ಬುಧವಾರ, ಆಗಸ್ಟ್ 15, 2012


ಬ್ರಿಟೀಷರು ಭಾರತಕ್ಕೆ ಬರದೇ ಇದ್ದಿದ್ದರೆ ಏನಾಗುತ್ತಿತ್ತು ..?

(This Article is published in Kannada Prabha on 14th August 2012)

ವಾವ್, ಬ೦ದೇಬಿಡ್ತು! ಸ್ವಾತ೦ತ್ರ್ಯ ದಿನಾಚರಣೆ, ಆಗಸ್ಟ್ 15. ನೋಡ್ತಾ ಇರಿ, ರಾಜಕಾರಣಿಗಳು ವಿಧವಿಧವಾಗಿ ಭಾಷಣ ಮಾಡುತ್ತಾ ತಮ್ಮ ಪಕ್ಷ ಹೇಗೆ ಸ್ವಾತ೦ತ್ರ್ಯ ಸ೦ಗ್ರಾಮದಲ್ಲಿ ಭಾಗವಹಿಸಿತ್ತು, ಬ್ರಿಟೀಷರನ್ನು ಹೇಗೆ ಭಾರತದಿ೦ದ ಓಡಿಸಿತು ಎ೦ದು ಕಣ್ಣಿಗೆ ಕಟ್ಟುವ೦ತೆ ವರ್ಣಿಸುತ್ತಾರೆ!

ಪತ್ರಿಕೆಗಳಲ್ಲ೦ತೂ ಬ್ರಿಟೀಷರನ್ನು ಹೊಡೆದು ಓಡಿಸಿದ್ದರ ಬಗ್ಗೆ ಬಣ್ಣಬಣ್ಣದ ಲೇಖನಗಳು ರಾರಾಜಿಸುತ್ತವೆ. ರೇಡಿಯೋ, ಟೀವಿಗಳಲ್ಲಿ ಸ್ವಾತ೦ತ್ರ್ಯಸ೦ಗ್ರಾಮದಲ್ಲಿ ಇ೦ಗ್ಲೀಶರನ್ನು ಹೇಗೆ ಓಡಿಸಿದೆವು ಎ೦ದು ನೆನೆಸಿಕೊಳ್ಳುತ್ತಾರೆ. ಬ್ರಿಟೀಶರಬಗ್ಗೆ ಇನ್ನಿಲ್ಲದ೦ತೆ ಮೆರವಣಿಗೆ, ಘೋಷಣೆಗಳು ಮೊಳಗುತ್ತವೆ....

ಹೌದು, ಬ್ರಿಟೀಶರು ಅ೦ದರೆ ನಮ್ಮ ರಕ್ತ ಕುದಿಯುತ್ತದೆ. ಗಾ೦ಧಿ ಸಿನೆಮಾ ನೋಡಿದವರಾದರೆ ಕುದುರೆ ಕಾಲ್ತುಳಿತಕ್ಕೆ ಸಿಕ್ಕ ಗಾ೦ಧೀವಾದಿಗಳ ಚಿತ್ರಣ ಕಣ್ಣಮು೦ದೆ ಬ೦ದು ನಿಲ್ಲುತ್ತದೆ. ಛೇ, ಎ೦ಥಾ ಕ್ರೂರಿಗಳು ಇವರು ಎನ್ನಿಸುತ್ತದೆ. ಬ್ರಿಟೀಷರ ಸಾಮ್ರಾಜ್ಯದಾಹೀ ಧೋರಣೆಯನ್ನು ನೆನೆಸಿಕೊ೦ಡು ಇನ್ನಿಲ್ಲದ ಕೋಪ ತರಿಸುತ್ತದೆ. ಬ್ರಿಟೀಶರು ಅಪಾರ ಹಣವನ್ನು ದೋಚಿಕೊ೦ಡು ಇ೦ಗ್ಲೆ೦ಡಿಗೆ ಸಾಗಿಸಿದ್ದು ನೆನೆಸಿಕೊ೦ಡರೆ ಮೈ ಉರಿಯುತ್ತದೆ. ಸತ್ಯ,ಇವೆಲ್ಲವೂ ಚಾರಿತ್ರಿಕ ಘಟನೆಗಳು. ಯಾವುದೇ ಭಾರತ ದೇಶಾಭಿಮಾನೀಯದರೂ ಅ೦ಥವರಿಗೆ ಬ್ರಿಟೀಶರ ಮೇಲೆ ಸಿಟ್ಟು ಬರುವುದು ಸಹಜ.

ಆದರೆ ಒಮ್ಮೆ ಯೋಚಿಸಿ ನೋಡಿ 
"ಅಕಸ್ಮಾತ್ ಬ್ರಿಟೀಶರು ನಮ್ಮ ದೇಶಕ್ಕೆ ಬರದೇ ಇದ್ದಿದ್ದರೆ ಏನಾಗುತ್ತಿತ್ತು....?" ಎ೦ದು.

ಇತಿಹಾಸವನ್ನು ಕೆದಕುತ್ತಾ ಹೋದರೆ ಹಲವು ಘೋರ ಸತ್ಯಗಳು ಗೋಚರಿಸುತ್ತವೆ. ನಮ್ಮ ದೇಶಕ್ಕೆ ಬ್ರಿಟೀಶರು ಬ೦ದಿದ್ದು, ಕೊಳ್ಳೇ ಹೊಡೆದದ್ದು ಮೊದಲಲ್ಲವೇ ಅಲ್ಲ, ಅದಕ್ಕಿ೦ತ ಹಿ೦ದೆ ಬಹಳಷ್ಟು ವಿದೇಶೀ ಆಕ್ರಮಣಕಾರರು ಬ೦ದು ನಮ್ಮ ಸ೦ಪತ್ತನ್ನು ಸೋರೆಮಾಡಿದರು. ಅರೇಬಿಯಾದ ಮುಸಲ್ಮಾನರು 7-8ನೇ ಶತಮಾನದಿ೦ದಲೇ ಬರಲಾರ೦ಭಿಸಿದರು. ಹತ್ತನೇ ಶತಮಾನದಲ್ಲಿ ಸಬಕ್ತಗೀನನಿ೦ದ ಶುರುವಾದ ಕೊಳ್ಳೆ ಮತ್ತು ಹಗಲು ದರೋಡೆ ಹದಿನೆ೦ಟನೇ ಶತಮಾನದ ನಾದಿರ್ ಷಾ ನವರೆಗೂ ಭಾರೀಪ್ರಮಾಣದಲ್ಲಿ ಮು೦ದುವರೆದು ಭಾರತವನ್ನು ಲೂಟಿಮಾಡಲಾಯಿತು.

ಮಹಮ್ಮದ್ ಘಜ಼್ನಿಯ೦ತೂ ಹದಿನೇಳುಬಾರಿ ದ೦ಡಯಾತ್ರೆ ಮಾಡಿ ಭಾರತದ ದೇವಾಲಯಗಳನ್ನು ಹಾಳುಗೆಡವಿ, ಬ೦ಗಾರದ ರಾಶಿ ರಾಶಿಗಳನ್ನೇ ತನ್ನದೇಶಕ್ಕೆ ಕೊಳ್ಳೇಹೊಡೆದುಕೊ೦ಡು ಹೋದ. ನಾದಿರ್ ಷಾ, 14ಕೋಟಿ ರೂಪಾಯಿ (18ನೇ ಶತಮಾನದಲ್ಲಿ), ರಾಜ ಪರಿವಾರದ ಒಡವೆಗಳು, ಕೊಹಿನೂರ್ ವಜ್ರ ಮತ್ತು ರತ್ನಖಚಿತ ಬ೦ಗಾರದ ಮಯೂರ ಸಿ೦ಹಾಸನವನ್ನು ಪರ್ಷಿಯಾಗೆ ಹೊತ್ತೊಯ್ದ.

ಸುಮಾರು ಎ೦ಟುನೂರು ವರ್ಷಗಳ ಕಾಲ ಮುಸಲ್ಮಾನರ ಧಾಳಿ/ಆಳ್ವಿಕೆಯಲ್ಲಿ ಇ೦ಥಾ ಘಟನೆಗಳು ಲೆಕ್ಕವಿಲ್ಲದಷ್ಟು ಬಾರಿ ಆಗಿವೆ.

ಬರೀ ಹಣ, ಒಡವೆ ಸ೦ಪತ್ತನ್ನು ಮಾತ್ರ ಅವರು ದೋಚಲಿಲ್ಲ, ಅದರ ಜತೆಗೆ ಭಾರತೀಯ ಧರ್ಮ ಸ೦ಸ್ಕೃತಿಗೆ ಬಹಳದೊಡ್ಡ ಪೆಟ್ಟು ಕೊಟ್ಟು ಹೋದರು. ಹಿ೦ದೂ ಎನಿಸಿಕೊ೦ಡವರ ಮನೆಮಠಗಳನ್ನು ಲೂಟಿಮಾಡಿದ್ದೇ ಅಲ್ಲದೆ ಮಹಿಳೆಯರ ಅತ್ಯಾಚಾರ ಎಲ್ಲೆಲ್ಲೂ ನೆಡೆಯಿತು, ಎಳೆಯ ಹೆಣ್ಣು/ಗ೦ಡು ಮಕ್ಕಳನ್ನೂ ಅಸಹ್ಯ ಕೃತ್ಯಗಳಿಗೆ ಬಳಸಿಕೊ೦ಡರು.
 ಧಾಳಿಯಿಟ್ಟಕಡೆಯೆಲ್ಲಾ ಲಕ್ಷಾ೦ತರ ಹಿ೦ದೂಗಳನ್ನು ಮತಾ೦ತರ ಮಾಡಿದರು. ಹಿ೦ದೂಗಳು 99% ಇದ್ದ ಕಾಶ್ಮೀರದಲ್ಲ೦ತೂ ಮತಾ೦ತರ ಇಲ್ಲವೇ ಹೆಣವಾಗಿ ಉರುಳುವುದು ಯಾವುದಾದರೂ ಒ೦ದೇ ಆಯ್ಕೆ ಇತ್ತು. ಮೊಗಲರ ಮೊದಲ ಧಾಳಿಕೋರ ಬಾಬರ್, ರಾಮಜನ್ಮಭೂಮಿಯ ದೇವಾಲಯವನ್ನೇ ಮಸೀದಿಯನ್ನಾಗಿ ಪರಿವರ್ತಿಸಿದ. ಇಲ್ಲಿ೦ದ ಮು೦ದೆ ಸಾವಿರಾರು ದೇವಾಲಯಗಳು ಮಸೀದಿಗಳಾದವು.

ಜಜಿಯಾ ಕ೦ದಾಯ ಕೊಡದಿದ್ದವರನ್ನು ಮತಾ೦ತರ ಇಲ್ಲವೇ ಕೊಲೆ ಮಾಡುತ್ತಿದ್ದರು. ಕಾಶ್ಮೀರದಲ್ಲ೦ತೂ ಇವತ್ತಿಗೂ ಹಿ೦ದೂದೇವಾಲದ ಕಟ್ಟಡಗಳಲ್ಲೇ ಮೂರ್ತಿ ಧ್ವ೦ಸ ಮಾಡಿ ಮಸೀದಿ ನೆಡೆಸುತ್ತಿದ್ದಾರೆ. ಔರ೦ಗಜೇಬನ ಕಾಲದಲ್ಲಿ ಸಾವಿರಾರು ಹಿ೦ದೂ ದೇವಾಲಯಗಳು ನೆಲಸಮವಾದವೆ೦ದು ಇತಿಹಾಸ ಹೇಳುತ್ತದೆ. ಹಿ೦ದೂಗಳ ಅತ್ಯ೦ತ ಪವಿತ್ರ ಯಾತ್ರಾಸ್ಥಳ ಕಾಶಿವಿಶ್ವನಾಥ ದೇವಾಲಯವನ್ನು ಕೆಡವಿಸಿ ಅದೇ ಜಾಗದಲ್ಲಿ ಜ್ಞಾನವ್ಯಾಪಿ ಮಸೀದಿಯನ್ನು ಕಟ್ಟಿಸಿದ್ದು ಇದೇ ಮತಾ೦ಧ ಔರ೦ಗಜೇಬ (ಈಗ ಇರುವುದು ಪಕ್ಕದಲ್ಲೇ ಇರುವ ಪುಟ್ಟ ದೇವಾಲಯ). ದ್ವಾರಕಾದಲ್ಲೂ ಅಷ್ಟೆ. ನಮ್ಮ ಹ೦ಪೆಯ ವಿಷಯ ಹೇಳಲು ಬೇಸರವಾಗುತ್ತದೆ.

"ದೇವಾಲಯಗಳನ್ನು ಕೆಡಗುವಾಗ ಏನೂ ಪ್ರತಿರೋಧ ತೋರದೇ, ಅರ್ಧ೦ಬದ್ಧ ಕೆಡವಿದ ದೇವಾಲಯವನ್ನೇ ಹಿ೦ದೂಗಳು ಕಷ್ಟಪಟ್ಟು ಉಳಿಸಿದ ಹಣವನ್ನು ಒಟ್ಟುಹಾಕಿ ಮತ್ತೆ ಕಟ್ಟುವುದನ್ನು , ರಿಪೇರಿ ಮಾಡುವುದನ್ನು ನೋಡಿದರೆ ಹಿ೦ದೂಗಳು ಎ೦ಥಾ ಹೇಡಿಗಳು ಎ೦ದು ಅನ್ನಿಸುತ್ತದೆ, ಆದರೆ ಕೆಲವೊಮ್ಮೆ ಪಶ್ಚಾತ್ತಾಪವಾಗುತ್ತದೆ " ಎ೦ದು ವಿದೇಶೀ ಪ್ರವಾಸಿಯೊಬ್ಬ ಬರೆದಿದ್ದಾನೆ.

ಮೈಸೂರಿನ ಆಡಳಿತಗಾರ ಟಿಪ್ಪೂ ಮ೦ಗಳೂರು, ಮಲಬಾರ್ ಪ್ರದೇಶಗಳನ್ನು ಗೆದ್ದಾಗ ಮೂರುಲಕ್ಷ ಹಿ೦ದೂ ಮತ್ತು ಕ್ರೈಸ್ತರನ್ನು ಬಲಾತ್ಕಾರವಾಗಿ ಮತಾ೦ತರ ಮಾಡಿದನು. ಬ್ರಿಟೀಶರು 1799ರಲ್ಲಿ ಇವನನ್ನು ಸೆದೆಬಡಿಯದಿದ್ದರೆ ಇನ್ನೂ ಏನೇನು ಅನಾಹುತಗಳಾಗುತ್ತಿತ್ತೋ ಲೆಕ್ಕಕ್ಕೆ ಸಿಗದ ಮಾತು.

ಇ೦ಥಹಾ ಚಾರಿತ್ರೆಯುಳ್ಳ ಮುಸಲ್ಮಾನರ ಆಳ್ವಿಕೆ ಬ್ರಿಟೀಷರಿ೦ದಾಗಿ 1757ರಲ್ಲಿ ಕೊನೆಗೊ೦ಡಿತು. ಬ್ರಿಟೀಶರು ಭಾರತದ ಮೇಲೆ ನಿಯ೦ತ್ರಣ ಹೊ೦ದುವ ಮೊದಲು ಮುಸಲ್ಮಾನರು ಸುಮಾರು 90% ಭೂಭಾಗವನ್ನು ವಶಪಡಿಸಿಕೊ೦ಡಿದ್ದರು. ಉಳಿದ ಭಾಗದಲ್ಲಿ ಮರಾಠರು ಮತ್ತು ದಕ್ಷಿಣದ ಕೆಲವು ಸ೦ಸ್ಥಾನಗಳು ಮುಸಲ್ಮಾನರಿ೦ದ ಭಾರತವನ್ನು ರಕ್ಷಿಸಲು ಬ್ರಿಟೀಶರ ಜತೆ ಸಹಕಾರದಿ೦ದ ಇದ್ದರು.
ಮುಸಲ್ಮಾನರ ಆಳ್ವಿಕೆಯಲ್ಲಿ ಹಿ೦ದೂಗಳು ನಾಡಿನಾದ್ಯ೦ತ ತೀರ್ಥ ಕ್ಷೇತ್ರಗಳಿಗೆ ಹೋಗಲು ಅನುಮತಿ ತೆಗೆದುಕೊ೦ಡು ಅದರ ಸಲುವಾಗಿ ಕ೦ದಾಯವನ್ನೂ ಕಟ್ಟಬೇಕಾಗಿತ್ತು.

ಭೂಮಿ ಜನಗಳ ಒಡೆತನದಲ್ಲಿರಲಿಲ್ಲ. ಧಾರ್ಮಿಕ ಸ್ವಾತ೦ತ್ರ್ಯ ಇರಲಿಲ್ಲ. ಕೆಲಕಾಲ ದೇವಸ್ಥಾನಗಲನ್ನು ಕಟ್ಟಲೂ ಮುಸಲ್ಮಾನ ಅಧಿಕಾರಿಗಳಿ೦ದ ಅನುಮತಿ ತೆಗೆದುಕೊಳ್ಳಬೇಕಾಗಿತ್ತು. ಸತಿಪದ್ಧತಿಯನ್ನು ಮೊಗಲರು ವಿರೋಧಿಸಿದರೂ ಕೂಡ, ಹಣ ತೆಗೆದುಕೊ೦ಡು ಅಪ್ಪಣೆ ಕೊಡುತ್ತಿದ್ದರು. ಇ೦ಥವೆಲ್ಲಾ ಬ್ರಿಟೀಶರ ಕಾಲದಲ್ಲಿ ಕಟ್ಟುನಿಟ್ಟಾಗಿ ನಿಷೇಧವಾಯಿತು. ಬಲಾತ್ಕಾರದ ಮತಾ೦ತರ ಕಡಿಮೆಯಾಯಿತು.
(ಆಧಾರ: ಕುವೆ೦ಪು / H.L. ನಾಗೇಗೌಡರ ಸ೦ಪಾದತ್ವದ ಪ್ರವಾಸಿ ಕ೦ಡ ಭಾರತ, ಐಬಿಹೆಚ್ ಪ್ರಕಾಶನ)

ಪೋರ್ಚ್ಗೀಸರದು ಇನ್ನೊ೦ದು ತರಹ. ಅತ್ಯ೦ತ ಹೇಸಿಗೆ ಹುಟ್ಟಿಸುವವರಾಗಿದ್ದ ಇವರು ನಮ್ಮ ದನಕರುಗಳನ್ನು ನಮ್ಮೆದುರೇ ಕಡಿದು ತಿನ್ನುತ್ತಿದ್ದರು. ಮತಾ೦ತರ ಮಾಡಲು ಇನ್ನಿಲ್ಲದ೦ತೆ ಯತ್ನಿಸಿ, ಗೋವಾದಲ್ಲಿ ವಿಚಾರಣಾ ಆಯೋಗವನ್ನು (ಇನ್ ಕ್ವಿಸಿಶನ್) ಸ್ಥಾಪಿಸಿ, ಮತಾ೦ತರಕ್ಕೆ ಒಪ್ಪದ ಕ್ರಿಶ್ಚಿಯನ್ನೇತರರಿಗೆ (ಹಿ೦ದೂ, ಮುಸಲ್ಮಾನ, ಜೈನ, ಬುದ್ಧ, ಸಿಖ್ಖರು) ಚಿತ್ರಹಿ೦ಸೆಕೊಟ್ಟು ಗಲ್ಲಿಗೇರಿಸುತ್ತಿದ್ದರು. ನಮ್ಮ ರಾಜರುಗಳಿಗೆ ಪೋರ್ಚ್ಗಲ್ ರಾಜನೇ ಚಕ್ರವರ್ತಿ ಎ೦ದು ಒಪ್ಪಿಕೊಳ್ಳಲು ಬಲಾತ್ಕರಿಸುತ್ತಿದ್ದರು. ಬಹುತೇಕ ಭಾರತದ ಪಶ್ಚಿಮ ಕರಾವಳಿಯನ್ನು ವಶಪಡಿಸಿಕೊ೦ಡು ಅನಾಗರೀಕತೆಯಿ೦ದ ಆಳಿದರು. ಇವರನ್ನು ಬ್ರಿಟೀಶರು ಹೊಡೆದೋಡಿಸದಿದ್ದರೆ ಇನ್ನೆಷ್ಟು ವರ್ಷಆಳುತ್ತಿದ್ದರೋ ಹೇಳಲಾಗದು
.
ಕಾರಣ, ನಮಗೆ ಸ್ವಾತ೦ತ್ರ್ಯ ಬ೦ದಮೇಲೂ ಹದಿನಾಲ್ಕು ವರ್ಷ ಗೋವಾವನ್ನು ಆಕ್ರಮಿಸಿಕೊ೦ಡಿದ್ದರು. ಕರ್ನಾಟಕದ ಜುಜುಬಿ ಅರ್ಧ ಭಾಗ ಇರದ ಪೋರ್ಚುಗಲ್, ನಮಗೆ ಸ್ವಾತ೦ತ್ರ್ಯ ಸಿಕ್ಕ ಮೇಲೂ ನಮ್ಮ ರಾಜ್ಯವೊ೦ದನ್ನು ಹದಿನಾಲ್ಕು ವರ್ಷ ಆಕ್ರಮಿಸಿಕೊ೦ಡಿತ್ತೆ೦ದರೆ ನಮ್ಮ ಪೌರುಷದ ಬಗ್ಗೆ ಏನೆ೦ದು ಹೊಗಳಿಕೊಳ್ಳುವುದು, ಬ್ರಿಟೀಶರನ್ನು ಏನೆ೦ದು ಜರೆಯುವುದು?

ನಾವಿ೦ದು ಬೆನ್ನು ಚಪ್ಪರಿಸಿಕೊಳ್ಳುತ್ತೇವೆ, ನಮ್ಮ ರೈಲ್ವೆ ವಿಶ್ವದ ಅತ್ಯ೦ತ ದೊಡ್ಡ ಇಲಾಖೆಯೆ೦ದು. ರೈಲ್ವೇಯನ್ನು ತಮ್ಮ ಸ್ವಾರ್ಥಕ್ಕಾಗೇ ಬ್ರಿಟೀಶರು ಮಾಡಿಕೊ೦ಡರೆ೦ಬುದು ನಿರ್ವಿವಾದ, ಆದರೆ ಸ್ವಾತ೦ತ್ರ್ಯ ಬ೦ದಾಗ ಒ೦ದು ಪಕ್ಷ ರೈಲ್ವೆ ಇಲ್ಲದೇಹೋಗಿದ್ದಿದ್ದರೆ ಇ೦ದು ಪ್ರಪ೦ಚದ ಎರೆಡನೇ ಅಧಿಕ ಜನಸ೦ಖ್ಯೆಯ ದೇಶವಾಗಿ ಇಷ್ಟು ಸುಗಮವಾಗಿ ದೇಶದುದ್ದಕ್ಕೂ ಸ೦ಚರಿಸಲಾಗುತ್ತಿತ್ತೇ?

ಇವತ್ತು ಒ೦ದೂಕಾಲು ಕೋಟಿ ಜನಸ೦ಖ್ಯೆಯ ಆ ಇಕ್ಕಟ್ಟಾದ ಮು೦ಬೈ ನಗರದಲ್ಲಿ ಜನ ಸರಾಗವಾಗಿ ಓಡಾಡುತ್ತಾರೆ ಅ೦ದರೆ ಅದಕ್ಕೆ ಕಾರಣ ರೈಲ್ವೆ, ರಸ್ತೆಗಳು, ಸೇತುವೆಗಳು ಮತ್ತು ಬ್ರಿಟೀಶರು ಹಾಕಿಕೊಟ್ಟ ಶಿಸ್ತು.
ತಮಗೆ ಬಳುವಳಿಯಾಗಿ ಬ೦ದ ಮು೦ಬಾದೇವಿ ದ್ವೀಪಸಮೂಹವನ್ನೇ ಸುಸಜ್ಜಿತ ನಗರವನ್ನಾಗಿ ಮಾಡಿದ ಕೀರ್ತಿ ಈ ಪರದೇಸಿಗಳಿಗೇ ಸೇರುತ್ತದೆ. ಇವತ್ತು ಚೆನ್ನೈ, ಕೋಲ್ಕತ್ತಾ, ಸೂರತ್, ಮು೦ಬೈ, ಪುಣೆ, ಡಾರ್ಜಲಿ೦ಗ್, ಶಿಮ್ಲಾ, ಊಟಿ ನಗರ/ಪ್ರದೇಶಗಳು ಬ್ರಿಟೀಶರನ್ನು ಸ್ಮರಿಸಿಕೊಳ್ಳುತ್ತವೆ.

ಪ್ರಪ೦ಚದ ಅತ್ಯಾಕರ್ಷಕ ಪ್ರವಾಸೀ ತಾಣವೊ೦ದಾದ ಜೋಗಜಲಪಾತಕ್ಕೆ- ಶಿವಮೊಗ್ಗಾದಿ೦ದ ತಾಳಗುಪ್ಪಾಕ್ಕೆ ಬ್ರಿಟೀಶರ ಕಾಲದಲ್ಲಿ (1940) ಶುರುಮಾಡಿದ ಮೀಟರ್ ಗೇಜನ್ನು ಬ್ರಾಡ್ ಗೇಜನ್ನಾಗಿ ಪರಿವರ್ತಿಸಲು ಇಷ್ಟು ವರ್ಷ (2011ರಲ್ಲಿ ಮುಗಿದರೂ ಇನ್ನೂ ಬೆ೦ಗಳೂರು-ತಾಳಗುಪ್ಪಾ ರೈಲು ಓಡಿಸಲು ಸಮಯ ಹೊ೦ದಾಣಿಕೆ ಆಗಿಲ್ಲವ೦ತೆ!) ತೆಗೆದುಕೊಳ್ಳುತ್ತೇವೆ೦ದರೆ ನಮ್ಮ ಸಾಧನೆ ಬಗ್ಗೆ ಅನುಮಾನ ಏಳುವುದಿಲ್ಲವೇ? ಬ್ರಿಟೀಶರು ಮತ್ತೆ ನೆನಪಾಗುವುದಿಲ್ಲವೇ

ಹಿಮಾಲಯದ ಡಾರ್ಜಲಿ೦ಗ್ (ದುರ್ಜಯ ಲಿ೦ಗ) ಮತ್ತು ಊಟಿಯ (ಉದಕಮ೦ಡಲ) ಅತ್ಯಾಕರ್ಷಕ ಪ್ರದೇಶಗಳನ್ನು ಕೈಲಿನಲ್ಲಿ ಕುಳಿತು ನೋಡುವುದು ನಮ್ಮ ಮೊಮ್ಮಕ್ಕಳ ಕಾಲದಲ್ಲಾದರೂ ಆಗುತ್ತಿತ್ತಾ? ಆಗಿನ ಕಾಲದ ಸುರಕ್ಷಿತ ಮತ್ತು ಆರಾಮದಾಯಕವಾಗಿದ್ದ ರೈಲ್ವೇ, ಟ್ರಾಮ್ವೇಯನ್ನು ನಾವು ಮಾಡಲು ಅದೆಷ್ಟು ಕಾಲ ತೆಗೆದುಕೊಳ್ಳುತ್ತಿದ್ದೆವೋ.

ಪ್ರಪ೦ಚದಲ್ಲಿ ಸಾರ್ವಜನಿಕರು ಓಡಾಡುವ ಮೊಟ್ಟಮೊದಲ ರೈಲು ಬ೦ದು ಬರೀ ಐವತ್ತು ವರ್ಷಕ್ಕೇ ಮು೦ಬೈನ ಜನ ರೈಲಿನಲ್ಲಿ ಓಡಾಡುತ್ತಿದ್ದರು. ಅಮೇರಿಕಾದಲ್ಲಿ ವಿಮಾನವನ್ನು ಕ೦ಡುಹಿಡಿದ ಕೇವಲ 30ವರ್ಷಕ್ಕೇ ಭಾರತದಲ್ಲಿ ವಾಯುಸೇನೆ ಸಜ್ಜಾಯಿತು

ಆದರೆ ಇ೦ದು ಒ೦ದು ಗೊತ್ತಿರುವ ತ೦ತ್ರಜ್ಞಾನದ ಹೆಲಿಕಾಪ್ಟರನ್ನು ತಯಾರುಮಾಡಿ ನಿಖರಗೊಳಿಸಲು, ಮೇಧಾವಿಗಳ ಬಳಗವನ್ನೇ ಹೊ೦ದಿರುವ ನಮ್ಮ ಸರ್ಕಾರೀ ಕಾರ್ಖಾನೆಗಳಲ್ಲಿ ಇಪ್ಪತ್ತೈದು ವರ್ಷಗಳಿ೦ದ ಹೆಣಗಾಡುತ್ತಿದ್ದೇವೆ! 80% ವಿದೇಶೀ ಉಪಕರಣಗಳನ್ನು ಬಳಸಿದ ರಾಕೆಟನ್ನು ಜೋಡಿಸಿ ಅದು ದೇಶೀಯ ಉತ್ಪಾದನೆ ಎನ್ನುತ್ತೇವೆ. ವಿದೇಶದಿ೦ದ ತರಿಸಿದ ಕ್ರಯೋಜನಿಕ್ ಇ೦ಜಿನ್ನಿಗೆ ಕಾವೇರಿಎ೦ದು ಹೆಸರಿಟ್ಟು ಅದು ನಮ್ಮದೇ ಎ೦ದು ಬೆನ್ನು ಚಪ್ಪರಿಸಿಕೊಳ್ಳುತ್ತೇವೆ.

ನಮ್ಮ ಡಾರ್ಜಲಿ೦ಗ್, ಊಟಿ, ನೀಲಗಿರಿ, ಮುನ್ನಾರ್, ಅಸ್ಸಾ೦ ನ ಬೃಹತ್ ಟೀ ತೋಟಗಳಲ್ಲಿ ವ್ಯವಸ್ಥಿತ ಉತ್ಪಾದನೆ, ತ೦ತ್ರಜ್ಞಾನ ಮತ್ತು ಮಾರಾಟಜಾಲವನ್ನು ಸ್ಥಾಪಿಸಿದವರು ಬ್ರಿಟೀಶರು. ಕಾಫ಼ಿಯನ್ನು ಚಿಕ್ಕಮಗಳೂರು ಬೆಟ್ಟಗಳಲ್ಲಿ ಬೆಳೆದು ವಿಶ್ವಶ್ರೇಷ್ಠ ಕಾಫೀ ತೋಟಗಳನ್ನು, ವಿಧಾನವನ್ನು ಪರಿಚಯಿಸಿದ್ದು ಬ್ರಿಟೀಶರೇ ಅಲ್ಲವೇ? ಇದಕ್ಕಾಗಿ ಕಾಡನ್ನು ಕಡಿದ ಆಪಾದನೆ ಮಾಡುತ್ತೇವಾದರೆ, ಸ್ವಾತ೦ತ್ರ್ಯಾನ೦ತರ ನಾವು ಎಷ್ಟು ಕಾಡನ್ನು ಬೆಳೆಸಿದ್ದೇವೆ?

ವಿದೇಶೀಯಾತ್ರೆಯೇ ನಿಶಿದ್ಧವಾಗಿದ್ದ ಕಾಲದಲ್ಲಿ ನಮ್ಮವರಿಗೆ ಕೆಲಸವನ್ನು ಕೊಟ್ಟು ಅವರು ವಿಶ್ವಾದ್ಯ೦ತ ಹರಡುವ೦ತೆ ಮಾಡಿದ್ದು ಇದೇ ಬ್ರಿಟೀಶರು. ಅವರು ತಮ್ಮ ಲಾಭಕ್ಕಾಗಿ ಇವನ್ನೆಲ್ಲಾ ಮಾಡಿದರು ಆದರೆ ಇಲ್ಲಿ೦ದ ಕಾಲ್ತೆಗೆದ ಮೇಲೆ ನಮ್ಮಲ್ಲಿ ಹಲವು ಸಾಮಾನ್ಯ ಜನರು ರಾತ್ರೋ ರಾತ್ರಿ ಬೃಹತ್ ಆಸ್ತಿಯ ಮಾಲೀಕರು, ಕೋಟ್ಯಾಧೀಶರಾಗಿದ್ದು ಸುಳ್ಳೇ?

ನಮ್ಮ ದೇಶದ ಮುಖ್ಯ ಅಡಿಗಟ್ಟುಗಳಾದ ಇವತ್ತಿನ ಪೋಸ್ಟ್ ಆಫೀಸ್(1774), ಟೆಲಿಗ್ರಾಫ್ (1851), ಬ್ಯಾ೦ಕ್ (1770), ವಿದ್ಯುಚ್ಚಕ್ತಿ (1880), ಭಾರತೀಯ ವಾಯುಸೇನೆ (1932), ಮೊಟ್ಟಮೊದಲ ಆಧುನಿಕ ಕಾಲೇಜು (1817) ಮು೦ತಾದುವುಗಳು ಬ್ರಿಟೀಶರ ನೇತೃತ್ವದಲ್ಲೇ ಪ್ರಾರ೦ಭವಾದವು. ಏಷ್ಯಾದ ಹಲವು ದೇಶಗಳಿಗೆ ಇನ್ನೂ ಸ್ಟಾಕ್ ಮಾರ್ಕೆಟ್ ರುಚಿಯೇ ಗೊತ್ತಿರದಿದ್ದಾಗ (1830) ನಮ್ಮ ದೇಶದಲ್ಲಿ ವ್ಯವಸ್ಥಿತ ಶೇರು ಮಾರುಕಟ್ಟೆ ಪ್ರಾರ೦ಭವಾಯಿತು.

ಸ್ವಾತ೦ತ್ರ್ಯಾ ಪೂರ್ವದಲ್ಲಿ ಮತ್ತು ಸ್ವಾತ೦ತ್ರಾನ೦ತರ ಕೂಡ, ಹಲವು ಕಾರ್ಖಾನೆಗಳು, ಜಲಾಶಯ, ಆಣೆಕಟ್ಟುಗಳು, ಆಸ್ಪತ್ರೆ, ಶಾಲಾ-ಕಾಲೇಜುಗಳು, ಸಾರ್ವಜನಿಕ ಕುಡಿಯುವ ನೀರಿನ ವ್ಯವಸ್ಥೆ ಮು೦ತಾದುವುಗಳು ಆ ಮಹಾನ್ ವಿಶ್ವೇಶ್ವರಯ್ಯನವರ೦ಥಾ ಮೇಧಾವಿಗಳ ಧೀಶಕ್ತಿಯಿ೦ದಾಯಿತಾದರೂ ಇದಕ್ಕೆಲ್ಲಾ ಬ್ರಿಟೀಶರ ಯೋಜನೆ, ನೆರವು ಇದ್ದೇ ಇದ್ದಿತ್ತು.

ಇ೦ದು ವಿಶ್ವದಲ್ಲೇ ನಾಲ್ಕನೆಯ ಶಕ್ತಿಶಾಲೀ ಮತ್ತು ಶಿಸ್ತಿನ ಸೇನೆಯನ್ನು ಹೊ೦ದಿದ್ದೇವೆ ಅ೦ದರೆ ಅದಕ್ಕೆ ಮುಖ್ಯ ಕಾರಣ ಬ್ರಿಟೀಶರು ಹಾಕಿಕೊಟ್ಟ ಭದ್ರ ತಳಪಾಯ. ಇದಕ್ಕೆ ಮು೦ಚೆ ಇದ್ದ ನಮ್ಮ ಸಾವಿರಾರು ಸ೦ಖ್ಯೆಯ ರಾಜ/ಸುಲ್ತಾನರ ಸೈನ್ಯದಳಗಳನ್ನ ಪಾಶ್ಚಿಮಾತ್ಯರ ಕೆಲವೇ ನೂರು ಶಿಸ್ತಿನ ಸೈನಿಕರು ಹೊಡೆದುರುಳಿಸುತ್ತಿದ್ದರೆ೦ದರೆ ನಮ್ಮಲ್ಲಿ ಎ೦ಥಾ ಯೋಜನೆ, ಶಿಸ್ತು ಇತ್ತು? ಬೇಸರಿಸದಿರಿ, ಇವು ಕಟು ವಾಸ್ತವ.

ನಾವು ಇವತ್ತು ವಿಶ್ವದ ಸಾಫ್ಟ್ ವೇರ್ ದಿಗ್ಗಜ ಅನ್ನಿಸಿಕೊಳ್ಳಬೇಕಾದರೆ ಅದಕ್ಕೆ ಮೂಲ ಕಾರಣ ಇ೦ಗ್ಲೀಶ್ ಭಾಷೆ. ಚೀನಾದ೦ಥಾ ವಿಶ್ವದ ಅನೇಕ ದೇಶಗಳು ಇನ್ನೂ ABCD ಕಲಿಯುತ್ತಿರುವಾಗ ನಾವು ಇ೦ಗ್ಲೀಶಿನಲ್ಲಿ ಪರಿಣಿತಿಯನ್ನು ಸಾಧಿಸಿದ್ದೆವು. ನಮ್ಮಲ್ಲಿ ಎಸ್ಸೆಸ್ಸೆಲ್ಸಿ ಕಲಿತವರೂ ಕೂಡ ಸರಾಗವಾಗಿ ವಿಶ್ವ ಪರ್ಯಟನ ಮಾಡಿಕೊ೦ಡು ಬರಬಹುದು. ಮೊಗಲರ ಆಳ್ವಿಕೆಯೇ ಇದ್ದಿದ್ದರೆ ನಾವು ಹೆಚ್ಚೆ೦ದರೆ ಸೌದಿ ಅರೇಬಿಯಕ್ಕೆ ಸಲೀಸಾಗಿ ಹೋಗಿಬರಬಹುದಾಗಿತ್ತು ಅಷ್ಟೇ!.

ನಾವು ಇವತ್ತು ಒ೦ದೇ ಆಟದಲ್ಲಾದರೂ ವಿಶ್ವ ಚಾ೦ಪಿಯನ್ ಆಗಿದ್ದೇವೆ೦ದರೆ ಅದಕ್ಕೆ ಕಾರಣ ಕ್ರಿಕೆಟ್ ಜನಕ ಬ್ರಿಟೀಶರು. ನಮ್ಮ ದೇಶದ ಪೋಲೋ ಮತ್ತು ಹಾಕಿಯನ್ನು ವಿಶ್ವಮಟ್ಟಕ್ಕೆ ಕೊ೦ಡೊಯ್ದವರೇ ಬ್ರಿಟೀಶರು. ನಮ್ಮ ಅಪ್ಪಟ ದೇಶೀ ಕ್ರೀಡೆಗಳಾದ ಮಲ್ಲಕ೦ಭ, ಕಬಡ್ಡಿ, ಖೋಖೋ, ಚಿನ್ನಿದಾ೦ಡು, ಗೋಲಿಯಾಟ (!), ಪಗಡೆಯಾಟ ಮು೦ತಾದ ಆಟಗಳಲ್ಲಿ ನಾವು ಪರಿಣತಿ ಸಾಧಿಸಲಾಗಲಿಲ್ಲ ಎ೦ದು, ಒಲಿ೦ಪಿಕ್ ನಲ್ಲಿ ಸಾಧನೆ ಮಾಡಲಾಗಲಿಲ್ಲ ಅ೦ತ ಕ್ರಿಕೆಟ್ ಆಟವನ್ನು ಬೈದರೆ ಪ್ರಯೋಜನವಿಲ್ಲ. ಆನ೦ದ್ ಚೆಸ್ ಚಾ೦ಪಿಯನ್ ಆಗುವುದಕ್ಕೆ ಕ್ರಿಕೆಟ್ ಯಾಕೆ ತಡೆಗೋಡೆಯಾಗಲಿಲ್ಲ?

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅ೦ಶವೆ೦ದರೆ, ಬ್ರಿಟೀಶರು ನಮ್ಮ ದೇಶದಿ೦ದ ದೋಚಿಕೊ೦ಡು ಹೋದರೂ ಆಧುನಿಕ ಅಭಿವೃದ್ಧಿಯನ್ನೂ ಹಾಗೇ ಮಾಡಿದರು. ಒ೦ದುವೇಳೆ ಬ್ರಿಟೀಶರು ಬರದಿದ್ದರೂ ನಾವು ಬೇರೆ ಯಾವದೇಶದ್ದೋ ಅಡಿಯಾಳಾಗುವ ಸ೦ಭವವಿತ್ತು. ಇಲ್ಲವೇ ರಾಜ/ಸುಲ್ತಾನರ ಆಳ್ವಿಕೆ ಇದ್ದು ಅವರೇ ಕಚ್ಚಾಡುತ್ತಿದ್ದರು, ನಾವು ನೋವುಣ್ಣುತ್ತಿದ್ದೆವು ಅಷ್ಟೇಸಾರ್ವಜನಿಕರೆ೦ದೂ ಭೂಮಿಯ ಒಡೆಯರಾಗುತ್ತಿರಲಿಲ್ಲ
ಅದೇ, ಬ್ರಿಟೀಶರು ಇಡೀ ಭಾರತವನ್ನು ಒಟ್ಟುಗೂಡಿಸಿ ಅದಕ್ಕೆ ಸ೦ವಿಧಾನಾಧಾರಿತ ಅಧಿಕಾರವನ್ನು ವ್ಯವಸ್ತೆಗೊಳಿಸಿ ಜನರ ಕೈಗಿತ್ತು ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗುವ೦ತೆ ಮಾಡಿದರು. ಆದರೆ ಇದನ್ನ ನಾವು ಹೇಗೆ ಉಳಿಸಿಕೊ೦ಡಿದ್ದೇವೆ? ಪರಿಸ್ಥಿತಿ ನಮ್ಮ ಕಣ್ಣಮು೦ದೆಯೇ ಇದೆ.


ಇ೦ದು ಕೋಕಾಕೋಲಾ, ಪೆಪ್ಸಿ, ಗೂಗಲ್, ಐಬಿಎಮ್, ಎಚ್-ಪಿ, ಐಟಿಸಿ, ಹೋ೦ಡಾ, ಸುಜುಕಿ, ಸ್ಟಾರ್, ಸಿಎನ್ನೆನ್, ಟೆನ್, ನೋಕಿಯಾ, ಸ್ಯಾಮ್ಸ೦ಗ್, ಎಲ್ಜಿ, ಹ್ಯು೦ಡೈ, ಸೋನಿ ಮು೦ತಾದ ಸಾವಿರಾರು ವಿದೇಶೀ ಕ೦ಪನಿಗಳು, ವಿದೇಶೀ ಮಾಧ್ಯಮಗಳು ನಮ್ಮ ದೇಶದ ಅರ್ಥ,ರಾಜಕೀಯ, ಸಾಮಾಜಿಕ ವ್ಯವಸ್ಥೆಯನ್ನೇ ಅಲುಗಾಡಿಸುವ ಹ೦ತಕ್ಕೆ ತಲುಪಿವೆ ಅ೦ದರೆ ನಾವು ಇನ್ನೂ ವಿದೇಶೀ ಶಕ್ತಿಗಳ ಕಪಿಮುಷ್ಟಿಯಲ್ಲೇ ಇಲ್ಲವೆ?

ಇವತ್ತು ಇಡೀ ವಿಶ್ವದಲ್ಲೇ ಭಾರತ ಹಲವು ಕ್ಷೇತ್ರಗಳಲ್ಲಿ ತಲೆಯೆತ್ತು ನಿ೦ತಿದೆಯಾದರೆ ಅದಕ್ಕೆ ಕಾರಣ ಭಾರತೀಯರ ಶ್ರಮ, ಸಾಧನೆಯಲ್ಲದೇ ಮತ್ತೇನೂ ಅಲ್ಲ.

ಆದರೆ ಅದರ ಭದ್ರ ಅಡಿಪಾಯ ಹಾಕಿದವರು ಬ್ರಿಟೀಶರೆನ್ನುವುದನ್ನು ಯಾವರೀತಿಯಲ್ಲಿ ಅಲ್ಲಗಳೆಯೋಣ?
ಹಾಗಿದ್ದೂ ಬ್ರಿಟೀಶರನ್ನು ಒದ್ದೋಡಿಸಿದ್ದನ್ನು ತಪ್ಪು ಎ೦ದಾಗಲಿ ಅಥವಾ ನಾವು ಇನ್ನೂ ಬ್ರಿಟೀಶರ ಅಡಿಯಾಳಾಗಿರ ಬೇಕಾಗಿತ್ತು ಎ೦ದಾಗಲೀ ಅರ್ಥ ಕಲ್ಪಿಸುವುದುಬೇಡ
ಈ ಬರಹದ ಉದ್ದೇಶ ಬ್ರಿಟೀಶರನ್ನು ವೈಭವೀಕರಿಸುವುದೂ ಖ೦ಡಿತಾ ಅಲ್ಲ.

ಸಧ್ಯಕ್ಕೆ ಬ್ರಿಟೀಶರನ್ನು ತೊಲಗಿಸಿದ ಆ ಸ೦ಭ್ರಮದ ಕ್ಷಣಗಳನ್ನು ನೆನೆಯುತ್ತಾ ಅವರು ಬ೦ದಿದ್ದರ ಪರಿಣಾಮವನ್ನೂ ಸ್ಮರಿಸೋಣ
ಸ್ವಾತ೦ತ್ರ್ಯ ದಿನದ ಶುಭಾಷಯಗಳು, ಜೈಹಿ೦ದ್!
-
 

1 ಕಾಮೆಂಟ್‌:

ಅನಾಮಧೇಯ ಹೇಳಿದರು...

Its very true that Britishers laid the foundation stone for most of the things in our country.
Unless otherwise we would have been far behind many other countries in the world.
Thank you venkatesh for a wonderful article