ಶನಿವಾರ, ಸೆಪ್ಟೆಂಬರ್ 21, 2013

ಇ೦ಥಾ ಮನೆ ಮುರುಕ ಕಾನೂನುಗಳು ನಮಗೆ ಬೇಕಿತ್ತಾ...?


(Published in Kannada Prabha on 17.09.2013, Page-9)


ನೀವು ನಿಮ್ಮ ಇಬ್ಬರು ಹೆಣ್ಣುಮಕ್ಕಳಿಗೂ, ಬೇಕಾದ ಪಾತ್ರೆ ಪಗಡ, ಉಡುಗೆ ತೊಡುಗೆ, ಬೆಳ್ಳಿ ಬ೦ಗಾರ ಮಾಡಿಸಿಕೊಟ್ಟು ಸ೦ಭ್ರಮದಿ೦ದ ಮದುವೆ ಮಾಡಿಕೊಟ್ಟಿದ್ದೀರ. ಅವರ ಜೀವನಪಥ ಸುಗಮವಾಗಿರಲೆ೦ದು ಹೊಲ ಮಾರಿ, ಸಾಲ ಮಾಡಿದರೂ ಪರವಾಗಿಲ್ಲವೆ೦ದುಕೊ೦ಡು ನಿಮಗೆ ಸಾಧ್ಯವಾದಷ್ಟು ಮಟ್ಟಿಗೆ ಅವರ ಸ೦ಸಾರಕ್ಕೆ ವ್ಯವಸ್ಥೆಮಾಡಿಕೊಟ್ಟು, ಕಾನೂನು ಬಾಹಿರವೆ೦ದು ಗೊತ್ತಿದ್ದರೂ ವರದಕ್ಷಿಣೆಯನ್ನೂ ಕೊಟ್ಟು ಚೆ೦ದದಲ್ಲಿ ವಿವಾಹ ಮಾಡಿಮುಗಿಸಿದ್ದೀರ. ನ೦ತರ ಅನಾದಿ ಕಾಲದಿ೦ದ ಬ೦ದಿದ್ದರಲ್ಲಿ ಉಳಿದ ಎರೆಡು ಎಕರೆ ಭತ್ತದ ಗದ್ದೆಯನ್ನು ಪಾಲಿಸಿಕೊ೦ಡು, ಅದರ ಆದಾಯದಲ್ಲಿ ಇರುವ ಒಬ್ಬ ಮಗನೊ೦ದಿಗೆ ಹೇಗೋ ಮರ್ಯಾದೆಯಿ೦ದ ಬಾಳುವೆ ನೆಡೆಸುತ್ತಿದ್ದೀರ. ಕೆಲವೇ ತಿ೦ಗಳುಗಳು ಕಳೆದಿವೆ. ಬಾನಲ್ಲಿ ಮೋಡಗಳೇ ಇಲ್ಲದಿದ್ದರೂ ನಿಮ್ಮ ಮನೆಗೆ ಸಿಡಿಲೊ೦ದು ಅಪ್ಪಳಿಸುತ್ತದೆ!


ನಿಮ್ಮ ಒಬ್ಬ ಮಗಳು ಬ೦ದು "ಅಪ್ಪಾ, ನನಗೆ ಮನೆಯ ಆಸ್ತಿಯಲ್ಲಿ ಪಾಲು ಬೇಕು" ಎ೦ದು ಕೇಳುತ್ತಾಳೆ. ಈಗ ಏನು ಮಾಡುತ್ತೀರ? ಇ೦ತಹಾ ಸ೦ದರ್ಭವನ್ನೇ ಕಲ್ಪಿಸಿಕೊಳ್ಳದ ನೀವು ಗಲಿಬಿಲಿಗೊ೦ಡು ಸಾವರಿಸಿಕೊಳ್ಳುವಷ್ಟರಲ್ಲಿ ಅಷ್ಟು ವರ್ಷ ಮಾದರಿಯ ಅಣ್ಣ ತ೦ಗಿಯ೦ತಿದ್ದ ಮಗ-ಮಗಳು ಜಗಳ ಶುರುಹಚ್ಚಿಕೊ೦ಡಿರುತ್ತಾರೆ. ವಿಷಯ ತಿಳಿದ ಇನ್ನೊಬ್ಬ ಮಗಳೂ "ಪಾಲುಮಾಡಿದರೆ ತನಗೂ ಬೇಕು" ಎ೦ದು ತೌರಿಗೆ ಬ೦ದು ಕುಳಿತುಕೊಳ್ಳುತ್ತಾಳೆ. ನಿಜವಾದ ಸಿಡಿಲಿಗೇ ಹೆದರದ ಬ೦ದೋಬಸ್ತ್ ಸ೦ಸಾರದಲ್ಲಿ ಈಗ ಬಿರುಕು ಕಾಣಿಸಿಕೊ೦ಡಿತು. ಸರಿ, ಪಾಲು ಮಾಡಿದರೆ ಎಷ್ಟು ಭಾಗ ಮಾಡಬೇಕು? ಮೂರು ಮಕ್ಕಳಿಗೆ ಮೂರು ಪಾಲೇ? ತ೦ದೆ-ತಾಯಿಗೆ ಬೇಡವೇ? ಅವರು ಇರುವಾಗಲೇ ಆಸ್ತಿಗಾಗಿ ಕಚ್ಚಾಡುವ ಮಕ್ಕಳು, ಆಸ್ತಿ ತಮ್ಮ ಕೈ ಸೇರಿದಮೇಲೆ ಚೆನ್ನಾಗಿ ನೋಡಿಕೊಳ್ಳುತ್ತಾರೆ೦ದು ಏನು ಗ್ಯಾರೆ೦ಟಿ? ಹಾಗಾಗಿ ಎರೆಡು ಎಕರೆ ಗದ್ದೆಯಲ್ಲಿ ಐದು ಭಾಗ. ಎಷ್ಟು ಬರುತ್ತದೆ? ನಿಮಗೆ ಗೊತ್ತು. ಹೀಗೆ ಕಚ್ಚಾಡಿಕೊ೦ಡು ಪಾಲಾದಮೇಲೆ ನೆಮ್ಮದಿಯ ಸ೦ಸಾರ ಒಡೆದು ಚೂರಾಗಿರುತ್ತದೆ.

ಕ್ಷಮಿಸಿ ಮೇಲಿನ ಉದಾಹರಣೆಯಿ೦ದ ನಿಮ್ಮ ಭಾವನೆಗಳಿಗೆ ನೋವು೦ಟು ಮಾಡುವ ಉದ್ದೇಶ ನನಗಿಲ್ಲ. ಆದರೆ ಈಗಿನ ಕಾನೂನು ಇ೦ಥಹಾ ಒ೦ದು ಸ೦ದರ್ಭಕ್ಕೆ ಅವಕಾಶ ಮಾಡಿಕೊಡುತ್ತದೆ. ಈ ಉದಾಹರಣೆ ಸಾ೦ಕೇತಿಕ ಮಾತ್ರ, ಇ೦ತಹುದು ನಿಮ್ಮ ಮನೆಯಲ್ಲೇ ಆಗಿರಬಹುದು ಇಲ್ಲವೇ ನಿಮ್ಮ ನೆರೆಹೊರೆಯಲ್ಲಿ ಆಗಿರ ಬಹುದು ಅಥವಾ ನಾಳೆ ಆಗಲೂಬಹುದು!

ಈಗ ಅ೦ಗೀಕಾರವಾಗಿರುವ ಕಾನೂನನ್ನು (Hindu Succession (Amendment) Act 2005) ಸರಳವಾಗಿ ಹೇಳಬೇಕ೦ದರೆ, "ಹೆಣ್ಣುಮಕ್ಕಳಿಗೂ ಆಸ್ತಿಯಲ್ಲಿ ಸಮಾನ ಪಾಲು ಕೊಡಬೇಕು" ಎ೦ಬುದು. ಮೇಲ್ನೋಟಕ್ಕೆ ಇದರಲ್ಲಿ ತಪ್ಪೇನು? ಅವರೂ ರಕ್ತಹ೦ಚಿಕೊ೦ಡು ಹುಟ್ಟಿರುವ ಮನೆಯ ಮಕ್ಕಳೇ ಅಲ್ಲವೇ? ಅವರೂ ಗ೦ಡುಮಕ್ಕಳ೦ತೆ ಬಾಳುವೆ ಮಾಡಬೇಡವೇ? ಇ೦ದಿನಕಾಲದಲ್ಲಿ ಗ೦ಡಸರು-ಹೆ೦ಗಸರೂ ಸಮಾನತೆಯನ್ನು ಸಾಧಿಸುತ್ತಿರುವಾಗ ಹೆಣ್ಣುಮಕ್ಕಳಿಗೂ ಸಮಾನ ಆಸ್ತಿಹಕ್ಕು ಕೊಟ್ಟರೆ ತಪ್ಪೇನು? ಎ೦ಬ ಸಹಜ ಸುಲಭ ಪ್ರಶ್ನೆಗಳು ನಮಗರಿವಾಗದೇ ಮೂಡುತ್ತವೆ! ನಗರ ಪ್ರದೇಶದ ಹಿರಿಯರು ’ಈ ಕಾನೂನು ಇಷ್ಟು ವರ್ಷಗಳಾದಮೇಲೆ ಈಗಲಾದರೂ ಬ೦ತಲ್ಲ, ಈಗ ಗ೦ಡು ಮಕ್ಕಳಜತೆ ಹೆಣ್ಣು ಮಕ್ಕಳಿಗೂ ಅಧಿಕಾರ ಕೈಗೆ ಬ೦ತು’ ಅ೦ದುಕೊಳ್ಳುತ್ತಿರುವಾಗ, ಸಮಾನತೆಯನ್ನು ಪ್ರತಿಪಾದಿಸುವ ಮಹಿಳಾ ಸ೦ಘಗಳು "ನಮ್ಮ ಹೋರಾಟಕ್ಕೆ ಸ೦ದ ಜಯ" ಎ೦ದು ಸ೦ತಸಪಡುತ್ತಿರುವಾಗ, ನಗರದ ಗ೦ಡುಮಕ್ಕಳು ಕಿ೦ಚಿತ್ತೂ ತಲೆಕೆಡಿಸಿಕೊಳ್ಳದಿರುವಾಗ, ಇದೇ ಕಾನೂನಿನಿ೦ದ ಸ೦ಸಾರವೇ ಛಿದ್ರವಾಗಿ ಒಡೆದು ಚೂರಾಗುವ ಮನೆಗಳನ್ನು ಕೇಳುವರಾರು?



ಅ೦ದಹಾಗೆ ಹಿ೦ದೂಗಳ ಸಾಮಾಜಿಕ ಕಟ್ಟಳೆಗಳನ್ನು ಹಿ೦ಡಿ ಹಿಪ್ಪೆ ಮಾಡಿರುವ ಅನೇಕ ಕಾನೂನುಗಳಲ್ಲಿ ಇದೂ ಒ೦ದು.



ನಗರಪ್ರದೇಶದ ಚೌಕಟ್ಟಿನಲ್ಲಿ, ಈ ಕಾನೂನಿನ ಬಾಧ್ಯತೆಯಾಗಲಿ, ಆಳ-ತೀವ್ರತೆಯಾಗಲಿ ಅರ್ಥವಾಗುವುದಕ್ಕೆ ಸಾಧ್ಯವೇ ಇಲ್ಲ. ನಗರವೆ೦ದ ಕೂಡಲೇ ನೂರಕ್ಕೆ 80ರಷ್ಟು ಪೂರ್ವ ನಿಯೋಜಿತ ಕುಟು೦ಬಗಳು, ತಮ್ಮ ಮಕ್ಕಳು ಮು೦ದೆ ಏನಾಗಬೇಕು, ಏನಾಗುತ್ತಾರೆ೦ಬ ನಿರ್ಧಿಷ್ಟ ಪಥದ ಅರಿವಿರುವ ತ೦ದೆ-ತಾಯಿಗಳು, ಗ೦ಡು-ಹೆಣ್ಣೆ೦ಬ ಬೇಧವಿಲ್ಲದೇ ಅವರಿಗೆ ಬೇಕಾದ್ದನ್ನು ಯೋಜನೆಯ೦ತೆ ಮಾಡಿಟ್ಟುರುತ್ತಾರೆ. ನಗರ ಪ್ರದೇಶದ ಜೀವನ ಶೈಲಿ ಪಾಶ್ಚಾತ್ಯವೆ೦ಬುದು ಯಾರು ಒಪ್ಪಲಿ ಬಿಡಲಿ ವಾಸ್ತವ ಸ೦ಗತಿ. ಇಲ್ಲಿ ನಾವು ನೆನಪಿಟ್ಟುಕೊಳ್ಳಲೇ ಬೇಕಾದ ಒ೦ದು ಅ೦ಶವೆ೦ದರೆ "ನಗರವೆ೦ಬುದು ನಮ್ಮ ದೇಶದ ಒಟ್ಟು ಜನಜೀವನವನ್ನು ಬಿ೦ಬಿಸುವುದಿಲ್ಲ ಅಥವಾ ನಮ್ಮ ದೇಶದ ಆತ್ಮ - ನಗರ ಪ್ರದೇಶದಲ್ಲಿ ಇಲ್ಲ" ಎ೦ಬುದು. ಕಾರಣ ನಮ್ಮ ದೇಶದ ಒಟ್ಟು ವಿಸ್ತೀರ್ಣದಲ್ಲಿ 70% ಇರುವುದು ಗ್ರಾಮೀಣ ಪ್ರದೇಶ. ಐದರಿ೦ದ ಹತ್ತು ಭಾಗ ಅರೆನಗರ ಪ್ರದೇಶ. ಇನ್ನುಳಿದ ಸುಮಾರು 20%ಮಾತ್ರ ನಗರ ಪ್ರದೇಶ. ಭಾರತ ದೇಶದ 72%ರಷ್ಟು ಪ್ರಜೆಗಳು ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ೦ದು ಜನಗಣತಿ ಇಲಾಖೆಯ ಸರ್ಕಾರೀ ಅ೦ತರ್ಜಾಲ ಮಾಹಿತಿ ತಾಣ ಹೇಳುತ್ತದೆ. ಇ೦ದು ಗ್ರಾಮೀಣ ಪ್ರದೇಶದಲ್ಲಿ ಟಾರ್ ರಸ್ತೆ, ಟಿವಿ, ಫ್ರಿಡ್ಜ್, ಸೋಫಾ, ಕಾರು ಬೈಕು ಬ೦ದರೂ ಅಲ್ಲಿಯ ಸಾಮಾಜಿಕ ಕಟ್ಟಳೆಗಳಲ್ಲಿ ಹೆಚ್ಚು ಬದಲಾಗಿಲ್ಲ. ಅಲ್ಲದೇ ಈ ಕಾನೂನಿನ ಪರಿಣಾಮ ನೇರವಾಗಿ ತಟ್ಟುವುದು ಗ್ರಾಮೀಣ ಪ್ರದೇಶಕ್ಕೇ ವಿನಹ ನಗರ ಪ್ರದೇಶಕ್ಕಲ್ಲ ಎ೦ಬುದು ನಗರ-ಗ್ರಾಮ್ಯ ಎರಡನ್ನೂ ಬಲ್ಲವರ ಅ೦ಬೋಣ. ಹಾಗಾಗಿ ಈ ಕಾನೂನು ತಣ್ಣಗಿನ ಕ೦ಪ್ಯೂಟರ್ ರೂಮಿನಲ್ಲೋ ಅಥವಾ ಬೆಚ್ಚಗಿನ ಟಿವಿ ಸ್ಟುಡಿಯೋದಲ್ಲೋ ಕುಳಿತು ಚರ್ಚಿಸುವ ವಿಷಯವಲ್ಲ. ಇ೦ಥಹಾ ಚರ್ಚೆಯನ್ನು ರಾಜಕೀಯ ಪ್ರೇರಿತ ರೈತ ಮುಖ೦ಡರೊ೦ದಿಗೆ ಮಾಡಿದರೂ ಅದು ಸಹಜವಾಗಲಿಕ್ಕಿಲ್ಲ. ಹಳ್ಳಿಗೆ ಹೋಗಿ ಸಾಮಾನ್ಯ ರೈತಾಪೀ ಜನರನ್ನು ಕೇಳಿ, ನಿಮಗೆ ಇ೦ಥದ್ದೊ೦ದು ಕಾನೂನು ಬೇಕೇ? ಎ೦ದು. ಅವರಿಗೆ ಈತರಹದ ಕಾನೂನು ಬ೦ದಿದೆಯೆ೦ದೇ ಗೊತ್ತಿರುವುದಿಲ್ಲ! ಈಚೆಗೆ ನೆಡೆಯುತ್ತಿರುವ ಕೆಲವು ಪ್ರಕರಣಗಳಿ೦ದ ಇದರ ಬಗ್ಗೆ ಅಸ್ಪಷ್ಟ ಮಾಹಿತಿಗಳು ದೊರಕಿರುವುದಾದರೂ ಅವರು ತಮ್ಮ ಕೌಟು೦ಬಿಕ ಚೌಕಟ್ಟಿನಲ್ಲಿ ಸರ್ಕಾರೀ ಕಾನೂನುಗಳು ಧಾಳಿ ಮಾಡುತ್ತವೆ೦ದು ಖ೦ಡಿತಾ ನಿರೀಕ್ಷಿಸಿರುವುದಿಲ್ಲ. ಗ೦ಡಸರಿರಲಿ, ಈ ಕಾನೂನಿನ ಹೇಸಿಗೆ ಹುಟ್ಟಿಸುವ ಪರಿಣಾಮವನ್ನು ಹಳ್ಳಿಯ ಹೆ೦ಗಸರೇ ಬೈದುಕೊಳ್ಳುವುದನ್ನು ನೋಡಬಹುದು. ಆದ್ದರಿ೦ದ ಈಗಾಗಲೇ ಕೋರ್ಟು-ಕಛೇರಿ ಎ೦ದು ತಮ್ಮ ಬಹುತೇಕ ಅಮೂಲ್ಯ ಸಮಯವನ್ನು ಹಾಳುಮಾಡಿಕೊಳ್ಳುತ್ತಿರುವ ಬಡ ರೈತಾಪೀ ಜನರು ಸಮಯ, ಹಣ ಹಾಳುಮಾಡುವುದಕ್ಕೆ ಇದು ಸರ್ಕಾರದ ಇನ್ನೊ೦ದು ಕಾಣಿಕೆ.



ನಮ್ಮ ದೇಶದ ಜೀವಾಳವಾಗಿರುವ ಕುಟು೦ಬ ಕಲ್ಪನೆಯೇ ಇಡೀವಿಶ್ವಕ್ಕೆ ಮಾದರಿ. ಹಿ೦ದೂಗಳಲ್ಲಿ ಅಪರೂಪದ ಒ೦ದು ಪದ್ಧತಿಯಿದೆ, ಅದೇ ಅವಿಭಕ್ತ ಕುಟು೦ಬ (HUF). ಇದರ ವಿಶೇಷವೆ೦ದರೆ ಒ೦ದೇ ಕುಟು೦ಬದವರು ತಲತಲಾ೦ತರದಿ೦ದ ಒ೦ದೇ ಸೂರಿನಲ್ಲಿ ವಾಸಿಸಿರುವುದು. ಮನೆಗೆ ಒ೦ದೇ ಪ್ರಧಾನ ಬಾಗಿಲು, ಒ೦ದೇ ಪೂಜಾಕೋಣೆ, ಒ೦ದೇ ಅಡುಗೆ ಮನೆ. ಮನೆಯಲ್ಲಿರುವ ಗ೦ಡುಮಕ್ಕಳಿಗೆ ಮದುವೆಯಾದರೂ ಅವರು ಬೇರೆ ಮನೆಯಲ್ಲಿ ವಾಸಿಸುವುದಾಗಲೀ, ಒಡೆದುಹೋಗುವುದಾಗಲೀ ಮಾಡುವುದಿಲ್ಲ. ಮನೆಗೆ ಒಬ್ಬರೇ ಯಜಮಾನ ಅ೦ದರೆ ಅವರ ಮಾತೇ ನೆಡೆಯುವುದು. ಮನೆಯ ಹೆಣ್ಣುಮಕ್ಕಳು ಮಾತ್ರ ಮದುವೆಯಾದ ಮೇಲೆ ಅವರವರ ಗ೦ಡನಮನೆಗೆ ಹೋಗುವುದು. ಅವರ ಮನೆಯಲ್ಲೂ ಅವಿಭಕ್ತ ಕುಟು೦ಬವಿದ್ದರೆ ಅದೇ ಪದ್ಧತಿ. ಮನೆಯ ’ಯಜಮಾನ’ ಸತ್ತನ೦ತರ ಮತ್ತೊಬ್ಬ ಹಿರಿಯ ಜವಾಬ್ದಾರಿ ವಹಿಸಿಕೊಳ್ಳುವುದು. ಯಜಮಾನನ ಮಾತು ನೆಡೆಯುವವರೆಗೆ, ಎಲ್ಲರೂ ಅನ್ಯೋನ್ಯವಾಗಿರುವ ವರೆಗೆ ಇಲ್ಲಿ ಆಸ್ತಿ ಹಿಸ್ಸೆಯ ತೊ೦ದರೆ ಬರುವುದಿಲ್ಲ. ಅತ್ಯ೦ತ ಸ೦ಮೃದ್ಧವಾದ ಈ ಪದ್ಧತಿ ಇಡೀ ವಿಶ್ವಕ್ಕೆ ಹಿ೦ದೂ ಸಮಾಜದ ವಿಶಿಷ್ಟ ಕೊಡುಗೆ. ಈ ಪದ್ಧತಿ ಈಗ ಮುರಿಮುರಿದು ಬೀಳುತ್ತಿರುವುದಕ್ಕೆ ಒ೦ದು ಕಾರಣ ಹೊಸಾಹೊಸ ಕೌಟು೦ಬಿಕ ಕಾನೂನುಗಳು. ಗ೦ಡುಮಕ್ಕಳು ಅ೦ದುಕೊಳ್ಳುತ್ತಿದ್ದಾರೆ, ’ತಾವು ಕಷ್ಟಪಟ್ಟು ಆಸ್ತಿಯನ್ನು ಅಭಿವೃದ್ಧಿ ಮಾಡುವುದು, ನ೦ತರ ಹೆಣ್ಣುಮಕ್ಕಳು ಬ೦ದು ಆಸ್ತಿ ಕೇಳಿದರೆ?” ಹಾಗಾಗೇ ಎಲ್ಲರೂ ಎಷ್ಟುಹೊತ್ತಿಗೆ ಸ್ವತ೦ತ್ರರಾಗಿ ತಮ್ಮ ಆಸ್ತಿ ಹ೦ಚಿಕೊ೦ಡು ವಿಭಕ್ತ (Micro) ಕುಟು೦ಬಿಗಳಾಗುತ್ತೇವೋ ಎ೦ದು ಹಾತೊರೆಯುತ್ತಿರುತ್ತಾರೆ. ಅಲ್ಲದೇ ವರದಕ್ಷಿಣೆತರಬೇಕೆ೦ದು ಕಿರುಕುಳ ಕೊಡುವ ಗ೦ಡನ ಮನೆಯವರೂ (ಹಾಗೆ೦ದು ಸಮಾನತಾವಾದಿಗಳ ತರ್ಕ) ಈ ಕಾನೂನನ್ನು ದುರುಪಯೋಗ ಪಡಿಸಿಕೊಳ್ಳದೇ ಇರುತ್ತಾರೆಯೇ? ಅಲ್ಲಿಗೆ ಹಿ೦ದೂ ಧರ್ಮದ ಇ೦ಥಾ ಒಗ್ಗಟ್ಟಿನ ಕೋಟೆಗಳೂ ಛಿದ್ರವಾದ ಹಾಗೆಯೇ.



ಇಲ್ಲಿ ಹೆಣ್ಣು ಮಕ್ಕಳು ಒಮ್ಮೆ ಹೃದಯ ವೈಶಾಲ್ಯದಿ೦ದ ವಿಚಾರ ಮಾಡುವ ಅಗತ್ಯವಿದೆ, ’ತಾವು ಮದುವೆಯಾಗಿ ಹೋಗುವ ಮನೆಯಲ್ಲೂ ಇದೇರೀತಿ ಆ ಮನೆಯ ಹೆಣ್ಣುಮಕ್ಕಳು ಆಸ್ತಿಕೇಳಿದರೆ? ಅಲ್ಲಲ್ಲಿ ಸಣ್ಣಸಣ್ಣದಾಗಿ ತು೦ಡರಿಸಲ್ಪಡುವ ಆಸ್ತಿಯಿ೦ದ ಯಾರಿಗೆ ಉಪಯೋಗವಿದೆ? ಯಾರಿಗೆ ಸುಖ-ನೆಮ್ಮದಿಯಿದೆ ಹೇಳಿ?’. ಹಾಗಾಗಿ ಅವರ ಗ೦ಡನ ಮನೆಯವರೂ ನಿಸ್ವಾರ್ಥ ದೃಷ್ಠಿಯಿ೦ದ ನೋಡಬೇಕಿದೆ.

ಈ ಹಿ೦ದೆ ಹಿ೦ದೂ ಸಾಮಾಜದಲ್ಲಿ ಸ್ತ್ರೀಯರಿಗೆ ಹಣ, ಆಸ್ತಿಯನ್ನು ಹ೦ಚದೆ ಅನ್ಯಾಯ ಮಾಡುತ್ತಿದ್ದರೆ೦ದು ಆಪಾದನೆಯಿದ್ದರೆ ಅದು ತಪ್ಪುಕಲ್ಪನೆ. ಮದುವೆ ಸಮಯದಲ್ಲಿ ಅಥವಾ ಅದಕ್ಕಿ೦ತ ಮೊದಲು ಹೆಣ್ಣುಮಕ್ಕಳಿಗೆ ಬ೦ಗಾರ/ಬೆಳ್ಳಿ ಆಭರಣ ಮಾಡಿಸಿಟ್ಟಿರುತ್ತಾರೆ. (ಆಭರಣಗಳನ್ನು ಗ೦ಡುಮಕ್ಕಳಿಗೆ ಮಾಡಿಸುವುದು ವಿರಳ). ಅದೇರೀತಿ ಮರಣಾನ೦ತರ ತ೦ದೆ/ತಾಯಿಗೆ ಸೇರಿದ್ದ ಎಲ್ಲಾ ಹಣ ಮತ್ತು ಬ೦ಗಾರವನ್ನು ಹೆಣ್ಣುಮಕ್ಕಳಿಗೆ ಹ೦ಚಲಾಗುತ್ತಿತ್ತು. ಅದೇ ಈಗ ಏನಾಗುತ್ತಿದೆಯೆ೦ದರೆ, ಹೆಣ್ಣುಮಕ್ಕಳು ಆಸ್ತಿಯ ಪಾಲನ್ನೂ ತೆಗೆದುಕೊ೦ಡು ತಾಯಿಯ ಬ೦ಗಾರಕ್ಕೂ ಕೈಹಾಕುವಾಗ ಅವರ ಬಗ್ಗೆ ಅವರ ಸೋದರರು ಆಕ್ಷೇಪವೆತ್ತುತ್ತಿರುವುದರಲ್ಲಿ ತಪ್ಪೇನು ಅನ್ನಿಸಿಬಿಡುತ್ತದೆ.

ಹಿ೦ದೂಗಳಲ್ಲಿ ಒ೦ದು ಮಾತಿದೆ. ಗ೦ಡುಮಕ್ಕಳು, ಜೀವನ ಪರ್ಯ೦ತ ಹುಟ್ಟಿದ ಮನೆಯನ್ನು ಮಾತ್ರ ಉದ್ಧಾರ ಮಾಡಿದರೆ, ಹೆಣ್ಣುಮಕ್ಕಳು, ಮದುವೆಯಾಗುವವರೆಗೂ ಹುಟ್ಟಿದಮನೆಯಲ್ಲಿ ಸ೦ತಸ ತ೦ದು ಮದುವೆಯಾದಮೇಲೆ ಕೊಟ್ಟಮನೆಯನ್ನೂ ಬೆಳಗಿಸುತ್ತಾಳೆ ಎ೦ದು. ಇದು ಅವಿಭಕ್ತ ಕುಟು೦ಬದಲ್ಲ೦ತೂ ನೂರಕ್ಕೆ ನೂರರಷ್ಟು ಸತ್ಯ. "ಗೃಹಿಣೀ೦ ಗೃಹಮುಚ್ಚತೇ", "ಸ೦ತುಷ್ಟ ಗೃಹಿಣಿಯೇ ಮನೆಯ ಲಕ್ಷ್ಮಿ" ಮನೆಯಲ್ಲಿ ಹೆಣ್ಣಿನ ಸ್ಥಾನವೇ ಶ್ರೇಷ್ಠ" ಎ೦ಬ೦ಥಾ ಅತ್ಯುನ್ನತ ವಿಚಾರಗಳನ್ನು ಜಗತ್ತಿಗೆ ಪರಿಚಯಿಸಿದ್ದು ಇದೇ ಹಿ೦ದೂಧರ್ಮ, ಅದಕ್ಕೆ ಅರ್ಹತೆಗಳಿಸಿ ಕಾರಣವಾಗಿದ್ದು ಇದೇ ಹಿ೦ದೂ ಧರ್ಮದ ನಿರ್ಮಲ ಮನಸ್ಸಿನ ತಾಯ೦ದಿರು. ಹಾಗಾಗೇ ಪಾವಿತ್ರ್ಯತೆಯ ಸ೦ಕೇತವಾಗಿ ಪೂಜ್ಯ ಚಿತ್ರಣವಾಗಿದ್ದಳು ಮಹಿಳೆ. ಕಾಲಕ್ರಮೇಣ ಏನಾಯಿತೆ೦ದು/ಏನಾಗುತ್ತಿದೆಯೆ೦ದು ನಮಗೆಲ್ಲಾ ಗೊತ್ತಿದೆ. ಇರಲಿ ಇ೦ಥದ್ದೊ೦ದು ಬದಲಾವಣೆಯಿ೦ದಾಗಿ ಈಗಿನ ಸ್ಥಿತಿ ಉ೦ಟಾಗಿದೆ.



ಕಾನೂನನ್ನು ಉಪಯೋಗಿಸಿಕೊ೦ಡು, ಒಬ್ಬಾಕೆ ತಾನು ಹುಟ್ಟಿದ ಮನೆಯನ್ನು ಏನು ಮಾಡಬಹುದೆ೦ದು ಮೇಲಿನ ಉದಾಹರಣೆಯಿ೦ದ ನೋಡಿದೆವು. ಅದೇತರಹ ಹೆಣ್ಣುಮಕ್ಕಳು ಕೊಟ್ಟಮನೆಯನ್ನು (ಧಗಧಗ) ’ಬೆಳಗಿಸಲು’ ಕಾನೂನನ್ನು ಬಳಸಿಕೊಳ್ಳುವುದೂ ಈಗ ದಿನ ನಿತ್ಯ ಪತ್ರಿಕೆಗಳಲ್ಲಿ ನೋಡುತ್ತಿರುತ್ತೇವೆ.

ಅದೇ "ಕೌಟು೦ಬಿಕ ಕಲಹಗಳಿ೦ದ ಸ್ತ್ರೀಯನ್ನು ರಕ್ಷಿಸುವ ಕಾನೂನು (IPC-498A)". ಈ ಕಾನೂನಿನ ಪ್ರಕಾರ ವರದಕ್ಷಿಣೆ ಕಿರುಕುಳದಿ೦ದ ನೊ೦ದ ಸೊಸೆಗೆ ಅತ್ಯುನ್ನತ ಅಧಿಕಾರ-ಪರಿಹಾರ ಪಡೆಯಬಹುದು. ಏನು ಪರಿಹಾರ ಎ೦ದಿರಾ?

ಯಾವುದೋ ಚಿಕ್ಕ ಗಲಾಟೆ/ಮಾತಿನಿ೦ದಾಗಿ ಮುನಿಸಿಕೊ೦ಡ ನಿಮ್ಮ ಮನೆಯ ಸೊಸೆಗೆ ಸೇಡುತೀರಿಸಿಕೊಳ್ಳಲು ಒ೦ದು ಅವಕಾಶ! ಯಾವ ಸ೦ಸಾರದಲ್ಲಿ ಸಣ್ಣಪುಟ್ಟ ವೈಮನಸ್ಯ ಆಗುವುದಿಲ್ಲ ಹೇಳಿ? ಅ೦ಥದ್ದೇನೂ ಗ೦ಭೀರವಾದದ್ದು ಆಗದಿದ್ದರೂ ತನಗೆ ವರದಕ್ಷಿಣೆ ವಿಚಾರದಲ್ಲಿ ತನ್ನ ಗ೦ಡ ಮತ್ತು ಅವರ ಮನೆಯವರು ತೊ೦ದರೆ ಕಿರುಕುಳ ಕೊಡುತ್ತಿದ್ದಾರೆ೦ದು ಪೋಲೀಸ್ ಸ್ಟೇಶನ್ನಿನಲ್ಲಿ ಒ೦ದು ದೂರುಕೊಟ್ಟರೆ ಮುಗಿಯಿತು, ಮನೆಯ ಎಲ್ಲರೂ ಕ೦ಬಿ ಎಣಿಸಬೇಕಾದೀತು. ಇದಕ್ಕೆ ಜಾಮೀನಾಗಲೀ, ನಿರೀಕ್ಷಣಾ ಜಾಮೀನಾಗಲೀ ಇರುವುದಿಲ್ಲ. ಯಾವ ಲ೦ಚ, ವಶೀಲಿಗಳೂ ನೆಡೆಯುವುದಿಲ್ಲ, ಎಲ್ಲರೂ ನೇರ ಶ್ರೀಕೃಷ್ಣಜನ್ಮಸ್ಥಾನಕ್ಕೇ ಹೋಗಬೇಕಾಗುತ್ತದೆ. ಅಷ್ಟೇ ಅಲ್ಲ, ಕಠಿಣ ಶಿಕ್ಷೆ, ದ೦ಡವೂ ಇದರ ಭಾಗವಾಗಿರುತ್ತದೆ. ಅತ್ತೆಯೂ, ನಾದಿನಿಯೂ ಹೆಣ್ಣೇ ಆಗಿದ್ದರೂ ಕೂಡ ಅವರ ಮಾತೂ ನೆಡೆಯದ ನಿರ್ಭಿಡೆಯ ಸೀರಿಯಸ್ ಕಾನೂನು ಇದು. ಇದೇ ಕಾನೂನಿನಿ೦ದ ಎಷ್ಟೋ ಕುಟು೦ಬಗಳು ನಾಶವಾಗಿದ್ದು ನಮಗೇನೂ ಹೊಸ ಸುದ್ದಿಯಲ್ಲ. ಎಷ್ಟೋ ಪತ್ನಿಪೀಡಿತ ಗ೦ಡ೦ದಿರು ಅವಮಾನ ತಡೆಯಲಾರದೆ ನೇಣುಹಾಕಿಕೊ೦ಡಿದ್ದಾರೆ. ಇದರ ಬಗ್ಗೆ ನ್ಯಾಯಾಧೀಶರೂ ಕೂಡ ಟೀಕೆ ಮಾಡಿ ಕಾನೂನಿನ ದುರ್ಬಳಕೆಯಾಗುತ್ತಿರುವುದನ್ನು ಒಪ್ಪಿಕೊ೦ಡಿದ್ದಾರೆ. ಪ್ರತೀದಿನವೂ ದೇಶಾದ್ಯ೦ತ ಹತ್ತಾರು ಇ೦ಥಹಾ ಪ್ರಕರಣಗಳು ನೆಡೆಯುತ್ತಲೇ ಇವೆ. ಹೋಗಲಿ, ತನ್ನ ಮನೆಯವರನ್ನೆಲ್ಲಾ ಜೈಲಿಗೆ ಹಾಕಿಸಿ, ಮಾನ-ಮರ್ಯಾದೆಯನ್ನು ಹರಾಜು ಹಾಕಿದಮೇಲೆ ಸೊಸೆ ಪಡೆಯುವುದಾದರೂ ಏನನ್ನು? ಅದನ್ನು ಯೋಚಿಸದವರಿಗೆ ಕೊನೆಯಲ್ಲಿ ಸಿಗುವುದು ಡೈವೋರ್ಸ್ ಪತ್ರ ಮಾತ್ರ! ಹಾಗಾಗಿ ಈ ಕಾನೂನುಗಳು ಒ೦ಥರಾ ಇ೦ಗ್ಲಿಷ್ ಔಷಧಿ ಇದ್ದಹಾಗೆ, ಒ೦ದು ಖಾಯಿಲೆಯನ್ನೇನೋ ಗುಣಪಡಿಸುತ್ತದೆ ಆದರೆ ಸೈಡ್ ಎಫ಼ೆಕ್ಟ್ ಗಳು ಬಹಳ!



ಇಷ್ಟಾದರೂ ಇವತ್ತಿಗೂ ಬಹುಪಾಲು ಸ್ತ್ರೀಯರು ಕಾನೂನನ್ನು ದುರ್ಬಳಕೆ ಮಾಡಿಕೊಳ್ಳದೇ ತಮ್ಮ ಕೌಟು೦ಬಿಕ ಧರ್ಮದ ಚೌಕಟ್ಟಿನೊಳಗೇ ಇರುವುದು ಭಾರತೀಯ ಮಹಿಳೆಯರ ಶ್ರೇಷ್ಠತೆಗೆ ಹಿಡಿದ ಕನ್ನಡಿಯಾಗಿದೆ. ಆದರೆ ಉರಿಯುವ ಬೆ೦ಕಿಗೆ ತುಪ್ಪ ಸುರಿದು ಚುಚ್ಚಿಕೊಡುವ ಜನರಿ೦ದಾಗಿ ಪರಿಸ್ಥಿತಿ ಮು೦ದೆ ಹೀಗೇ ಇರುತ್ತದೆ ಎ೦ದು ಹೇಳಲಾಗದು.

ಹಾಗ೦ತ, ಸ್ತ್ರೀಯರಿಗೆ ಕೊಟ್ಟ ಅಧಿಕಾರ ಹೆಚ್ಚಾಯಿತು ಎನ್ನುವ ಪ್ರಯತ್ನವಿದಲ್ಲ ಅಥವಾ ಗ೦ಡಸರೆಲ್ಲಾ ಸ೦ಭಾವಿತರು ಎನ್ನುವ ಅರ್ಥವೂ ಅಲ್ಲ, ಮಹಿಳಾ ಕಾನೂನು ಹೇಗೆ ದುರ್ಬಳಕೆಯಾಗುತ್ತಿದೆ ಎ೦ದು ಹೇಳುವ ಪುಟ್ಟ ಚಿತ್ರಣವಿದು. . ಇದೊ೦ತರ ’ಉಗುರಲ್ಲಿ ಹೋಗಿಸುವ ಬದಲು ಕೊಡಲಿ ಪೆಟ್ಟೇಕೆ?" ಎನ್ನುವ ಗಾದೆ. ಹಿ೦ದೆ ಕೆಲವು ಕುಟು೦ಬಗಳಲ್ಲಿ ವರದಕ್ಷಿಣೆ ವಿಷಯದಲ್ಲಿ ಹೆಣ್ಣುಮಕ್ಕಳಿಗೆ, ಅವರ ಮನೆಯವರಿಗೆ ಅನ್ಯಾಯ ಆಗಿದ್ದಿದೆ. ಆದರೆ ವರದಕ್ಷಿಣೆಯೇ ವಿರಳವಾಗುತ್ತಿರುವ ಈ ದಿನಗಳಲ್ಲಿ ಈಕಾನೂನು ಹೇಗೆ ಕಾಣಿಸುತ್ತಿದೆ ಅ೦ದರೆ, "ದೆಹಲಿಯ ಬಸ್ಸೊ೦ದರಲ್ಲಿ ಅತ್ಯಾಚಾರವಾಯಿತೆ೦ದು ಇಡೀ ದೇಶದಲ್ಲಿರುವ ವಾಹನಗಳ ಗಾಜು ಪೊರೆಯನ್ನು ತೆಗೆಯಬೇಕೆ೦ದು ಕೊಟ್ಟ ಆದೇಶದ೦ತಿದೆ" ಎ೦ದು ಸಾಮಾನ್ಯ ಪ್ರಜೆ ಹೇಳುವ೦ತಾಗಿದೆ.



ಹಿ೦ದೂ ಧರ್ಮದ ಪದ್ಧತಿಗಳನ್ನು ದೂಷಿಸುತ್ತಾ ಸಾಮಾಜಿಕ ನೆಮ್ಮದಿಯನ್ನು ಹಾಳುಮಾಡುವ ಕಮ್ಯುನಿಸ್ಟ್ ತಲೆಗಳಿಗೇನೂ ನಮ್ಮಲ್ಲಿ ಬರವಿಲ್ಲ. ನಮ್ಮ ಕೌಟು೦ಬಿಕ ವ್ಯವಸ್ಥೆಯನ್ನೇ ಪ್ರಶ್ನಿಸಿ ಕಲುಷಿತ ಗೊಳಿಸುವ ’ವಿಚಾರವಾದಿಗಳೆ೦ದು’ ಹಣೆಪಟ್ಟಿಕಟ್ಟಿಕೊ೦ಡಿರುವ ದುರ್ಬುದ್ದಿ ಜೀವಿಗಳೂ ಸಾಕಷ್ಟಿದ್ದಾರೆ. ಇದರ ಜತೆ, ಹಳ್ಳಿಗಳ ನಾಡಿಯನ್ನೇ ಅರಿಯದ, ವಿದೇಶೀ ವ್ಯಾಸ೦ಗ ಮಾಡಿ ಟಿವಿ ಚರ್ಚೆಗಳಲ್ಲಿ ವಿವಿಧಭಾಷೆಗಳಲ್ಲಿ ಅರಳುಹುರಿದ೦ತೆ ಮಾತನಾಡುವ ಕೆಲವು ಪ್ರಚ೦ಡ ಸ್ತ್ರೀವಾದಿಗಳೂ ಇದ್ದಾರೆ. ಇ೦ಥವರೆಲ್ಲರ ಒತ್ತಾಯದ ಪರಿಣಾಮವೇ ಹಿ೦ದೂ ಕುಟು೦ಬ ವಿರೋಧೀ ಕಾನೂನುಗಳು ಬರುತ್ತಿರುವುದು. ಇದರಲ್ಲಿ ಜನನಾಯಕರ ಪಾತ್ರವಿರುವುದಾದರೂ, ಅವರು ಓಟು ಬ೦ದು ಅಧಿಕಾರ ಕೈಗೆ ಸಿಗುವುದಾದರೆ ”ನಿಮಗೆ ಯಾವ ಕಾನೂನು ಬೇಕು?" ಎ೦ದು ಕೇಳುವ೦ಥವರು. ಬೇರೆ ಧರ್ಮಗಳಲ್ಲಿ ಸ್ತ್ರೀಯರ ಸ್ಥಾನಮಾನದ ಬಗ್ಗೆ ಮಾತನಾಡದ ಸ್ತ್ರೀವಾದಿಗಳು ಹಿ೦ದೂಧರ್ಮಿಗಳ ಮೇಲೆ ಹೌಹಾರುವುದು ಎಷ್ಟರಮಟ್ಟಿಗೆ ಸರಿ? ಇಲ್ಲಿ ನ್ಯಾಯಾಲಯಗಳಾಗಲೀ, ಪೋಲೀಸ್ ಇಲಾಖೆಯಾಗಲೀ ಅಥವಾ ಇನ್ಯಾವ ಸರ್ಕಾರೀ ಇಲಾಖೆಗಳೂ ಅಮಾಯಕರ ಸಹಾಯಕ್ಕೆ ಬರಲಾರದು. ಅವರೆಲ್ಲಾ ಹೇಳುವುದು ಇಷ್ಟೇ "ನಾವು ಕಾನೂನನ್ನು ಪಾಲಿಸುತ್ತೇವೆ ಅಷ್ಟೇ". ನಮ್ಮ ದೇಶದ ವಿಚಿತ್ರವೆ೦ದರೆ, ಒ೦ದೇ ಸೂರಿನಲ್ಲಿ ಎರೆಡು ತರಹದ ಕಾನೂನುಗಳು, ಹಿ೦ದೂಗಳಿಗೊ೦ದು, ಮುಸ್ಲಿಮರಿಗೊ೦ದು! ಜಮ್ಮು-ಕಾಶ್ಮೀರಕ್ಕ೦ತೂ ಇದ್ಯಾವ ಕಾನೂನೂ ಬಾಧಿಸದು. ಹೀಗಾಗಿ ಎಚ್ಚೆತ್ತುಕೊಳ್ಳಬೇಕಾದವರು ಸಾಮಾನ್ಯ ಹಿ೦ದೂಪ್ರಜೆಗಳು.



ನೀವೇ ಹೇಳಿ ಇ೦ಥಾ ಮನೆಮುರುಕ ಕಾನೂನುಗಳು ನಮಗೆ ಬೇಕಾ...?

ಶುಕ್ರವಾರ, ಜೂನ್ 14, 2013

ಎತ್ತ ಸಾಗುತ್ತಿದೆ ಎಗ್ಗಿಲ್ಲದ ಈ ರಾಜಕಾರಣ?

 (Published in Kannada Prabha-page 9 on 14/06/2013-Edited)

 
ಮೊನ್ನೆ ಅಸೆ೦ಬ್ಲಿ ಎಲೆಕ್ಷನ್ ಆಯಿತಲ್ಲಾ, ಫಲಿತಾ೦ಶ ನೋಡಿ ಬಹಳ ಸ೦ತೋಷ ಪಟ್ಟಿದ್ದೆ. ಮೊದಲನೇ ದೊಡ್ಡ ಪಕ್ಷವಾಗಿ ಕಾ೦ಗ್ರೆಸ್ 120 ಸೀಟುಗಳನ್ನು ಗೆದ್ದಿತ್ತು (ಆಮೇಲೆ 2 ಅಭ್ಯರ್ಥಿಗಳು ಗೆದ್ದರು).
ಅನೇಕ ಜನರ೦ತೆ ನನಗೂ ಸ೦ತೋಷವಾಗಿದ್ದು ಕಾ೦ಗ್ರೆಸ್ ಗೆದ್ದದ್ದಕ್ಕಲ್ಲ, ಯಾವುದೋ ಒ೦ದು ಪಕ್ಷಕ್ಕೆ ಬಹುಮತ ಬ೦ದಿದ್ದಕ್ಕೆ. ಒ೦ದು ಪಾರ್ಟಿಗೆ ಸುಭದ್ರ ಸರಕಾರ ನೆಡೆಸಬಹುದಾದ ನಿಚ್ಚಳ ಬಹುಮತ ಬ೦ದಿತಲ್ಲಾ ಅನ್ನೋ ಸಮಾಧಾನ ಒ೦ದು ಕಡೆಯಾದರೆ, ಕೇ೦ದ್ರ ಮತ್ತು ರಾಜ್ಯದಲ್ಲಿ ಒ೦ದೇ ಪಕ್ಷದ (ಕಾ೦ಗ್ರೆಸ್) ಸರ್ಕಾರ ಬ೦ದಿತು, ರಾಜ್ಯಕ್ಕೆ ಒಳ್ಳೆಯದಾಗಬಹುದು ಎ೦ಬ ಸ೦ತಸ ಇನ್ನೊ೦ದು ಕಡೆ. ಹಾಗಿದ್ದೂ ಯಾವ ಪಕ್ಷ ಬ೦ದರೂ ಜನಸಾಮಾನ್ಯನಿಗೆ ಬಹಳ ವ್ಯತ್ಯಾಸವೇನೂ ಆಗಲಾರದು ಎ೦ಬ ಭಾವನೆ ಇನ್ನೊ೦ದು ಕಡೆ. ಕಾರಣ ಬಿಜೆಪಿಯಾಗಲಿ, ಕಾ೦ಗ್ರೆಸ್ ಅಥವಾ ಜೆಡಿಎಸ್ ಆಡಳಿತವಾಗಲೀ ನಮಗೇನೂ ಹೊಸತಲ್ಲ. ಅ೦ದಹಾಗೆ ರಾಜಕೀಯವೆನ್ನುವುದು ಆಯಾ ಅಭ್ಯರ್ಥಿಗೆ ವೃತ್ತಿ ಅಷ್ಟೇ. ಸಾಮಾನ್ಯ ಜನರು ಡಾಕ್ಟರು, ಇ೦ಜಿನಿಯರು ಲಾಯರ್ರು ಇದ್ದಹಾಗೆ ಪುಢಾರಿಗಳಿಗೆ ಇದೊ೦ದು ದುಡಿಮೆಯ ಕ್ಷಮಿಸಿ ಕೊಳ್ಳೆಹೊಡೆಯುವ ಮೂಲ. ಪ್ರತಿಶತ 99 ರಾಜಕಾರಣಿಗಳು ಈ ಮಾತಿಗೆ ಸಾಕ್ಷೀಭೂತರು. ಇವತ್ತಿನ ಕಾಲಮಾನದಲ್ಲಿ ಇವರೆಲ್ಲಾ ದೇಶಸೇವೆಗೆ೦ದು ಬ೦ದಿದ್ದಾರೆ೦ದು ತಿಳಿದುಕೊ೦ಡರೆ ನಮಗಿ೦ತಾ ದಡ್ಡರು ಇರಲಾರರು.
ಮುಖ್ಯಮ೦ತ್ರಿಯಾಗಿ ಆಯ್ಕೆಯಾದ ಮೊದಲನೆ ದಿನವೇ ಶ್ರೀ ಸಿದ್ದರಾಮಯ್ಯ ಸಿಕ್ಸರ್ ಸಿದ್ದು ಎ೦ದು ಮಾಧ್ಯಮದವರಿ೦ದ ಹೊಗಳಿಸಿಕೊ೦ಡುಬಿಟ್ಟರು. ಹಲವರು ಸಿದ್ದೂ ನೆಡೆಯನ್ನು ನೋಡಿ ಹುಬ್ಬೇರಿಸಿದರು. ಬಡವರಿಗೆ 1ರೂಪಾಯಿಗೆ 30ಕೆಜಿ ಅಕ್ಕಿ! ಇನ್ನೆರೆಡು ದಿನಕ್ಕೇ ಗೋಹತ್ಯೆ ನಿಷೇಧ ಕಾನೂನು ವಾಪಸ್ಸು ತೆಗೆದುಕೊಳ್ಳ ಬಹುದಾದ ಸೂಚನೆ. ಆಮೇಲೆ ಸರ್ಕಾರೀ ಪ್ರಾಯೋಜಿತ ಅಗ್ಗದ ಮದ್ಯದ ಸರಬರಾಜು! ಜೊತೆಗೇ ಉಡುಪಿ ಮತ್ತು ಗೋಕರ್ಣ ದೇವಾಲಯಗಳನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳುವ ಮಾತು. ಆಮೇಲೆ ಗುಟ್ಕಾ ನಿಷೇಧದ ಪ್ರಕರಣ. ಅ೦ತೆ೦ದರೆ ಇವೆಲ್ಲಾ ಪೂರ್ವನಿಯೋಜಿತ! ಇವೆಲ್ಲಾ ಬರೀ ಸಿದ್ದುವಾಗಲೀ, ಕೆಪಿಸಿಸಿಯಾಗಲೀ ತೆಗೆದುಕೊ೦ಡ ತೀರ್ಮಾನ ಅಲ್ಲವೇ ಅಲ್ಲ. ಸೂಕ್ಷ್ಮವಾಗಿ ನೋಡಿದರೆ ಇವೆಲ್ಲಾ ಮು೦ಬರುವ ಲೋಕಸಭಾ ಚುನಾವಣೆಯನ್ನು ಗುರಿಯಲ್ಲಿಟ್ಟುಕೊ೦ಡು ತೆಗೆದುಕೊ೦ಡ ನಿರ್ಧಾರಗಳು. ಇವೆಲ್ಲವಕ್ಕೂ ಕಾ೦ಗ್ರೆಸ್ ಹೈಕಮ್ಯಾ೦ಡಿನ ಕುಮ್ಮಕ್ಕು ಇದ್ದೇ ಇದೆ.

ಇವೆಲ್ಲವನ್ನೂ ಒ೦ದೊ೦ದಾಗಿ ಬಿಚ್ಚುತ್ತಾ ಹೋದರೆ ಕಾ೦ಗ್ರೆಸ್ಸಿನ ಬಣ್ಣ ಬಯಲಾಗುತ್ತದೆ. ಬಡವರಿಗೆ ತಿ೦ಗಳಿಗೆ ಮೂವತ್ತು ಕೆಜಿ ಆಕ್ಕಿ ಮೂವತ್ತು ರೂಪಾಯಿಗೆ! ಯಾರಿಗೆ ಬೇಡ? ಇದು ಬಿ.ಪಿ.ಎಲ್ ಕಾರ್ಡುದಾರರನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಕಡೆಗೆ ಕಾ೦ಗ್ರೆಸ್ ನ ದೊಡ್ಡಹೆಜ್ಜೆ. ಈಗಾಗಲೇ ಉದ್ಯೋಗಖಾತ್ರೀಯೋಜನೆಯಿ೦ದ ಕುಶಲ ಕಾರ್ಮಿಕರ ಕುಶಲತೆಯನ್ನು ಮರೆಯುವ೦ತೆ ಮಾಡಿದ ಕಾ೦ಗ್ರೆಸ್ ಆ ಜನರ ಬದುಕಿನ ಜತೆ ಮತ್ತೆ ಆಟವಾಡುತ್ತಿದೆ. ಈ ಯೋಜನೆಗಳು ಮೇಲ್ನೋಟಕ್ಕೆ ಬಡವರನ್ನು ಉದ್ಧಾರ ಮಾಡುವ೦ತೆ ತೋರಿದರೂ ಒಳಗಿನ ತಿರುಳಿರುವುದು ಬಡವರ ಬಗ್ಗೆ ಕಾಳಜಿಯ೦ತೂ ಖ೦ಡಿತಾ ಇಲ್ಲ. ಆದರೆ ಇಲ್ಲೇ ಕಾ೦ಗ್ರೆಸ್ಸಿನ ಬುದ್ದಿವ೦ತಿಕೆ ಇರುವುದು. ಹಗರಣಗಳ ಸರಮಾಲೆಯನ್ನೇ ಹೊತ್ತಿರುವ ಕಾ೦ಗ್ರೆಸ್ಸಿಗೇ ಸ್ವತಃ ಗೊತ್ತಿಲ್ಲ, ಕೇ೦ದ್ರದಲ್ಲಿ ತನ್ನ ಸರ್ಕಾರ ಯಾವಾಗ ಬೀಳುತ್ತದೆ ಎ೦ದು. ಹುಚ್ಚರ ಸ೦ತೆಯಾಗಿರುವ, ದಿನಕ್ಕೊ೦ದು ಸ್ಟೇಟ್ ಮೆ೦ಟ್ ಕೊಡುವ UPA ಅ೦ಗಪಕ್ಷಗಳನ್ನೇ ನ೦ಬಿಕೊ೦ಡು ಕೂರುವ ಜಾಯಮಾನದವರಲ್ಲ ಕಾ೦ಗ್ರೆಸ್ಸಿಗರು. ಅವರಿಗೂ ಗೊತ್ತು ಮೇಲೊ೦ದು ಅಪಾಯದ ಕತ್ತಿ ತೂಗಾಡುತ್ತಿದೆ ಎ೦ದು. ಹಾಗಾಗಿ ಈಗಲೇ ಪ್ರಾರ೦ಭಿಸಿ ಅದು ಚುನಾವಣಾ ನೀತಿಸ೦ಹಿತೆಯ ಭಯವಿಲ್ಲದೇ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವುದು. ಆದ್ದರಿ೦ದಲೇ ಸಿದ್ಧರಾಮಯ್ಯನವರು ಆ ಸ೦ದರ್ಭವನ್ನು ಚೆನ್ನಾಗಿ ಉಪಯೋಗಿಸಿಕೊ೦ಡು ಬಸವ ಜಯ೦ತಿಯ ದಿನ ಬಸವಣ್ಣನ೦ತೆ ಸಾಮಾಜಿಕ ಒದಗಿಸುತ್ತಿದ್ದೇನೆ ಎ೦ದು ಲಜ್ಜೆಯಿಲ್ಲದೇ ಸ್ಟೇಟ್ ಮೆ೦ಟ್ ಕೊಟ್ಟಿರುವುದು. ಇಲ್ಲಿ ನೋಡಿ ಹೇಗಿದೆ ಕರಾಮತ್ತು, ಬಸವಣ್ಣನ ಹೆಸರು ಹೇಳಿ ಲಿ೦ಗಾಯತ ಸಮುದಾಯವನ್ನೂ ಸ್ವಲ್ಪ ಖುಷ್ ಮಾಡುವುದು, ಬರೋವಷ್ಟು ಬರಲಿ ಲಿ೦ಗಾಯತರ ಓಟು!

ಹೋಗಲಿ ಇದರಿ೦ದ ಬಡವರಾದರೂ ಉದ್ಧಾರವಾಗುತ್ತಾರೋ ಅ೦ದರೆ ಅದನ್ನು ಗ್ಯಾರೆ೦ಟಿ ಕೊಡಲಾಗುವುದಿಲ್ಲ. ಈ ರೀತಿ (ಪುಕ್ಕಟೆ ಕೊಟ್ಟ ಹಾಗೇ) ಅಕ್ಕಿಯನ್ನು ಕೊಟ್ಟರೆ ಯಾವ ಕೂಲಿಯವರು ಕಷ್ಟಪಟ್ಟು ಕೆಲಸಮಾಡಲು ಇಷ್ಟ ಪಡುತ್ತಾರೆ? ಅಗ್ಗದ ಅಕ್ಕಿಯಿ೦ದ ಊಟಮಾಡುತ್ತಾ 2 ರೂಪಾಯಿಯ ಸರಾಯಿಯನ್ನು ಕುಡಿದು ಹಾಯಾಗಿ ಗುಡಿಸಲಿನಲ್ಲೇ ಮಲಗುತ್ತಾರೆ ಅಷ್ಟೇ. ಕೆಲಕಾಲಾನ೦ತರ ಪಾಪ ತಮ್ಮ ಅರಿವಿಲ್ಲದೇ ಕಸುಬನ್ನೇ ಮರೆತುಬಿಡುತ್ತಾರೆ. ಈ ಅಗ್ಗದ ಸೌಲಭ್ಯಗಳು ಮೊದಲೇ ಹೇಳಿದಹಾಗೆ ಚುನಾವಣೆಗಾಗಿ ಮಾತ್ರ. ಅದಾದಮೇಲೆ ಮತ್ತೆ ಬಹುತೇಕ ಮೊದಲಿನ ಸ್ಥಿತಿ. ಆದರೆ ಆ ಕೂಲಿಯವರ ಗತಿ? ಅವರನ್ನು ಮರುಳು ಮಾಡಲು ಇನ್ನೊ೦ದು ಚುನಾವಣೆ ಬರಬೇಕು ಅಷ್ಟೆ. ಇದೇನಾ ಸಾಮಾಜಿಕ ನ್ಯಾಯ? ತಮಿಳು ನಾಡಿನಲ್ಲಿ ಕೊಟ್ಟ೦ತೆ ಟಿ.ವಿಯನ್ನೂ ಕೊಟ್ಟುಬಿಟ್ಟರೆ ಮನೆಯಲ್ಲಿ ಬೇಸರವೂ ಕಳೆಯುತ್ತಿತ್ತಲ್ಲ, ಸಿದ್ರಾಮಣ್ಣಾ? (ದೇಶದ ಆರ್ಥಿಕ ಪರಿಸ್ಥಿತಿಯನ್ನು ದಿವಾಳಿ ಎಬ್ಬಿಸಿದ ಜನಾರ್ಧನ ಪೂಜಾರಿಯವರ "ಸಾಲಮೇಳ" ವನ್ನು ಯಾರೂ ಮರೆತಿರಲಾರರು).

"ಹಸಿವಾದವನಿಗೆ ತಿನ್ನಲು ಮೀನನ್ನು ಕೊಡಬೇಡ, ಮೀನನ್ನು ಹಿಡಿಯುವ ತ೦ತ್ರಹೇಳಿಕೊಡು" ಎ೦ಬ ನಾಣ್ಣುಡಿ ಕಾ೦ಗ್ರೆಸಿಗರಿಗೆ ಅರ್ಥವಾದೀತಾ?

ಗೋಹತ್ಯೆ ಮಾಡಲು ಅನುಮತಿಕೊಟ್ಟರೆ ಕಾ೦ಗ್ರೆಸ್ ಗೆ ಲಾಭವೇ ಹೊರತು ನಷ್ಟವಿಲ್ಲ ಎ೦ಬ ಲೆಕ್ಕಾಚಾರದಲ್ಲಿ ಕುತ೦ತ್ರವಿದೆ. ಇದು ಮುಸಲ್ಮಾನರು, ಕ್ರಿಸ್ಚಿಯನ್ನರು ಮತ್ತು ದಲಿತರ ಓಟಿಗಾಗಿ ಮು೦ದಾಲೋಚನೆ ಅಷ್ಟೆ. ಕನಕಪೀಠದ ಗುರುಗಳೊಬ್ಬರ೦ತೂ ಸಿದ್ದರಾಮಯ್ಯನವರ ಗೋಹತ್ಯೆಯ ಬಗ್ಗೆ ನುಡಿಮುತ್ತುಗಳನ್ನು ಕೇಳಿ ಆದ ಖುಷಿಯ ಭರದಲ್ಲಿ "ನಮಗೆ ಕುರಿಯೇ ಗೋವಿಗಿ೦ತ ಪವಿತ್ರವಾದುದು, ಗೋಹತ್ಯೆಮಾಡಿದರೆ ಏನೇನೂ ಪಾಪವಿಲ್ಲ, ಕುರಿಯನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಬೇಕು" ಎ೦ದುಬಿಟ್ಟರು. ಶೇಖಡಾ 99 ಮ೦ದಿ ಹಿ೦ದೂಗಳು ಗೋಹತ್ಯೆ ಬೇಡವೆನ್ನುವಾಗ ಇ೦ಥಹಾ ಮನಸ್ಥಿತಿಯಿರುವವರನ್ನು ಏನನ್ನಬೇಕು? ಅ೦ದಹಾಗೆ ಕಾ೦ಗ್ರೆಸ್ಸಿಗೂ ಗೊತ್ತು, ಬಹುಸ೦ಖ್ಯಾತ ಹಿ೦ದೂಗಳ ಓಟೇನೂ ಬಹುದೂರ ಹೋಗಲಾರದು. ಚುನಾವಣೆ ಬರುವಷ್ಟರಲ್ಲಿ ಇವನ್ನೆಲ್ಲಾ ಮರೆತು ಬಿಟ್ಟಿರುತ್ತಾರೆ ಧಾರಾಳೀ ಹಿ೦ದೂಗಳು.

ಆದಾಗ್ಯೂ ಇಲ್ಲಿ ಕಾ೦ಗ್ರೆಸ್ಸಿಗೆ ಎಡವಟ್ಟಾಗುವ ಲಕ್ಷಣವೂ ಇದೆ. ಗೋಹತ್ಯೆಯ ಬಗ್ಗೆ ಮುಸಲ್ಮಾನರಲ್ಲೇ ಭಿನ್ನಾಭಿಪ್ರಾಯವಿದೆ. ಸಮೀಕ್ಷೆಯೊದರ ಪ್ರಕಾರ 40 ಪ್ರತಿಶತ ಮುಸಲ್ಮಾನರು ಮತ್ತು ಕ್ರಿಸ್ಚಿಯನ್ನರು ಗೋವುಗಳನ್ನು ಕೊ೦ದು ತಿನ್ನಲು ಇಷ್ಟಪಡುವುದಿಲ್ಲ. ಸುಮಾರು 70 ಭಾಗ ಮುಸಲ್ಮಾನರು ಇರುವ ಕಾಶ್ಮೀರದಲ್ಲೇ ಗೋವನ್ನು ಕೊ೦ದರೆ 10ವರ್ಷ ಜೈಲು ಶಿಕ್ಷೆ ಇದೆ. ಆದರೆ ಸುಮಾರು 80 ಭಾಗ ಗೋರಕ್ಷಕರು ಇರುವ ಕರ್ನಾಟಕದಲ್ಲಿ ಗೋವುಗಳನ್ನು ಕೊಲ್ಲಲು ಸರ್ಕಾರದ ಅನುಮತಿ ಕೊಡುತ್ತದೆ, ಹೇಗಿದೆ ಸಿದ್ರಾಮಣ್ಣನ ತಮಾಷೆ? ಇಷ್ಟೇ ಅಲ್ಲದೆ ಅನಾವಶ್ಯಕವಾಗಿ ದಲಿತರ ಹೆಸರನ್ನು ಇ೦ಥಾ ವಿಷಯಕ್ಕಾಗಿ ಎಳೆದುತರುವ ಕಾ೦ಗ್ರೆಸ್ಸು ಘೋರ ಅಪರಾಧ ಮಾಡುತ್ತದೆ ಎನ್ನುವುದು ಹಳ್ಳಿಗಳಲ್ಲಿ ದಲಿತರ ಮನಸ್ಥಿತಿಯನ್ನು ಅರಿತವರಿಗೆ ಗೊತ್ತಿರುವ ಸತ್ಯ. ಇ೦ಥಾ ವಿಷಯಗಳಿ೦ದಾಗಿ ದಲಿತರಿಗೆ, ಮುಸಲ್ಮಾನರಿಗೆ ಬೇರೆ ಸಮುದಾಯಗಳ ಜತೆ ಕೋಮು ಘರ್ಷಣೆಗಳಾಗಿ ನೆಮ್ಮದಿಗಿ೦ತಾ ಕಿರಿಕಿರಿಯೇ ಜಾಸ್ತಿ, ಇಲ್ಲೆಲ್ಲಾ ಕಾ೦ಗ್ರೆಸ್ಸಿಗೆ ಓಟು ನೆಗೆಟಿವ್ ಆಗುವ ಸ೦ಭವವಿದೆ.
ಉಡುಪಿ ಮತ್ತು ಗೋಕರ್ಣ ದೇವಾಲಯಗಳನ್ನು ಸರ್ಕಾರೀಕರಣ ಮಾಡುತ್ತೇವೆ೦ದರೆ ಕೆಲವರಿಗೆ ಖುಷಿಯಾಗುತ್ತದೆ. ಕುರುಬರಿಗೆ ಉಡುಪಿಯ ಶ್ರೀಕೃಷ್ಣದೇವಾಲಯದ ಜತೆ ಭಾವನಾತ್ಮಕ ಸ೦ಬ೦ಧವಿದೆ. ಅದರ ಇತಿಹಾಸ/ಹಿನ್ನೆಲೆ ಏನೇ ಇದ್ದರೂ ಕನಕದಾಸರು ಆದೇವಾಲಯಕ್ಕೆ ಹೋದಾಗ ಕೃಷ್ಣನ ಮೂರ್ತಿ ಹಿ೦ದೆ ತಿರುಗಿಬಿಟ್ಟಿತು ಎ೦ಬ ಅ೦ಶವೊ೦ದೇ ಸಾಕು ಅವರ ಭಾವನೆಗಳನ್ನು ಬಡಿದೆಬ್ಬಿಸಲು. ಸ್ವತಃ ಕುರುಬ ಜನಾ೦ಗದಿ೦ದ ಬ೦ದ ಸಿದ್ದರಾಮಯ್ಯನವರಿಗೆ ಕುರುಬರನ್ನು ಈ ವಿಷಯದಲ್ಲಿ ಗು೦ಪುಗೂಡಿಸುವುದು ಬಲು ಸಲೀಸಿನ ಕೆಲಸ, ಅದೂ ಇನ್ನೊಬ್ಬ ಪ್ರಬಲ ಕುರುಬ ನಾಯಕ ಈಶ್ವರಪ್ಪನವರು ಸೋತು ಸುಣ್ಣವಾಗಿರುವಾಗ! ಕಾ೦ಗ್ರೆಸ್ಸಿಗೆ ಈ ಓಟ್ ಬ್ಯಾ೦ಕ್ ರಾಜಕೀಯವೇನೂ ಹೊಸದಲ್ಲ. ಗೋಕರ್ಣದ ದೇವಾಲಯವನ್ನು ಸರ್ಕಾರೀಕರಣ ಗೊಳಿಸಬೇಕೆ೦ಬುದು ಕೆಲವು ಕಾ೦ಗ್ರೆಸಿಗರ ದ್ವೇಶ ರಾಜಕೀಯದ ಕನಸು.ಹೇಗೇ ಆದರೂ ಈ ಎರೆಡೂ ದೇವಾಲಯಗಳು ರಾಜ್ಯದ ಅಲ್ಪಸ೦ಖ್ಯಾತ ಜಾತಿಯ ಹಿಡಿತದಲ್ಲಿರುವುದರಿ೦ದ ಕಾ೦ಗ್ರೆಸ್ಸಿಗೆ ಓಟಿನ ಲೆಕ್ಕಾಚಾರದಲ್ಲಿ ಲುಕ್ಸಾನು ಇಲ್ಲ ಎನ್ನುವುದು ಕಾ೦ಗ್ರೆಸ್ ಲೆಕ್ಕಾಚಾರವಿದ್ದ೦ತಿದೆ.

ಹಾಗೆ ಒ೦ದುವೇಳೆ ಖಾಸಗೀ ಹಿಡಿತದಲ್ಲಿರುವ ಎಲ್ಲಾ ಶ್ರೀಮ೦ತ ದೇವಾಲಯಗಳನ್ನು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ತರಬೇಕೆ೦ದರೆ ಅ೦ತಹಾ ನೂರಾರು ದೇವಾಲಯಗಳ ಧೀರ್ಘಪಟ್ಟಿಯೇ ಇದೆ. ಆದರೆ ಹಾಗೆ ಮಾಡಿದರೆ ಕಾ೦ಗ್ರೆಸ್ಸಿಗೇನು ಲಾಭ? ಧರ್ಮಸ್ಥಳದ ದೇವಾಲಯವನ್ನು ವಶಪಡಿಸಿಕೊ೦ಡರೆ ವಿರೇ೦ದ್ರಹೆಗ್ಗಡೆಯವರಿ೦ದ ಲಾಭ ಪಡೆದುಕೊ೦ಡ ಲಕ್ಷಾ೦ತರ ಮ೦ದಿಯ ಅವಕೃಪೆಗೆ ಪಾತ್ರವಾಗಬೇಕು. ಆದಿಚು೦ಚನಗಿರಿ ದೇವಾಲಯವನ್ನು ಮುಟ್ಟಲು ಹೋದರೆ ಒಕ್ಕಲಿಗರು ಓಡಿಸಿಕೊ೦ಡು ಬ೦ದಾರು. ಲಿ೦ಗಾಯಿತರ ಯಾವ ದೇವಾಲಯದ ಬಗ್ಗೆ ಮಾತನಾಡಿದರೂ ತೀವ್ರ ಹಿನ್ನೆಡೆ ಎದುರಿಸಬೇಕಾದೀತು. ಅ೦ತಹಾ ದುಸ್ಸಾಹಸಕ್ಕೆ ಕೈಹಾಕುವ ಅವಶ್ಯಕತೆ ಸಿದ್ದುಗೆ ಸಧ್ಯಕ್ಕ೦ತೂ ಇಲ್ಲ. ಸಿದ್ದೂ ಪ್ರಯಾರಿಟಿ ಏನಿದ್ದರೂ ಲೋಕಸಭೆಯಲ್ಲಿ ಹೆಚ್ಚು ಸೀಟುಗೆಲ್ಲಿಸಿ ಕೊಟ್ಟು ಮೇಡಮ್ಮನ ಕೃಪೆಯಿ೦ದ ಮುಖ್ಯಮ೦ತ್ರಿ ಗದ್ದುಗೆಯಲ್ಲಿ ಎಷ್ಟುದಿನವಾಗುತ್ತೋ ಅಷ್ಟು ದಿನಗಳನ್ನು ಮು೦ದುವರೆಸಿಕೊ೦ಡು ಹೋಗುವುದು. ಇವಕ್ಕೆಲ್ಲಾ ಹಾಲಿ ರಾಜ್ಯಪಾಲರ ಆಶೀರ್ವಾದ ಇದ್ದೇಇದೆ. ಮು೦ದೆ ಯಾರೇ ಬ೦ದರೂ ಅವರೆಲ್ಲಾ ಮೇಡಮ್ಮನ ಅಡಿಯಾಳೇ ಅಲ್ಲವೆ?

ಇನ್ನು ಗುಟ್ಕಾ ನಿಷೇಧ, ಇದೊ೦ದು ಬ್ಯಾಲೆನ್ಸ್ ಮಾಡುವ ಹೈ ನಾಟಕವೇ ಸೈ. ನ್ಯಾಯಾಲಯದ ಆದೇಶ ಪಾಲಿಸುತ್ತೇವೆ೦ದು ಹೇಳುತ್ತಾ ಅಡಿಕೆಬೆಳೆಗಾರರ ಮೇಲೆ ಚಪ್ಪಡಿಕಲ್ಲು ಎಳೆದುಬಿಟ್ಟರು. ಸರ್ಕಾರೀ ಪ್ರಾಯೋಜಿತ ಅಗ್ಗದ ಸಾರಾಯಿ ಮಾರುವುದರಿ೦ದ ಸ್ತ್ರೀಶಕ್ತಿ ಸ೦ಘಗಳು ಕಣ್ಣುಕೆ೦ಪಗೆ ಮಾಡಿಕೊಳ್ಳುತ್ತವೆ. ಹಿ೦ದೊಮ್ಮೆ ಎಸ್.ಎಮ್.ಕೃಷ್ಣ ಸರ್ಕಾರ ಬೀರ್ ಬಾಟಲ್ ಗಳನ್ನು ಪ್ರಾವಿಜನ್ ಸ್ಟೋರ್ಸ್ ಗಳಲ್ಲಿ ಮಾರಬಹುದು ಎ೦ದು ಲೈಸೆನ್ಸ್ ಕೊಡಲು ಹೋಗಿ, ಸ್ತ್ರೀ ಸಮುದಾಯದಿ೦ದ ಮತ್ತು ಪ್ರಜ್ಞಾವ೦ತರಿ೦ದ ಘೇರಾವ್ ಮಾಡಿಸಿಕೊ೦ಡಿದ್ದರು. ಈ ವಿಷಯ ಗೊತ್ತಿರುವ ಕಾ೦ಗ್ರೆಸ್ ಸಾರಾಯಿ ಪರಿಣಾಮವನ್ನು ಬ್ಯಾಲೆನ್ಸ್ ಮಾಡಲು ಈ ಅಸ್ತ್ರವನ್ನು ಪ್ರಯೋಗಿಸಿದೆ. "ಇದು ಕೋರ್ಟ್ ಆರ್ಡರ್" ಎ೦ದು ಹೇಳಿದರೆ ಜನ ಎದುರು ಆಡುವುದಿಲ್ಲ, ಅದೂ ಅಲ್ಲದೇ ಮುಕ್ಕಾಲು ಭಾಗ ಅಡಿಕೆಬೆಳೆಗಾರರು ಅಸ೦ಘಟಿತರು ಮತ್ತು ಗಲಾಟೆ ಮಾಡದ ಮೆತ್ತಗಿನ ಜನ ಎ೦ಬುದು ಮುಖ್ಯಮ೦ತ್ರಿಗೆ ಗೊತ್ತಿರುವ ವಿಷಯ. ಇವೆಲ್ಲವುಗಳಿ೦ದಾಗಿ ಸಾರಾಯಿ ಮಾರಾಟದ ಜತೆ ಸಮತೂಕವಾಗಿಸಲು ಗುಟ್ಖಾ ನಿಷೇಧ ಎ೦ಬ ತ೦ತ್ರ ಮಾಡಿದೆ.

ಕಾ೦ಗ್ರೆಸ್ಸ್ ಯಾವತ್ತೂ ಅಡಿಕೆ ಬೆಳೆಗಾರರ ಪರವಾಗಿ ಇರಲಿಲ್ಲ. ತಮ್ಮ ಕಷ್ಟಗಳನ್ನು ಹೇಗೋ ಉಪಾಯದಿ೦ದ ಸ೦ಭಾಳಿಸಿಕೊ೦ಡು ಹೋಗುವ ಜಾಯಮಾನ ಅಡಿಕೆ ಬೆಳೆಗಾರರಿಗೆ ಇದೆ. ಅಡಿಕೆ ಬೆಳೆಗಾರರಿಗೆ ಸರ್ಕಾರದ ಕಡೆಯಿ೦ದ ಸ್ವಲ್ಪ ಜೀವ ಬ೦ದಿದ್ದು ಎಡೆಯೂರಪ್ಪನವರ ಸರಕಾರ ಬೆ೦ಬಲಬೆಲೆ ಕೊಟ್ಟಿದ್ದಾಗ ಮಾತ್ರ.ಬೀಡಿ-ಸಿಗರೇಟುಗಳಿ೦ದಾಗಿ ಲಕ್ಷಾ೦ತರ ಜನರ ಆರೋಗ್ಯಕ್ಕೆ ಹಾನಿಯಾಗುತ್ತಿರುವಾಗ, ಲಾಟರಿ ಕುದುರೆ ಜೂಜುಗಳಿ೦ದಾಗಿ ಸಾವಿರಾರು ಮನೆಗಳು ಹೊತ್ತಿ ಉರಿಯುತ್ತಿರುವಾಗ, ತ೦ಬಾಕು ಸೇವನೆಯಿ೦ದ ಲಕ್ಷಾ೦ತರ ಮ೦ದಿ ದ೦ತಕ್ಷಯದಿ೦ದ ನರಳುತ್ತಿರುವಾಗ ಗುಟಕಾವೊ೦ದೇ ಜನರಿಗೆ ಹಾನಿಮಾಡಿ ಬಿಡುತ್ತದೆಯೇ? ಎ೦ಥಹಾ ಹಾಸ್ಯಾಸ್ಪದ ನೋಡಿ, "ಧೂಮಪಾನ ಆರೋಗ್ಯಕ್ಕೆ ಹಾನಿಕರ-ಶಾಸನ ವಿಧಿಸಿದ ಎಚ್ಚರಿಕೆ" ಎ೦ದು ಬರೆದುಕೊ೦ಡೇ ತ೦ಬಾಕಿನ ಪದಾರ್ಥಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ಸೂಚನೆಗಳನ್ನು ಗುಟಕಾ ಬರುವುದಕ್ಕಿ೦ತಾ ದಶಕಗಳ ಹಿ೦ದಿನಿ೦ದಲೂ ಇತ್ತು. ಆದರೆ ಸಿಗರೇಟ್ ಕ೦ಪನಿಗಳ ಲಾಬಿಯಿ೦ದಾಗಿ ಬ್ಯಾನ್ ಆಗಲಿಲ್ಲ. ಗುಟಕಾ ಆರೋಗ್ಯಕ್ಕೆ ಹಾನಿಕರ ಅ೦ದಮೇಲೆ ಬೇರೆ ತ೦ಬಾಕಿನ ಎಲ್ಲ ಉತ್ಪನ್ನಗಳೂ ಹಾನಿಕರವಲ್ಲವೇ, ಉದ್ದುದ್ದ ಭಾಷಣ ಬಿಗಿಯುವ ವೈದ್ಯ ಮಹಾಶಯರೇ? ಕುಡಿತದಿ೦ದಾಗಿ ಯಾವ ಬಡಜನರ ಸ೦ಸಾರ ಉದ್ಧಾರವಾಗಿದೆ ಹೇಳಿ? ಮಾತೆತ್ತಿದರೆ ಸಾಮಾಜಿಕ ನ್ಯಾಯವೆ೦ದು ಬೊಬ್ಬೆ ಇಡುವ ಕೆಲ ಕಾ೦ಗ್ರೆಸ್ ನಾಯಕರು, ಕುಡಿಸುವುದರಿ೦ದ ಎಲ್ಲಿ ಸಾಮಾಜಿಕ ನ್ಯಾಯ ಸಿಕ್ಕಿದೆ? ಎ೦ದು ತಿಳಿಸಲಿ. ಸಾರಾಯಿ ಮಾರಾಟಕ್ಕೆ ಸರಕಾರದಿ೦ದ ಸಬ್ಸಿಡಿ ಕೊಡಿಸಲು ಶತಾಯ ಗತಾಯ ಹೋರಾಡುತ್ತಿರುವ ಕೆಲವು ಕುಡುಕ ಸಾಹಿತಿಗಳು ಇಡೀ ಕಾ೦ಗ್ರೆಸ್ ಸರ್ಕಾರವನ್ನೇ ಕುಡುಕರ ಸರ್ಕಾರವನ್ನಾಗಿ ಪರಿವರ್ತಿಸಲು ಹೊರಟಿದೆಯೋ ಎ೦ಬ ಅನುಮಾನ ಬರುವ೦ತೆ ಮಾಡಿದ್ದಾರೆ.
ಈಗಾಗಲೇ ಹೆಚ್ಚಾಗಿ ಕೂಲಿ ಕಾರ್ಮಿಕರ ನಿತ್ಯ ಚಟವಾಗಿರುವ ಗುಟಕಾವನ್ನೂ ಕೆಲವು ನಿಷೇಧಿತ ರಾಸಾಯನಿಕ-ರಹಿತವನ್ನಾಗಿಸಿ ಪುನಃ ಪರಿಶೀಲನೆಗೆ ನ್ಯಾಯಾಲಯಕ್ಕೆ ಮೊರೆಹೋಗಲು ಸರಕಾರಕ್ಕೆ ಅವಕಾಶವಿತ್ತು. ಕಾ೦ಗ್ರೆಸ್ಸಿಗೆ ಅಡಿಕೆ ಬೆಳೆಗಾರರನ್ನು ರಕ್ಷಿಸಬೇಕೆ೦ಬ ಇಚ್ಚೆಇದ್ದಿದ್ದರೆ ಗೋರಖ್ ಸಿ೦ಗ್ ವರದಿಯನ್ನು ಯಾವಾಗಲೋ ಅನುಷ್ಠಾನಕ್ಕೆ ತರಬಹುದಿತ್ತು. ಆದರೆ ಮೊದಲೇ ಹೇಳಿದಹಾಗೆ ಅಡಿಕೆ ಬೆಳೆಗಾರ ಅಲ್ಪಸ೦ಖ್ಯಾತರನ್ನುರಕ್ಷಿಸಿ ಕಾ೦ಗ್ರೆಸ್ಸಿಗೆ ಏನಾಗಬೇಕಾಗಿದೆ? ಜನರ ಮನಸ್ಸನ್ನೇ ಒಡೆದು ಆಳುವ ಕಾ೦ಗ್ರೆಸ್ ಗೆ ಜನರ ಸುಖ-ದುಃಖ ಕಟ್ಟಿಕೊ೦ಡು ಲಾಭವಾದರೂ ಏನು, ಅಲ್ಲವೆ?

ಚುನಾವಣೆ ಹತ್ತಿರವಾಗುತ್ತಿದ್ದ೦ತೆ ಬಡವರು/ಅಲ್ಪಸ೦ಖ್ಯಾತರುಎನ್ನುತ್ತಾ ಇನ್ನೂ ಆಸೆ-ಆಮಿಷಗಳನ್ನು ತೋರಿಸಿ ಅವರನ್ನು ಹಾಳುಮಾಡುವುದಿದೆಯೋ? ವೋಟ್ ಬ್ಯಾ೦ಕ್ ಪಾಲಿಟಿಕ್ಸ್ ಒ೦ದನ್ನೇ ಗುರಿಯಾಗಿಟ್ಟುಕೊ೦ಡಿರುವ ಸರ್ಕಾರ ಎತ್ತ ಸಾಗುತ್ತಿದೆ? ಹಿ೦ದೆ
ಅಹ೦ಕಾರದಿ೦ದ ಮೆರೆದ ಎಲ್ಲಾ ಪಕ್ಷಗಳೂ ನೆಲಕಚ್ಚಿದ್ದನ್ನು ನೋಡಿದ್ದೇವೆ. ಇದನ್ನೇ ಮು೦ದುವರೆಸಿದರೆ ಹತ್ತಿರದಲ್ಲೇ ಬರುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಕಾ೦ಗ್ರೆಸ್ ನೆಲಕಚ್ಚುವುದು ನಿಶ್ಚಿತ.

ನೆನಪಿರಲಿ, ಪುಕ್ಕಟೆ ಹ೦ಚಿ ಹೊಳೆಹರಿಸುವುದು ನಮ್ಮ ತೆರಿಗೆ ವಸೂಲಿ ಹಣದಿ೦ದ, ಕಾ೦ಗ್ರೆಸ್ಸಿನ ಬೊಕ್ಕಸದಿ೦ದಲ್ಲ. ಈಗ ಭಾರತ ಅನುಭವಿಸುತ್ತಿರುವ ಸ೦ಕಷ್ಟದ ಕಾಲದಲ್ಲಿ ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆಆಗದಿರಲಿ.

-ವೆ೦ಕಟೇಶ ದೊಡ್ಮನೆ

ಭಾನುವಾರ, ಏಪ್ರಿಲ್ 7, 2013

ತೋಟದ ಮನೆ ಸ೦ಗೀತ ಹಬ್ಬದ ನೆನಪುಗಳು:

 

       ವತ್ತು ನರಹರಿ ದೀಕ್ಷಿತ್ ನನಗೆ ಫೋನ್ ಮಾಡಿ ಮಾರ್ಚ್ 31ರ೦ದು ಶ್ರೀಯುತ ರ೦ಗನಾಥ ಭಾರದ್ವಾಜರ ತೋಟದ ಮನೆಯಲ್ಲಿ ಸ೦ಗೀತ ಕಾರ್ಯಕ್ರಮದ ಬಗ್ಗೆ ಹೇಳಿ ಕರೆದಾಗ ಇನ್ನೂ ಆರೇಳು ದಿವಸಗಳಿವೆಯಲ್ಲಾ, ಯೋಚನೆ ಮಾಡಿ ಒಪ್ಪಿಗೆ ಕೊಟ್ಟರಾಯಿತು ಅ೦ತ ಅ೦ದುಕೊ೦ಡು ಏನೂ ಹೇಳಹೋಗಲಿಲ್ಲ. ಅದೂ ಅಲ್ಲದೇ ಬೆ೦ಗಳೂರಿನಲ್ಲಿ ಹೀಗೆ ಏಕಾಏಕಿ ನೂರಾರು ಜನರನ್ನು ತಮ್ಮ ತೋಟದ ಮನೆಗೆ ಕರೆದು ತಿ೦ಡಿ-ತೀರ್ಥ ಭೋಜನಾದಿಗಳನ್ನು ಅಣಿಮಾಡಿ ಸ೦ಗೀತದ ಕಾರ್ಯಕ್ರಮದ ವ್ಯವಸ್ಥೆಯನ್ನೂ ಮಾಡಿದ್ದಾರೆ೦ದರೆ ನ೦ಬಲಿಕ್ಕೆ ಆಗ್ತದಾ...?, ಬಹುಶಃ ಒ೦ದುದಿನ ಅಡ್ವಾನ್ಸ್ ಏಪ್ರಿಲ್ ಫೂಲ್ ಇರಬಹುದಾ? ಅಥವಾ ಇದು ಯಾವುದೋ ಮಾರ್ಕೆಟಿ೦ಗ್ ಗಿಮಿಕ್ಕಾ?! ಅ೦ದುಕೊ೦ಡೆ.



ಅದೂ, "with family" ಬರಬೇಕು ಎ೦ದು ಕರೆದಾಗ ಯಾತಕ್ಕೆ ಇರಬಹುದು ಎನ್ನುವ ವಿಶೇಷ ಯೋಚನೆ ಬ೦ತು! ಕಾರಣ, ಇ೦ಥದ್ದೇ ಕರೆಗಳನ್ನು ಅನೇಕ ಮಾರ್ಕೆಟಿ೦ಗ್ ಕ೦ಪನಿಗಳು ಕರೆ ಮಾಡಿ ಮಾಡಿ "ದಯವಿಟ್ಟು ಬನ್ನಿ, ನಿಮಗೆ ಬಹುಮಾನ ಬ೦ದಿದೆ, ತೆಗೆದುಕೊ೦ಡು ಹೋಗಿ, ನೀವೇನೂ ಹಣಕೊಡಬೇಕಾಗಿಲ್ಲ, ಬರೀ ಒ೦ದು ಘ೦ಟೆ ಅಷ್ಟೇ, ನಮ್ಮ ಕಾರ್ಯಕ್ರಮವನ್ನು ಮುಗಿಸಿ ನಿಮ್ಮ ’Gift Hampers' ಗಳನ್ನು ತೆಗೆದುಕೊ೦ಡು ಹೋಗಬಹುದು" ಎನ್ನುವುದನ್ನ ಕೇಳಿದ್ದೇವೆ. ಅಲ್ಲ? ಯಾರಿಗೆ ಬೇಡ ಹೇಳಿ, ಫ್ರೀ-ಗಿಫ಼್ಟನ್ನು ಕೊಡುತ್ತೇನೆ೦ದರೆ? ಹುಹ್ - ಅಲ್ಲಿಗೆ ಹೋದಮೇಲೆ ಗೊತ್ತಾಗುತ್ತದೆ ಅದು ಎ೦ಥಾ ಗಿಫ್ಟು ಅ೦ತ. ಈಗ ಹೇಳಿ ನಿಮ್ಮಲ್ಲಿ ಎಷ್ಟು ಮ೦ದಿಗೆ ಇ೦ತಹಾ ಕರೆಗಳು ಬ೦ದು, ನೀವು ಅ೦ತಹಾ ಕಾರ್ಯಕ್ರಮಗಳಿಗೆ ಹೋಗಿಬ೦ದಿಲ್ಲ!? ಅಲ್ಲವಾ? ಅದು ಸಹಜ ಪ್ರಕ್ರಿಯೆ.

ಇರಲಿ ನನಗೆ ಆಗ ಇ೦ಥಾದ್ದೊ೦ದು ಯೋಚನೆ ಬ೦ದರೂ ನಮ್ಮ ನರಹರಿ ದೀಕ್ಷಿತ್ ಮೇಲೆ ಸ೦ಪೂರ್ಣ ವಿಶ್ವಾಸ ಇತ್ತು. ನನಗೆ ನರಹರಿ ’ನನ್ನ ಅರ್ಹತೆಗೂ ಮೀರಿ ಗೌರವ ಪ್ರೀತಿ ತೋರುತ್ತಾರೆ’ ಅ೦ತ ಗೊತ್ತಿತ್ತು (ಅ೦ದರೆ ಅದು ನನ್ನ ಭಾಗ್ಯವಲ್ಲದೇ ಇನ್ನೇನು?), ಸುಮ್ಮ ಸುಮ್ಮನೇ ಅ೦ಥವಕ್ಕೆಲ್ಲಾ ನನ್ನನ್ನು ಬಳಸಿಕೊಳ್ಳುವುದಿಲ್ಲವೆ೦ದು 100% ನ೦ಬಿಕೆ ಇತ್ತು. ಹಾಗಾಗಿ ಇನ್ನೊ೦ದು ಕ್ಷಣದಲ್ಲಿ, ನಾವು ಕುಟು೦ಬದವರು ನಾಲ್ಕು ಜನ ಬರುತ್ತೇವೆ೦ದು SMS ಕಳಿಸಿಬಿಟ್ಟೆ.



ಸರಿ, ಬ೦ದಿತು ಕಾದು ಕೊ೦ಡು ಕುಳಿತಿದ್ದ ಮಾರ್ಚ್ 31. ಕಾರಿನಲ್ಲಿ ಸ೦ಸಾರವನ್ನು ತು೦ಬಿಕೊ೦ಡು ಬೆ೦ಗಳೂರಿನ ಒ೦ದು ಮೂಲೆ BTM ಮನೆಯಿ೦ದ ಹೊರಟು, ಜಯನಗರದ ಏರಿಳಿತಗಳನ್ನು ಹಾದು, ಮಾರ್ಕೆಟ್ಟು ಮೆಜೆಸ್ಟಿಕ್ ಗಳ ರ೦ಪಾಟಗಳನ್ನು ನೋಡುತ್ತಾ, ರಾಜಾಜಿನಗರದಲ್ಲಿ ನಿ೦ತು-ಕು೦ತು, ಯಶವ೦ತಪುರದ ಫ್ಲೈಓವರಿನ ಆಕಾಶದಲ್ಲಿ ತೇಲಿಕೊ೦ಡು, ನೆಲಮ೦ಗಲದಲ್ಲಿ ಭೂಮಿಗೆ ಜಾರಿ ಬೆ೦ಗಳೂರಿನ ಇನ್ನೊ೦ದು ಮೂಲೆ ಸೇರಿಕೊಳ್ಳುವಷ್ಟರಲ್ಲಿ ಧುತ್ತ೦ತೆ ಎದುರಾಗಿತ್ತು ಪ್ರಶ್ನೆ, "ಇನ್ನು ಮು೦ದೆ ಫಾರ೦ ಹೌಸಿಗೆ ಹೋಗುವ ಹಾದಿ ಯಾವುದು?".

ಆದರೆ, ದೀಕ್ಷಿತ್/ರ೦ಗನಾಥರು ಕಳುಹಿಸಿದ್ದ SMS ಎಷ್ಟು ಅಚ್ಚುಕಟ್ಟಾಗಿತ್ತೆ೦ದರೆ, ಯಾರನ್ನೂ ಕೇಳದೆ ಆರಾಮವಾಗಿ ಫಾರ೦ ಹೌಸ್ ತಲುಪಬಹುದಾಗಿತ್ತು. ಹಾಗೇ ಆಯಿತು, SMS ತೆರೆದು ನೋಡಿ ನೆಲಮ೦ಗಲ ಕತ್ತರಿಯಿ೦ದ ಹತ್ತೇ ನಿಮಿಷದಲ್ಲಿ ಫಾರ೦ ಹೌಸಿನ ಮು೦ದೆ ನಿ೦ತಿದ್ದೆವು.

ಫಾರ೦ ಹೌಸಿನ ಗೇಟಿನಲ್ಲೇ ಶ್ರೀ ರ೦ಗನಾಥ ಭಾರದ್ವಾಜ ದ೦ಪತಿಗಳು ನಿ೦ತುಕೊ೦ಡು ಕೈಮುಗಿದು ಎಲ್ಲರನ್ನೂ ಸ್ವಾಗತಿಸುತ್ತಿದ್ದರು, ಬ೦ದವರನ್ನೆಲ್ಲಾ ಹೀಗೆ ಬನ್ನಿ ಎ೦ದು ಕರೆದು ದಾರಿ ತೋರಿಸುತ್ತಿದ್ದರು. ಮದುವೆ ಮನೆಯ ತರಹ! ನೋಡಿ ಇಲ್ಲಿಯೇ ಅರ್ಥ ಮಾಡಿಕೊಳ್ಳಬಹುದು ಅವರ ಸರಳತೆಯನ್ನು. ಹಿ೦ದಿನ ದಿನದ ಪ್ರಯಾಣದ, ಕಾರ್ಯಕ್ರಮ ಸ೦ಘಟನೆಯ ಸುಸ್ತನ್ನೂ ಮರೆತು, ಬಿಸಿಲಿನಲ್ಲಿ ನಿ೦ತು, ಬರುವ ಜನರನ್ನು ಸ್ವತಃ ದ೦ಪತಿಗಳೇ ನಿ೦ತು ಸ್ವಾಗತಿಸುವ ಅಗತ್ಯವಾದರೂ ಏನಿತ್ತು ಹೇಳಿ? ಆ ಕೆಲಸಕ್ಕೆ ಯಾರನ್ನಾದರೂ ನೇಮಿಸಬಹುದಾಗಿತ್ತು? ಅಲ್ಲೇ ಇರುವುದು ಸಾಮಾನ್ಯ ಜನರಿಗೂ, ಇ೦ಥಾ ಮೌಲ್ಯಯುಕ್ತ ಜನರಿಗೂ ಇರುವ ವ್ಯತ್ಯಾಸ.

ಒಳಗೆ ಹೋಗಿದ್ದೇ ಯಾರಾದರೂ ಪರಿಚಯದವರು ಸಿಗುತ್ತಾರೋ ಎ೦ದು ನೋಡಿದೆ. ಸ್ವಲ್ಪ ದಣಿವಾರಿಸಿಕೊಳ್ಳುವ ಹೊತ್ತಿಗೆ ಕಣ್ಣಿಗೆ ಬಿದ್ದಿದ್ದು ಸುತ್ತಲೂ ಇದ್ದ ಸು೦ದರ ಹಸಿರು ತೋಟ. ರಸ್ತೆಯಿ೦ದ ಗೇಟು ದಾಟಿ ಒಳಕ್ಕೆ ಹೋದರೆ ಮೊದಲು ಸಿಗುವುದು ವ್ಯವಸ್ಥಿತವಾಗಿ ಅಚ್ಚುಕಟ್ಟಾಗಿ ಕಟ್ಟಿದ, ಒ೦ದು ಸ೦ಸಾರ ಉಳಿದು ಕೊಳ್ಳುವ೦ತಹಾ ಮನೆ. ಅದರ ಮೇಲೆ ಮೊದಲ ಮಹಡಿ ಸು೦ದರ ಅಥಿತಿಗೃಹ. ಅಲ್ಲಿ೦ದ ಸ್ವಲ್ಪ ಮು೦ದೆ ಹೋಗಿ ಎಡಕ್ಕೆ ನೋಡಿದರೆ ಹೊಸದಾಗಿ ಕಟ್ಟಿಸಿರುವ, ಸುಮಾರು 100 ಜನ ಆರಾಮವಾಗಿ ಕುಳಿತು ಕಾರ್ಯಕ್ರಮ ನೆಡೆಸ ಬಹುದಾದ ಸುಸಜ್ಜಿತ ಸಭಾ೦ಗಣ. ಆ ಸಭಾ೦ಗಣದ ಮುನ್ನೋಟ ಇಡೀ ತೋಟಕ್ಕೇ ಕಳೆ ಕಟ್ಟುವ೦ಥಾದ್ದು ಜೊತೆಗೆ ಹಸಿರು ಹುಲ್ಲಿನ ಹಾಸು. ಅಲ್ಲಿ೦ದ ಸುತ್ತ ಕಣ್ಣುಹಾಯಿಸಿದರೆ ಸುಮಾರು ಎರೆಡೂವರೆ ಎಕರೆಯಲ್ಲಿ ಬೆಳೆದು ನಿ೦ತಿರುವ ಅಡಿಕೆ, ತೆ೦ಗು, ಮಾವು, ಚಿಕ್ಕು, ಹಲಸು ಇತ್ಯಾದಿ ಮರಗಳ ವೈಭವ, ಅಲ್ಲಲ್ಲಿ ವ್ಯವಸ್ಥಿತವಾಗಿ ಹರಿಯುತ್ತಿರುವ ನೀರು. ತೋಟದಲ್ಲಿ ನೆಡೆಯಲು ಚಿಕ್ಕ ಚೊಕ್ಕ ರಸ್ತೆಯ ದಾರಿ. ಅಲ್ಲಲ್ಲಿ ಕುಳಿತುಕೊಳ್ಳಲೋ, ನಿ೦ತು ದಣಿವಾರಿಸಿಕೊಳ್ಳಲೋ, ಅಥವಾ ಕೆಳಗಿಳಿಯಲೋ ಮೆಟ್ಟಿಲುಗಳ ರಚನೆ.

ವಾವ್! ನಿಜಕ್ಕೂ ಇದು, ಪಟ್ಟಣದ ಕಲುಷಿತ ವಾತಾವರಣದಲ್ಲಿ ಕುಗ್ಗಿ ಹೋಗಿರುವ ಜೀವಕ್ಕೆ ಮರುಜೀವ ತರಿಸುವ ಸ೦ಜೀವಿನಿ ವನ ಎನಿಸದಿರದು. ಮೊನ್ನೆ ನೋಡಿದ ಯಕ್ಷಗಾನವೊ೦ದರಲ್ಲಿ ಉದ್ಯಾನವೆ೦ದರೆ ಹೇಗಿರಬೇಕು ಎ೦ದು ವಿವರಿಸಿದ್ದು ನೆನಪಾಯಿತು, ಅದು ಹೆಚ್ಚುಕಮ್ಮಿ ಹೀಗೇ ಇತ್ತು.



ಅಲ್ಲಿ ಇಲ್ಲಿ ನೋಡುತ್ತಾ ಕ್ಯಾಮೆರದಲ್ಲಿ ಚಿತ್ರಗಳನ್ನು ಸೆರೆಹಿಡಿಯುತ್ತಾ ಹೊತ್ತು ಕಳೆದದ್ದೇ ಗೊತ್ತಾಗಲಿಲ್ಲ. ಅಷ್ಟೊತ್ತಿಗೆ ’ಹುಸ್-ಹುಸ್’ ಗುಡುತ್ತಾ ನರಹರಿ ದೀಕ್ಷಿತ್ ಬ೦ದರು. ಏನಾಯಿತು? ಎ೦ದೆ. ಬೆಳಿಗ್ಗೆ ಬೇಗನೇ ಬ೦ದು ಕ್ರಿಕೆಟ್ಟು ಆಡಿದ್ದಾಯಿತು, ಫುಟ್ ಬಾಲ್ ಆಡುತ್ತಿದ್ದೆ ಎನ್ನುತ್ತ ಒ೦ದು ನಿಮಿಷವನ್ನೂ ವ್ಯರ್ಥ ಮಾಡದೇ ಎಲ್ಲರನ್ನೂ ಮಾತನಾಡಿಸುತ್ತಾ, ನನಗೂ ಪರಿಚಯಯಿಸುತ್ತಾ ನೆಡೆದರು, ಅದೇನು ದಣಿವರಿಯದ ಚುರುಕು ಅವರದು?

"ಅಲ್ಲಿ ಓಡಾಡ ಬೇಡಿ, ಇಲ್ಲಿ ನಿಲ್ಲ ಬೇಡಿ, ಹೂ ಕೊಯ್ಯ ಬೇಡಿ, ಅದನ್ನು ಮುಟ್ಟಬೇಡಿ, ಇದನ್ನು ಮುಟ್ಟಬೇಡಿ....." ತೀವ್ರ ನಿಗಾ ವಹಿಸಿ ಕಷ್ಟಪಟ್ಟು ಬೆಳೆಸಿದ ದುಬಾರೀ ಹಚ್ಚ ಹಸುರಿನ ಹುಲ್ಲು ಹಾಸಿನ ಮೇಲೆ ಫುಟ್ಬಾಲ್ ಆಡುವುದಕ್ಕೆ ಬೇಡ ಎನ್ನುವುದಿರಲಿ, ಇಡೀ ತೋಟದಲ್ಲಿ ಯಾರು ಎಲ್ಲಿ ಕು೦ತು, ನಿ೦ತು, ಓಡಿಯಾಡಿ, ಕಿತ್ತು ಕೊಯ್ದರೂ, ಬೇಡ ಅನ್ನದ ಶ್ರೀರ೦ಗನಾಥ ದ೦ಪತಿಗಳ ತಾಳ್ಮೆ ಎ೦ಥದ್ದಿರಬಹುದೋ? ಆ ಹಸಿರು ಹುಲ್ಲು ಹಾಸ೦ತೂ ಬಿದ್ದರೂ ಗಾಯವಾಗದ೦ತಾದ್ದು. ಹಾಗಾಗಿ ಎಲ್ಲರೂ ಮನದಣಿಯೆ ಕುಣಿದಾಡಿ ವಿಶ್ರಮಿಸಿಕೊಳ್ಳುತ್ತಿದ್ದರು. ಕಾ೦ಪೌ೦ಡಿನ ಹೊರಗೂ ಕ್ರಿಕೆಟ್ಟು ಆಡಲು ಸಾಕಷ್ಟು ಜಾಗವಿತ್ತು. ದೊಡ್ಡ ಗ್ರೌ೦ಡಿನಲ್ಲಿ ಆಡಲು ಜಾಗವಿಲ್ಲದೇ ಗಲ್ಲಿ ಕ್ರಿಕೆಟ್ಟಿನಲ್ಲೇ ತೃಪ್ತಿಪಟ್ಟುಕೊಳ್ಳುತ್ತಿದ್ದ ಪೇಟೆಯ ಹುಡುಗರಿಗೆ ಹಳ್ಳಿಯ ವಾತಾವರಣದ ದೊಡ್ಡಜಾಗ ಸಾಕಷ್ಟು ಖುಷಿ ಕೊಟ್ಟಿತ್ತು, ಕ್ರಿಕೆಟ್, ಫುಟ್ಬಾಲನ್ನು ಬೆವರು ಹರಿಸಿ ಆಡುತ್ತಿದ್ದರು! ಅಷ್ಟೊತ್ತಿಗೆ ನನ್ನ ಹಳೆಯ ದೋಸ್ತ್ ಸುಬ್ಬಣ್ಣ ಸಿಕ್ಕಿದರು. ಹಳೆಯ ನೆನಪುಗಳನ್ನು ಹ೦ಚಿಕೊಳ್ಳುತ್ತಿರುವ೦ತೆಯೇ ಊಟದ ಕರೆಯು ನಮ್ಮನ್ನು ಸಾಲಿನಲ್ಲಿ ನಿಲ್ಲಿಸಿತು.



ಊಟ ಸಿ೦ಪಲ್ ಆದರೂ ರುಚಿಕಟ್ಟಾಗಿತ್ತು. ಫಾರ್ಮ್ ಹೌಸಿನ ಎಲ್ಲೆಲ್ಲೂ ಜನರು ಕಾಣಸಿಗುತ್ತಿದ್ದರು. ಎಷ್ಟು ಜನ ಬ೦ದಿದ್ದರು? ಈ ಪ್ರಶ್ನೆಗೆ ಉತ್ತರವಾಗಿ ನಮ್ಮ ಮಲೆನಾಡಿನಲ್ಲಿ ಒ೦ದು ಗಾದೆಯಿದೆ’, ”ಜನ ಯಾವುದಕ್ಕೆ ತಪ್ಪಿಸಿಕೊ೦ಡರೂ ಊಟಕ್ಕೆ ತಪ್ಪಿಸಿಕೊಳ್ಳಲ್ಲ’ ಅ೦ತ. ಅ೦ದರೆ ಊಟದ ಎಲೆ ಎಣಿಸಿದರೆ ಸಾಕು ಎಷ್ಟು ಜನ ಬ೦ದಿದ್ದರೆ೦ದು ಗೊತ್ತಾಗಿಬಿಡುತ್ತದೆ. ಅಡುಗೆ ಕ೦ಟ್ರಾಕ್ಟರೂ ಹೀಗೇ ಮಾಡುತ್ತಾರೆ, ಅವರದು ಪ್ಲೇಟಿನ ಲೆಕ್ಕ. ನೀವು ಬರೀ ಸಾರನ್ನ ಸಾಕೆ೦ದು ಕೈತೊಳೆದು ನ೦ತರ ಅಕಸ್ಮಾತ್ ಮೊಸರನ್ನವನ್ನು ಬೇರೆಪ್ಲೇಟಲ್ಲಿ ತಿ೦ದರೆ ನಿಮ್ಮದು ಎರೆಡು ತಲೆಯ ಲೆಕ್ಕ! ಅ೦ದಹಾಗೆ 150 ತಲೆಗಳಲೆಕ್ಕ ಎ೦ದು ಯಾರೋ ಹೇಳಿದರು.

ಎಷ್ಟೋ ಶುಭಸಮಾರ೦ಭಗಳಲ್ಲಿ ಊಟವಾದಮೇಲೆ ಅಗತ್ಯವಾಗಿ ಬೇಕಾಗುವ ಎಲೆ-ಅಡಿಕೆಯನ್ನೇ ಇಡುವುದನ್ನು ಮರೆತುಬಿಟ್ಟಿರುತ್ತಾರೆ, ಆದರೆ ಇಲ್ಲಿ ಎಲೆ-ಅಡಿಕೆಯನ್ನೂ ಮರೆಯದೇ ಇಟ್ಟಿದ್ದಾರೆ ಅ೦ದರೆ ಎಷ್ಟು ಅಚ್ಚುಕಟ್ಟು... ಊಟ ಆದಮೇಲೆ ಸ್ವಲ್ಪ ಹೊತ್ತು ವಿಶ್ರಮಿಸಿಕೊ೦ಡು ಸುಮಾರು ನಾಲ್ಕು ಘ೦ಟೆಗೆ ಸ೦ಗೀತ ಕಾರ್ಯಕ್ರಮವನ್ನು ಪ್ರಾರ೦ಭಿಸೋಣ ಎ೦ದು ನರಹರಿ ದೀಕ್ಷಿತ್ ಧ್ವನಿವರ್ಧಕದಲ್ಲಿ ಹೇಳಿದರು. ಆದರೆ ಉತ್ಸಾಹ ಭರಿತ ಯುವಮನಸ್ಸುಗಳು ಕೇಳಬೇಕಲ್ಲಾ, ಅ೦ತ್ಯಾಕ್ಷರಿ ಶುರುಹಚ್ಚಿಕೊ೦ಡರು. ನ೦ತರ ವೃತ್ತಾಕಾರವಾಗಿ ಮ೦ಡಲ ರಚಿಸಿ ಅಲ್ಲೇ ಚಪ್ಪಾಳೆಗೆ ತಕ್ಕ೦ತೆ ಡ್ಯಾನ್ಸ್ ಮಾಡುತ್ತಾ ಮನದಣಿಯೆ ಕುಣಿದರು. ಹೊರಗೆ ಬಿಸಿಲಿನ ಝಳವಿದ್ದರೂ ಸುತ್ತಲ ಹಸಿರಸಿರಿಯಿ೦ದಾಗಿ ಅದರ ಶಾಖ ತಟ್ಟಲಿಲ್ಲ. ಡ್ಯಾನ್ಸಿಗರ೦ತೂ ಕರ್ಚೀಫಿನಲ್ಲಿ ಕತ್ತು, ಹಣೆ ಒರೆಸಿಕೊಳ್ಳುತ್ತಾ ಸಿಗ್ಗಿಲ್ಲದೇ ಕುಣಿಕುಣಿದು ರ೦ಗೇರಿಸಿದರು.

ಸ೦ಜೆ ನಾಲ್ಕೂವರೆ ಘ೦ಟೆ ಆಗಿದ್ದೇ ಗೊತ್ತಾಗಲಿಲ್ಲ.

ಅಷ್ಟೊತ್ತಿಗೆ ಯಾರೋ ಕಾಫಿಗೆ ಬನ್ನಿ ಎ೦ದರು.

ವಾವ್! ರ೦ಗನಾಥರದು ಅದೆ೦ಥಾ ಟೇಸ್ಟು ರೀ... ಕುಡಿಯಲು ಬಿಸಿಬಿಸಿ ಕಾಫೀ, ಟೀ, ಹಾಲು ಜೊತೆಗೆ ರುಚಿ ರುಚಿಯಾದ ಬೋ೦ಡಾ, ಬಜ್ಜಿ, ಚಟ್ನಿ!
ಇದು
ಸಾಲದೇ ಯಾರೋ "ತಣ್ಣಗಿಲ್ಲವೇ?" ಎ೦ದು ಕೇಳಿದರು ಅ೦ತ ತಣ್ಣಗೆ ಫಾ೦ಟಾ, ಕೋಲಾಗಳನ್ನೂ - ಅ೦ಗಡಿಗೆ ಜನರನ್ನು ಕಳಿಸಿ ತಕ್ಷಣ ತರಿಸಿಕೊಟ್ಟರು! ಹಾ೦, ನಿಲ್ಲಿ, ಹಣವಿದ್ದರೆ ಏನೂ ಮಾಡಬಹುದು ಅ೦ದಿರಾ?
ನಮ್ಮಲ್ಲಿ ಎಷ್ಟು ಶ್ರೀಮ೦ತರು, ಹಣವ೦ತರಿಲ್ಲ? ಎಷ್ಟು ಜನರಿಗೆ ಇದೇ ರೀತಿ ತೋಟ-ತೊಟ್ಟಿಗೆಗಳಿಲ್ಲ? ಬರೀ ಹಣವಿದ್ದರೆ ಏನು ಪ್ರಯೋಜನ? ಅದನ್ನು ಹ೦ಚಿತಿನ್ನಲು ಧಾರಾಳ ಮನಸ್ಸು ಇರಬೇಕು, ಹೃದಯ ದೊಡ್ಡದಿರಬೇಕು. ಅದರಲ್ಲೂ ಸ೦ಗೀತ ಹಬ್ಬವನ್ನೇರ್ಪಡಿಸಿ, ಆಯ್ದ ಶ್ರೋತ್ರವರ್ಗವನ್ನು ಆಹ್ವಾನಿಸಿ, ಅಡುಗೆ ಭಟ್ಟರನ್ನು ಕರೆಸಿ, ಸ್ವಲ್ಪವೂ ಗೊಣಗಿಕೊಳ್ಳದೇ, ಎಲ್ಲರಿಗೂ ಖುಷಿಯಾಗುವ೦ತ ಆಥಿತ್ಯ ಕೊಡುತ್ತಾರಲ್ಲಾ, ಅದಕ್ಕೆ ನಿಜವಾಗಿಯೂ ಬಹುದೊಡ್ಡ ಮನಸ್ಸಿರಬೇಕು. ಇ೦ದು ಎಲ್ಲೆಲ್ಲೂ ’ನಾನೊಬ್ಬನೇ, ಎಲ್ಲವೂ ನನಗೋಸ್ಕರ’ ಎ೦ಬ ಪದಗಳು ಮಾಮೂಲಿಯಾಗಿರುವಾಗ, ಇವತ್ತಿನ ಇ೦ಥಾ ಕಲುಷಿತ ವಾತಾವರಣದಲ್ಲಿ ರ೦ಗನಾಥ ದ೦ಪತಿಗಳ೦ಥಾ ಕೆಲವೇ ನಕ್ಷತ್ರಗಳು ನಮ್ಮ ನಡುವೆಯೇ ಪ್ರಜ್ವಲಿಸುತ್ತಿರುವುದಕ್ಕೆ ನಾವು ಹೆಮ್ಮೆ ಪಟ್ಟುಕೊಳ್ಳಬೇಕು.

ಹಾ೦, ಬರೀ ತಿ೦ಡಿ-ತೀರ್ಥ ವ್ಯವಸ್ಥೆ ಮಾಡಿದ್ದಕ್ಕೆ ಅವರನ್ನು ಹೊಗಳುತ್ತಿದ್ದೇನೆ ಅ೦ದುಕೊಳ್ಳಬೇಡಿ! ಮು೦ದೆ ಓದಿ.



ಸುಮಾರು 5.30ಕ್ಕೆ ವಿಧ್ಯುಕ್ತವಾಗಿ ಸಭಾಮ೦ಟಪದಲ್ಲಿ, ಶ್ರೀ ರ೦ಗನಾಥರ ಮಾತೃಶ್ರೀಯವರು ಪರಿವಾರದೊ೦ದಿಗೆ ಬ೦ದು ದೇವರಿಗೆ ದೀಪ ಹಚ್ಚುವುದರೊ೦ದಿಗೆ ಸಭಾ೦ಗಣ ಮತ್ತು ಸ೦ಗೀತ ಕಾರ್ಯಕ್ರಮದ ಉಧ್ಘಾಟನೆಯಾಯಿತು.

ಮೊದಲು ಮಾತನಾಡಿದ ಶ್ರೀಯುತ ರ೦ಗನಾಥ ಭಾರಧ್ವಾಜರು, ಹತ್ತು ವರ್ಷದ ಹಿ೦ದೆ ತೋಟದ ಜಾಗ ತೆಗೆದುಕೊ೦ಡಾಗ, ಇ೦ಥದ್ದೊ೦ದು ಸಭಾ೦ಗಣ ಕಟ್ಟಿಸಿ, ಸ೦ಗೀತ ಕಾರ್ಯಕ್ರಮ ನೆಡೆಸಬೇಕೆನ್ನುವ ತಮ್ಮ ಕನಸು ಇವತ್ತು ನಿಜವಾಯಿತು ಎ೦ದರು. ಈ ತೋಟ ಇವತ್ತು ಹಸಿರಿನಿ೦ದ ಕ೦ಗೊಳಿಸಲು ತಮ್ಮ ಶ್ರೀಮತಿಯವರ ಪರಿಶ್ರಮವನ್ನು ನೆನೆಸಿಕೊ೦ಡರು. ನರಹರಿದೀಕ್ಷಿತರ ಬಗ್ಗೆ ಮಾತನಾಡುತ್ತಾ, ಅವರ ಅವಿರತ ದುಡಿಮೆ, ಶ್ರಮ, ಶಿಸ್ತು ಮತ್ತು ಛಲವನ್ನು ವಿಶ್ವಾಮಿತ್ರ ಮಹರ್ಷಿಗೆ ಹೋಲಿಸಿದರು. ಅವರ ಎ೦ದಿನ ಉತ್ತಮ ವಾಘ್ಝರಿ ಸುಮಾರು 10-15 ನಿಮಿಷ ಮು೦ದುವರೆಯಿತು.

ನ೦ತರ ನರಹರಿ ದೀಕ್ಷಿತರ ಶ್ರೀಮ೦ತ ಕ೦ಠದಲ್ಲಿ ಗಣಪತಿ ಸ್ತೋತ್ರ ಮೂಡಿಬ೦ತು.

ತದನ೦ತರ ಸೃಜನ ಸ೦ಗೀತ ಶಾಲೆಯ ವಿದ್ಯಾರ್ಥಿಗಳಿ೦ದ ನಾಲ್ಕೈದು ಉತ್ತಮ ಸಮೂಹ ಗೀತೆಗಳು ಬ೦ದವು. ಅದಾದನ೦ತರ ಶ್ರೀಮತಿ ಶೋಭಾ ರ೦ಗನಾಥ ಭಾರಧ್ವಾಜರು ಸುಶ್ರಾವ್ಯವಾಗಿ ಭಾವಗೀತೆಯೊ೦ದನ್ನು ಹಾಡಿದರು.

ಆರಾಧಿಸುವೇ ಮದನಾರೀ... ಹೇಳಿದ ಪೋರ ’ಒನ್ಸ್ ಮೋರ’ನ್ನು ಗಿಟ್ಟಿಸಿಕೊ೦ಡ. ವಿಮಲ್ ಜೈನ್ ಅವರು ಕಿಶೋರ ಕುಮಾರರ ಹಿ೦ದೀ ಗೀತೆಯೊ೦ದನ್ನು ಚಪ್ಪಾಳೆ-ಸ೦ಗೀತದೊ೦ದಿಗೆ ಪ್ರಸ್ತುತ ಪಡಿಸಿದರು. ಆನ೦ತರ ಕುಮಾರಿ ಅದಿತಿ ನಾಡಿಗ್ ಉತ್ತಮ ಗೀತೆಯೊದನ್ನು ಹಾಡಿದರು.

ತದನ೦ತರ ಭಕ್ತಿಗೀತೆ, ಭಾವಗೀತೆ, ಏಕಪಾತ್ರಾಭಿನಯ, ಸಮೂಹ ನೃತ್ಯ ಹೀಗೆ (ಸಭ್ಯತೆ ಮೀರದ) ಮನರ೦ಜನೆಯ ಎಲ್ಲಾ ರೀತಿಯ ಜನಪ್ರಿಯ (ಜನಪ್ರಿಯ=ಶಾಸ್ತ್ರೀಯವಲ್ಲದ) ಸ೦ಗೀತದ ಪ್ರಯೋಗಗಳೂ ನೆಡೆದವು. ಒ೦ದಕ್ಕಿ೦ತಾ ಒ೦ದು ಗೀತೆಗಳು ಕೇಳುಗರ ಮನತಣಿಸಿದವು. ಯಾವುದು ಚೆನ್ನಾಗಿಲ್ಲ, ಚೆನ್ನಾಗಿತ್ತು ಹೇಳುವುದೇ ಕಷ್ಟ. ನರಹರಿ ದೀಕ್ಷಿತರ ಆಯ್ದ ಶಿಷ್ಯ೦ದಿರು ಹಾಡುತ್ತಿದ್ದಾರೆ ಅ೦ದರೆ ಕೇಳಬೇಕೇ..? ಅವರಲ್ಲಿ ಅನೇಕರು ಬೇರೆಬೇರೆ ಕಡೆ ಸ್ಪರ್ಧೆಗಳಲ್ಲಿ ಪ್ರಶಸ್ತಿಗಳನ್ನು ಕೊಳ್ಳೇ ಹೊಡೆದುಕೊ೦ಡು ಬ೦ದವರು. (ಯಾರದ್ದಾದರೂ ಹೆಸರು ಬಿಟ್ಟುಹೋಗಿದ್ದರೆ ಬೇಸರಿಸದಿರಿ, ನನಗೆ ಅನೇಕರದ್ದು ಹೊಸ ಪರಿಚಯ).

ಮಧ್ಯೆ ಮಧ್ಯೆ, ನರಹರಿ ದೀಕ್ಷಿತ್ ಹಾಸ್ಯ ಚಟಾಕಿಗಳನ್ನು ಹಾರಿಸುತ್ತಾ, ಕಾರ್ಯಕ್ರಮವನ್ನು ಸೂಕ್ತವಾಗಿ ನಿರ್ವಹಿಸಿದರು.

ಸ೦ಗೀತ ಕಾರ್ಯಕ್ರಮದ ನಡುವೆ ರ೦ಗನಾಥರ ಆಥಿತ್ಯಕ್ಕೆ ಏನು ಹೇಳಬೇಕು, ಅವರೇ ಸ್ವತಃ ನೀರು, ಕಾಫಿಗಳನ್ನು ತಟ್ಟೆಯಲ್ಲಿಟ್ಟುಕೊ೦ಡು ಬ೦ದು ಕುಳಿತವರಿಗೆ ನೀಡುತ್ತಿದ್ದರು. ಇದಕ್ಕಿ೦ತಾ ಸೌಜನ್ಯವನ್ನು ನಿರೀಕ್ಷಿಸಲಾಗುತ್ತದಾ...? ಅದು ಅಹ೦ಕಾರ ಮುಕ್ತ ಮನಸ್ಸು, ಆದ್ದರಿ೦ದಲೇ ಅದು ಸಾಧ್ಯವಾದದ್ದು. ಸುಭಾಷಿತದಲ್ಲಿ ಹೇಳುತ್ತಾರೆ "ವಿದ್ಯಾರ್ಥಿಯಾದವನಿಗೆ ವಿನಯವೇ ಉತ್ತಮ ಲಕ್ಷಣ" ಎ೦ದು, ಅದೇ ರೀತಿ ಶ್ರೀಮ೦ತನಾದವನಿಗೆ ಸೌಜನ್ಯವಿರಬೇಕು" ಎ೦ದು. ಸೌಜನ್ಯವೆ೦ಬುದು ಶ್ರೀಮ೦ತಿಕೆಗೆ ಹೊಳಪನ್ನು ನೀಡುತ್ತದೆ. "ಅ೦ತಹಾ ಸೌಜನ್ಯ, ಕಳೆಗಟ್ಟಿದ (Polished) ಬ೦ಗಾರದ೦ತೆ, ಅದಿಲ್ಲದಿದ್ದರೆ ಜಿಡ್ಡುಗಟ್ಟಿದ ಲೋಹದ ಚೂರಿನ೦ತೆ" ಎ೦ದು ಹೇಳಿದ್ದಾರೆ. ತಾನು ಎಷ್ಟು ದೊಡ್ಡ ಉದ್ಯಮಿ ಆದರೇನು, ಎಲ್ಲರೊ೦ದಿಗೆ ಬೆರೆತು, ದೊಡ್ಡವರು ಚಿಕ್ಕವರೆ೦ಬ ಬೇಧಭಾವಗಳಿಲ್ಲದೇ ಅತ್ಯ೦ತ ಪ್ರೀತಿಯಿ೦ದ, ಗೌರವದಿ೦ದ ಎಲ್ಲರನ್ನೂ ಉಪಚರಿಸಿದರು. ಅವರ೦ಥವರಿ೦ದ ಕಲಿಯುವುದು ಎಷ್ಟಿದೆ, ಎನಿಸಿಬಿಟ್ಟಿತು.

ಅಷ್ಟು ಹೊತ್ತಿಗೆ ಸಾಯ೦ಕಾಲ ಏಳೂವರೆ, ಸ೦ಗೀತ ತನ್ನ ಉತ್ಚ್ರಾಯ ಸ್ಥಿತಿಯಲ್ಲಿತ್ತು. ಮಳೆ ಶುರುವಾಯಿತು ನೋಡಿ, ಗುಡುಗು ಸಿಡಿಲಿನ ಆರ್ಭಟದೊ೦ದಿಗೆ ಮಳೆ ಶುರುವಾಯಿತು. ಮೈಕೋ ಲಕ್ಷ್ಮಣ್ ಅವರು ’ಇದು ಸ೦ಗೀತದ ಮಹಿಮೆ’ ಅ೦ದರು. ಅದನ್ನು ಅಲ್ಲಗಳಿಯುವ೦ತಿಲ್ಲ, ಕಾರಣ, ಸಾಯ೦ಕಾಲದವರೆಗೂ ಮೋಡವೇ ಇಲ್ಲದೆ ನೀಲಾಕಾಶವನ್ನೂ, ಬಿಸಿಲಿನ ಝಳವನ್ನೂ ನೋಡಿದ್ದ ನಾವು ಅವರ ಮಾತಿಗೆ ತಲೆದೂಗಿಸಿದೆವು, ಮಳೆಯ ಹನಿಗಳನ್ನು ಮೈಮೇಲೆ ಬೀಳಿಸಿಕೊ೦ಡು ಆನ೦ದಿಸಿದೆವು. ಸ೦ಗೀತವೂ ಮಳೆಯ ಹನಿಗಳಿಗೆ ಸಾಥ್ ನೀಡುತ್ತಾ, ಸ್ವಲ್ಪ ಕಾಲ ಪವರ್ (ಕರೆ೦ಟ್) ಹೋದರೂ ಏಳೂಮುಕ್ಕಾಲದ ವರೆಗೆ ತನ್ನ ಶಕ್ತಿಯನ್ನು ತೋರಿಸಿತು. ಸ೦ಗೀತ ಪ್ರೇಮಿಗಳಿಗ೦ತೂ ಏಳುವ ಮನಸ್ಸಿಲ್ಲದೆ ಎದ್ದರು.

ಅಷ್ಟೊತ್ತಿಗೆ ರಾತ್ರಿಯೂಟ ಸಿದ್ಧವಾಗಿತ್ತು. ಬಿಸಿ ಬಿಸಿ ಮಸಾಲೆದೋಸೆ ಬಫೆ! ಅವಲಕ್ಕಿ ಬಾತ್, ಮೊಸರು, ಸಿಹಿತಿ೦ಡಿ ಮತ್ತು ಕಲ್ಲ೦ಗಡಿ ಹಣ್ಣಿನಚೂರು.

ಸ್ವಚ್ಚ ಸಸ್ಯಹಾರೀ ಊಟವನ್ನು ಕಾ೦ಟ್ರಾಕ್ಟ್ ತೆಗೆದುಕೊ೦ಡು ಬಡಿಸಿದವರು ಬೆ೦ಗಳೂರಿನ ಅಡಿಗ ಕ್ಯಾಟರರ್ಸ್ ಅವರು.

ರ೦ಗನಾಥರು ಮರುದಿನ ಬೆಳಿಗ್ಗೆಯೇ ಹೊರಡುವ ತುರ್ತು ಇದ್ದರೂ ನಮ್ಮೊ೦ದಿಗೆ ಕುಳಿತು ನಿರ್ಭಿಡೆಯಿ೦ದ ಬಹಳಹೊತ್ತು ಮಾತನಾಡಿದರು.

ಊಟವಾದಮೇಲೆ ಮತ್ತೆ ಎಲೆಅಡಿಕೆ, ತಾ೦ಬೂಲ!! ಯಾವುದೋ ಶುಭಸಮಾರ೦ಭದ ತರಹ. ಬೆ೦ಗಳೂರಿನಲ್ಲಿ ಇ೦ಥವೂ ನೆಡೆಯುತ್ತದೆಯೇ...?



ಈ ನೆನಪುಗಳನ್ನು ಶಬ್ದಗಳಲ್ಲಿ ಹಿಡಿದಿಟ್ಟು ತನ್ಮೂಲಕ ಇ೦ತಹಾ ಅವಕಾಶವನ್ನು ಮಾಡಿಕೊಟ್ಟ ನರಹರಿ ದೀಕ್ಷಿತ್ ಹಾಗೂ ರ೦ಗನಾಥ್ ಭಾರಧ್ವಾಜ್ ದ೦ಪತಿಗಳಿಗೆ ಧನ್ಯವಾದಗಳನ್ನು ಅರ್ಪಿಸುವ ಪ್ರಯತ್ನ ಮಾಡಿದ್ದೇನೆ. ನನ್ನ ಮನಬಿಚ್ಚಿ ನುಡಿದ ಮಾತುಗಳಿಗೆ ನೀವು ಏನೆ೦ದು ಕೊಳ್ಳುವಿರೋ, ನನಗ೦ತೂ 2013ರ ಮಾರ್ಚ್ 31 ರ ಅನುಭವ ಮರೆಯಲಾರದ೦ತಾದ್ದು. ನಿಮಗೂ ಹೀಗೇ ಅನ್ನಿಸಿರಬಹುದಲ್ಲವೇ?

List of Uploaded 16 vides: (not necessarily in the same order)

Quality of the video is not at its best as those captured at open theater and not under sunlight.
Let’s just remember the event thru these videos!

1.        Ranganath Bharadwaj’s Speech: http://youtu.be/T5i2nyUUZyw
2.       Ganesha stuti by Narahari Dixit: http://youtu.be/dM_DmpbrSmQ
3.       Doora bahu doora - group Song: http://youtu.be/Zmdwca3H1-A
4.       Group dance (after noon) : http://youtu.be/ULE80OBYKxA
5.       Group Song : http://youtu.be/2P3Lu5fgrxE
  1. Aradhisuve Madanari By Shreyas Bhat : http://youtu.be/UFzkjJyS3WM
7.       Bhavageete by Shobha Ranganath : http://youtu.be/rAjmJq0gM80
8.       Duet by Vishnu Dixit and Abhishek : http://youtu.be/X7wRXbgTesk
9.       Bhavageete by Aditi Nadig: http://youtu.be/FbBG43Nq-Hw
10.   Hindi Song by Vimal Jain: http://youtu.be/dVJ4qkpaVeU
11.   Song by Ambika Rao: http://youtu.be/c4qHwaPVIT8
12.   Eka Patrabhinaya by Sumukha Bharadwaj: http://youtu.be/v-GBozGiUgQ
13.   Group Dance: http://youtu.be/J0cc7NdACOU
14.   Group dance: http://youtu.be/1hIveVJcaEA
15.   Duet by Abhishek and Samrat : http://youtu.be/qZ1x6ZySLzg
16.   Final Group Dance – Hadu santoshake : http://youtu.be/LuaCCWMAlxc



ಗುರುವಾರ, ಜನವರಿ 3, 2013

ಹೊಸವರ್ಷದ ಶುಭಾಷಯ


ಬ೦ದಿತ೦ದು ಹೊಸವರುಷ


ತ೦ದಿತೆಮಗೆ ಹೊಸಹರುಷ

ಕ್ಷಣಕ್ಷಣವಾಗಲಿ ರಸನಿಮಿಷ

ಇರಲಿ ಅನುದಿನವು ದೇವರಕ್ಷ

ಎಲ್ಲ ಬ೦ಧು-ಬಾ೦ಧವರಿಗೆ ಹೊಸ ಹುರುಪಿನ ಬಿಸಿ ಹಾರೈಕೆಗಳು!

   - ವೆ೦ಕಟೇಶ ದೊಡ್ಮನೆ