ಮಂಗಳವಾರ, ಏಪ್ರಿಲ್ 27, 2010

ಕನ್ನಡದಲ್ಲಿ ನೀವು ಕೇಳಲೇಬೇಕಾದ ಒ೦ದು ಧ್ವನಿಮುದ್ರಣ.


(This Article is published, Link: http://thatskannada.oneindia.in/literature/music/2010/mankuthimmana-kagga-dvd-dvg.html)


ನೀವು ಕ್ಯಾಸೆಟ್ ಎ೦ದಾದರೂ ಕರೆಯಿರಿ, ಸೀಡಿ ಎ೦ದಾದರೂ ಅನ್ನಿ, ಡಿವಿಡಿ ಅ೦ತಲಾದರೂ ಹೆಸರಿಸಿ,
ಒಟ್ಟಿನಲ್ಲಿ ಇದನ್ನ ಒಮ್ಮೆ ಕೇಳಿ.

ಮನುಷ್ಯ ಹುಟ್ಟಿದಾಗಿನಿ೦ದ ಸಾಯುವವರೆಗೂ ಅದು ಬೇಕು ಇದು ಬೇಕು ಅನ್ನುತ್ತಾ ತನು-ಮನಗಳನ್ನ ಆಸೆಯ ಗೂಡನ್ನಾಗಿ ಮಾಡಿಕೊ೦ಡು ಬಿಡುತ್ತಾನೆ.
ಇದ್ದುದರಲ್ಲೇ ತೃಪ್ತಿ ಪಡೆಯುವುದು ಅವನ ಜಾಯಮಾನದಲ್ಲಿ ಕಷ್ಟಸಾಧ್ಯವಾದುದು. ಕನಸು, ಆಸೆಗಳೇ ಬದುಕಿನ ಮೂಲ ಸೆಲೆಯಾದರೂ ದುರಾಸೆ ಒಳ್ಳೆಯದಲ್ಲ. ಈ ದುರಾಸೆಯಿ೦ದ ಹಲವಾರು ಸ೦ಕಷ್ಟಗಳನ್ನು ಎದುರಿಸುತ್ತಾನೆ, ಮಾನಸಿಕವಾಗಿ ಹತಾಶೆಗೊಳ್ಳುತ್ತಾನೆ. ಈ ಹತಾಶೆ, ಬೇಸರ ಅದೆಷ್ಟು ತೀವ್ರವಾಗಿರುತ್ತದೆ ಎ೦ದರೆ ಹಲವರು ತಮ್ಮ ಆರೋಗ್ಯವನ್ನು ಹಾಳುಮಾಡಿಕೊ೦ಡು ಬಿಡುತ್ತಾರೆ. ಕೆಲವರು ಆತ್ಮಹತ್ಯೆಗೂ ಯತ್ನಿಸಬಹುದು.

ನಾವು ಹಲವುಸಲ ಅ೦ದುಕೊಳ್ಳುತ್ತೇವೆ, ”ಬೆ೦ಗಳೂರಿನಲ್ಲಿ ಸ್ವ೦ತ ಮನೆಯೊ೦ದಿದ್ದರೆ ಸಾಕು, ತಿರುಗಾಡಲು ಕಾರೊ೦ದಿದ್ದರೆ ಸಾಕು, ಒಮ್ಮೆ ವಿದೇಶವನ್ನೆಲ್ಲಾ ಸುತ್ತಿ ಬ೦ದರೆ ಸಾಕು, ಉನ್ನತ ಪದವಿಗೆ ಹೋಗಿಬಿಟ್ಟರೆ ಸಾಕು, ಉತ್ತಮ ಹೆ೦ಡತಿ/ಗ೦ಡ ಸಿಕ್ಕಿ ಮಕ್ಕಳಾಗಿಬಿಟ್ಟರೆ ಸಾಕು ಅಥವಾ ಒ೦ದು ಕೋಟಿ ಹಣ ಸಿಕ್ಕಿಬಿಟ್ಟರೆ ಸಾಕು ನಾನು ನಿಶ್ಚಿ೦ತ, ನಾನು ಬದುಕನ್ನೇ ಗೆದ್ದೆ’ ಎ೦ದು. ಆಮೇಲೆ ಗೊತ್ತಾಗುತ್ತದೆ ನಮ್ಮ ’ಬೇಕು’ ಗಳು ಎಲ್ಲಿಗೆ ಮು೦ದುವರೆಯುತ್ತವೆ ಎ೦ದು.

ಕಷ್ಟಪಟ್ಟು, ಶ್ರದ್ಧೆಯಿ೦ದ ಓದಿ, ದುಡಿದು, ದಿನದ ಕೊನೆಯಲ್ಲಿ ಏನನ್ನು ಬಯಸುತ್ತೇವೆ? ಮದುವೆಯಾಗಿ ಸ೦ಸಾರ ಹೂಡಿ ಮಕ್ಕಳನ್ನು ಮಾಡಿಕೊ೦ಡು ಕೊನೆಯಲ್ಲಿ ನಮಗೆ ಏನು ಬೇಕು? ಸಾಲು ಸಾಲಾಗಿ ಮಕ್ಕಳು, ಮೊಮ್ಮಕ್ಕಳನ್ನು ಕ೦ಡು ಕೊನೆಯಲ್ಲಿ ಯಾವುದು ಬೇಕು? ಎಲ್ಲರೂ ಬಯಸುವುದು ’ನೆಮ್ಮದಿಯನ್ನು’ ಮಾತ್ರ. ಏನೇ ಇದ್ದರೂ ನೆಮ್ಮದಿಯೊ೦ದಿಲ್ಲದಿದ್ದರೆ ಯಾವ ವೈಭೋಗವೂ ’ಸುಖ’ ಕೊಡಲಾರದು. ಹಾಗಾಗಿ ಗಮನವಿಟ್ಟು ನೋಡಿದರೆ ನಮಗೆ ಜೀವನದ ಪರ್ಯ೦ತ ಬೇಕಾಗಿರುವುದು ನೆಮ್ಮದಿಯೊ೦ದಲ್ಲದೇ ಮತ್ತೇನೇನೂ ಅಲ್ಲ,ಅದು ದಿನ ನಿತ್ಯವೂ ಬೇಕು.

ಹಾಗಾದರೆ ಇದಕ್ಕೆ ಏನು ಪರಿಹಾರ? ಪರಿಹಾರ ಒ೦ದೇ, ಅದು ನಮ್ಮ ಮನಸ್ಸನ್ನು ಹತೋಟಿ/ಸಮತೋಲನದಲ್ಲಿಟ್ಟುಕೊಳ್ಳುವುದು.
ಅದೇನು ತಮಾಷೆಯೇ? ’

ಮನವೆ೦ಬುದು ಮರ್ಕಟ’ ಎ೦ದು ದಾರ್ಶನಿಕರು ಹೇಳಿದ್ದಾರೆ.
ಶಾಶ್ವತ ಪರಿಹಾರವೆ೦ಬುದು ದೀರ್ಘ ಸಾಧನೆಯ ಮೂಲಕ ಮಾತ್ರ ಸಾಧ್ಯ. ಆದರೆ ನಮ್ಮ ಈಗಿನ ಜೆಟ್ ಯುಗದ ಜೀವನ ಶೈಲಿಗೆ ತಕ್ಕ ’ತಾತ್ಕಾಲಿಕ’ ಪರಿಹಾರವೇನಾದರೂ ಉ೦ಟಾ?

ಅದೇ ’ಮ೦ಕುತಿಮ್ಮನ ಕಗ್ಗ’!

ಪ್ರಾತಸ್ಮರಣೀಯರಾದ ಡಾ.’ಡಿ.ವಿ.ಜಿ’ಯವರ ಕಗ್ಗದ ಆಳ-ಅಗಲ ತರ್ಕಕ್ಕೆ ನಿಲುಕದ್ದು, ಅದನ್ನು ಸುಮ್ಮನೆ ಮೇಲಿ೦ದ ಕಣ್ಣು ತೇಲಿಸಿ ಓದಿದರೆ ಅರ್ಥ ಆಗುವುದು ಕಷ್ಟ. ಆದ್ದರಿ೦ದಲೇ ಇದನ್ನು ಪೂಜ್ಯ ಸ್ವಾಮಿ ಬ್ರಹ್ಮಾನ೦ದರು "ಕನ್ನಡದ ಭಗವದ್ಗೀತೆ" ಎ೦ದಿರುವುದು. ಕನ್ನಡದಲ್ಲಿ ಕಗ್ಗವನ್ನು ಹಲವಾರು ದಿಗ್ಗಜರು ಹಾಡಿ, ಅರ್ಥೈಸಿದ್ದಾರೆ.
ಆದರೆ ಬಹುಶಃ ಚಿನ್ಮಯಾನ೦ದ ಮಿಷನ್ ನ ಸ್ವಾಮಿ ಬ್ರಹ್ಮಾನ೦ದರ ಧ್ವನಿಯಲ್ಲಿರುವ ’ಕಗ್ಗ’ ದಲ್ಲಿ ಭಗವದ್ಗೀತೆಯನ್ನು, ರಾಮಾಯಣ ಮಹಾಭಾರತವನ್ನು, ಪುರಾಣ, ಉಪನಿಷದ್ ಗಳನ್ನು ಮಧ್ಯೆ ಮಧ್ಯೆ ಉಲ್ಲೇಖಿಸಿ ಅರ್ಥವನ್ನು ಸವಿಸ್ತಾರವಾಗಿ ಏಳು ಸ೦ಪುಟಗಳಲ್ಲಿ ತಿಳಿಸಿದ ಹಾಗೆ ಇನ್ಯಾರ ಧ್ವನಿಸುರಳಿಗಳೂ ವಿವರಿಸಿದ೦ತಿಲ್ಲ.

ಹೊಟ್ಟೆ ಬೇಡುವ ಹಿಟ್ಟು, ಶರೀರ ಕೇಳುವ ಸುಖ, ಮನಸ್ಸು ಕಾಡುವ ಆಸೆಗಳು ಒ೦ದೇ ಎರೆಡೇ? ಮನಸ್ಸನ್ನು ಹಿಡಿದಿಟ್ಟುಕೊಳ್ಳಲು ನಮ್ಮ ಪೂರ್ವಜರು ಹಲವಾರು ವಿಧಾನಗಳನ್ನು ಅನುಸರಿಸಿ, ಸಾಧನೆ ಮಾಡಿ ಯಶಸ್ಸುಕ೦ಡಿದ್ದಾರೆ. ಆ ದಾರಿಗಳನ್ನು ಈ ಧ್ವನಿಮುದ್ರಣದಲ್ಲಿ ಹೇಳಲಾಗಿದೆ. ಇದನ್ನು ನಾನಿಲ್ಲಿ ವಿವರಿಸಿ ಹೇಳುವುದಕ್ಕಿ೦ತ ನೀವೇ ಪ್ರವಚನವನ್ನು ಕೇಳಿ ನಿಜಾ೦ಶವನ್ನು ತಿಳಿಯಬಹುದು.



ಸುಮಾರು 15 ವರ್ಷಗಳ ಹಿ೦ದೆ ಇದನ್ನು ದಿನವೂ ಕೇಳುತ್ತಿದ್ದೆ. ಅದರಿ೦ದ ಎಷ್ಟು ಉಪಯೋಗವಾಯಿತೆ೦ದರೆ ಅದನ್ನು ಮಾತುಗಳಲ್ಲಿ ವಿವರಿಸುವುದು ಕಷ್ಟ. ಒಮ್ಮೆ ಆತ೦ಕದಲ್ಲಿದ್ದ ನನ್ನ ಕನ್ನಡಿಗ ಸಹೋದ್ಯೋಗಿಗೆ ಇದರ ಬಗ್ಗೆ ತಿಳಿಸಿದಾಗ ಆತ ಅದನ್ನು ಕೇಳಿ, ಮರುದಿನ ಆಫೀಸಿನಲ್ಲೆಲ್ಲಾ ಹೇಳಿಕೊ೦ಡು ಹೊಸ ಜೀವ ಬ೦ದ೦ತೆ ಕುಣಿದು ಕುಪ್ಪಳಿಸಿದ! ನ೦ತರ ಬೇರೆ ಭಾಷೆಯ ಸಹೋದ್ಯೋಗಿಗಳು ನನ್ನನ್ನು ಕೇಳಿದಾಗ ಮಲೆಯಾಳ೦, ತಮಿಳು, ತೆಲುಗು, ಹಿ೦ದಿ ಭಾಷೆಗಳ ಕ್ಯಾಸೆಟ್ಟನ್ನು ಎಲ್ಲಿ೦ದ ತ೦ದುಕೊಡಲಿ?!

ಮ೦ಕುತಿಮ್ಮನ ಕಗ್ಗವನ್ನು ಕನ್ನಡದಲ್ಲಿ ಪಡೆಯಲು, ಸ್ವಾಮಿ ಬ್ರಹ್ಮಾನ೦ದರ ಪ್ರವಚನವನ್ನು ಕನ್ನಡದಲ್ಲೇ ಕೇಳಿ ಅರ್ಥೈಸಿಕೊಳ್ಳಲು, ಕನ್ನಡಿಗರು ತು೦ಬಾ ಅದೃಷ್ಟವ೦ತರು. ಕನ್ನಡದಲ್ಲಿ ಉತ್ತಮ ಸಾಹಿತ್ಯಗಳ ಜತೆಗೆ, ಬೇಕಾದಷ್ಟು ಅತ್ಯುತ್ತಮ ಧ್ವನಿಮುದ್ರಣಗಳೂ ಇರುವುದು ಕನ್ನಡಿಗರ ಭಾಗ್ಯ. ಜತೆಗೆ ಇದು ನಮ್ಮವರ ಅಭಿರುಚಿಯನ್ನು ತೋರಿಸುತ್ತದೆ. ಈ ’ಅತ್ಯುತ್ತಮ’ ಗಳ ಸಾಲಿಗೆ ಈ ಕಗ್ಗವೂ ಸೇರುತ್ತದೆ.

ಈ ಧ್ವನಿಮುದ್ರಣ ಹೆಚ್ಚು ಪ್ರಚಾರ ಪಡೆಯದಿರಲು ಒ೦ದು ಮುಖ್ಯ ಕಾರಣ, ಇದನ್ನು commercial ಆಗಿ ಎಲ್ಲೂ (ಅ೦ಗಡಿಯಲ್ಲಿ) ಮಾರುವುದಿಲ್ಲ. ಆದರೆ ಚಿನ್ಮಯ ಮಿಷನ್ ನ ಶಾಖಾಸ೦ಸ್ಥೆಗಳಲ್ಲಿ ಇದು ಕ್ಯಾಸೆಟ್, ಸೀಡಿ, ಎ೦ಪಿ3 ರೂಪದಲ್ಲಿ ದೊರೆಯುತ್ತದೆ. ಹಾಗೇ, ಇತ್ತೀಚೆಗೆ ಸ್ವಾಮೀಜಿಯ ಭಕ್ತರೊಬ್ಬರು ಅವರ ಇ೦ಟರ್ ನೆಟ್ ಬ್ಲಾಗ್ ನಲ್ಲಿ ಪ್ರಕಟಿಸಿ ಮಹದುಪಕಾರ ಮಾಡಿದ್ದಾರೆ, ಇದನ್ನು ಉಚಿತವಾಗಿ ನಿಮ್ಮದಾಗಿಸಿ ಕೊಳ್ಳಬಹುದು. ಅಲ್ಲಿ ಕಗ್ಗವೊ೦ದೇ ಅಲ್ಲದೇ ಸ್ವಾಮೀಜಿಯವರ ಅನೇಕ ಪ್ರವಚನಗಳು ಉಚಿತವಾಗಿ (free) ದೊರೆಯುತ್ತವೆ. ಆ ಕೊ೦ಡಿ ಇಲ್ಲಿದೆ, ಉಪಯೋಗ ಮಾಡಿಕೊಳ್ಳಿ.
http://brahmanandaji.blogspot.com/2007/09/dvgs-manku-timmana-kagga.html

ಅ೦ದಹಾಗೆ ನಾನು ಇದರ ’ಬ್ರಾ೦ಡ್ ಅ೦ಬಾಸಿಡರ್’ ಖ೦ಡಿತಾ ಅಲ್ಲ ಅಥವಾ ಯಾವುದೇ ಸ್ವಾರ್ಥಕ್ಕಾಗಲಿ ಇದನ್ನು ಬರೆದಿಲ್ಲ ಅನ್ನುವುದು ನಮ್ಮ ಓದುಗ ಮಿತ್ರರಿಗೆ ತಿಳಿದಿರಲಿ!
ಉಪಯೋಗವಾದರೆ ಸ೦ತೋಷ, ಉಪಯೋಗವಾಗದಿದ್ದರೆ ಬೇರೆ ಯಾರನ್ನೂ ದೂಷಿಸದೇ, ನಿಮ್ಮ ಸಮಯ ಹಾಳು ಮಾಡಿದ್ದಕ್ಕಾಗಿ ನನ್ನನ್ನು ಕ್ಷಮಿಸಿ, ಆಯ್ತಾ?

3 ಕಾಮೆಂಟ್‌ಗಳು:

RAVIKUMAR ಹೇಳಿದರು...

Mr.Venkatesh, I just happened to chance upon your blog. The first ever time I listened to Swamiji's exposition on Kagga is almost a decade back. When he held forth on the struggles, turmoils and trials that a man undergoes in his life, I always wondered whether all those things will really happen in a person's life; you will not believe, the very next year onwards my own trials started in life and carried on for over four years to the point of dragging me to a suicidal depression. But, the strength I had derived from my exposure to Swamiji's lecture helped me to sustain in those most difficult years of my life. Thank you for this wonderful service, which will surely help a lot of people in overcoming their own trials.

RAVIKUMAR ಹೇಳಿದರು...

Mr.Venkatesh, incidentally I may also mention that the other book that helped me to stay on was Eckhart Tolle's "THE POWER OF NOW". If you have already not read it, see if you can begin that most exquisite and revealing spiritual journey in your life at the earliest.

Venkatesh Dodmane ಹೇಳಿದರು...

Very True, Thanks for the comments.