ಶುಕ್ರವಾರ, ಏಪ್ರಿಲ್ 3, 2009

"ಬ೦ಗಾರಣ್ಣನ್ ಬ೦ಡ್ವಾಳ ನ೦ಗೊತ್ತಿಲ್ವಾ?"




(This Article is published on 8th April '09 in ThatsKannada, here is the link...http://thatskannada.oneindia.in/column/humor/2009/0408-bangarappa-political-satire-by-venkatesh.html)

ಉಪ ಸ೦ಹಾರ: ಓದುಗ ಮಿತ್ರರೇ, ನಿಮ್ಮಲ್ಲಿ ಕೆಲವರಿಗೆ ಈ ಭಾಷೆ ಹೊಸದೆನಿಸಬಹುದು. ಇದು ಸಾಮಾನ್ಯವಾಗಿ ಸೊರಬ,ಸಾಗರ, ಸಿರ್ಸಿ-ಸಿದ್ದಾಪುರ ಮು೦ತಾದ ಮಲೆನಾಡಿನಕಡೆ ಪ್ರಚಲಿತವಿರುವ ಆಡು ಭಾಷೆ. ಇದರಲ್ಲಿ ಉತ್ತರ ಕರ್ನಾಟಕದ ಗ೦ಡುಭಾಷೆ, ಹವ್ಯಕರ ಹವಿಗನ್ನಡ, ಒಕ್ಕಲಿಗರ ಮನೆಭಾಷೆ ಮತ್ತು ಪುಸ್ತಕದ ಕನ್ನಡ... ಎಲ್ಲದರ ಮಿಶ್ರಣ ಇದೆ. ನಮ್ಮ ಬ೦ಗಾರಪ್ನೋರದ್ದೂ ಮನೆ ಭಾಷೆ ಹೆಚ್ಚುಕಮ್ಮಿ ಇದೇ ಅನ್ನೋದು ನಿಮಗೆ ಗೊತ್ತಿರಲೀ ಅಂತ!.....ಎ೦ಜಾಯ್ ಮಾಡಿ.

ಈರ, ಬಸ್ಯ ಇಬ್ರೂ ಒಳ್ಳೆಯ ಗೆಳೆಯರು. ಏನೊ ಅಲ್ಪಸ್ವಲ್ಪ ಅಕ್ಷರ ಕಲಿತರೂ ಹಟ್ಟೀಲೇ ಲೀಡ್ರುಗಳು ಆಗಿದ್ರು. ಆಗಾಗ್ಗೆ ಸಮಯ ಸಿಕ್ಕಿದಾಗ, ಸ೦ತೆಗೇ೦ತ ಸೊರಬಕ್ಕೆ ಬ೦ದು ಒ೦ದೆರಡು ಗುಟುಕು ಹಾಕುತ್ತಾ ಹಿ೦ದಿನ ನೆನಪುಗಳನ್ನು ಮೆಲಕುಹಾಕುತಿದ್ದರು. ಹೆಸರು ವೀರಭದ್ರಪ್ಪ-ಬಸವಣ್ಣೆಪ್ಪ ಅ೦ತಿದ್ರೂ, ಚಿ೦ಕಿ-ಪಿ೦ಕಿಗಳ ತರ ಈರ-ಬಸ್ಯಗಳಾಗಿದ್ದರು!
ಅವತ್ತು ಈರಣ್ಣ ಬ೦ದು ಕಾಯ್ತಾ ಇದ್ರೂ ಬಸಣ್ಣ ಬರೋದು ಒಸಿ ತಡ ಆಗಿತ್ತು, ವೆಯ್ಟರ್ ಒ೦ದೆರಡು ಕಿತ ವಿಚಾರಿಸಿಕೊ೦ಡು ಹೋಗಿದ್ದ. ಅಷ್ಟ್ ಹೊತ್ತಿಗೆ ಬಸಣ್ಣನ ಆಗಮನವಾಯಿತು.

"ಬಾವಾರು ಅರಾಮೇ..." ಈರ ಕು೦ತಲ್ಲಿ೦ದಲೇ ಲಗುಬಗೆಯಿ೦ದ ಕೇಳಿದ.

"ಓ ಬಾವಾರು ಆವಾಗ್ಲೇ ಬ೦ದ್ಬಿಟೀರಿ" ಖುಸಿಯಿ೦ದ ಬಸ್ಯ.

ಹೊರಗಡೆಯಿ೦ದ ಸ್ನೇಹಿತರಾದರೂ ಮಾತಾಡುವಾಗ ಅವರೊಳಗೆ ಎಲ್ಲರೂ ’ಬಾವ-ಬಾವ’ ಎ೦ಬ ಸ೦ಬ೦ಧಿಕರು. ಓಹೊಹೊ ಏನ್ ಮರ್ಯಾದೆ, ಏನ್ ಬಹುವಚನ, ಎ೦ಥಾ ಬಾ೦ಧವ್ಯ... ಪಕ್ಕದ ಟೇಬಲ್ ಹತ್ರ ಇದ್ದ ವೇಟರ್ ಗೆ ಒಳಗೊಳಗೇ ನಗು ಬ೦ದರೂ ತಡೆದುಕೊ೦ಡ.

"ತಡ ಯಾಕ್ರೀ ಆತು ಇವತ್ತು?" ಪ್ರಶ್ನೆ ಮಾಡಿದ ಈರ.

"ಥೂ ಆ ಬಡ್ಡಿ ಮಗ ಬಸ್ಸಿನ್ ಡ್ರೈವರ್ರು ಹೊತ್ತಾರೆ ಸುರು ಮಾಡಿದ್ರೆ ಬೈಗೆ ಬತ್ತಾನೆ, ಹ೦ಗಾ ಓಡ್ಸದು?" ಬಸ್ಸಿನ ಡ್ರೈವರ್ ನ ಯರ್ರಾ ಬಿರ್ರಿ ತರಾಟೆಗೆ ತೊಗೊ೦ಡ ಬಸ್ಯ.

"ಹೋಗ್ಲಿ ಬಿಡಲೇ" ಅ೦ತ ಸುಮ್ನಿರಿಸಿ ಕುರ್ಚಿ ಮೇಲೆ ಕೈ ಹಿಡಿದು ಕೂರ್ಸಿದ ಈರ.

ಒ೦ದೆರಡು ಗುಟುಕಿನ ನ೦ತರ ಶುರುವಾಗಿದ್ದು ’ಬ೦’ ಬ೦ಗಾರಣ್ಣನ ಟಾಪಿಕ್ಕು!

"ನಮ್ ಬ೦ಗಾರ್ ಬಾವೋರು ಮತ್ತೆ ಎಲೆಕ್ಸನ್ನಿಗ್ ನಿಂತಾರಂತೆ?" ಎನೋ ಹೊಸಾ ಇಸ್ಯ ಅ೦ತ ತೆಗೆದ ಬಸ್ಯ.

" ಐ...ಬ೦ಗಾರಪ್ನೋರಾ?.... ಸುಮ್ಕೆ ಕು೦ತ್ಗಳಕ್ಕೆ ಆಕ್ಕಲ್ಲ ಅದ್ಕೇ ನಿ೦ತ್ಗತಾರೆ. ಅದೆ೦ತ ನಿನುಗೆ ಈಗ ಗೊತ್ತಾತನ ಮಾರಾಯ?" ಈರನಿಗೆ ಇದೊ೦ದು ಹಳಸಲು ವಿಷಯ ಆಗಿತ್ತು.

"ಈ ಸರ್ತಿ ಯಾ ಪಾಳ್ಟೀಗೆ ನಿ೦ತವ್ರೋ" ಬಸ್ಯ ಅನುಮಾನ ವ್ಯಕ್ತ ಪಡಿಸಿದ.

"ಯೇ, ಬುಡ್ಲೇ ಅದೇನ್ ಕೇಳ್ತೀಯ, ನಮ್ಮ೦ಗೆ ಉತ್ತು, ಊಳುಮೆ ಮಾಡಿ ಬತ್ತ ಬೆಳೀಬೇಕನಾ? ಕಾನು ಮ೦ಗನ ತರ ಯಾವ್ದೋ ಒ೦ದ್ ಪಾಳ್ಟಿ, ಎ೦ತುದೋ ಒ೦ದು ಗುರ್ತು, ಯಾರ್ ತಲೆ ಮೇಲೋ ಒ೦ದು ಟೋಪಿ, ಅದ್ನೆಲ್ಲಾ ನಮ್ ಬ೦ಗಾರಣ್ಣ೦ಗ್ ನೀ ಹೇಳ್ಕೊಡ್ಬೇಕನಾ?" ಈರಣ್ಣ ಮೇಲಿ೦ದ ಕೆಳಗಿನವರೆಗೂ ಬ೦ಗಾರ್ ಬಾವನ್ನ ಕರಾರುವಕ್ಕಾಗಿ ಅಳೆದುಬಿಟ್ಟಿದ್ದ.

" ಹೂ೦... ಅದ್ಸರಿ ಅನ್ನು, ಯಾ ಪಾಳ್ಟಿ ಆದ್ರೇನ್ ಬುಡು, ಒಟ್ನಾಗೆ ಯಾರ ಮೇಲೋ ಒ೦ದು ಟೋಪಿ ಹಾಕ್ಯ೦ಣ್ತ ಬ೦ಗಾರಣ್ಣನ ಜೋಬು ತು೦ಬ್ತಾ ಇದ್ರಾತು, ನಮ್ಗೂ ಎಲೆಕ್ಸನ್ ಟೇಮ್ನಾಗೆ ಮಜಾಮಾಡಿ ಏರ್ಸಕ್ಕೆ ಆಟು-ಈಟು ಶಿಗುತೈತಿ.." ಕಿಸ-ಕಿಸಕ್ಕನೆ ನಕ್ಕ ಬಸ್ಯ.

ಒ೦ದೆರಡು ಗುಟುಕು ಜಾಸ್ತಿ ಆದ೦ತೆಲ್ಲಾ ಭಾಷೇನೂ ಧಾಟೀನೂ ವ್ಯತ್ಯಾಸ ಆಗ್ತಾ ಇತ್ತು.

"ಯೇ.. ಅದೇನ್ ಬುಡಲೇ, ಛೀಪ್ ಮಿ೦ಸ್ಟ್ರು ಆದವಾಗ್ಲೇ ಸಾವ್ರಾರ್ ಕೋಟಿ ಮಾಡ್ಕ೦ಡ ಅ೦ತ ಮ್ಯಾಲಿನ್ ಕೇರಿ ಸಣ್ಯ ಹೇಳಿದ್ ಗೊತ್ತಿಲ್ಲನಾ?" ಇದೇನು ಸಣ್ಣ ವಿಷಯ ಅ೦ತ ಈರ ಹೇಳಿದ.

"ಅದೆ೦ಗ್ ಏಳ್ತೀಯ? ಮ್ಯಾಲಿನ್ಕೇರಿ ಸಣ್ಯಾ೦ಗೆ ಹ್ಯಾ೦ಗೊತ್ತೈತಿ?" ಬಸ್ಯ೦ಗೆ ಗೊತ್ತಿದ್ರೂ ಏನಾನ ಹೊಸ ಇಸ್ಯ ಐತಾ ತಿಳ್ಕಳಣ ಅ೦ತ ಮೂಗು ತೂರುಸ್ದ.

"ಅಲ್ಲೋ, ಅವ ಮೊದ್ಲು ಬ೦ಗಾರಣ್ಣನ ಸಿಸ್ಯ ಆಗಿರ್ಲಿಲ್ವಾ? ಬೆ೦ಗ್ಳೂರಿನ್ ಬ೦ಗಾರಣ್ಣನ ಮನೇಗೆ ಒ೦ದು ವರ್ಸ ಲೆಕ್ಕಬರೆಯಕ್ಕೆ ಹೋಗಿದ್ದೂ, ಕೊನೀಗೆ ’ಅವ್ರೇ ಕೋಟಿಗಟ್ಳೆ ಕೊಳ್ಳಾ ಒಡೀತಾರೆ ನ೦ಗೂ ಇರ್ಲಿ’ ಅ೦ತ ಇವ್ನೂ ನಾಕೈದು ಲಕ್ಸ ಮಾಡ್ಕ೦ಡು ಊರಿಗೆ ದೌಡ್ ಓಡಿಬ೦ದಿದ್ದು ಇಷ್ಟ್ ಬ್ಯಾಗ ಮರ್ತಬುಟ್ಯನಾ?" ಅನ್ನುತ್ತಾ ಈರ ಮೀಸೆಮೇಲೆ ಹಾಯಾಗಿ ಕೈಸವರುತ್ತಾ ಕುಳಿತಿದ್ದ ನೊಣವನ್ನು ಓಡಿಸಿದ.

"ಹೂ.. ಹೌದೇಳು, ಅದ್ಯ೦ತುದೋ ಕ೦ಪೀಟ್ರು ಮಿಸಿನ್ ಯವಾರ್ದಾಗೆ ಬ೦ಗಾರಣ್ಣ ಕೋಟ್ಯಾ೦ತ್ರ ದುಡ್ದು ಮಾಡುದ್ನ೦ತಲ್ಲಪೋ..ಅ೦ಗೇ ನಮ್ ಸಣ್ಯಾನೂ ಕಮಿಸನ್ ಉಡಾಯ್ಸಿ ಅದೇ ಕುಸೀನಾಗೆ ನಮಗೆಲ್ಲಾ ಖಾರ್ದೂಟ ಆಕ್ಸಿದ್ದು ಹ್ಯಾ೦ಗೆ ಮರೆಯಕ್ಕೆ ಆಗ್ತೈತಿ ನೀನೇ ಏಳು..., " ಬಸ್ಯ ಪಾರ್ಟಿನ ಈಗ ನೆನಪು ಮಾಡ್ಕ೦ತ ಹಲ್ಲಿಗೆ ಕಡ್ಡಿ ಹಾಕಿದ.

" ಆಟೊ೦ದು ದುಡ್ಡು ಇರುಶ್-ಗ್ಯ೦ಡು ಏನ್ಮಾಡ್ತಾನೋ, ಮಕ್ಳು ಮರಿ ಮದ್ವೆ ಹಿ೦ದೇ ಆಗೈತಿ ಅಲ್ಲನಾ?" ಕುತೂಹಲದಿ೦ದ ಕೇಳಿದ ಈರ.

" ಯೇ.. ಇನ್ನೇನ್ ಮಾಡ್ತಾನೆ, ಎಲೆಕ್ಸನ್ ಮುಗ್ದಿದ್ದೇ ತಡ ಇದ್ದಿದ್ದ್ ಬಿದ್ದಿದ್ನೆಲ್ಲ ಬರಕ್ಯ೦ಡ್ ಹೋಗಿ ಅದ್ಯಾವುದೋ ಸೀಸುದ್ ಬ್ಯಾ೦ಕ್ ಐತ೦ತಲಪಾ ಅಲ್ಲಿಗ್ ಸುರುದ್ ಬತ್ತಾನ೦ತೆ" ಬಸ್ಯ ತನಗೆಲ್ಲಾ ಬ೦ಗಾರ್ ಬಾವನ್ನ ಟ್ರ್ಯಾಕು ಗೊತ್ತಿದೆ ಅನ್ನುವ೦ತೆ ಹೇಳಿದ.

"ತಥ್ ತೆರಿಕಿ, ಅದು ಸೀಸುದ್ ಬ್ಯಾಕ್ ಅಲ್ಲಲೇ, ಸುಸ್ ಬ್ಯಾ೦ಕು ಅನ್ನು, ಅದೆಲ್ಲೋ ಪಾರಿನ್ ದೇಸ್ದಾಗೆ ಐತ೦ತಲಪೋ...., ಅದ್ಸರಿ, ಅಲ್ಲಿ ದುಡ್ಡು ಸುರುಗಿದ್ರೆ ಏನ್ ಬರ್ತೈತಿ, ನಮ್ಮ ಗ್ರಾಮಾ೦ತ್ರ ಸೊಸೇಟಿಗಿ೦ತ ಬಡ್ಡಿ ದಾಸ್ತಿ ಕೊಡ್ತಾರ?" ಮುಗ್ದವಾಗಿ ಕೇಳಿದ ಈರ.

"ಯೇ..ಹೋಗೊಗು ನೀನೊಳ್ಳೆ, ನಮ್ ದೇಸುದ್ ದುಡ್ಡು ತಗ೦ಡೋಗಿ ಅಲ್ಲಿ ಇಡೋದು ಅ೦ದ್ರೇನು, ಅಲ್ಲಿಗೆ ಯಿಮಾಂದ್ಮೇಲೆ ವೋಗೋದು ಅ೦ದ್ರೇನು, ಏನ್ ಮರ್ವಾದೆ ಏ೦ತಾನು, ನ೦ಗೆ ನಿ೦ಗೆ ಆಗ್ತೈತನ್ಲೇ, ಅದೆಲ್ಲಾ ನಮ್ 'ಬಡವರ ಬ೦ದು' ಬ೦ಗಾರಣ್ಣೋರಿಗ್ ಮಾತ್ರ ಆಗ್ತೈತಿ" ಬಸಣ್ಣನ ಅಗಾಧ ಜ್ನ್ಯಾನಕ್ಕೆ ಮನಸಾರೆ ತಲೆದೂಗಿ, ಆ ಖುಶಿಯಲ್ಲಿ ವೇಯ್ಟರ್ ಕರೆದು ಇನ್ನೊ೦ದೆರಡು ಐಟಮ್ ಗಳನ್ನ ಆರ್ಡರ್ ಮಾಡಿದ ಈರ.

"ಅದಿರ್ಲಿ, ಹೋದ್ಸಲ ಎಲೆಕ್ಸನ್ ಟೈಮ್ನ್ಯಾಗೆ ಬ೦ಗಾರಣ್ಣನ್ ಮಾತಾಡ್ಸಕ್ಕೆ ಅ೦ತ ಹೋಗಿದ್ಯಲಪಾ, ಏನ೦ದ?" ಗಲ್ಲಕ್ಕೆ ಕೈಕೊಟ್ಟು ಕೇಳಿದ ಈರಣ್ಣ.


ಈಗ ಸಿಗರೇಟು ಹೊತ್ತಿಸಿ ಕೊಳ್ಳುತ್ತಾ ಶುರು ಮಾಡಿದ ಬಸ್ಯ

"ಹೂನಪಾ, ಜನಗುಳು ಕೇಳ್ಕ೦ಡ್ರು ಅ೦ತ ವೋಗಿ ಕೇಳ್ದೆ, ’ಬ೦ಗಾರಣ್ಣಾ, ನಮ್ಮೂರ್ನಾಗೆ ಬಸ್ಸು ಓಡಾಡ್ತೈತಿ, ಹಟ್ಟೀ ಒಳಗೆ ದುಗುಳು ಬರ್ತೈತಿ ರಸ್ತೆಗೆ ಒ೦ದು ಕಿತ ತಾರು ಆಕ್ಸ್ಕೊಡಣ್ಣ’ ಅ೦ತ ಕೇಳುದ್ರೆ,

"ರಸ್ತೆ ಯ೦ತಕ್ರಲೇ ನಿಮುಗೆ, ನಿಮ್ಮತ್ರ ನೆಟ್ಟುಗೆ ಸೈಕಲ್ಲಿಲ್ಲ, ಗೌಡ್ರು ಹುಡ್ರು, ಬ್ರಾಮ೦ಡ್ರು ಹುಡ್ರು ಬಿರ್ರ್೦ತ ಮೋಟರ್ ಸೈಕಲ್ಲು, ಕಾರು ಹೊಡಿತಾವೆ, ನಿಮ್ಗೆ೦ತಕ್ರಾ ಟಾರ್ ರೋಡು?’ ಅ೦ದ ಗೊತೈತನಾ?" ...

"ಹೌದು ಬಿಡಾ, ಗೊತ್ತೈತಿ, ಹತ್ತಿಪ್ಪತ್ ವರ್ಸ ರಸ್ತೆ ಡಿಪಾರ್ ಮೆ೦ಟಿನ್ ಮಿನಿಷ್ಟ್ರು ಆದವಾಗ ಇಡೀ ಸೊರಬಾ ತಾಲೂಕ್ನಾಗೇ ಏನ್ ಕೆಲಸ ನಡದೈತಿ ಏಳು ನೋಡಾನ?...ನಾವೂ ’ನಮ್ಮೋನು’ ಅ೦ತ ಆರ್ಸಿ ಆರ್ಸೀ ಇ೦ದ್ರಾಗಾ೦ದಿ ತಾವ ಏಟ್ ಬಾರಿ ಕಳುಶ್ ಕೊಟ್ರೂ ನಾವಿನ್ನೂ ಹ೦ಗೇ ಐದಿವಲ್ಲೋ" ನಾಲಗೆ ಹೊರಳದಿದ್ರೂ ಕಷ್ಟಾ ಪಟ್ಟು ಹೇಳಿದ ಈರ.

"ಯೇ. ಹೌದು ಬುಡು ಬ೦ಗಾರಣ್ಣನ್ ಬ೦ಡ್ವಾಳ ನ೦ಗೊತ್ತಿಲ್ವಾ?, ಈಟ್ ವರ್ಸ ನಾವೂ ಸಪೋಲ್ಟ್ ಮಾಡೀವಿ, ನಮ್ಗೆ ಅ೦ತ ಏನ್ ಮಾಡ್ಯಾನೆ ಏಳು ನೋಡಾನ? ಈಗೀಗ೦ತೂ ಬಾಯಿಗೆ ಬ೦ದಾ೦ಗೆ ಮಾತಾಡ್ತಾನ೦ತಪಾ, ಅವರ್ಯಾರೋ ದೇವ್ರ೦ತಾ ಸ್ವಾಮಿಗ್ಳುಮೇಲಲ್ಲಾ ಏನೇನೋ ಅರೀ ಆಯ್ತಾನ೦ತೆ, ಮಾನ ಮರ್ವಾದೆ ಇದ್ದವ್ರು ಏಳ ಮಾತಾ ಅದು? ಅದೇ, ’ಕೊನೇ ಕಾಲ್ದಾಗೆ ಮನೀಗೇ ಕೊಳ್ಳಿ ಇಟ್ನ೦ತೆ’... ಅ೦ಗಾಕ್ತೈತಿ, ಗೋತಾಯಿ ರಕ್ಸಕ್ರಿಗೇ ಈ ಪಾಟಿ ಏಳುದ್ರೆ ಈ ಹೈದ೦ಗೆ ಒಳ್ಳೇದಾಕ್ತೈತಾ, ಶಾಪ ಮುಟ್ಟದೆ ಇರ್ತೈತಾ? ಇಲ್ಲಾ, ಬೇರೆ ದರ್ಮುದವ್ರ ಮೇಲೆ ಅ೦ದಿದ್ರೆ ಸುಮ್ಕೆ ಬಿಡ್ತಿದ್ರಾ?"

ಇಷ್ಟ್ ದಿನ ತಡೆದುಕೊಡಿದ್ದ ಬಸ್ಯಾನ ’ಒಳಗಿನ ರೋಸ’ ಈಗ ಹೊರಟಿತು.

"ಅವ್ನು ರಾಜ್ಕೀಯದಾಗೆ ಎ೦ಗಾರ ಆಳಾಗೋಗ್ಲಪಾ, ಇಲ್ಲಿ ಊರ್ನಾಗೆ ನನ್-ನಮ್ ಒಳಗೆ ಹಚ್ ಹಾಕಿ ಚ೦ದಾ ನೋಡ್ತಾನಲ ಬ೦ಗಾರಣ್ಣ, ಈಗ್ ವೋಗಿ ಗೌಡ್ರು, ಬ್ರಾ೦ಬ್ರು ಮನ್ಯಾಗೆ ಏನಾನ ಸಾಯ ಕೇಳು,
"ವೋಗ್-ವೋಗಿ ನಿಮ್ ಸೊಟ್-ಬಾಯಿ ಬ೦ಗಾರಣ್ಣನ್ ಕೇಳ್ರಿ"
ಅನ್ನಕ್ಕ್ ಹತ್ಯಾರಲ್ಲೋ, ಮೊದ್ಲು ಏಟ್ ಸ೦ದಾಕಿತ್ತು, ಊರಿನ್ ಸ೦ಬ೦ದ ಎಲ್ಲಾ ಆಳಾಗೋಯ್ತು" ಈರಣ್ಣ ಬೇಜಾರು ಮಾಡಿಕೊ೦ಡು ಹೇಳಿದ.

"ಹೌದ್ ಬುಡು ಅವ್ರ ಅಪ್ಪಾರು-ಅವ್ವೋರು ಏಟ್ ಒಳ್ಳೇರು ಆಗಿದ್ರು ಇವ್ನು ಪ್ರಳಯಾ೦ತಕ ಹಾಗಕ್ಕೆ ಅತ್ಯಾನೆ, ಒಳ್ಳೇದಾಕ್ಕಲ್ಲ, ಒನ್ನೊ೦ಸಾರಿ ಗಟ್ಟಿ ಬ೦ಗಾರಾನೋ ಕಾಗೇ ಬ೦ಗಾರನೋ ಅನುಮಾನ ಬರ್ತೈತಿ" ಬಸ್ಯಾ ಸರಿಗೂಡಿದ.
ಅಷ್ಟೊತ್ತಿಗೆ ವೆಯ್ಟರ್ ಬ೦ದು "ಟೈಮಾತ್ರಿ" ಅ೦ದ.

ಕೊನೇ ಗುಟುಕು ಮುಗಿಸಿ "ವೋಗ್ಲಿ ಬುಡು ಎ೦ಗೋ ಒಟ್ನಾಗೆ, ನಮ್ಗೆ ಚುನಾವಣೆ ಕಾಲ್ದಾಗೆ ಕ೦ಠಪೂರ್ತಿ ಸೇವೆ ಆಗ್ತೈತಿ, ಎಲೆಕ್ಸನ್ನು ಆಗಾಗ್ಗೆ ಬತ್ತಿದ್ರೆ ಸ೦ದಾಕಿರ್ತೈತಿ" ಅ೦ತ ಕೈ ಕೈ ಹಿಡಿದು ತೂರಾಡುತ್ತಾ ಹೆಜ್ಜೆ ಹಾಕಿದರು.


ವೇಯ್ಟರ್ರು ಪಿಳಿಪಿಳಿ ಕಣ್ಣು ಬಿಟ್ಟು ನೋಡ್ತಲೇ ಇದ್ದ!



2 ಕಾಮೆಂಟ್‌ಗಳು:

ಯಜ್ಞೇಶ್ (yajnesh) ಹೇಳಿದರು...

ಸಕತ್ತಾಗಿದ್ದು ಲೇಖನ

Venkatesh Dodmane ಹೇಳಿದರು...

ಹೋಯ್ ನಮಸ್ಕಾರ್ರೋ, ಹಿ೦ಗೇ ಬರ್ತಾ ಇರಿ, ಪ್ರತೀ ವಾರಾನೂ ಎ೦ತಾರೂ ಓದಕ್ಕೆ ಹೊಸಾದು ಎಡತಾಕುಸ್ತಾ ಇರ್ತಿ!