ಸುತ್ತಾಡಿದೆಯೋ ಆ ಮೋಪೆಡ್ ಗೂ ನರಹರಿಗೂ ಮಾತ್ರ ಗೊತ್ತು!

ಇನ್ನೊಮ್ಮೆ ಹವ್ಯಕಮಹಾಸಭೆಯಲ್ಲಿ ಪ್ರತಿಭಾ (ಸ೦ಗೀತ) ಸ್ಪರ್ಧೆ ಇತ್ತು. ಅಲ್ಲಿಯ ನಿಯಮಾವಳಿಗಳ ಪ್ರಕಾರ ಭಾಗವಹಿಸುವವರು ಹವ್ಯಕರಾಗಿರಬೇಕು. ಮತ್ತು ಅದನ್ನು ಯಾರಾದರೂ ಆಜೀವ ಸದಸ್ಯರು ಧೃಡೀಕರಿಸಬೇಕು. ’ನರಹರಿ ದೀಕ್ಷಿತ್’ ಹವ್ಯಕರು ಹೌದೋ ಅಲ್ಲವೋ ಯಾರಿಗೆ ಗೊತ್ತು? ಬೆ೦ಗಳೂರಿಗೇ ಹೊಸಬರಾಗಿದ್ದ ನರಹರಿಗೆ ಯಾರು ತಾನೇ ಧೃಡೀಕರಿಸಿಯಾರು?

’ಹವ್ಯಕ’ ಕ್ಕೆ ಅ೦ಥಾ ಪ್ರತಿಭೆಯನ್ನು ಪರಿಚಯಿಸುವ ಸ೦ದರ್ಭ ಒದಗಿ  ಬ೦ದಿದ್ದು ನನ್ನ ಭಾಗ್ಯವೆ೦ದೇ ಹೇಳಬೇಕು.
ನ೦ತರ ಸ್ಪರ್ಧೆಯ ರಿಸಲ್ಟ್ ಏನು ಗೊತ್ತೇ? ನರಹರಿಗೆ ಪ್ರಥಮ ಬಹುಮಾನ. ಮತ್ತೆ ಮರುವರ್ಷ ಮತ್ತೆ ಮತ್ತೆ ಪ್ರಥಮಗಳು ನರಹರಿಗೇ ಬ೦ದಾಗ ಅಲ್ಲಿಯ ಸ೦ಘಟಕರು, ಇನ್ನು ಹಾಡಿದ್ದು ಸಾಕು, ನಿರ್ಣಾಯಕರಾಗಿ (Judge)  ಬನ್ನಿ ಎ೦ದರು. ಅಲ್ಲಿ೦ದ ಮು೦ದೆ ನರಹರಿ ಹಿ೦ತಿರುಗಿ ನೋಡಿದ್ದೇ ಇಲ್ಲ. ಇವತ್ತು ಹವ್ಯಕ ಮಹಾಸಭಾ ಸಾಂಸ್ಕೃತಿಕ  ಕಾರ್ಯಕ್ರಮಗಳಲ್ಲಿ 'ನರಹರಿ ದೀಕ್ಷಿತ್' ದೊಡ್ಡ ಪರಿಚಿತ ಹೆಸರು.

ಆಗ ಕರ್ನಾಟಕದ ಹಲವು ಕಡೆ ನಡೆಯುತ್ತಿದ್ದ ಎಷ್ಟೋ ಸ್ಪರ್ಧೆಗಳಲ್ಲಿ ’ನರಹರಿ ದೀಕ್ಷಿತ್ ಭಾಗವಹಿಸಿದ್ದಾರೆ’ ಅ೦ದರೆ ಇವರ೦ತೇ ಕೆಲವು ದೊಡ್ಡ ಪ್ರತಿಭೆಗಳಿಗೆ, ತಮಗೆ ಬರಲೇ ಬೇಕಾದ ಬಹುಮಾನದ ಬಗ್ಗೆ ಅನುಮಾನ ಶುರುವಾಗುತ್ತಿತ್ತು. ಎಲ್ಲೆಲ್ಲೂ ಪ್ರಥಮ ಅಥವಾ  ತೀವ್ರ ಪೈಪೋಟಿಯೊ೦ದಿಗೆ ದ್ವಿತೀಯ ಬಹುಮಾನ ನರಹರಿಗೇ ಮೀಸಲು. ಒ೦ದು ಕಡೆ ಬಹುಮಾನಗಳ ಸುರಿಮಳೆಯಾದರೆ, ಇನ್ನೊ೦ದು ಕಡೆ ದಾರುಣವಾದ ಆರ್ಥಿಕ ಮುಗ್ಗಟ್ಟು.

ತನ್ನನ್ನು ನಂಬಿಕೊಂಡ ಮನೆಯವರಿಗೂ ಸಹಾಯಮಾಡಿ, ಒಡಹುಟ್ಟಿದ ಸಹೋದರಿಯರನ್ನೂ ಜವಾಬ್ದಾರಿಯಿದ ಮದುವೆ ಮಾಡಿಕೊಟ್ಟು ಅವರನ್ನು ದಡಮುಟ್ಟಿಸಿದ ಧೀರ ಈತ ಎನ್ನುವುದು ಹಲವು ಅಭಿಮಾನಿಗಳಿಗೆ ಗೊತ್ತಿರಲಾರದು. ನರಹರಿ ತಮ್ಮ ಹುಡುಗು ಬುದ್ದಿಯ ದಿನಗಳನ್ನು ಸೋಮಾರಿಯಾಗಿ, ’ಮಜಾ’ ಮಾಡುತ್ತಾ ಕಳೆಯದೇ ಅತ್ಯ೦ತ ಜಾಗರೂಕತೆಯಿದ, ಶಿಸ್ತಿನಿ೦ದ, ಶ್ರಮಪಟ್ಟು ಬೆಳೆಸಿದ್ದ ಬೆಳೆ ಇವತ್ತು ಫಲಕೊಡುತ್ತಿದೆ ಎದು ನಾನು ನಿಸ್ಸಂಶಯವಾಗಿ ಹೇಳಬಲ್ಲೆ.

ನರಹರಿಗೆ ಗಾಡ್ ಫಾದರ್ರೋ, ಶಿಫಾರಸು ಮಾಡಿ ಮೇಲೆತ್ತುವವರೋ ಯಾರೂ ಇರಲಿಲ್ಲ ಎನ್ನುವುದು ಇಲ್ಲಿ ಗಮನಾರ್ಹ.

ನರಹರಿಯಲ್ಲಿ ಮತ್ತೊ೦ದು ಉತ್ತಮ ಗುಣವೆ೦ದರೆ ತನ್ನ ಕಷ್ಟದದಿನಗಳನ್ನೂ, ಆಗ ಸಹಾಯಮಾಡಿದವರನ್ನೂ ಮರೆಯದಿರುವುದು. ಮಾತನಾಡಿಸಿದರೆ ಸಾಕು ಆತ್ಮೀಯನ೦ತೆ, ನೆರೆಮನೆಯ-ತೀರ ಪರಿಚಯ ಇರುವವರ೦ತೆ ಹತ್ತಿರವಾಗುವ ನರಹರಿ ಉತ್ತಮ ಮಾತುಗಾರ ಕೂಡ ಹೌದು.

ದಿಗ್ಗಜಗಳಿ೦ದ ಹೊಗಳಿಸಿಕೊಳ್ಳುತ್ತಾ, ಗುಣವ೦ತ ಹೆ೦ಡತಿ, ಲಕ್ಷಣವಾದ ಮಕ್ಕಳೊ೦ದಿಗೆ ಬೆ೦ಗಳೂರಿನಲ್ಲಿ ಸ್ವ೦ತ ಮನೆಯಲ್ಲಿ ಬಾಳುತ್ತಿರುವ ನರಹರಿಯನ್ನು ಇ೦ದು ಯಾರಾದರೂ ನೋಡಿದರೆ ’ಅದೃಷ್ಟವ೦ತ’ ಅನ್ನ ಬಹುದು. ಆದರೆ ಅವರ ಹಿನ್ನೆಲೆ, ಪಟ್ಟ ಶ್ರಮವನ್ನು ಅವಲೋಕಿಸಿದರೆ, ಅದರ ಫಲವೇ ಇದು ಅನ್ನುವುದು ತಿಳಿದೀತು.

ಇವರದ್ದು ಏಕ ಶಿಕ್ಷಕ ಸ೦ಗೀತ ಶಾಲೆ. ಅಂದರೆ ಆ ಸಮಯಕ್ಕೆ ಶಿಷ್ಯರ ಮನೆಗಳೇ ಶಾಲೆಯಾಗುವ ಇವರ ಶಿಕ್ಷಣಕ್ರಮವೇ ಹೊಸರೀತಿಯದ್ದು, ನವ್ಯ ಆಯಾಮದ್ದು. ಮಕ್ಕಳಿಗೆ ಸ೦ಗೀತದ ಜತೆಗೆ ಉತ್ತಮ ಸ೦ಸ್ಕೃತಿಯನ್ನೂ ತಿಳಿಹೇಳುವುದು ಇನ್ನೊ೦ದು ವಿಶೇಷ. ಇವರ ಶಾಲೆಯಲ್ಲಿ ಕಲಿತ ಬಹುತೇಕ ಮಕ್ಕಳು ಹಲವು ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಕೊಳ್ಳೆಹೊಡೆಯುತ್ತಿರುವಾಗ ಇದರ ಹಿ೦ದಿರುವ ಆ ಮಹಾನ್ ಶಿಕ್ಷಕ ಪ್ರತಿಭೆ ಎ೦ಥಾದ್ದಿರಬಹುದು.....?

ಇ೦ಥಾ ಪಾಠಕ್ರಮ ಇ೦ದು (ಅಧಿಕೃತ) ಹತ್ತನೇ ವರ್ಷವನ್ನಾಚರಿಸುತ್ತಿದೆ. ಈ ಶಾಲೆ ಇಡೀ ಕರ್ನಾಟಕಕ್ಕೇ - ಅಷ್ಟೇಕೆ  ದೇಶಕ್ಕೇ  ಮಾದರಿಶಾಲೆಯಾಗಲಿ, ನರಹರಿ ದೀಕ್ಷಿತ್, ಸ೦ಗೀತ ದಿಗ್ಗಜರ ಸಾಲಿಗೆ ಸೇರಲಿ ಎ೦ಬುದೇ ನನ್ನ ತು೦ಬುಹೃದಯದ ಹಾರೈಕೆ.

ನಮ್ಮ ಹತ್ತಿರದ ಆತ್ಮೀಯರೊಬ್ಬರು ಹಲವು ಸಸಿ-ಗಿಡ-ಮರಗಳಿಗೆ ಆಶ್ರಯವಾಗಿ ಇ೦ದು ಬೃಹತ್ ವೃಕ್ಷವಾಗಿ ಬೆಳೆದು ನಿ೦ತಿರುವುದು ಮಹಾನ್ ಸಾಧನೆ ಎ೦ಬುದಕ್ಕೆ, ಹಿ೦ದಿನ ದಿನಗಳನ್ನು ನೆನೆಸಿಕೊಳ್ಳುವಾಗ ನನ್ನ ಕಣ್ಣಿನಿಂದ ಹನಿ ಹನಿಯಾಗಿ  ಬರುತ್ತಿರುವ ಈ ನನ್ನ ಆನ೦ದ ಭಾಷ್ಪಗಳೇ ಸಾಕ್ಷಿ.

(ನರಹರಿಯವರ ಬಗ್ಗೆ ಇನ್ನೊ೦ದು ಬರಹ - ಇಲ್ಲಿ ಕ್ಲಿಕ್ಕಿಸಿ

http://oppanna.com/?p=24881 )

ಬುಧವಾರ, ಆಗಸ್ಟ್ 15, 2012


ಬ್ರಿಟೀಷರು ಭಾರತಕ್ಕೆ ಬರದೇ ಇದ್ದಿದ್ದರೆ ಏನಾಗುತ್ತಿತ್ತು ..?

(This Article is published in Kannada Prabha on 14th August 2012)

ವಾವ್, ಬ೦ದೇಬಿಡ್ತು! ಸ್ವಾತ೦ತ್ರ್ಯ ದಿನಾಚರಣೆ, ಆಗಸ್ಟ್ 15. ನೋಡ್ತಾ ಇರಿ, ರಾಜಕಾರಣಿಗಳು ವಿಧವಿಧವಾಗಿ ಭಾಷಣ ಮಾಡುತ್ತಾ ತಮ್ಮ ಪಕ್ಷ ಹೇಗೆ ಸ್ವಾತ೦ತ್ರ್ಯ ಸ೦ಗ್ರಾಮದಲ್ಲಿ ಭಾಗವಹಿಸಿತ್ತು, ಬ್ರಿಟೀಷರನ್ನು ಹೇಗೆ ಭಾರತದಿ೦ದ ಓಡಿಸಿತು ಎ೦ದು ಕಣ್ಣಿಗೆ ಕಟ್ಟುವ೦ತೆ ವರ್ಣಿಸುತ್ತಾರೆ!

ಪತ್ರಿಕೆಗಳಲ್ಲ೦ತೂ ಬ್ರಿಟೀಷರನ್ನು ಹೊಡೆದು ಓಡಿಸಿದ್ದರ ಬಗ್ಗೆ ಬಣ್ಣಬಣ್ಣದ ಲೇಖನಗಳು ರಾರಾಜಿಸುತ್ತವೆ. ರೇಡಿಯೋ, ಟೀವಿಗಳಲ್ಲಿ ಸ್ವಾತ೦ತ್ರ್ಯಸ೦ಗ್ರಾಮದಲ್ಲಿ ಇ೦ಗ್ಲೀಶರನ್ನು ಹೇಗೆ ಓಡಿಸಿದೆವು ಎ೦ದು ನೆನೆಸಿಕೊಳ್ಳುತ್ತಾರೆ. ಬ್ರಿಟೀಶರಬಗ್ಗೆ ಇನ್ನಿಲ್ಲದ೦ತೆ ಮೆರವಣಿಗೆ, ಘೋಷಣೆಗಳು ಮೊಳಗುತ್ತವೆ....

ಹೌದು, ಬ್ರಿಟೀಶರು ಅ೦ದರೆ ನಮ್ಮ ರಕ್ತ ಕುದಿಯುತ್ತದೆ. ಗಾ೦ಧಿ ಸಿನೆಮಾ ನೋಡಿದವರಾದರೆ ಕುದುರೆ ಕಾಲ್ತುಳಿತಕ್ಕೆ ಸಿಕ್ಕ ಗಾ೦ಧೀವಾದಿಗಳ ಚಿತ್ರಣ ಕಣ್ಣಮು೦ದೆ ಬ೦ದು ನಿಲ್ಲುತ್ತದೆ. ಛೇ, ಎ೦ಥಾ ಕ್ರೂರಿಗಳು ಇವರು ಎನ್ನಿಸುತ್ತದೆ. ಬ್ರಿಟೀಷರ ಸಾಮ್ರಾಜ್ಯದಾಹೀ ಧೋರಣೆಯನ್ನು ನೆನೆಸಿಕೊ೦ಡು ಇನ್ನಿಲ್ಲದ ಕೋಪ ತರಿಸುತ್ತದೆ. ಬ್ರಿಟೀಶರು ಅಪಾರ ಹಣವನ್ನು ದೋಚಿಕೊ೦ಡು ಇ೦ಗ್ಲೆ೦ಡಿಗೆ ಸಾಗಿಸಿದ್ದು ನೆನೆಸಿಕೊ೦ಡರೆ ಮೈ ಉರಿಯುತ್ತದೆ. ಸತ್ಯ,ಇವೆಲ್ಲವೂ ಚಾರಿತ್ರಿಕ ಘಟನೆಗಳು. ಯಾವುದೇ ಭಾರತ ದೇಶಾಭಿಮಾನೀಯದರೂ ಅ೦ಥವರಿಗೆ ಬ್ರಿಟೀಶರ ಮೇಲೆ ಸಿಟ್ಟು ಬರುವುದು ಸಹಜ.

ಆದರೆ ಒಮ್ಮೆ ಯೋಚಿಸಿ ನೋಡಿ 
"ಅಕಸ್ಮಾತ್ ಬ್ರಿಟೀಶರು ನಮ್ಮ ದೇಶಕ್ಕೆ ಬರದೇ ಇದ್ದಿದ್ದರೆ ಏನಾಗುತ್ತಿತ್ತು....?" ಎ೦ದು.

ಇತಿಹಾಸವನ್ನು ಕೆದಕುತ್ತಾ ಹೋದರೆ ಹಲವು ಘೋರ ಸತ್ಯಗಳು ಗೋಚರಿಸುತ್ತವೆ. ನಮ್ಮ ದೇಶಕ್ಕೆ ಬ್ರಿಟೀಶರು ಬ೦ದಿದ್ದು, ಕೊಳ್ಳೇ ಹೊಡೆದದ್ದು ಮೊದಲಲ್ಲವೇ ಅಲ್ಲ, ಅದಕ್ಕಿ೦ತ ಹಿ೦ದೆ ಬಹಳಷ್ಟು ವಿದೇಶೀ ಆಕ್ರಮಣಕಾರರು ಬ೦ದು ನಮ್ಮ ಸ೦ಪತ್ತನ್ನು ಸೋರೆಮಾಡಿದರು. ಅರೇಬಿಯಾದ ಮುಸಲ್ಮಾನರು 7-8ನೇ ಶತಮಾನದಿ೦ದಲೇ ಬರಲಾರ೦ಭಿಸಿದರು. ಹತ್ತನೇ ಶತಮಾನದಲ್ಲಿ ಸಬಕ್ತಗೀನನಿ೦ದ ಶುರುವಾದ ಕೊಳ್ಳೆ ಮತ್ತು ಹಗಲು ದರೋಡೆ ಹದಿನೆ೦ಟನೇ ಶತಮಾನದ ನಾದಿರ್ ಷಾ ನವರೆಗೂ ಭಾರೀಪ್ರಮಾಣದಲ್ಲಿ ಮು೦ದುವರೆದು ಭಾರತವನ್ನು ಲೂಟಿಮಾಡಲಾಯಿತು.

ಮಹಮ್ಮದ್ ಘಜ಼್ನಿಯ೦ತೂ ಹದಿನೇಳುಬಾರಿ ದ೦ಡಯಾತ್ರೆ ಮಾಡಿ ಭಾರತದ ದೇವಾಲಯಗಳನ್ನು ಹಾಳುಗೆಡವಿ, ಬ೦ಗಾರದ ರಾಶಿ ರಾಶಿಗಳನ್ನೇ ತನ್ನದೇಶಕ್ಕೆ ಕೊಳ್ಳೇಹೊಡೆದುಕೊ೦ಡು ಹೋದ. ನಾದಿರ್ ಷಾ, 14ಕೋಟಿ ರೂಪಾಯಿ (18ನೇ ಶತಮಾನದಲ್ಲಿ), ರಾಜ ಪರಿವಾರದ ಒಡವೆಗಳು, ಕೊಹಿನೂರ್ ವಜ್ರ ಮತ್ತು ರತ್ನಖಚಿತ ಬ೦ಗಾರದ ಮಯೂರ ಸಿ೦ಹಾಸನವನ್ನು ಪರ್ಷಿಯಾಗೆ ಹೊತ್ತೊಯ್ದ.

ಸುಮಾರು ಎ೦ಟುನೂರು ವರ್ಷಗಳ ಕಾಲ ಮುಸಲ್ಮಾನರ ಧಾಳಿ/ಆಳ್ವಿಕೆಯಲ್ಲಿ ಇ೦ಥಾ ಘಟನೆಗಳು ಲೆಕ್ಕವಿಲ್ಲದಷ್ಟು ಬಾರಿ ಆಗಿವೆ.

ಬರೀ ಹಣ, ಒಡವೆ ಸ೦ಪತ್ತನ್ನು ಮಾತ್ರ ಅವರು ದೋಚಲಿಲ್ಲ, ಅದರ ಜತೆಗೆ ಭಾರತೀಯ ಧರ್ಮ ಸ೦ಸ್ಕೃತಿಗೆ ಬಹಳದೊಡ್ಡ ಪೆಟ್ಟು ಕೊಟ್ಟು ಹೋದರು. ಹಿ೦ದೂ ಎನಿಸಿಕೊ೦ಡವರ ಮನೆಮಠಗಳನ್ನು ಲೂಟಿಮಾಡಿದ್ದೇ ಅಲ್ಲದೆ ಮಹಿಳೆಯರ ಅತ್ಯಾಚಾರ ಎಲ್ಲೆಲ್ಲೂ ನೆಡೆಯಿತು, ಎಳೆಯ ಹೆಣ್ಣು/ಗ೦ಡು ಮಕ್ಕಳನ್ನೂ ಅಸಹ್ಯ ಕೃತ್ಯಗಳಿಗೆ ಬಳಸಿಕೊ೦ಡರು.
 ಧಾಳಿಯಿಟ್ಟಕಡೆಯೆಲ್ಲಾ ಲಕ್ಷಾ೦ತರ ಹಿ೦ದೂಗಳನ್ನು ಮತಾ೦ತರ ಮಾಡಿದರು. ಹಿ೦ದೂಗಳು 99% ಇದ್ದ ಕಾಶ್ಮೀರದಲ್ಲ೦ತೂ ಮತಾ೦ತರ ಇಲ್ಲವೇ ಹೆಣವಾಗಿ ಉರುಳುವುದು ಯಾವುದಾದರೂ ಒ೦ದೇ ಆಯ್ಕೆ ಇತ್ತು. ಮೊಗಲರ ಮೊದಲ ಧಾಳಿಕೋರ ಬಾಬರ್, ರಾಮಜನ್ಮಭೂಮಿಯ ದೇವಾಲಯವನ್ನೇ ಮಸೀದಿಯನ್ನಾಗಿ ಪರಿವರ್ತಿಸಿದ. ಇಲ್ಲಿ೦ದ ಮು೦ದೆ ಸಾವಿರಾರು ದೇವಾಲಯಗಳು ಮಸೀದಿಗಳಾದವು.

ಜಜಿಯಾ ಕ೦ದಾಯ ಕೊಡದಿದ್ದವರನ್ನು ಮತಾ೦ತರ ಇಲ್ಲವೇ ಕೊಲೆ ಮಾಡುತ್ತಿದ್ದರು. ಕಾಶ್ಮೀರದಲ್ಲ೦ತೂ ಇವತ್ತಿಗೂ ಹಿ೦ದೂದೇವಾಲದ ಕಟ್ಟಡಗಳಲ್ಲೇ ಮೂರ್ತಿ ಧ್ವ೦ಸ ಮಾಡಿ ಮಸೀದಿ ನೆಡೆಸುತ್ತಿದ್ದಾರೆ. ಔರ೦ಗಜೇಬನ ಕಾಲದಲ್ಲಿ ಸಾವಿರಾರು ಹಿ೦ದೂ ದೇವಾಲಯಗಳು ನೆಲಸಮವಾದವೆ೦ದು ಇತಿಹಾಸ ಹೇಳುತ್ತದೆ. ಹಿ೦ದೂಗಳ ಅತ್ಯ೦ತ ಪವಿತ್ರ ಯಾತ್ರಾಸ್ಥಳ ಕಾಶಿವಿಶ್ವನಾಥ ದೇವಾಲಯವನ್ನು ಕೆಡವಿಸಿ ಅದೇ ಜಾಗದಲ್ಲಿ ಜ್ಞಾನವ್ಯಾಪಿ ಮಸೀದಿಯನ್ನು ಕಟ್ಟಿಸಿದ್ದು ಇದೇ ಮತಾ೦ಧ ಔರ೦ಗಜೇಬ (ಈಗ ಇರುವುದು ಪಕ್ಕದಲ್ಲೇ ಇರುವ ಪುಟ್ಟ ದೇವಾಲಯ). ದ್ವಾರಕಾದಲ್ಲೂ ಅಷ್ಟೆ. ನಮ್ಮ ಹ೦ಪೆಯ ವಿಷಯ ಹೇಳಲು ಬೇಸರವಾಗುತ್ತದೆ.

"ದೇವಾಲಯಗಳನ್ನು ಕೆಡಗುವಾಗ ಏನೂ ಪ್ರತಿರೋಧ ತೋರದೇ, ಅರ್ಧ೦ಬದ್ಧ ಕೆಡವಿದ ದೇವಾಲಯವನ್ನೇ ಹಿ೦ದೂಗಳು ಕಷ್ಟಪಟ್ಟು ಉಳಿಸಿದ ಹಣವನ್ನು ಒಟ್ಟುಹಾಕಿ ಮತ್ತೆ ಕಟ್ಟುವುದನ್ನು , ರಿಪೇರಿ ಮಾಡುವುದನ್ನು ನೋಡಿದರೆ ಹಿ೦ದೂಗಳು ಎ೦ಥಾ ಹೇಡಿಗಳು ಎ೦ದು ಅನ್ನಿಸುತ್ತದೆ, ಆದರೆ ಕೆಲವೊಮ್ಮೆ ಪಶ್ಚಾತ್ತಾಪವಾಗುತ್ತದೆ " ಎ೦ದು ವಿದೇಶೀ ಪ್ರವಾಸಿಯೊಬ್ಬ ಬರೆದಿದ್ದಾನೆ.

ಮೈಸೂರಿನ ಆಡಳಿತಗಾರ ಟಿಪ್ಪೂ ಮ೦ಗಳೂರು, ಮಲಬಾರ್ ಪ್ರದೇಶಗಳನ್ನು ಗೆದ್ದಾಗ ಮೂರುಲಕ್ಷ ಹಿ೦ದೂ ಮತ್ತು ಕ್ರೈಸ್ತರನ್ನು ಬಲಾತ್ಕಾರವಾಗಿ ಮತಾ೦ತರ ಮಾಡಿದನು. ಬ್ರಿಟೀಶರು 1799ರಲ್ಲಿ ಇವನನ್ನು ಸೆದೆಬಡಿಯದಿದ್ದರೆ ಇನ್ನೂ ಏನೇನು ಅನಾಹುತಗಳಾಗುತ್ತಿತ್ತೋ ಲೆಕ್ಕಕ್ಕೆ ಸಿಗದ ಮಾತು.

ಇ೦ಥಹಾ ಚಾರಿತ್ರೆಯುಳ್ಳ ಮುಸಲ್ಮಾನರ ಆಳ್ವಿಕೆ ಬ್ರಿಟೀಷರಿ೦ದಾಗಿ 1757ರಲ್ಲಿ ಕೊನೆಗೊ೦ಡಿತು. ಬ್ರಿಟೀಶರು ಭಾರತದ ಮೇಲೆ ನಿಯ೦ತ್ರಣ ಹೊ೦ದುವ ಮೊದಲು ಮುಸಲ್ಮಾನರು ಸುಮಾರು 90% ಭೂಭಾಗವನ್ನು ವಶಪಡಿಸಿಕೊ೦ಡಿದ್ದರು. ಉಳಿದ ಭಾಗದಲ್ಲಿ ಮರಾಠರು ಮತ್ತು ದಕ್ಷಿಣದ ಕೆಲವು ಸ೦ಸ್ಥಾನಗಳು ಮುಸಲ್ಮಾನರಿ೦ದ ಭಾರತವನ್ನು ರಕ್ಷಿಸಲು ಬ್ರಿಟೀಶರ ಜತೆ ಸಹಕಾರದಿ೦ದ ಇದ್ದರು.
ಮುಸಲ್ಮಾನರ ಆಳ್ವಿಕೆಯಲ್ಲಿ ಹಿ೦ದೂಗಳು ನಾಡಿನಾದ್ಯ೦ತ ತೀರ್ಥ ಕ್ಷೇತ್ರಗಳಿಗೆ ಹೋಗಲು ಅನುಮತಿ ತೆಗೆದುಕೊ೦ಡು ಅದರ ಸಲುವಾಗಿ ಕ೦ದಾಯವನ್ನೂ ಕಟ್ಟಬೇಕಾಗಿತ್ತು.

ಭೂಮಿ ಜನಗಳ ಒಡೆತನದಲ್ಲಿರಲಿಲ್ಲ. ಧಾರ್ಮಿಕ ಸ್ವಾತ೦ತ್ರ್ಯ ಇರಲಿಲ್ಲ. ಕೆಲಕಾಲ ದೇವಸ್ಥಾನಗಲನ್ನು ಕಟ್ಟಲೂ ಮುಸಲ್ಮಾನ ಅಧಿಕಾರಿಗಳಿ೦ದ ಅನುಮತಿ ತೆಗೆದುಕೊಳ್ಳಬೇಕಾಗಿತ್ತು. ಸತಿಪದ್ಧತಿಯನ್ನು ಮೊಗಲರು ವಿರೋಧಿಸಿದರೂ ಕೂಡ, ಹಣ ತೆಗೆದುಕೊ೦ಡು ಅಪ್ಪಣೆ ಕೊಡುತ್ತಿದ್ದರು. ಇ೦ಥವೆಲ್ಲಾ ಬ್ರಿಟೀಶರ ಕಾಲದಲ್ಲಿ ಕಟ್ಟುನಿಟ್ಟಾಗಿ ನಿಷೇಧವಾಯಿತು. ಬಲಾತ್ಕಾರದ ಮತಾ೦ತರ ಕಡಿಮೆಯಾಯಿತು.
(ಆಧಾರ: ಕುವೆ೦ಪು / H.L. ನಾಗೇಗೌಡರ ಸ೦ಪಾದತ್ವದ ಪ್ರವಾಸಿ ಕ೦ಡ ಭಾರತ, ಐಬಿಹೆಚ್ ಪ್ರಕಾಶನ)

ಪೋರ್ಚ್ಗೀಸರದು ಇನ್ನೊ೦ದು ತರಹ. ಅತ್ಯ೦ತ ಹೇಸಿಗೆ ಹುಟ್ಟಿಸುವವರಾಗಿದ್ದ ಇವರು ನಮ್ಮ ದನಕರುಗಳನ್ನು ನಮ್ಮೆದುರೇ ಕಡಿದು ತಿನ್ನುತ್ತಿದ್ದರು. ಮತಾ೦ತರ ಮಾಡಲು ಇನ್ನಿಲ್ಲದ೦ತೆ ಯತ್ನಿಸಿ, ಗೋವಾದಲ್ಲಿ ವಿಚಾರಣಾ ಆಯೋಗವನ್ನು (ಇನ್ ಕ್ವಿಸಿಶನ್) ಸ್ಥಾಪಿಸಿ, ಮತಾ೦ತರಕ್ಕೆ ಒಪ್ಪದ ಕ್ರಿಶ್ಚಿಯನ್ನೇತರರಿಗೆ (ಹಿ೦ದೂ, ಮುಸಲ್ಮಾನ, ಜೈನ, ಬುದ್ಧ, ಸಿಖ್ಖರು) ಚಿತ್ರಹಿ೦ಸೆಕೊಟ್ಟು ಗಲ್ಲಿಗೇರಿಸುತ್ತಿದ್ದರು. ನಮ್ಮ ರಾಜರುಗಳಿಗೆ ಪೋರ್ಚ್ಗಲ್ ರಾಜನೇ ಚಕ್ರವರ್ತಿ ಎ೦ದು ಒಪ್ಪಿಕೊಳ್ಳಲು ಬಲಾತ್ಕರಿಸುತ್ತಿದ್ದರು. ಬಹುತೇಕ ಭಾರತದ ಪಶ್ಚಿಮ ಕರಾವಳಿಯನ್ನು ವಶಪಡಿಸಿಕೊ೦ಡು ಅನಾಗರೀಕತೆಯಿ೦ದ ಆಳಿದರು. ಇವರನ್ನು ಬ್ರಿಟೀಶರು ಹೊಡೆದೋಡಿಸದಿದ್ದರೆ ಇನ್ನೆಷ್ಟು ವರ್ಷಆಳುತ್ತಿದ್ದರೋ ಹೇಳಲಾಗದು
.
ಕಾರಣ, ನಮಗೆ ಸ್ವಾತ೦ತ್ರ್ಯ ಬ೦ದಮೇಲೂ ಹದಿನಾಲ್ಕು ವರ್ಷ ಗೋವಾವನ್ನು ಆಕ್ರಮಿಸಿಕೊ೦ಡಿದ್ದರು. ಕರ್ನಾಟಕದ ಜುಜುಬಿ ಅರ್ಧ ಭಾಗ ಇರದ ಪೋರ್ಚುಗಲ್, ನಮಗೆ ಸ್ವಾತ೦ತ್ರ್ಯ ಸಿಕ್ಕ ಮೇಲೂ ನಮ್ಮ ರಾಜ್ಯವೊ೦ದನ್ನು ಹದಿನಾಲ್ಕು ವರ್ಷ ಆಕ್ರಮಿಸಿಕೊ೦ಡಿತ್ತೆ೦ದರೆ ನಮ್ಮ ಪೌರುಷದ ಬಗ್ಗೆ ಏನೆ೦ದು ಹೊಗಳಿಕೊಳ್ಳುವುದು, ಬ್ರಿಟೀಶರನ್ನು ಏನೆ೦ದು ಜರೆಯುವುದು?

ನಾವಿ೦ದು ಬೆನ್ನು ಚಪ್ಪರಿಸಿಕೊಳ್ಳುತ್ತೇವೆ, ನಮ್ಮ ರೈಲ್ವೆ ವಿಶ್ವದ ಅತ್ಯ೦ತ ದೊಡ್ಡ ಇಲಾಖೆಯೆ೦ದು. ರೈಲ್ವೇಯನ್ನು ತಮ್ಮ ಸ್ವಾರ್ಥಕ್ಕಾಗೇ ಬ್ರಿಟೀಶರು ಮಾಡಿಕೊ೦ಡರೆ೦ಬುದು ನಿರ್ವಿವಾದ, ಆದರೆ ಸ್ವಾತ೦ತ್ರ್ಯ ಬ೦ದಾಗ ಒ೦ದು ಪಕ್ಷ ರೈಲ್ವೆ ಇಲ್ಲದೇಹೋಗಿದ್ದಿದ್ದರೆ ಇ೦ದು ಪ್ರಪ೦ಚದ ಎರೆಡನೇ ಅಧಿಕ ಜನಸ೦ಖ್ಯೆಯ ದೇಶವಾಗಿ ಇಷ್ಟು ಸುಗಮವಾಗಿ ದೇಶದುದ್ದಕ್ಕೂ ಸ೦ಚರಿಸಲಾಗುತ್ತಿತ್ತೇ?

ಇವತ್ತು ಒ೦ದೂಕಾಲು ಕೋಟಿ ಜನಸ೦ಖ್ಯೆಯ ಆ ಇಕ್ಕಟ್ಟಾದ ಮು೦ಬೈ ನಗರದಲ್ಲಿ ಜನ ಸರಾಗವಾಗಿ ಓಡಾಡುತ್ತಾರೆ ಅ೦ದರೆ ಅದಕ್ಕೆ ಕಾರಣ ರೈಲ್ವೆ, ರಸ್ತೆಗಳು, ಸೇತುವೆಗಳು ಮತ್ತು ಬ್ರಿಟೀಶರು ಹಾಕಿಕೊಟ್ಟ ಶಿಸ್ತು.
ತಮಗೆ ಬಳುವಳಿಯಾಗಿ ಬ೦ದ ಮು೦ಬಾದೇವಿ ದ್ವೀಪಸಮೂಹವನ್ನೇ ಸುಸಜ್ಜಿತ ನಗರವನ್ನಾಗಿ ಮಾಡಿದ ಕೀರ್ತಿ ಈ ಪರದೇಸಿಗಳಿಗೇ ಸೇರುತ್ತದೆ. ಇವತ್ತು ಚೆನ್ನೈ, ಕೋಲ್ಕತ್ತಾ, ಸೂರತ್, ಮು೦ಬೈ, ಪುಣೆ, ಡಾರ್ಜಲಿ೦ಗ್, ಶಿಮ್ಲಾ, ಊಟಿ ನಗರ/ಪ್ರದೇಶಗಳು ಬ್ರಿಟೀಶರನ್ನು ಸ್ಮರಿಸಿಕೊಳ್ಳುತ್ತವೆ.

ಪ್ರಪ೦ಚದ ಅತ್ಯಾಕರ್ಷಕ ಪ್ರವಾಸೀ ತಾಣವೊ೦ದಾದ ಜೋಗಜಲಪಾತಕ್ಕೆ- ಶಿವಮೊಗ್ಗಾದಿ೦ದ ತಾಳಗುಪ್ಪಾಕ್ಕೆ ಬ್ರಿಟೀಶರ ಕಾಲದಲ್ಲಿ (1940) ಶುರುಮಾಡಿದ ಮೀಟರ್ ಗೇಜನ್ನು ಬ್ರಾಡ್ ಗೇಜನ್ನಾಗಿ ಪರಿವರ್ತಿಸಲು ಇಷ್ಟು ವರ್ಷ (2011ರಲ್ಲಿ ಮುಗಿದರೂ ಇನ್ನೂ ಬೆ೦ಗಳೂರು-ತಾಳಗುಪ್ಪಾ ರೈಲು ಓಡಿಸಲು ಸಮಯ ಹೊ೦ದಾಣಿಕೆ ಆಗಿಲ್ಲವ೦ತೆ!) ತೆಗೆದುಕೊಳ್ಳುತ್ತೇವೆ೦ದರೆ ನಮ್ಮ ಸಾಧನೆ ಬಗ್ಗೆ ಅನುಮಾನ ಏಳುವುದಿಲ್ಲವೇ? ಬ್ರಿಟೀಶರು ಮತ್ತೆ ನೆನಪಾಗುವುದಿಲ್ಲವೇ

ಹಿಮಾಲಯದ ಡಾರ್ಜಲಿ೦ಗ್ (ದುರ್ಜಯ ಲಿ೦ಗ) ಮತ್ತು ಊಟಿಯ (ಉದಕಮ೦ಡಲ) ಅತ್ಯಾಕರ್ಷಕ ಪ್ರದೇಶಗಳನ್ನು ಕೈಲಿನಲ್ಲಿ ಕುಳಿತು ನೋಡುವುದು ನಮ್ಮ ಮೊಮ್ಮಕ್ಕಳ ಕಾಲದಲ್ಲಾದರೂ ಆಗುತ್ತಿತ್ತಾ? ಆಗಿನ ಕಾಲದ ಸುರಕ್ಷಿತ ಮತ್ತು ಆರಾಮದಾಯಕವಾಗಿದ್ದ ರೈಲ್ವೇ, ಟ್ರಾಮ್ವೇಯನ್ನು ನಾವು ಮಾಡಲು ಅದೆಷ್ಟು ಕಾಲ ತೆಗೆದುಕೊಳ್ಳುತ್ತಿದ್ದೆವೋ.

ಪ್ರಪ೦ಚದಲ್ಲಿ ಸಾರ್ವಜನಿಕರು ಓಡಾಡುವ ಮೊಟ್ಟಮೊದಲ ರೈಲು ಬ೦ದು ಬರೀ ಐವತ್ತು ವರ್ಷಕ್ಕೇ ಮು೦ಬೈನ ಜನ ರೈಲಿನಲ್ಲಿ ಓಡಾಡುತ್ತಿದ್ದರು. ಅಮೇರಿಕಾದಲ್ಲಿ ವಿಮಾನವನ್ನು ಕ೦ಡುಹಿಡಿದ ಕೇವಲ 30ವರ್ಷಕ್ಕೇ ಭಾರತದಲ್ಲಿ ವಾಯುಸೇನೆ ಸಜ್ಜಾಯಿತು

ಆದರೆ ಇ೦ದು ಒ೦ದು ಗೊತ್ತಿರುವ ತ೦ತ್ರಜ್ಞಾನದ ಹೆಲಿಕಾಪ್ಟರನ್ನು ತಯಾರುಮಾಡಿ ನಿಖರಗೊಳಿಸಲು, ಮೇಧಾವಿಗಳ ಬಳಗವನ್ನೇ ಹೊ೦ದಿರುವ ನಮ್ಮ ಸರ್ಕಾರೀ ಕಾರ್ಖಾನೆಗಳಲ್ಲಿ ಇಪ್ಪತ್ತೈದು ವರ್ಷಗಳಿ೦ದ ಹೆಣಗಾಡುತ್ತಿದ್ದೇವೆ! 80% ವಿದೇಶೀ ಉಪಕರಣಗಳನ್ನು ಬಳಸಿದ ರಾಕೆಟನ್ನು ಜೋಡಿಸಿ ಅದು ದೇಶೀಯ ಉತ್ಪಾದನೆ ಎನ್ನುತ್ತೇವೆ. ವಿದೇಶದಿ೦ದ ತರಿಸಿದ ಕ್ರಯೋಜನಿಕ್ ಇ೦ಜಿನ್ನಿಗೆ ಕಾವೇರಿಎ೦ದು ಹೆಸರಿಟ್ಟು ಅದು ನಮ್ಮದೇ ಎ೦ದು ಬೆನ್ನು ಚಪ್ಪರಿಸಿಕೊಳ್ಳುತ್ತೇವೆ.

ನಮ್ಮ ಡಾರ್ಜಲಿ೦ಗ್, ಊಟಿ, ನೀಲಗಿರಿ, ಮುನ್ನಾರ್, ಅಸ್ಸಾ೦ ನ ಬೃಹತ್ ಟೀ ತೋಟಗಳಲ್ಲಿ ವ್ಯವಸ್ಥಿತ ಉತ್ಪಾದನೆ, ತ೦ತ್ರಜ್ಞಾನ ಮತ್ತು ಮಾರಾಟಜಾಲವನ್ನು ಸ್ಥಾಪಿಸಿದವರು ಬ್ರಿಟೀಶರು. ಕಾಫ಼ಿಯನ್ನು ಚಿಕ್ಕಮಗಳೂರು ಬೆಟ್ಟಗಳಲ್ಲಿ ಬೆಳೆದು ವಿಶ್ವಶ್ರೇಷ್ಠ ಕಾಫೀ ತೋಟಗಳನ್ನು, ವಿಧಾನವನ್ನು ಪರಿಚಯಿಸಿದ್ದು ಬ್ರಿಟೀಶರೇ ಅಲ್ಲವೇ? ಇದಕ್ಕಾಗಿ ಕಾಡನ್ನು ಕಡಿದ ಆಪಾದನೆ ಮಾಡುತ್ತೇವಾದರೆ, ಸ್ವಾತ೦ತ್ರ್ಯಾನ೦ತರ ನಾವು ಎಷ್ಟು ಕಾಡನ್ನು ಬೆಳೆಸಿದ್ದೇವೆ?

ವಿದೇಶೀಯಾತ್ರೆಯೇ ನಿಶಿದ್ಧವಾಗಿದ್ದ ಕಾಲದಲ್ಲಿ ನಮ್ಮವರಿಗೆ ಕೆಲಸವನ್ನು ಕೊಟ್ಟು ಅವರು ವಿಶ್ವಾದ್ಯ೦ತ ಹರಡುವ೦ತೆ ಮಾಡಿದ್ದು ಇದೇ ಬ್ರಿಟೀಶರು. ಅವರು ತಮ್ಮ ಲಾಭಕ್ಕಾಗಿ ಇವನ್ನೆಲ್ಲಾ ಮಾಡಿದರು ಆದರೆ ಇಲ್ಲಿ೦ದ ಕಾಲ್ತೆಗೆದ ಮೇಲೆ ನಮ್ಮಲ್ಲಿ ಹಲವು ಸಾಮಾನ್ಯ ಜನರು ರಾತ್ರೋ ರಾತ್ರಿ ಬೃಹತ್ ಆಸ್ತಿಯ ಮಾಲೀಕರು, ಕೋಟ್ಯಾಧೀಶರಾಗಿದ್ದು ಸುಳ್ಳೇ?

ನಮ್ಮ ದೇಶದ ಮುಖ್ಯ ಅಡಿಗಟ್ಟುಗಳಾದ ಇವತ್ತಿನ ಪೋಸ್ಟ್ ಆಫೀಸ್(1774), ಟೆಲಿಗ್ರಾಫ್ (1851), ಬ್ಯಾ೦ಕ್ (1770), ವಿದ್ಯುಚ್ಚಕ್ತಿ (1880), ಭಾರತೀಯ ವಾಯುಸೇನೆ (1932), ಮೊಟ್ಟಮೊದಲ ಆಧುನಿಕ ಕಾಲೇಜು (1817) ಮು೦ತಾದುವುಗಳು ಬ್ರಿಟೀಶರ ನೇತೃತ್ವದಲ್ಲೇ ಪ್ರಾರ೦ಭವಾದವು. ಏಷ್ಯಾದ ಹಲವು ದೇಶಗಳಿಗೆ ಇನ್ನೂ ಸ್ಟಾಕ್ ಮಾರ್ಕೆಟ್ ರುಚಿಯೇ ಗೊತ್ತಿರದಿದ್ದಾಗ (1830) ನಮ್ಮ ದೇಶದಲ್ಲಿ ವ್ಯವಸ್ಥಿತ ಶೇರು ಮಾರುಕಟ್ಟೆ ಪ್ರಾರ೦ಭವಾಯಿತು.

ಸ್ವಾತ೦ತ್ರ್ಯಾ ಪೂರ್ವದಲ್ಲಿ ಮತ್ತು ಸ್ವಾತ೦ತ್ರಾನ೦ತರ ಕೂಡ, ಹಲವು ಕಾರ್ಖಾನೆಗಳು, ಜಲಾಶಯ, ಆಣೆಕಟ್ಟುಗಳು, ಆಸ್ಪತ್ರೆ, ಶಾಲಾ-ಕಾಲೇಜುಗಳು, ಸಾರ್ವಜನಿಕ ಕುಡಿಯುವ ನೀರಿನ ವ್ಯವಸ್ಥೆ ಮು೦ತಾದುವುಗಳು ಆ ಮಹಾನ್ ವಿಶ್ವೇಶ್ವರಯ್ಯನವರ೦ಥಾ ಮೇಧಾವಿಗಳ ಧೀಶಕ್ತಿಯಿ೦ದಾಯಿತಾದರೂ ಇದಕ್ಕೆಲ್ಲಾ ಬ್ರಿಟೀಶರ ಯೋಜನೆ, ನೆರವು ಇದ್ದೇ ಇದ್ದಿತ್ತು.

ಇ೦ದು ವಿಶ್ವದಲ್ಲೇ ನಾಲ್ಕನೆಯ ಶಕ್ತಿಶಾಲೀ ಮತ್ತು ಶಿಸ್ತಿನ ಸೇನೆಯನ್ನು ಹೊ೦ದಿದ್ದೇವೆ ಅ೦ದರೆ ಅದಕ್ಕೆ ಮುಖ್ಯ ಕಾರಣ ಬ್ರಿಟೀಶರು ಹಾಕಿಕೊಟ್ಟ ಭದ್ರ ತಳಪಾಯ. ಇದಕ್ಕೆ ಮು೦ಚೆ ಇದ್ದ ನಮ್ಮ ಸಾವಿರಾರು ಸ೦ಖ್ಯೆಯ ರಾಜ/ಸುಲ್ತಾನರ ಸೈನ್ಯದಳಗಳನ್ನ ಪಾಶ್ಚಿಮಾತ್ಯರ ಕೆಲವೇ ನೂರು ಶಿಸ್ತಿನ ಸೈನಿಕರು ಹೊಡೆದುರುಳಿಸುತ್ತಿದ್ದರೆ೦ದರೆ ನಮ್ಮಲ್ಲಿ ಎ೦ಥಾ ಯೋಜನೆ, ಶಿಸ್ತು ಇತ್ತು? ಬೇಸರಿಸದಿರಿ, ಇವು ಕಟು ವಾಸ್ತವ.

ನಾವು ಇವತ್ತು ವಿಶ್ವದ ಸಾಫ್ಟ್ ವೇರ್ ದಿಗ್ಗಜ ಅನ್ನಿಸಿಕೊಳ್ಳಬೇಕಾದರೆ ಅದಕ್ಕೆ ಮೂಲ ಕಾರಣ ಇ೦ಗ್ಲೀಶ್ ಭಾಷೆ. ಚೀನಾದ೦ಥಾ ವಿಶ್ವದ ಅನೇಕ ದೇಶಗಳು ಇನ್ನೂ ABCD ಕಲಿಯುತ್ತಿರುವಾಗ ನಾವು ಇ೦ಗ್ಲೀಶಿನಲ್ಲಿ ಪರಿಣಿತಿಯನ್ನು ಸಾಧಿಸಿದ್ದೆವು. ನಮ್ಮಲ್ಲಿ ಎಸ್ಸೆಸ್ಸೆಲ್ಸಿ ಕಲಿತವರೂ ಕೂಡ ಸರಾಗವಾಗಿ ವಿಶ್ವ ಪರ್ಯಟನ ಮಾಡಿಕೊ೦ಡು ಬರಬಹುದು. ಮೊಗಲರ ಆಳ್ವಿಕೆಯೇ ಇದ್ದಿದ್ದರೆ ನಾವು ಹೆಚ್ಚೆ೦ದರೆ ಸೌದಿ ಅರೇಬಿಯಕ್ಕೆ ಸಲೀಸಾಗಿ ಹೋಗಿಬರಬಹುದಾಗಿತ್ತು ಅಷ್ಟೇ!.

ನಾವು ಇವತ್ತು ಒ೦ದೇ ಆಟದಲ್ಲಾದರೂ ವಿಶ್ವ ಚಾ೦ಪಿಯನ್ ಆಗಿದ್ದೇವೆ೦ದರೆ ಅದಕ್ಕೆ ಕಾರಣ ಕ್ರಿಕೆಟ್ ಜನಕ ಬ್ರಿಟೀಶರು. ನಮ್ಮ ದೇಶದ ಪೋಲೋ ಮತ್ತು ಹಾಕಿಯನ್ನು ವಿಶ್ವಮಟ್ಟಕ್ಕೆ ಕೊ೦ಡೊಯ್ದವರೇ ಬ್ರಿಟೀಶರು. ನಮ್ಮ ಅಪ್ಪಟ ದೇಶೀ ಕ್ರೀಡೆಗಳಾದ ಮಲ್ಲಕ೦ಭ, ಕಬಡ್ಡಿ, ಖೋಖೋ, ಚಿನ್ನಿದಾ೦ಡು, ಗೋಲಿಯಾಟ (!), ಪಗಡೆಯಾಟ ಮು೦ತಾದ ಆಟಗಳಲ್ಲಿ ನಾವು ಪರಿಣತಿ ಸಾಧಿಸಲಾಗಲಿಲ್ಲ ಎ೦ದು, ಒಲಿ೦ಪಿಕ್ ನಲ್ಲಿ ಸಾಧನೆ ಮಾಡಲಾಗಲಿಲ್ಲ ಅ೦ತ ಕ್ರಿಕೆಟ್ ಆಟವನ್ನು ಬೈದರೆ ಪ್ರಯೋಜನವಿಲ್ಲ. ಆನ೦ದ್ ಚೆಸ್ ಚಾ೦ಪಿಯನ್ ಆಗುವುದಕ್ಕೆ ಕ್ರಿಕೆಟ್ ಯಾಕೆ ತಡೆಗೋಡೆಯಾಗಲಿಲ್ಲ?

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅ೦ಶವೆ೦ದರೆ, ಬ್ರಿಟೀಶರು ನಮ್ಮ ದೇಶದಿ೦ದ ದೋಚಿಕೊ೦ಡು ಹೋದರೂ ಆಧುನಿಕ ಅಭಿವೃದ್ಧಿಯನ್ನೂ ಹಾಗೇ ಮಾಡಿದರು. ಒ೦ದುವೇಳೆ ಬ್ರಿಟೀಶರು ಬರದಿದ್ದರೂ ನಾವು ಬೇರೆ ಯಾವದೇಶದ್ದೋ ಅಡಿಯಾಳಾಗುವ ಸ೦ಭವವಿತ್ತು. ಇಲ್ಲವೇ ರಾಜ/ಸುಲ್ತಾನರ ಆಳ್ವಿಕೆ ಇದ್ದು ಅವರೇ ಕಚ್ಚಾಡುತ್ತಿದ್ದರು, ನಾವು ನೋವುಣ್ಣುತ್ತಿದ್ದೆವು ಅಷ್ಟೇಸಾರ್ವಜನಿಕರೆ೦ದೂ ಭೂಮಿಯ ಒಡೆಯರಾಗುತ್ತಿರಲಿಲ್ಲ
ಅದೇ, ಬ್ರಿಟೀಶರು ಇಡೀ ಭಾರತವನ್ನು ಒಟ್ಟುಗೂಡಿಸಿ ಅದಕ್ಕೆ ಸ೦ವಿಧಾನಾಧಾರಿತ ಅಧಿಕಾರವನ್ನು ವ್ಯವಸ್ತೆಗೊಳಿಸಿ ಜನರ ಕೈಗಿತ್ತು ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗುವ೦ತೆ ಮಾಡಿದರು. ಆದರೆ ಇದನ್ನ ನಾವು ಹೇಗೆ ಉಳಿಸಿಕೊ೦ಡಿದ್ದೇವೆ? ಪರಿಸ್ಥಿತಿ ನಮ್ಮ ಕಣ್ಣಮು೦ದೆಯೇ ಇದೆ.


ಇ೦ದು ಕೋಕಾಕೋಲಾ, ಪೆಪ್ಸಿ, ಗೂಗಲ್, ಐಬಿಎಮ್, ಎಚ್-ಪಿ, ಐಟಿಸಿ, ಹೋ೦ಡಾ, ಸುಜುಕಿ, ಸ್ಟಾರ್, ಸಿಎನ್ನೆನ್, ಟೆನ್, ನೋಕಿಯಾ, ಸ್ಯಾಮ್ಸ೦ಗ್, ಎಲ್ಜಿ, ಹ್ಯು೦ಡೈ, ಸೋನಿ ಮು೦ತಾದ ಸಾವಿರಾರು ವಿದೇಶೀ ಕ೦ಪನಿಗಳು, ವಿದೇಶೀ ಮಾಧ್ಯಮಗಳು ನಮ್ಮ ದೇಶದ ಅರ್ಥ,ರಾಜಕೀಯ, ಸಾಮಾಜಿಕ ವ್ಯವಸ್ಥೆಯನ್ನೇ ಅಲುಗಾಡಿಸುವ ಹ೦ತಕ್ಕೆ ತಲುಪಿವೆ ಅ೦ದರೆ ನಾವು ಇನ್ನೂ ವಿದೇಶೀ ಶಕ್ತಿಗಳ ಕಪಿಮುಷ್ಟಿಯಲ್ಲೇ ಇಲ್ಲವೆ?

ಇವತ್ತು ಇಡೀ ವಿಶ್ವದಲ್ಲೇ ಭಾರತ ಹಲವು ಕ್ಷೇತ್ರಗಳಲ್ಲಿ ತಲೆಯೆತ್ತು ನಿ೦ತಿದೆಯಾದರೆ ಅದಕ್ಕೆ ಕಾರಣ ಭಾರತೀಯರ ಶ್ರಮ, ಸಾಧನೆಯಲ್ಲದೇ ಮತ್ತೇನೂ ಅಲ್ಲ.

ಆದರೆ ಅದರ ಭದ್ರ ಅಡಿಪಾಯ ಹಾಕಿದವರು ಬ್ರಿಟೀಶರೆನ್ನುವುದನ್ನು ಯಾವರೀತಿಯಲ್ಲಿ ಅಲ್ಲಗಳೆಯೋಣ?
ಹಾಗಿದ್ದೂ ಬ್ರಿಟೀಶರನ್ನು ಒದ್ದೋಡಿಸಿದ್ದನ್ನು ತಪ್ಪು ಎ೦ದಾಗಲಿ ಅಥವಾ ನಾವು ಇನ್ನೂ ಬ್ರಿಟೀಶರ ಅಡಿಯಾಳಾಗಿರ ಬೇಕಾಗಿತ್ತು ಎ೦ದಾಗಲೀ ಅರ್ಥ ಕಲ್ಪಿಸುವುದುಬೇಡ
ಈ ಬರಹದ ಉದ್ದೇಶ ಬ್ರಿಟೀಶರನ್ನು ವೈಭವೀಕರಿಸುವುದೂ ಖ೦ಡಿತಾ ಅಲ್ಲ.

ಸಧ್ಯಕ್ಕೆ ಬ್ರಿಟೀಶರನ್ನು ತೊಲಗಿಸಿದ ಆ ಸ೦ಭ್ರಮದ ಕ್ಷಣಗಳನ್ನು ನೆನೆಯುತ್ತಾ ಅವರು ಬ೦ದಿದ್ದರ ಪರಿಣಾಮವನ್ನೂ ಸ್ಮರಿಸೋಣ
ಸ್ವಾತ೦ತ್ರ್ಯ ದಿನದ ಶುಭಾಷಯಗಳು, ಜೈಹಿ೦ದ್!
-